ಅಕ್ಷರಗಳ ಸತ್ವವನ್ನು ಸಂಗ್ರಹಿಸಿ ಜ್ಞಾನ ಜ್ಯೋತಿಯನ್ನು ಬೆಳಗಿಸುವ ಪಾತ್ರ ಮನುಷ್ಯರ ಕೈಯಲ್ಲಿದೆ. ಸುಅಕ್ಷರವಾಗಿ ಬೆಳೆಯಲಿ…ಕವಿಯತ್ರಿ ಸಂಧ್ಯಾ ಟಿ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಎಂದಿಗೂ ನಾಶವಾಗದೆ ಇರುವುದೆಂದರೆ ಅಕ್ಷರ ಸಮೂಹ. ಇವುಗಳನ್ನು ಯಾವ ಪುರುಷರಾಗಲಿ, ಸ್ತ್ರೀಯರಾಗಲಿ ಸೃಷ್ಟಿಸಿಲ್ಲ. ಈ ಅಕ್ಷರ ಸಮೂಹದಿಂದಲೆ ಸಿಕ್ಕಿದೆ ಬದುಕಿಗೆ ಅರ್ಥ.ವಿಶ್ವ ನಿಂತಿರುವುದು ಅಕ್ಷರ ಸಮೂಹದಿಂದ ಈ ಅಕ್ಷರಗಳನ್ನು ಪೂರ್ಣಜ್ಞಾನಾನಂದಮಯನಾದ ಅಗೋಚರ ಶಕ್ತಿ. ಕಾರಣ ಇವು ಎಂದಿಗೂ ಕ್ಷರವಾಗುವುದಿಲ್ಲ. ಯಾವದೇ ವಸ್ತು, ವ್ಯಕ್ತಿಯ ಪರಿಚಯ ಬೇಕೆಂದರೆ ಅಕ್ಷರ ಸಹಾಯ ಬೇಕು. ನನ್ನ ದೇಹ ನಾಶವಾಗುವುದು. ಆದರೆ ದೇಹ ಅಕ್ಷರ ನಾಶವಾಗುವುದಿಲ್ಲ. ಈ ಅಕ್ಷರಗಳಿಂದಲೆ ರಾಮಾಯಣ, ಮಹಾಭಾರತ, ಭಾಗವತ, ವಚನಗಳು, ಕೀರ್ತನ, ಸಾಹಿತ್ಯ ಎಲ್ಲವೂ ರಚನೆ ಆಗಿವೆ.
ಬಿಂಬವ ಕಾಣಿರಿ ಕನ್ನಡ ಭಾಷೆಯಲಿ
ಪ್ರತಿಬಿಂಬವ ಕಾಣಿರಿ ಅಕ್ಷರದ ತತ್ವದಲಿ
ಕ್ಷರವಾಗದೆಂದಿಗೂ ಸತ್ಯ ಎಂಬ ಅಕ್ಷರ
ಸುರರಾಕ್ಷರವಾಗಿ ಬೆಳೆಯಲಿ ಕನ್ನಡಾಕ್ಷರ
ಭಾಷೆ ಎಂಬುದು ಒಂದು ದಿವ್ಯ ಶಕ್ತಿ
ಋಣ ಸುಳಿಯ ಒಂದು ಭವ್ಯ ಯುಕ್ತಿ
ಅರಿತು ವಾಚಿಸಿದರೆ ತತ್ವ ಭುಕ್ತಿ
ನಿರುತ ನಿಯತ ಪಾಲಿಸಿದರೆ ಜೀವನ್ಮುಕ್ತಿ
ಮೂಲಾಕ್ಷರದಲಿ ತುಂಬಿದೆ ತತ್ವ
ತನ್ಮೂಲದಲಿದೆ ಪರಮ ಸತ್ವ
ಭಾಷೆಯಲ್ಲಿ ಪುರುಷಾರ್ಥದ ಮಹತ್ವ
ತಿಳಿಯುವದಲ್ಲಿ ಸಮನ್ವಯದ ತತ್ವ
ಪರಿಪೂರ್ಣತೆ ತುಂಬಿರುವ ಅಕ್ಷರ ಮಾಲೆ
ಜೋಡಿಸಿ ಪೋಣಿಸಿ ನೀಡಿರಿ ವಚನ ಮಾಲೆ
ನಡೆಯಲಿ ಸಂಸ್ಕಾರ ಕೃತಿ ಲೀಲೆ
ನುಡಿಯಲಿ ಬರಲಿ ಪ್ರೀತಿಯ ಅಲೆ
ಎಲ್ಲಾಗಲಿ ಕರುನಾಡ ಸಮೃದ್ಧಿ ತುಂಬಲಿ
ಬಲ್ಲಿದ ಕನ್ನಡದ ಸಾಹಿತ್ಯ ಸಂಭ್ರಮಿಸಲಿ.
- ಸಂಧ್ಯಾ ಟಿ
