ಅಪಘಾತಕ್ಕೆ ರಸ್ತೆ ಗುಂಡಿಗಳಷ್ಟೇ ಕಾರಣವಲ್ಲ, ನಮ್ಮಲ್ಲಿನ ಬೇಜವಾಬ್ದಾರಿತನವು ಕೂಡಾ ಒಂದು. ಎಕ್ಸ್ ಪ್ರೆಸ್ ವೇ ಅಂದರೆ ಏನು?…. ಅನ್ನುವುದನ್ನು ಎಲ್ಲರೂ ಅರ್ಥ ಮಾಡ್ಕೊಕೊಂಡು ಗಾಡಿ ಓಡಿಸಿದರೆ ಒಳ್ಳೆಯದು. – ಹಯವದನ ವಾದಿರಾಜ್ (ನಾಗಿಣಿ ಧಾರವಾಹಿ ಹಾಗೂ ‘ಎಲ್ಲೋ ಜೋಗಪ್ಪ ನಿನ್ನ ಅರಮನೆ’ ಸಿನಿಮಾ ನಿರ್ದೇಶಕರು) ತಪ್ಪದೆ ಮುಂದೆ ಓದಿ…
ಈಗ ಮೈಸೂರಿಗೆ ಒಂದೂವರೇ ತಾಸು ಸಾಕು ಅನ್ನೋ ಹಿರಿಮೆ ಜೊತೆ ಬಹಳಷ್ಟು ಜಾಗ್ರತೆಯ ಅವಶ್ಯಕತೆ ಇದೆ. ವೀಕೆಂಡ್ನಲ್ಲಿ ಬೆಂಗಳೂರು – ಮೈಸೂರು ನಾಲ್ಕೈದು ತಾಸು ತೊಗೋತ್ತಿದ್ದ ಪ್ರಯಾಣ ಇಷ್ಟೊಂದು ಕಡಿಮೆ ಆಗಿದೆ ಅಂದ್ರೆ ಅದು ಹುಡುಗಾಟ ಅಥವಾ ವಿಡಿಯೋ ಮಾಡ್ಕೊಂಡು ಹೋಗೊ ರಸ್ತೆಯಾಗಿ ಉಳಿದಿಲ್ಲ ಅನ್ನೋದನ್ನ ರಸ್ತೆಗೆ ಇಳಿಯುವ ಪ್ರತಿಯೊಬ್ಬ ಅರಿತು ಗಾಡಿ ಸ್ಟಾರ್ಟ್ ಮಾಡಬೇಕು.
ಇತ್ತೀಚಿಗೆ ಕೆಲ್ಸದ ನಿಮಿತ್ತ ಎರಡು ಮೂರು ಬಾರಿ ಆ ರಸ್ತೆಯಲ್ಲಿ ಹೋಗಿ ಬಂದಾಗ ನನಗೆ ಅನ್ನಿಸಿದ್ದು ಬಹಳಷ್ಟು ಜನರಿಗೆ ರಸ್ತೆಯಲ್ಲಿನ ಶಿಸ್ತು, ಜವಾಬ್ದಾರಿಯುತವಾಗಿ ಹೇಗೆ ಗಾಡಿ ಓಡಿಸಬೇಕು ಎನ್ನುವ ಸಾಮಾನ್ಯ ಪರಿಜ್ಞಾನ ಕೂಡಾ ಇಲ್ಲ. ದೇಶ – ವಿದೇಶಗಳಲ್ಲೆಲ್ಲ ಡ್ರೈವ್ ಮಾಡಿರುವೆ. ಅಲ್ಲಿಯ ರಸ್ತೆಯಂತೆ ನಮ್ಮ ದೇಶದಲ್ಲಿಯೂ ಸಿದ್ಧವಾಗುತ್ತಿರುವುದು ಹೆಮ್ಮೆಯ ವಿಚಾರ. ಆದರೆ ಅಲ್ಲಿಯ ಟ್ರಾಫಿಕ್ ಶಿಸ್ತನ್ನು ಪಾಲಿಸಿದರೆ ಎಷ್ಟೋ ಅಪಘಾತಗಳನ್ನು ತಡೆಯಬಹುದು. Cruise ಕಂಟ್ರೋಲ್, ABS, seat belt, express way ಇದ್ದೆಲ್ಲ ಇದ್ದಾಗ, ಜಾಗೃತವಾಗಿ ಗಾಡಿ ಓಡಿಸುವುದು ಕೂಡಾ ನಮ್ಮ ಜವಾಬ್ದಾರಿ.

