ಕವಿ ಕು.ಸ.ಮಧುಸೂದನ್ ರಂಗೇನಹಳ್ಳಿ ಅವರ ರಚನೆಯ ಒಂದು ಕವಿತೆಯನ್ನು ತಪ್ಪದೆ ಮುಂದೆ ಓದಿ…
ಈಗಲೂ ಹೇಳುವೆ ಕವಿತೆ
ನಿನ್ನೊಂದು ಪ್ರೀತಿ ಮಾತು
ಬದುಕಿಸಿತು ನನ್ನ
ಎಂಬುದೇನು
ಮಿಥ್ಯದ ಮಾತಲ್ಲ
ಅರಿತಿಕೊ ನನ್ನ
ಮಾತಿನ ಮೌಲ್ಯವನ್ನ
ಒಡಲಾಳದೊಳಗಿನ
ದು:ಖ ದುಮ್ಮಾನಗಳ
ಹಗುರಾಗಿಸಿಕೊಂಡಿದ್ದು
ನಿನ್ನೊಂದು
ಮಾತಿನಿಂದಲೆ
ಪ್ರಶ್ನೆಯೆಂದರೆ
ಮಾತಾಡಿದ್ದು ಯಾರ
ಜೊತೆಗೆಂಬುದಿಲ್ಲಿ ಮುಖ್ಯ
ಎದೆಯೊಳಗೆ
ಹಗೆಯ ಚಿತೆ ಉರಿಸಿಕೊಂಡು
ತುಟಿಯಲಿ ಜೇನು ಹನಿಸುವ
ಮುಖವಾಡದ ಮನುಷ್ಯರ ಜೊತೆಗಲ್ಲ.
ಆಡುವ ಮಾತುಗಳು ಮುತ್ತಾಗದಿದ್ದರೂ
ಮತ್ತೊಬ್ಬರ ಕೊರಳಿಗೆ ಕುತ್ತಾಗಬಾರದು
- ಕು.ಸ.ಮಧುಸೂದನ್ ರಂಗೇನಹಳ್ಳಿ
