ಭಕ್ತಿಯಿಂದ ಪೂಜಿಸುವ ದೇವರ ಫೋಟೋವನ್ನು ರಸ್ತೆ ಬದಿಯಲ್ಲಿ ಎಸೆಯಬೇಡಿ, ಅದರ ಬದಲು ಶೋಭಾ ನಾರಾಯಣ ಹೆಗಡೆ ಅವರು ಹೇಳಿದಂತೆ ಈ ಕ್ರಮವನ್ನು ತಪ್ಪದೆ ಪಾಲಿಸಿ, ಇದರಿಂದ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬಹುದು, ತಪ್ಪದೆ ಮುಂದೆ ಓದಿ…
ಭಕ್ತಿಯಿಂದ ದೇವರನ್ನು ಪೂಜಿಸುತ್ತೇವೆ, ನಂಬುತ್ತೇವೆ ಕೂಡ. ಪ್ರಪಂಚದಲ್ಲಿ ಎಷ್ಟೇ ನಾಸ್ತಿಕ ಮನಸುಗಳು ಇದ್ದರೂ,”ಸಂಕಟ ಬಂದಾಗ ವೆಂಕಟರಮಣ” ಎಂದು ಕೈಮುಗಿಯದೆಯೇ ಇರರು ಒಮ್ಮೆಯಾದರೂ. ಭಿನ್ನಗೊಂಡ ಅಂತಹ ದೇವರ ಪಟಗಳು ಮತ್ತು ವಿಗ್ರಹಗಳನ್ನು ಇಂದು ಬೀದಿ ಪಾಲಾಗಿ ಬೀಳುವದನ್ನು ನೋಡಿದಾಗ ಎಲ್ಲೋ ಒಂದುರೀತಿ ಸಂಕಟ ಎನಿಸುತ್ತದೆ. ದಯವಿಟ್ಟು ರಸ್ತೆ ಬದಿಯಲ್ಲಿ ದೇವರ ಪಟಗಳನ್ನು ಎಸೆಯುವ ಮುನ್ನ ಹೀಗೆ ಯೋಚನೆ ಮಾಡಿದರೆ ಒಳಿತು ಒಮ್ಮೆ.
ದೇವರ ಪೋಟೋ ಅಥವಾ ವಿಗ್ರಹಗಳನ್ನು, ಅಂಗಡಿಯಲ್ಲಿ ಸಿಕ್ಕ ಸಿಕ್ಕದ್ದನ್ನು ಮನೆಗೆ ತರಬಾರದು. ನಮ್ಮ ಮನಸ್ಸಿಗೆ ಖುಷಿ ನೀಡುವಂತಹ,ಅಥವಾ ಮನೆಯಲ್ಲಿ ಇಡಬಹುದು ಎಂದು ಅನಿಸಿದ್ರೆ ಮಾತ್ರ ತೆಗೆದುಕೊಳ್ಳಬೇಕು..ಯಾಕೆಂದರೆ ಕೆಲವು ದೇವರ ಪೋಟೋಗಳಿಗೆ,ವಿಗ್ರಹಳಿಗೆ, ನೇಮ ,ನಿಷ್ಠೆ ತುಂಬಾ ಇರುತ್ತವೆ. ಹಾಗಾಗಿ ಕಂಡ, ಕಂಡದ್ದನ್ನು ಮನೆಯಲ್ಲಿ ತಂದು ಇಡಬಾರದು. ಹೀಗೆ ಗೊತ್ತಿಲ್ಲದೇ ತಂದುಕೊಂಡು ,ಏನಾದರೂ ತೊಂದರೆ ಬಂದಿತೆಂದರೆ,ಅವುಗಳನ್ನು ಮುಲಾಜಿಲ್ಲದೆ ಯೇ ರಸ್ತೆ ಬದಿ ಎಸೆಯುವ ಹಾಗಾಗುತ್ತದೆ.
ಈ ಪೋಟೋ ನಾನು ನಿತ್ಯ ವಾಕಿಂಗ್ ಹೋಗಿ ಬರುವ ಜಾಗದಲ್ಲಿ ಅನಾಥವಾಗಿ ಬಿದ್ದುದನ್ನು ನೋಡಿದಾಗ ಮನಸ್ಸಿಗೆ ತುಂಬಾ ಖೇದ ಉಂಟಾಯ್ತು.
