ಆಂಗ್ಲರ ದಾಸ್ಯ ಸಂಕೋಲೆಯಿಂದಾ ಭಾರತೀಯರು ಸ್ವತಂತ್ರಗೊಂಡು ಏಳು ದಶಗಳೇ ಕಳೆದರೂ ದೇಶದಲ್ಲಿ ಇನ್ನೂ ಶಿಕ್ಷಣ ಕ್ಷೇತ್ರ ತನ್ನ ಸ್ಪಷ್ಟ ಸ್ವರೂಪಕ್ಕೆ ಬರಲಾಗದಿದ್ದುದ್ದಕ್ಕೆ ಸರ್ಕಾರದ ಅಪಕ್ವ ನೀತಿಗಳು ಕಾರಣವೇ ಅಥವಾ ಇನ್ನೂ ದಾಸ್ಯ ಮನಸ್ಥಿತಿಯಿಂದ ಹೊರಬರಲಾರದ ಪ್ರಜೆಗಳೂ ಕಾರಣರೇ?. ಶಿಕ್ಷಣದ ಕುರಿತು ಮನು ಎಚ್.ಎಸ್.ಹೆಗ್ಗೋಡು ಅವರ ಒಂದು ಚಿಂತನ ಲೇಖನ ತಪ್ಪದೆ ಮುಂದೆ ಓದಿ…
“ಪ್ರತಿ ವರ್ಷ ಉನ್ನತ ಶಿಕ್ಷಣ ಸಂಸ್ಥೆಗಳಿಂದ ಹೊರಬರುವವರಲ್ಲಿ ಶೇ 53ರಷ್ಟು ಮಂದಿ ಯಾವ ಕ್ಷೇತ್ರದಲ್ಲೂ ಕೆಲಸ ಮಾಡಲು ಯೋಗ್ಯರಾಗಿಲ್ಲ” ಎಂದು ನೀತಿ ಆಯೋಗವು ಇತ್ತೀಚಿಗೆ ತನ್ನ ವರದಿಯಲ್ಲಿ ಹೇಳಿತ್ತು. ಈ ಮಾತನ್ನು ನೀತಿಯಾಯೋಗವೇ ಹಳೆಬೇಕಾಗಿಲ್ಲ, ತೀರ್ಥ ಶಂಖದಿಂದಲೇ ಬರಬೇಕು ಅಷ್ಟೇ. ಇದೆ ಮಾತನ್ನು ಹಲವುಬಾರಿ ಇನ್ಫೋಸಿಸ್ ನಾರಾಯಣಮೂರ್ತಿಗಳು ಹೇಳಿದ್ದರು. ನೀತಿ ಆಯೋಗವು ಸರ್ಕಾರಕ್ಕೆ ಸಲ್ಲಿಸಿರುವ ಉನ್ನತ ಶಿಕ್ಷಣದ ವಸ್ತುಸ್ಥಿತಿ ವರದಿಯಲ್ಲಿ ಈ ಮಾಹಿತಿ ಇದೆ. ‘ದೇಶದ ಬಹುಪಾಲು ಎಂಜಿನಿಯ ರ್ಗಳ ಶಿಕ್ಷಣಕ್ಕೂ, ಅವರು ದುಡಿಯುತ್ತಿರುವ ಕ್ಷೇತ್ರಕ್ಕೂ ಅರ್ಥಾತ ಸಂಬಂಧವೇ ಇಲ್ಲ. ಈ ಸಮಸ್ಯೆಗಳ ನಿವಾರಣೆಗೆ ನೀತಿ ಆಯೋಗವು ಹಲವು ಶಿಫಾರಸುಗಳನ್ನು ಕೂಡಾ ಮಾಡಿದೆ. ಸಲಹೆ ಶಿಪಾರಸ್ಸುಗಳಿಗೇನು ಕೊರತೆಯಿಲ್ಲ! ಆದರೆ ಯಾರು ಎಲ್ಲಿಂದಾ ಸಂಪೂರ್ಣ ಶಿಕ್ಷಣ ಕ್ಷೇತ್ರವನ್ನು ಸರಿಪಡಿಸಿಯಾರು?