ವಿಡಿಯೋ ಮಾಡೋದು, ಫೋನ್ ನಲ್ಲಿ ಮಾತಾಡ್ಕೊಂಡು ಗಾಡಿ ಓಡಿಸೋದು, ಪಕ್ಕದವರು ಜೊತೆ ಹರಟೆ ಹೊಡಿತಾ ಗಾಡಿ ಓಡಿಸೋದು,ಇದ್ದಕ್ಕಿದ್ದಂತೆ ದಾರಿ ಬದಲಿಸೋದು, ಎಂಟ್ರಿ ಎಕ್ಸಿಟ್ ಗಳ ಬಗ್ಗೆ ಮಾಹಿತಿ ಇಲ್ಲದೆ ರಸ್ತೆಯಲ್ಲಿ ಮುಂದೆ – ಹಿಂದೆ ಬರೋದು, ಫೆಂನ್ಸಿಂಗ್ನ ಹರಿದು ಪಕ್ಕದಲ್ಲಿ ಮಾರುವ ತಟ್ಟೆ ಇಡ್ಲಿ ಅಥವಾ ತಿಂಡಿ ತಿನ್ನಲು ಗಾಡಿನ ನಿಲ್ಲಿಸಿ ಹೋಗೋದು, ಇದ್ದಕ್ಕಿದ್ದಂತೆ ಬ್ರೇಕ್ ಹಾಕೋದು, ಶಿಸ್ತಿನಿಂದ ಗಾಡಿ ಓಡಿಸದೆ ಡ್ರೈವಿಂಗ್ ನ ಕ್ರೇಜ್ ಅಥವಾ ಹುಡುಗಾಟ ಅನ್ಕೋಳ್ಳೋದು, ತಮ್ಮ ಗಾಡಿ ಅಥವಾ ತಾನು ಎಷ್ಟು ಸುಸಜ್ಜಿತವಾಗಿದ್ದೀವಿ ಅಂತ ತಿಳಿದೇ ರಸ್ತೆಗೆ ಇಳಿಯೋದು, ಎಕ್ಸಿಟ್ ಆಗೋಕಡೆ ಎಂಟ್ರಿ ಆಗೋದು ಎಂಟ್ರಿ ಆಗೋ ಕಡೆ ಎಕ್ಸಿಟ್ ಆಗೋದು, ಅಲ್ಲಿ ಹಾಕಿರೋ ಕೇಸರಿ ಬಣ್ಣದ fibre ಕಂಬಗಳ ಮೇಲೆ ಗಾಡಿ ಹತ್ತಿಸಿ ಹಾಳು ಮಾಡಿರೋದು. ಇವೆಲ್ಲ ನಾನು ಕಂಡ ಗಮನಿಸಿದ ಇತರೆ ವಾಹನದಾರರ ತಪ್ಪುಗಳು.
ಈ ಹುಡುಗರ ಆಕ್ಸಿಡೆಂಟ್ ನಲ್ಲಿ ರಸ್ತೆಯ ತುಂಬಾ ಬಿದ್ದಿರುವ ಅವರ ದೇಹ ನೋಡಿ ಹೊಟ್ಟೆ ಉರಿದು ಹೋಯ್ತು. ಸೀಟ್ ಬೆಲ್ಟ್ ಹಾಕಿದ್ರೆ ಇನ್ನೂ ಸ್ವಲ್ಪ ಸೇಫ್ ಆಗಿ ಇರೋರೇನೋ ಪಾಪ.

ಫೋಟೋ ಕೃಪೆ : kannadaprabha
ಗಾಡಿ ಓಡಿಸುವಾಗ ನಮ್ಮಲ್ಲಿಯೇ ಒಂದು ಶಿಸ್ತು ಬೇಕು, ಬೇರೆಯವರನ್ನು ದೂರುವ ಬದಲು ನಮ್ಮಲ್ಲೇ ಕೆಲವು ಬದಲಾವಣೆಗಳಾಗಬೇಕು. ನಾವು ಸರಿಯಾಗಿ ಇಲ್ಲದೆ ರಸ್ತೇನೆ ಸರಿ ಇಲ್ಲ ಅಂದ್ರೆ ಕುಣಿಯೋಕೆ ಬಾರದವಳು ನೆಲ ಡೊಂಕು ಅನ್ನೋ ಥರ ಆಗುತ್ತೆ. ಒಬ್ಬರು ಮಾಡು ತಪ್ಪು ಅವರ ಹಿಂದೆ ಮುಂದೆ ಸರಿಯಾಗಿ ಬರೋರ ಪ್ರಾಣಕ್ಕೂ ಕುತ್ತು. ಎಲ್ಲರ ಜೀವನ ಅಮೂಲ್ಯ ಹೆತ್ತವರು, ಕಟ್ಕೊಂಡವರು, ಮಕ್ಕಳು, ಮುದುಕರು ಮನೇಲಿ ನಿಮಗೋಸ್ಕರ ಕಾಯ್ತಿರ್ತಾರೆ, ಒಂದೂವರೇ ಗಂಟೇಲಿ ಮೈಸೂರ್ ಗೆ ಹೋಗಿಲ್ಲ ಅಂದ್ರೆ ಮೈಸೂರು ಕಾಯ್ತಿರತ್ತೆ.
ಸರ್ಕಾರ ರಸ್ತೆ ಮಾಡತ್ತೆ ಪ್ರಾಣ ಕೊಡಲ್ಲ. ಎಷ್ಟು ಎಜುಕೇಟ್ ಮಾಡಿದ್ರು ಕಮ್ಮಿನೆ, ಸರ್ಕಾರ-ಸಂಸ್ಥೆಗಳು ಇನ್ನಷ್ಟು ಜಾಗೃತಿ ಮೂಡಿಸ್ಬೇಕು.
- ಹಯವದನ ವಾದಿರಾಜ್ – ‘ನಾಗಿಣಿ’ ಧಾರವಾಹಿ ಮತ್ತು ‘ಎಲ್ಲೋ ಜೋಗಪ್ಪ ನಿನ್ನ ಅರಮನೆ’ ಸಿನಿಮಾ ನಿರ್ದೇಶಕರು.