ಭಿನ್ನಗೊಂಡ ವಿಗ್ರಹ ಅಥವಾ, ಪೋಟೋಗಳನ್ನು ರಸ್ತೆ ಬದಿಯಲ್ಲಿ ಎಸೆಯುವ ಬದಲು,ನಮ್ಮ ಮನೆಯ ಕಾಂಪಾಂಡ್ ನ ಒಳ ಭಾಗದಲ್ಲಿ ಸುತ್ತ ಮುತ್ತ ಶುಚಿ ಇರುವ ಸ್ಥಳದಲ್ಲಿ ಇಡುವ ಹಾಗೇ ಮಾಡಬೇಕು. ಹೂವಿನ ಗಿಡಗಳ ಪಾಟಿನಲ್ಲಿ ಇಟ್ಟು ಬಿಟ್ಟರೆ. ನೋಡಲೂ ಚಂದ. ಇಲ್ಲ ಎಂದರೆ ಪೋಟೋಗಳನ್ನು ಪ್ರೈಮ್, ತೆಗೆದು, ಹರಳು ತೆಗೆದು ಗುಜರಿಗೆ ಹಾಕಬೇಕು ಪಟ ಉಪಯೋಗಕ್ಕೆ ಬಂದರೆ ಮತ್ತೆ ಪೋಟೋ ಹಾಕಿಸಿ. ಹೀಗೆ ಮಾಡುವುದರಿಂದ ಯಾರಿಗೂ ಯಾವ ಹಾನಿಯೂ ಆಗದು. ಇದೂ ಆಗದಾ?. ನಮ್ಮ ಮನೆಯ ಅಥವಾ ಹೊಲ, ಗದ್ದೆ, ಜಾಗದಲ್ಲೇ ಒಂದು ಗುಂಡಿ ತೋಡಿ, ಪೋಟೋ ಅಥವಾ ವಿಗ್ರಹವನ್ನು ಹುಗಿದು ಮೇಲೊಂದು ಗಿಡ ನೆಡಬೇಕು. ಗಿಡ ಇರುವ ಜಾಗವನ್ನು ಯಾರೂ ತುಳಿಯರು.ರಸ್ತೆ ಬದಿಯಲ್ಲಿ ಎಸೆಯುವುದರಿಂದ ಜಾಗ ಶುಚಿ ಇರದು. (ಮೂತ್ರ ವಿಸರ್ಜನೆ, ಎಂಜಲು ತಟ್ಟೆ, ಉಗುಳುವಿಕೆಯಿಂದ ಸ್ಥಳ ಅಪವಿತ್ರ ಆಗಿರುತ್ತದೆ)
ಮನೆಯಲ್ಲಿ ಇಟ್ಟುಕೊಂಡರೆ, ಪಾಪ ಬರುತ್ತದೆ ಎಂದೋ ಅಥವಾ ತೊಂದರೆ ಆಗುತ್ತದೆಂದೋ, ನಾವು ರಸ್ತೆ ಬದಿಯಲ್ಲಿ ಎಸೆಯುವುದರಿಂದ ಅದು ನಮ್ಮ ಬಿಟ್ಟು ಹೋಗದು, ನೆನಪಿನಲ್ಲಿ ಇರಲಿ. ನಾವು ಕೊಂಡು ತರುವಾಗಲೇ ಸಾಧಕ ಬಾಧಕಗಳನ್ನು ಲೆಕ್ಕಾಚಾರ ಮಾಡಿಯೇ ಕೊಳ್ಳಬೇಕು. ದೇವರ ಪಟ ಮನೆಯಲ್ಲಿ ಇಲ್ಲ ಎಂದರೂ ನಡೆಯುತ್ತದೆ. ಬದಲಿಗೆ ಒಂದು ದೀಪ ಹಚ್ಚಿ ನಮಸ್ಕರಿಸಿದರೂ ಸಾಕು ಭಕ್ತಿಯಿಂದ. ವಿಗ್ರಹ ಪೂಜಿಸಿದಷ್ಟೇ ಪುಣ್ಯ ಲಭಿಸುವುದು. ಆದರೆ ಹೀಗೆ ಕಂಡ ಕಂಡ ಪೋಟೋ, ವಿಗ್ರಹ, ಖರೀದಿಸಿ ದಯವಿಟ್ಟು ರಸ್ತೆ ಪಾಲು ಮಾಡಬೇಡಿ.
- ಶೋಭಾ ನಾರಾಯಣ ಹೆಗಡೆ, ಶಿರಸಿ.