ಮೋಹನ್ ದಾಸ್ ಕರಮಚಂದ್ ಗಾಂಧಿಯವರು 1909 ರಲ್ಲೆ ಪ್ರಕಟಿಸಿದ ಪ್ರಖ್ಯಾತ ಕೃತಿ ‘ಹಿಂದ್ ಸ್ವರಾಜ್’ ನಲ್ಲೂ ಅಂದಿನ ಆಧುನಿಕ ಶಿಕ್ಷಣವನ್ನು ಕಟುವಾಗಿ ಟೀಕಿಸಿದ್ದರು. ರಬಿಂದ್ರನಾಥ್ ಟ್ಯಾಗೋರ್ ಅಂದಿನ ಶಿಕ್ಷಣ ಪದ್ದತಿಯಲ್ಲಿದ್ದ ದೋಷಗಳನ್ನು ಮನಗಂಡು ಸ್ವತಃ ಶಾಂತಿನಿಕೇತನವೆಂಬ ಹೆಸರಿನಲ್ಲಿ ಶಾಲೆಗಳನ್ನೂ ತೆರೆದರು. ಬಹಳ ಹಿಂದಿನಿಂದಲೂ ಕಾಲ ಕಾಲಕ್ಕೆ ಹಲವು ಮಹನೀಯರು ಶಿಕ್ಷಣದಲ್ಲಿನ ದೋಷಗಳನ್ನು ಗುರುತಿಸಿ ಸುಧಾರಿಸಲು ಪ್ರಯತ್ನಿಸಿದರೂ ಒಟ್ಟಾರೆಯಾಗಿ ಆಗಬೇಕಾದ ಬದಲಾವಣೆ ಮಾತ್ರ ಆಗಲೇ ಇಲ್ಲ.
ಫೋಟೋ ಕೃಪೆ : google
ನೀತಿ ಆಯೋಗದ ವರದಿಯನ್ನು ಪರಾಮರ್ಷಿದಾಗ ಮೇಲ್ನೋಟಕ್ಕೆ ಕಾಣುವುದು ದೇಶದಲ್ಲಿ ಹೆಚ್ಚಿನಂಶ ನಿರುದ್ಯೋಗಿಗಳು ಎಂದರೆ ಉನ್ನತ ಶಿಕ್ಷಣ ಪಡೆದವರೇ. ಅದು ಅಲ್ಲದೆ ಅವರು ಪಡೆದ ಶಿಕ್ಷಣಕ್ಕೂ ಕೆಲಸ ಮಾಡುತ್ತಿರುವ ಕ್ಷೇತ್ರಕ್ಕೂ ಅರ್ತಾರ್ಥ ಸಂಬಂಧವೆಯಿಲ್ಲದಿರುವುದು! ಉಧಾಹರಣೆಗೆ ನಾವು ಬ್ಯಾಂಕ್ ಉದ್ಯೋಗಿಗಳನ್ನೇ ಗಮನಿಸಬಹುದು. ಅಲ್ಲಿ ಕೆಲಸ ಮಾಡುವ ಹಲವು ಉದ್ಯೋಗಿಗಳು ವಿಜ್ಞಾನ ವಿಷ್ಯದಲ್ಲಿ ಪದವಿ ಶಿಕ್ಷಣ ಪಡೆದವರು. ಕಾರಣ ಬ್ಯಾಂಕ್ ಪ್ರವೇಶ ಪರೀಕ್ಷೆಯಲ್ಲಿ BSc ಮಾಡಿದವರೇ ಹೆಚ್ಚಾಗಿ ಪಾಸ್ ಆಗೋದು. ಆದ್ರೆ ಬ್ಯಾಂಕ್ ನಲ್ಲಿರುವ ಬಹುಪಾಲು ಕೆಲಸವನ್ನು SSLC ಪಾಸಾದವರು ಕೂಡಾ ಸುಲಭವಾಗಿ ಮಾಡುವಂತದ್ದು. ಅಂತಾ ಸುಲಭದ ಕೆಲಸಕ್ಕೆ ಸಂಬಂಧವೇಇಲ್ಲದ ಭೌತ ಶಾಸ್ತ್ರ, ರಾಸಾಯನ ಶಾಸ್ತ್ರ ಮುಂತಾದವನ್ನೆಲ್ಲ ಅಬ್ಯಾಸ ಮಾಡಿದವರು ಅವ್ಯಶಕವೇ ಇಲ್ಲ. ಹೀಗಾಗಲು ಅವರಿಗಿಂತಲೂ ಅವರ ಪಾಲಕರೇ ಕಾರಣ ಇರಲೂ ಬಹುದು. ತನ್ನದೇ ವ್ಯಕ್ತಿತ್ವ ಆಸಕ್ತಿಗಳಿಗೆ ಅನುಸಾರವಾಗಿ ಓದುಲು ಅವಕಾಶ ಕೊಡದೆ ವಿಜ್ಞಾನವನ್ನೇ ಆರಿಸಿಕೊಂಡರೆ ಮುಂದೆ ಉಜ್ವಲ ಭವಿಷ್ಯವಿದೆ ಎನ್ನುವ ಒತ್ತಾಯಕ್ಕೆ ಮಣಿದು ತನ್ನ ಆಸಕ್ತಿಗೆ ವಿರುದ್ಧವಾಗಿ Bsc ಯನ್ನೊ ಮತ್ತೊಂದನ್ನೋ ಓದಿರಲೂ ಬಹುದು… ಒಟ್ಟಿನಲ್ಲಿ ಇದು ದೇಶದ ಮಾನವ ಶಕ್ತಿಯ ಅಪವ್ಯವೇ ಅಲ್ಲವೆ? ಹೀಗೆ ದಾರಿತಪ್ಪಿ ಬಂದವರು ಆಸಕ್ತಿ ಇಲ್ಲದ ಜಾಗದಲ್ಲಿ ಹೊಟ್ಟೆ ಪಾಡಿಗೆಂಬಂತೆ ಸಿಕ್ಕ ಸಿಕ್ಕ ಕಡೆ ಕೆಲಸಕ್ಕೆ ಸೇರಿದವರು ಅಲ್ಲಿ ತನಗೆಷ್ಟು ಸಂಬಳ ಸವಲತ್ತು ಸಿಗಬಹುದು ಎಂಬುದನ್ನಷ್ಟೇ ನಿರೀಕ್ಷಿಸುತ್ತಾ, ವಾರವಿಡೀ ರಜಾದಿನಗಳಿಗಾಗಿ ಕಾಯುತ್ತಾ ಕಾಟಾಚಾರಕ್ಕೆ ಕೆಲಸ ಮಾಡಿಯಾರಷ್ಟೇ. ಅಂತವರಿಂದಾ ಇಷ್ಟು ದೊಡ್ಡ ದೇಶದ ಪ್ರಗತಿಯನ್ನು ಬಿಡಿ ಅವರ ಸ್ವಂತ ಜೀವನದಲ್ಲಿ ಆನಂದವನ್ನು ನಿರೀಕ್ಷಿಸಲಾಗದು. ಸಂಗೀತ, ಕಲೆ, ಸಾಹಿತ್ಯ, ಸಂಶೋಧನೆ, ಉದ್ಯಮಶೀಲತೆ ಇಂತಹ ಹಲವು ಕ್ಷೇತ್ರಗಳಲ್ಲಿ ತಮ್ಮದೇ ಸ್ವಂತ ಆಸಕ್ತಿಯಿಂದಾ ಪ್ರಜ್ಞಾಪೂರ್ವಕವಾಗಿ ಆರಿಸಿ ಕೊಂಡವನ್ನು ನಾವು ಗಮನಿಸಿ ನೋಡಬಹುದು. ಅಂತವರು ಹಗಲು ರಾತ್ರಿ ಎಂಬ ಬೇಧವನ್ನು ಎಣಿಸದೆ, ಮುಂದಿನ ರಾಜಾದಿನಗಳನ್ನು ಲೆಕ್ಕ ಹಾಕದೆ ತಮ್ಮ ತಮ್ಮ ಕೆಲಸಗಳಲ್ಲಿ ಮಗ್ನರಾಗೀರುತ್ತಾರೆ. ತಾವಾಗೇ ಆಸಕ್ತಿವಹಿಸಿದ ಕೆಲಸಗಳನ್ನು ಮಾಡುವವರಲ್ಲಿ ದಣಿವು ನಿರಾಸೆಗೆ ಅವಕಾಶ ಬಹಳ ಕಡಿಮೆ, ಮಾತ್ರವಲ್ಲಾ ತಮ್ಮ ಕೆಲಸದಲ್ಲೂ ಜೀವನದಲ್ಲೂ ಆನಂದವನ್ನು ಅನುಭವಿಸುವುದಲ್ಲದೆ, ಇಂತವರು ದೇಶದ ಪ್ರಗತಿಗೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕಾರಣರಾಗುತ್ತಾರೆ. ಉದಾಹರಣೆಗೆ ಇಸ್ರೋ ದಂತಾ ಸಂಸ್ಥೆಗಳಲ್ಲಿ ಕೆಲಸ ಮಾಡುವವರು, ಸಾವಯವ ಕೃಷಿ, ಅರೋಗ್ಯ ಮುಂತಾದ ಕ್ಷೇತ್ರಗಳಲ್ಲಿ ನಾವು ಕಾಣಬಹುದು.
