ಅವಳು ಶಿವೆ! – ಡಾ. ವಡ್ಡಗೆರೆ ನಾಗರಾಜಯ್ಯ

ಕವಿ, ಲೇಖಕ,ಚಿಂತಕ ಡಾ. ವಡ್ಡಗೆರೆ ನಾಗರಾಜಯ್ಯ ಅವರ ಲೇಖನಿಯಲ್ಲಿ ಅರಳಿದ ‘ಅವಳು ಶಿವೆ’ ಗೌರಿಯ ಕುರಿತಾಗಿ ಬರೆದ ಸುಂದರ ಕವನ, ತಪ್ಪದೆ ಓದಿ, ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ…

ಜಟಾಧರ ನೀಲಕಂಠನ ಮುಡಿಯಲ್ಲಿ
ನಿಟ್ಟುಗಟ್ಟೆ ಕಟ್ಟಿದ ಗಂಗಮ್ಮ ಎಂಬ
ಸವತಿಯ ಕೂಟೆ ಜಗಳ ಕಾಯ್ದವಳು!

ಅಂಟು ಮುಟ್ಟಾಗಿ
ಮುಟ್ಟಿನ ಕೋಡಿ ಹರಿದರೂ
ನೀರಿಲ್ಲದ ಠಾವಿನಲ್ಲಿ ಮಡಿಬಟ್ಟೆ
ಬಿಡಲಾಗದೆ ಚಡಪಡಿಸಿದವಳು!

ತಾನೊಂದು ಚಮ್ಮಡದ ತುಂಡೆಂದು
ಅರಿಯುವ ಮುನ್ನ ಶಿವನುಟ್ಟ
ಗಜಚರ್ಮಾಂಬರವ ಕಂಡು ಬೆಚ್ಚಿಬಿದ್ದವಳು!

ಸುಡುಗಾಡು ಬಿಸಿಬೂದಿಯ ಭೂತನಾಥ
ನರಕಪಾಲವ ಹಿಡಿದು ಕೊರಳಿಗೆ
ಸರುಪವ ಧರಿಸಿ ತಕಥೋಂ ನಾಟ್ಯವಾಡುವಾಗ
ಡಮರು ನಿನಾದವಾಗಿ
ನಂಜುಂಡನ ಗುಂಡಿಗೆ ತಾಳದ ಲಯಕ್ಕೆ
ನುಡಿಗೊಂಡು ಒಡನೆ ಕುಣಿದ ನಾಟ್ಯ ಮಯೂರಿ!

ಕೈಲಾಸದಲ್ಲಿ ಲಿಂಗ ಕತ್ತರಿಸಿ
ಧಾರಿಣಿಯ ಸೆಳೆವಿಗೆ ಇಳಿಯುವಾಗ
ಅಂಗಾತ ಮೈಯೊಡ್ಡಿ ಭಗಪೀಠದಲ್ಲಿ
ಆಂತುಕೊಂಡ ಮಹಾ ಧರಿತ್ರಿ; ಸೃಷ್ಟಿ ವ್ಯಷ್ಟಿ ಸಮಷ್ಟಿ!
ಅವಳು ಶಿವೆ!!

ಹಿಮಗಿರಿಯ ಪಾದ ಪಂಕಜದ
ಕಣಿವೆ ಕಂದರದಲ್ಲಿ ಕಾಮಧೇನು
ಕರಿ ತುರಗ ಮೂಷಿಕ
ಮೂಗುತ್ತದ ಕ್ವಾವೆಯಲ್ಲಿಳಿದ
ಮುನ್ನೂರು ಮೂವತ್ತು ಕೋಟಿ
ಜೀವಮಂಡಲ ದೇವಮಂಡಲ ರಾಶಿಗಣದೊಡತಿ!

ಗಂಗಮ್ಮನಿಗೆ ತಲೆಬಾಗಿ
ಸಕಲ ಕುಲದ ತಾಯಿ ನೀನೆಂದು ನಮಿಸಿ
ಜೋಡಿ ನಿಟ್ಟುಗಟ್ಟೆ ನಿಜಲಿಂಗಕ್ಕೆ ಲೇಸೆಂದು
ಅಭೇದ್ಯವಾಗಿ ಎಲ್ಲರೊಳಗೊಂದಾದ
ಧನ್ವಂತ್ರಿಯ ಮಗಳು
ಎರಡೊಂದಾಗಿ ಕೂಡಿದ ಮಹಾದೇವಿ;
ಅವಳು ಶಿವೆ!!

ನನ್ನ ನೆತ್ತಿ ಬಾಯೊಳಗಿಳಿದು
ಪರಕಾಯ ಆವಾಹನೆಗೊಂಡು
ಆಮೋದ ಪ್ರಮೋದ ಭ್ರೂಮಧ್ಯ ಬೆಳಕಾಗಿ
ನಾಭಿಯಲ್ಲಿ ಚಿಗುರಿ ಬೋಧಿಯಾದವಳು!
ಅವಳು ಶಿವೆ!!


  • ಡಾ. ವಡ್ಡಗೆರೆ ನಾಗರಾಜಯ್ಯ  (ಸರ್ಕಾರಿ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರು,ಚಿಂತಕರು, ಲೇಖಕರು)

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW