ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದಲ್ಲಿರುವುದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ದೇರಾಜೆ. ಆ ಶಾಲೆಗಾಗಿ ಬಾವಿ ತಗೆದ ಮತ್ತು ಇಬ್ಬರು ಶಿಕ್ಷಕರು ಆ ರಸ್ತೆಯಲ್ಲಿ ಹಾದು ಹೋಗಬೇಕಾದರೆ ಯಾವಾಗಲು ನೆನಪಿಗೆ ಬರುತ್ತದೆ, ಬಾಲು ದೇರಾಜೆ ಅವರ ಬಾಲ್ಯದ ನೆನಪು, ತಪ್ಪದೆ ಮುಂದೆ ಓದಿ…
ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದಲ್ಲಿರುವುದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ದೇರಾಜೆ. ಇದು 4 ತರಗತಿಗಳನ್ನೊಳಗೊಂಡಿದ್ದು, ಸುಮಾರು 50 ವರ್ಷಗಳ ಹಿಂದೆ ನನಗೆ ಮೊದಲ ಪಾಠ ಮಾಡಿದ ಶಾಲೆಯಾಗಿತ್ತು.
ಆ ಕಾಲದಲ್ಲಿ ಶ್ರೀ ಹರಿ ಭಟ್ ಕೊಣಾಜೆ ಮತ್ತು ಶ್ರೀ ಗಣಪಯ್ಯ ಪಾಂಡಿಪಾಲು ಶಿಕ್ಷಕರಾಗಿದ್ದರು. ನಂತರ ವರ್ಷಗಳು ಕಳೆದಂತೆ ಶ್ರೀ ಹರಿ ಭಟ್ಟರುಇಲ್ಲಿಂದ ವರ್ಗಾವಣೆಗೊಂಡು ತಮ್ಮ ಸ್ವಂತ ಊರಲ್ಲಿ ಶಿಕ್ಷಕರಾಗಿದ್ದಿರ ಬೇಕು.ನಮ್ಮ ಮನೆಯ ಶುಭ ಸಮಾರಂಭಗಳಿಗೆ ಕರೆ ಕೊಟ್ಟಾಗ ತಪ್ಪದೆ ಬರುತ್ತಿದ್ದು, 2000 ನೇ ಇಸವಿಯಲ್ಲಿ ನನ್ನ ವಿವಾಹ ಸಮಾರಂಭಕ್ಕೂ ಬಂದಿದ್ದರು. 2 ವರ್ಷಗಳ ನಂತರ ರಕ್ತದ ಕಾಯಿಲೆಯಿಂದಾಗಿ ಇಹಲೋಕ ವನ್ನು ತ್ಯಜಿಸಿದ್ದಾರೆಂಬ ವಿಷಯ ತಿಳಿದು ಬಂತು. ಶ್ರೀ ಗಣಪಯ್ಯ ಪಾಂಡಿಪಾಲರು ಈ ಶಾಲೆಯಿಂದಲೂ ಬೇರೆ ಶಾಲೆಗೆ ವರ್ಗಾವಣೆಯಾಗಿ ಇದೀಗ ನಿವೃತ್ತಿ ಜೀವನ ನಡೆಸುತ್ತಿದ್ದಾರೆ.
ದೇರಾಜೆ ಶಾಲೆಯಲ್ಲಿ ಜೊತೆಯಾಟದಂತಿದ್ದ ಈ ಇಬ್ಬರು ಶಿಕ್ಷಕರು ಉತ್ತಮ ಶಿಕ್ಷಣ ಅಲ್ಲದೆ ಪ್ರತೀ ಶನಿವಾರ ಮಕ್ಕಳಿಂದ ಭಜನಾ ಕಾರ್ಯಕ್ರಮವಿಟ್ಟು ಕೊಳ್ಳುವುದರ ಜೊತೆಗೆ ಶುಚಿತ್ವಕ್ಕೆ ಗಮನ ಹರಿಸಿ ಶಾಲಾಪರಿಸರ, ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಠಾರ ಶುಚಿಗೊಳಿಸುವುತ್ತಿದ್ದು ಮತ್ತು ಶಾಲಾವರಣದ ಮುಂಭಾಗದಲ್ಲಿದ್ದ ರಸ್ತೆಯನ್ನು ಬದಿಯಲ್ಲಿ ಹಾಕಿಸಿದ್ದರು. ಕೆಲವು ಸಮಯಗಳ ನಂತರ ಮೊದಲಿನ ಜಾಗವೇ ರಸ್ತೆಯಾಗಿದೆ.
ಶಾಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಯಿಲ್ಲದಿದ್ದರೂ ನೀರು ಕುಡಿತ್ತಿದ್ದೆವು. ಬಹುಶಃ ಪಕ್ಕದ ಜಾಗದಿಂದ ನೀರನ್ನು ತರುತ್ತಿದ್ದ ನೆನಪು. ಇದರಿಂದಾಗಿ ಹರಿಭಟ್ಟರು – ಗಣಪಯ್ಯರು ನೀರಿನ ವ್ಯವಸ್ಥೆಗಾಗಿ ಶಾಲೆಗೊಂದು ” ಬಾವಿ ” ಇರಲೇಬೇಕು ಎಂದು ಯೋಚಿಸಿ, ಸಮಾಲೋಚನೆ ಯಲ್ಲಿ ಕೆಲಸ ಆರಂಭ ಮಾಡುವುದೇ ಎಂಬ ನಿರ್ಧಾರ ಕ್ಕೆ ಬಂದು, ಊರಿನ ಇಬ್ಬರನ್ನು ಬಾವಿ ತೋಡುವ ಕೆಲಸಕ್ಕಾಗಿ ನೇಮಿಸಿಕೊಂಡು, ಕಾರ್ಯ ಪ್ರವೃತ್ತರಾಗಿ ಕೆಲಸವನ್ನು ವಿದ್ಯಾರ್ಥಿಗಳಾದ ನಮ್ಮನ್ನೂ ಸೇರಿಸಿ ಕೊಂಡು ಬಾವಿ ಕೆಲಸ ಆರಂಭಗೊಂಡಿತು. ದಿನ ಕಳೆದಂತೆ ಹೊಂಡ ಆಳಕ್ಕೆ ಇಳಿಯಿತು. ಜೊತೆಗೆ ಜೊತೆಯಲ್ಲೇ ಶಿಕ್ಷಕರು ಆಳದ ಬಾವಿಗೆ ಇಳಿದು ಮಣ್ಣನ್ನು ಅಗೆದು ಕೊಟ್ಟಂತೆ ಒಬ್ಬರು ಮಣ್ಣನ್ನು ಬಟ್ಟಿಗೆ ತುಂಬಿಸಿದರು. ಇನ್ನೊಬ್ಬರು ಮಣ್ಣು ತುಂಬಿದ ಬಟ್ಟಿಯನ್ನು ಹಗ್ಗಕ್ಕೆ ಕಟ್ಟಿ ” ಹೋಗಲಿ ” ಎಂದ ತಕ್ಕಣ ನಾವು ಹಗ್ಗವನ್ನು ಎಳೆಯುತ್ತಿದ್ದೆವು. ಆ ಸಮಯ ಆನಂದ ಮಯ ವಾಗಿತ್ತು. ಕೆಲವು ದಿನಗಳಲ್ಲಿ ನೀರು ಸಿಕ್ಕಿ ಉಪಯೋಗಿಸಲ್ಪಟ್ಟಿತು. ಪಕ್ಕದ ಮನೆಗಳಿಗೂ ಈ ನೀರಿನ ಉಪಯೋಗ ವಾಗುತ್ತಿತ್ತು.

ಹಲವು ವರ್ಷಗಳು ಕಳೆಯುತ್ತಿದ್ದಂತೆಯೇ ಈ ಬಾವಿಗೆ ವಿದ್ಯುತ್ ಪಂಪನ್ನು ಅಳವಡಿಸಿ, ಕಬ್ಬಿಣದ ಬಲೆಯನ್ನು ಹಾಕಲಾಗಿತ್ತು. (ಈಗಲೂ ಬಲೆ – ನೀರು ಇದೆ) ವರ್ಷಗಳು ಕಳೆದಂತೆ ಈ ಪಂಪ್ ನ್ನು ತೆಗೆಯಲ್ಪಟ್ಟಿತು.(ಕಾರಣ ಗೊತ್ತಾಗಿಲ್ಲ)ನೀರಿನ ಉಪಯೋಗಕ್ಕಾಗಿ ಶಾಲೆಯ ಆವರಣದ ಗೋಡೆಯ ಎದುರುಗಡೆಯೇ ಕೊಳವೆ ಬಾವಿಯ ಮೂಲಕ ವ್ಯವಸ್ಥೆ ಗೊಳಿಸಲಾಗಿ, ನೀರಿನ ಉಪಯೋಗ ಈಗಿನ ತನಕ ಮುಂದುವರಿದಿದೆ. ಬಾವಿಯ ಸ್ಥಿತಿ ಏನಾಗಿದೆಂಬುದು ನಾನು ಹೇಳುನ ಅವಶ್ಯಕತೆ ಇಲ್ಲ. ನಿಮ್ಮ ಕಣ್ಣ ಮುಂದಿದೆ. ” ಇಷ್ಟು ವರ್ಷ ಗಳು ಕಳೆದಾಗ ಕುಡಿಯುವ ನೀರಿನ ಬಾವಿಗೆ ಈ ಗತಿ….ಇನ್ನೆಷ್ಟೋ ವರ್ಷಗಳು ಕಳೆದಾಗ ಮುಂದೆ ನೀರು ಕುಡಿಯುವ ಬಾಯಿಗೆ….. ನಾವು ಇಲ್ಲಿಂದ ಗ್ರಾಮವಾದ ಐವರ್ನಾಡಿಗೆ ಹೋಗ ಬೇಕಾದರೆ ಈ ದೇರಾಜೆ ಶಾಲೆ – ಬಾವಿ ನಡುವೆ ಹಾದು ಹೋಗಬೇಕು. ಅದರಿಂದಾಗಿ ಹಿಂದಿನ ವರ್ಷಗಳ ಶ್ರಮ ಹಾಗೂ ಹರಿ ಭಟ್ಟರ ನೆನಪು ಸದಾ ನಮ್ಮ ಕಣ್ಣ ಮುಂದಿದೆ. ದೇರಾಜೆ – ಕೊಣಾಜೆ ಯ
ನಂಟು.
ಈ ಚಿತ್ರ – ಬರಹ ವನ್ನು ದೇರಾಜೆ ಶಾಲೆಯ ನನ್ನ ಮೊದಲ ಗುರು..ದಿ | ಶ್ರೀ ಹರಿ ಭಟ್ ಕೊಣಾಜೆ..ಇವರಿಗೆ..ಅರ್ಪಣೆ
- ಬಾಲು ದೇರಾಜೆ, ಸುಳ್ಯ