ಬೃಹತ್ ಪ್ರಮಾಣದಲ್ಲಿ ನಿರುದ್ಯೋಗ ಸಮಸ್ಯೆ ಒಂದು ಕಡೆ ಇದ್ದಾಗಲೂ ಹೆಚ್ಚಿನ ಉದ್ಯಮ, ಸೇವಾ ಕ್ಷೇತ್ರ ಮುಂತಾದೆಡೆ ಕುಶಲ ಉದ್ಯೋಗಿಗಳ ಕೊರತೆಯು ಅಷ್ಟೇ ಪ್ರಮಾಣದಲ್ಲಿ ಇರುವುದನ್ನು ನಾವು ಗಮನಿಸಬಹುದು. ಸರ್ಕಾರವಾಗಲಿ ಉದ್ಯಮವಲಯಗಳಾಗಲಿ ನಿರುದ್ಯೋಗಿಗಳ ಸಮಸ್ಯೆಯನ್ನು ಬಗೆಹರಿಸಿ ಬಿಡಬಹುದು. ಆದ್ರೆ ನಿಷ್ಪ್ರಯೋಜಕರ ಸಮಸ್ಯೆಯನ್ನು ಸ್ವತಃ ನಾವೇ (ನಿಷ್ಪ್ರಯೋಜಕರೇ) ಬಗೆಹರಿಸಿಕೊಳ್ಳಬೇಕಷ್ಟೆ! ಆದಷ್ಟು ಬೇಗ ಅಂದ್ರೆ ಯೌವನಾವಸ್ಥೆಯಲ್ಲೇ ನಮ್ಮ ಆಸಕ್ತಿ ಸಾಮರ್ಥ್ಯಗಳನ್ನು ಅವಲೋಕಿಸಿ ನಾವು ಎಲ್ಲಿಗೆ ಸಲ್ಲುವವರು ಎನ್ನುವದನ್ನು ಸ್ವತಃ ನಾವೇ ನಿರ್ದಾರ ಮಾಡುವ ಪ್ರಯತ್ನವನ್ನು ಮಾಡಬಹುದಲ್ಲವೇ?
ನೀತಿ ಆಯೋಗದ ವರದಿಯಲ್ಲಿ ಉನ್ನತ ಶಿಕ್ಷಣದಲ್ಲಿನ ಪಠ್ಯಕ್ರಮ ಕೂಡಾ ಕಾಲಕ್ಕೆ ತಕ್ಕಂತೆ ಇಲ್ಲದೆ ಬಹಳ ಹಿಂದೆ ಉಳಿದಿದೆ ಎಂಬುದನ್ನು ಸೂಚ್ಯವಾಗಿ ಹೇಳಿದೆ. ಹೇಗೋ ಒಟ್ಟಿನಲ್ಲಿ ಪರೀಕ್ಷೆ ಪಾಸಾಗುವುದು ಹಾಗೂ ತನ್ಮೂಲಕ ಸರ್ಟಿಫಿಕೇಟ್ ಗಿಟ್ಟಿಸಿಕೊಳ್ಳುವುದೆ ಶಿಕ್ಷಣವಾಗಿರುವಾಗ ಕಲಿಕೆಯಾಗಲಿ ಕುಶಲತೆಯಾಗಲಿ ಎಲ್ಲಿಂದ ಬರಬೇಕು? ಇದು ಕೇವಲ ಉನ್ನತ ಶಿಕ್ಷಣದ ಸಮಸ್ಯೆಯಲ್ಲಾ, ಮೂಲದಲ್ಲೇ ಅಂದರೆ ಆರಂಭಿಕ ಶಿಕ್ಷಣದಲ್ಲೇ ನಾವು ಎಡವಿದ್ದೇವೆ. ಸಿದ್ಧಪಡಿಸಿದ ಪ್ರಶ್ನೆಗೆ ಸಿದ್ಧಪಡಿಸಿದ ಅಥವಾ ನಿರೀಕ್ಷಿಸಿದ ಉತ್ತರವನ್ನು ಕೊಡುವುದಷ್ಟೇ ಶಿಕ್ಷಣವೇ? ಅಥವಾ ಯೋಚಿಸಲು, ಯೋಜಿಸಲು, ಬುದ್ದಿಯನ್ನು ಯುಪಯೋಗಿಸಲು, ಭಾವನೆಗಳನ್ನು ಪಕ್ವವಾಗಿಸಲು ಶಿಕ್ಷಣ ಪರಿಣಾಮ ಬಿರಬೇಕೇ?

ಹಿಂದೊಮ್ಮೆ ಶಿಕ್ಷಣದ ಸಮಸ್ಯೆಯನ್ನು ಸೇವಾಭಾರತಿಯ ಶ್ರೀಧರ್ ಸಾಗರ್ ಆವರ ಜತೆಗೆ ಚರ್ಚಿಸುತ್ತಿರುವಾಗ ಅವರು ಹೀಗೊಂದು ಕತೆ ಹೇಳಿದ್ರು. “ಬೆಂಗಳೂರಿನಂತಾ ಮಹಾನಗರದಲ್ಲಿ ಒಬ್ಬಳು ಯುವತಿ. ಪ್ರತಿಷ್ಠಿತ ಎನ್ನುವ ಹಣೆ ಪಟ್ಟಿ ಕಟ್ಟಿಕೊಂಡಿರುವ ಖಾಸಗಿ ಶಾಲೆಗೇ ತನ್ನ ಮಗಳನ್ನು ಸೇರಿಸುವ ಸಂದರ್ಭ. ಮೊದಲ ದಿನ ತಾಯಿಗೆ ಇಂಟರ್ವ್ಯೂ ಇತ್ತು. ಆಕೆ ಡಿಗ್ರಿ ಓದಿದ ಯುವತಿ, ಹಾಗಾಗಿ ಪರೀಕ್ಷೆ ಸುಲಭವಾಗಿ ಪಾಸ್ ಆಗಿತ್ತು. ಮರುದಿನ 3 ವರ್ಷದ ಪುಟಾಣಿ ಮಗಳಿಗೆ ಅದೇ ಶಾಲೆಯಲ್ಲಿ ಇಂಟರ್ವ್ಯೂ!
ಮಗಳು ಎಷ್ಟೇ ಚೂಟಿಯಾಗಿದ್ದರೂ ಕೇಳಿದ ಪ್ರಶ್ನೆಗೆ ಸರಿಯಾಗಿ ಉತ್ತರಿಸದೆ ಹೋದರೆಂಬ ಆತಂಕ ತಾಯಿಗೆ. ಶಾಲೆಯಲ್ಲಿ ಕೇಳಬಹುದಾದ ಪ್ರಶ್ನೆಗಳ ಬಗ್ಗೆ ಅದು ಇದು ಎಲ್ಲವನ್ನೂ ತಾಯಿ ಮನೆಯೆಲ್ಲೆ ರೀಹರಸಲ್ ನಡೆಸಿದ್ದಳು. ಭವಿಷ್ಯದ ದೃಷ್ಟಿಯಿಂದಾ ಅದಾಗಲೇ ಅಲ್ಪ ಸ್ವಲ್ಪ ಇಂಗ್ಲಿಷ್ ಕೂಡಾ ಕಲಿಸಿ ಮಗಳನ್ನು ತಯಾರು ಮಾಡಿದ್ದಳು. ಅಷ್ಟಾದಾರೂ ಅಂತಹ ಶಾಲೆಯಲ್ಲಿ ಒಂದೊಮ್ಮೆ ಮಗಳಿಗೆ ಸೀಟು ಸಿಗದೇ ಹೋದರೆ ಎಂಬ ಆತಂಕದೊಂದಿಗೆ ಶಾಲೆಯ ಇಂಟರ್ವ್ಯೂಗೂ ಬಂದು