ಡಾ.ಸೋಮಯಾಜಿ (ಆಯುವೇ೯ದಿಕ್ ಡಾಕ್ಟರ್, ಜಯನಗರ) ಡಾಕ್ಟರ್ ನೀವು, ನಮಗೆ “ಸಂಜೀವಿನಿ ಪರ್ವತ” ದಂತೆ .
ಮಾಲತಿ ಭಟ್ ಅವರ ಲೇಖನ ಓದಿದ ನಂತರ ಆಯುವೇ೯ದಿಕ್ ಡಾಕ್ಟರ್ ಬಗ್ಗೆ ನನ್ನಲ್ಲೂ ಬರೆಯಲು ಉತ್ಸಾಹ ತುಂಬಿ ಬಂತು.
ಒಂದಾನೊಂದು ಕಾಲದಲ್ಲಿ ಆಯುವೇ೯ದವೆಂದರೆ ವಿರೋಧಿಸುವವರಲ್ಲಿ ನಾನು ಕೂಡ ಒಬ್ಬಳಾಗಿದ್ದೆ. ಹದಿಮೂರು ವರ್ಷಗಳ ಹಿಂದೆ ನನ್ನ ಮಗನಿಗೆ ಎರಡು ವಷ೯. ಎಲ್ಲಾ ಮಕ್ಕಳಿಗೂ ಬರುವ ಹಾಗೆ ಶುರುವಾದ ಕೆಮ್ಮು ಸತತವಾಗಿ ಒಂದು ವಷ೯ ಅವನನ್ನು ಕಾಡಿತು. ಆ ಒಂದು ವಷ೯ ದಲ್ಲಿ ಮಾಡದೇ ಇರುವ ಔಷಧಿಗಳಿರಲಿಲ್ಲ. ಹೋಗದೇ ಇರುವ ಆಸ್ಪತ್ರೆ – ಡಾಕ್ಟರ್ ಗಳಿರಲಿಲ್ಲ.
ಆಗ ನಮ್ಮ ಕುಟುಂಬದ ಸ್ನೇಹಿತರೊಬ್ಬವು ಡಾಕ್ಟರ್ ಸೋಮಯಾಜಿಯವರನ್ನು ಒಮ್ಮೆ ಭೇಟಿ ಮಾಡಲು ಸೂಚಿಸಿದರು. ಅಲ್ಲಿಯ ಔಷಧಿ ಶುರು ಮಾಡುವ ಮೊದಲು ಅದೇ ಅಸಡ್ಡೆ, ಅದೇ ಅಸಮಾಧಾನ ನನ್ನಲ್ಲಿತ್ತು. ಎಂತೆಂಥ ಡಾಕ್ಟರ್ ಗಳಲ್ಲಿ, ಟೆಸ್ಟಗಳಲ್ಲೇ ಕಮ್ಮಿ ಆಗಿಲ್ಲ. ಇನ್ನೂ ಆಯುವೇ೯ದದಲ್ಲಿ ಕಮ್ಮಿ ಆಗತ್ತೆ ಅನ್ನೋ ಉಡಾಫೆ ಮಾತು ನನ್ನ ಮನಸ್ಸಿನಲ್ಲಿತ್ತು. ಆದರೆ ನಡೆದಿದ್ದೆ ಬೇರೆಯಾಗಿತ್ತು. ಯಾವ ದೊಡ್ಡ ಸಮಸ್ಯೆಯೇ ಅಲ್ಲದ ಕೆಮ್ಮು ಬೆಳಗಾಗುವಷ್ಟರಲ್ಲಿ ಕಡಿಮೆ ಆಗಿತ್ತು. ಅದೊಂದು ವಿಸ್ಮಯದ ಘಳಿಗೆಯಾಗಿತ್ತು. ಅಂದಿನಿಂದ ಅವರ ಔಷಧದಲ್ಲಿ ಸಾಕಷ್ಟು ವಿಶ್ವಾಸ ಹುಟ್ಟಿದೆ.
ಆದರೆ ಅನಾರೋಗ್ಯಕ್ಕೆ ಔಷಧಗಳೊಂದೇ ಪರಿಹಾರವಲ್ಲ. ನಮ್ಮ ದಿನಚರಿ ಔಷಧಿಯೊಂದಿಗೆ ಆರಂಭವಾಗಬಾರದು ಎನ್ನುವ ಸತ್ಯ ಅವರಿಂದ ಅರಿತೆ. ಹಂತ ಹಂತವಾಗಿ ಅವರ ಮಾತುಗಳಲ್ಲಿ ನಂಬಿಕೆ ಬಂದು, ಮನಸ್ಸು ಗಟ್ಟಿಯಾಯಿತು. ಅಂದಿನಿಂದ ಇಂದಿನವರೆಗೂ ಯಾವ ಆಸ್ಪತ್ರೆಗಳ ಅಲೆದಾಟ ಇಲ್ಲವಾಯಿತು.
ಇಂದು ಆಯುವೇ೯ದ ಎಂದರೆ ನಗುವ ಹಾಗು ಅಸಡ್ಡೆ ತೋರುವ ಕಾಲ ದೂರವಾಗಿ, ಜನಗಳಿಗೆ ಸನಿಹ ವಾಗುತ್ತಿರುವುದು ಸತ್ಯ.
ಕರೋನಾ ಭಯದ ವಾತಾವರಣ ಸುತ್ತಲೂ ಆವರಿಸಿದರೂ ನಾನೂ ಮತ್ತು ನನ್ನ ಕುಟುಂಬ ಯಾವ ಭಯವೂ ಇಲ್ಲದೇ ಆರಾಮಾಗಿ ಮನೆಯಲ್ಲೇ ಇದ್ದು, ನಮ್ಮ ಡಾಕ್ಟರ್ ಹೇಳಿದ ಸಲಹೆ ಸೂಚನೆ ಮೇರೆಗೆ ಅತೀಯಾಗಿ ಯೋಚಿಸದೇ ನಮ್ಮ ನಮ್ಮ ಕೆಲಸದಲ್ಲಿ ನಿರಂತರವಾಗಿದ್ದೇವೆ.
“ಮನೆಯ ಬಾಗಿಲ ಗಟ್ಟಿಯಾಗಿದ್ದರೆ, ಕಳ್ಳರು ಒಳಗೆ ನುಸುಳಲು ಸಾಧ್ಯವಿಲ್ಲ” ಎನ್ನುವ ಸೋಮಯಾಜಿ ಡಾಕ್ಟರ್ ಮಾತುಗಳು ನೂರಕ್ಕೂ ನೂರು ಸತ್ಯ.
ಆರೋಗ್ಯ ವೆಂಬ ಮನೆಯ ಬಾಗಿಲು ಗಟ್ಟಿಯಾಗಿದ್ದರೆ ‘ರೋಗ’ ಎಂಬ ಕಳ್ಳರು ಬರಲಾರರು. “ಯಾರೂ ದೇವರಲ್ಲ, ಯಾವುದು ಶಾಶ್ವತವಲ್ಲ’ ಇದು ನನ್ನ ವೃತ್ತಿ ಎಂದು ಹೇಳುವ ಅವರ ಮಾತುಗಳು ಈಗಲೂ ನನ್ನ ಕಿವಿಯಲ್ಲಿ ಘುಯಿಕೂಡುತ್ತಿದೆ.
ಯಾವ ಪ್ರಚಾರವೂ ಇಲ್ಲದೇ ಸಮಾಜ ಸೇವೆ ಮಾಡುತ್ತಿರುವ ಅವರು ನಮ್ಮ ಕುಟುಂಬಕ್ಕೆ “ಸಂಜೀವಿನಿ” ಯಂತೆ. ಹಲವಾರು ಕುಟುಂಬಗಳಿಗೆ ಆಸರೆಯಾಗಿರುವ ಅವರ ಸೇವೆಗೆ ಧನ್ಯವಾದಗಳು 🙏
- ವಾಣಿ ಜೋಶಿ