ಕುಳಿತಿದ್ದಳು. ಆದರೆ ಸದಾ ಎಲ್ಲರ ಜೊತೆ ಅರಳು ಹುರಿದಂತೆ ಮಾತನಾಡುವ ಪುಟಾಣಿ ಮಗಳಿಗೆ ಮಾತ್ರ ಯಾವ ಉದ್ವೇಗವೂ ಇರಲಿಲ್ಲಾ, ಭವಿಷ್ಯದ ಯೋಚನೆಯೂ ಇರಲಿಲ್ಲ! ಇವಳ ಸರದಿ ಬಂದಾಗ ಶಾಲೆಯ ಶಿಕ್ಷಕಿ ಗಂಭೀರವಾಗಿ ಪ್ರಶ್ನಾನಾವಳಿಯನ್ನು ಶುರು ಮಾಡಿದರು. ಇಷ್ಟದ ಹಣ್ಣು, ಹಣ್ಣಿನ ಬಣ್ಣ, ಇಷ್ಟದ ತಿಂಡಿ ಮುಂತಾದ ಪ್ರಶ್ನೆಗಳಾದ ಮೇಲೆ What is the Sky Colour? ಎಂಬ ಸರಳ ಪ್ರಶ್ನೆಗೆ ಪುಟ್ಟಿ ಉತ್ತರ ಹೇಳುವ ಬದಲು ಯಾವ ಟೈಮ್ ನಲ್ಲಿ ಆಂಟಿ ಅಂತ ಟೀಚರ್ ಗೆ ಮುಗ್ದವಾಗಿ ಕೇಳಿ ಬಿಟ್ಟಳು.

ಪ್ರತಿಷ್ಠಿತ ಶಾಲೆಯ ಶಿಕ್ಷಕಿಗೆ ಇದು ಅಸಭ್ಯವೆನಿಸಿತು. ಮಕ್ಕಳನ್ನು ಸ್ವಲ್ಪ ಶಿಸ್ತಿನಿಂದ ಬೆಳೆಸಿದರೆ ಮಾತ್ರ ಅವರಿಂದ ಸರಿಯಾದ ಸಭ್ಯ ಉತ್ತರವನ್ನು ನಿರೀಕ್ಷಿಸಬಹುದು ಎಂಬುದು ಅವರ ಅಭಿಪ್ರಾಯವಾಗಿತ್ತು. Sky is Blue ಎಂದು ಸರಳಾಗಿ ಉತ್ತರ ಹೇಳಿದ್ರೆ ಸಾಕಿತ್ತು. ಆಕಾಶದ ಬಣ್ಣ ನೀಲಿ ಅನ್ನೋದು ಪ್ರತಿಯೊಬ್ಬರಿಗೂ ಗೊತ್ತಿರುವ ಉತ್ತರ. ಅದ್ರಲ್ಲಿ ಗೊಂದಲವಾಗುವಂತಾದ್ದು ಏನೂ ಇರಲಿಲ್ಲ ಎನ್ನುವುದು ಗಂಭೀರ ಶಿಕ್ಷಕಿಯ ಅನುಭವವಾಗಿತ್ತು.”
ಆ ಸಮಯದಲ್ಲಿ ಇದೊಂದು ತಮಾಷೆಯ ಕತೆಯಾಗಿ ಕಂಡಿತ್ತು. ದಿನ ಕಳೆದಂತೆ ಇದೆ ಕತೆಯನ್ನು ಮತ್ತೆ ಮತ್ತೆ ನೆನೆದು ವಿಮರ್ಶಿಸಿದಾಗ ಎಷ್ಟು ದೊಡ್ಡ ವಿಷಯವನ್ನು ಇಷ್ಟು ಸಣ್ಣ ಕತೆಯ ರೂಪದಲ್ಲಿ ಅವರು ಹೇಳಿದ್ದರು ಅನ್ನುವ ಅರಿವಾಯಿತು. ಸ್ವಚಂದವಾಗಿ ಬೆಳೆದ ಈ ಮಗು ಆಕಾಶನ್ನು ರಾತ್ರಿ ಹಗಲು ಸಂಜೆ ಬೆಳಿಗ್ಗೆ ಬೇರೆ ಬೇರೆ ಯಾಗಿಕಾಣುವ ಪರಿಯನ್ನು ಹಲವು ಬಾರಿ ಗಮನಿಸಿತ್ತು. ಒಮ್ಮೆ ದಟ್ಟ ಕಪ್ಪು ಮೋಡಗಳಿಂದಾ ತುಂಬಿದರೆ ಮತ್ತೊಮ್ಮೆ ಬಿಳಿ ಬಿಳಿ ಓಡುವ ಕುದುರೆಯಂತಹಾ ಮೋಡಗಳು. ಒಂದು ದಿನ ರಾತ್ರಿ ಪೂರ್ಣ ಕಪ್ಪಾದರೆ ಮತ್ತೊಂದು ದಿನ ಆಕಾಶದ ತುಂಬಾ ಎಣಿಸಲಾರದಷ್ಟು ಮಿನುಗುವ ಚುಕ್ಕಿಗಳು. ಬೇಸಿಗಿಯ ಅಪರೂಪದ ಕೆಲವು ದಿನ ಮಾತ್ರ ಸ್ವಚ್ಚ ನೀಲಿ ಆಕಾಶ ಕಂಡರೂ ಕಾಣಬಹುದು. ಇಷ್ಟೆಲ್ಲಾ ವೈವಿಧ್ಯದಿಂದ ಕೂಡಿದ ಆಕಾಶದಬಣ್ಣವನ್ನು ಒಂದು ‘ಸಿದ್ಧ ಉತ್ತರವಾಗಿ’ ಹೇಳುವ ಜಾಣ್ಮೆ ಮೊದಲ ದಿನ ಶಾಲೆಗೇ ಬಂದ ಮಗುವಿಗೆ ಸಾಧ್ಯವೂ ಇರಲಿಲ್ಲ. ಕ್ರಮೇಣ ಶಾಲೆಯಲ್ಲಿರುವ ಕೃತಕ ಶಿಸ್ತಿನ ವಾತಾವರಣ, ಟೀಚರ್ ಗೆ ಹೆದರಲೇ ಬೇಕೆಂಬಂತೆ ನಡೆದುಕೊಂಡು ಬಂದ ಸಂಪ್ರದಾಯ, ಎಲ್ಲದರ ಪರಿಣಾಮ ಆ ಮಗು ಕ್ರಮೇಣ ಶಾಲೆಗೇ ಹೊಂದಿಕೊಂಡಿತು ಎಂಬಂತೆ ತನ್ನ ಒಳಗೆ ಏಳುತ್ತಿದ್ದ ಪ್ರಶ್ನೆಗಳ ಬಗ್ಗೆಯನ್ನು ಅದುಮಿಡುವುದನ್ನು ಕಲಿಯಲೇ ಬೇಕಾಯಿತು. ಈ ಪುಟಾಣಿ ಅದೇನೋ ವಿಶೇಷ ಬುದ್ದಿ ಶಕ್ತಿಯನ್ನು ಹೂಂದಿದ್ದಳು ಅಂದುಕೊಳ್ಳ ಬೇಕಾಗಿಲ್ಲ. ಶಾಲೆಗೇ ಇನ್ನೂ ಸೇರದ ಅಥವಾ ಒತ್ತಾಯದ ಕಲಿಕೆಗೆ ಒಳಗಾಗದ ಮಕ್ಕಳಲ್ಲಿ ಸಹಜವಾಗಿ ಅವಳ ಹಾಗೆ ಸ್ವಂತ ಹಾಗೂ ಕುತೂಹಲದ ಬುದ್ದಿ ಸಹಜವಾಗೇ ಪೂರ್ಣ ಪ್ರಮಾಣದಲ್ಲಿ ಜಾಗೃತವಾಗೆ ಇರುತ್ತದೆ. ಇದೆಲ್ಲಾ ಆಳವಾಗಿ ವಿಮರ್ಶಿಸಿದರೆ ನಾವು ಮಕ್ಕಳಿಗಾಗಿ ಬಯಸುವುದು ಏನನ್ನು ಆದರೆ ಮಾಡುತ್ತಿರುವುದು ಏನನ್ನು ಎಂಬ ಪ್ರಶ್ನೆ ಮೌನವಾಗುತ್ತದೆ.
- ಮನು ಎಚ್.ಎಸ್.ಹೆಗ್ಗೋಡು