ಪ್ರೊ.ಎಲ್.ಎಸ್. ಶೇಷಗಿರಿರಾವ್ ಅವರು ‘ಇಲಿಯಡ್’ ಕೃತಿ ಪರಿಚಯವನ್ನು ಲೇಖಕಿ ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ : ಇಲಿಯಡ್
ಲೇಖಕರು: ಪ್ರೊ.ಎಲ್.ಎಸ್. ಶೇಷಗಿರಿರಾವ್
ಹೇಮಂತ ಸಾಹಿತ್ಯ ಬೆಂಗಳೂರು
ಮುದ್ರಣದ ವರ್ಷ:೧೯೬೯ ರಿಂದ ೨೦೧೫.(೨ ಮುದ್ರಣ)
ಪುಟಗಳು: ೧೬೮
ಬೆಲೆ: ರೂ. ೧೧೦
ಪ್ರೊ.ಎಲ್.ಎಸ್. ಶೇಷಗಿರಿರಾವ್ ಅವರು ୭೫ ಕ್ಕಿಂತ ಅಧಿಕ ಕನ್ನಡ ಕೃತಿಗಳನ್ನು ಬರೆದವರು. ಇವರು ವಿಶ್ವಕವಿಗಳ ವಿರಳ ಪಂಕ್ತಿಯಲ್ಲಿ ಅದ್ವಿತೀಯ ಕೀರ್ತಿಗೆ ಅರ್ಹನಾದ ಗ್ರೀಕ್ ನ ಹೋಮರ್ ನ ‘ಇಲಿಯಡ್’ ಮಹಾಕಾವ್ಯವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಪದ್ಯ ರೂಪದಲ್ಲಿರುವ ಗ್ರೀಕ್ ಭಾಷೆಯ ಮೂಲ ಕೃತಿಯನ್ನು ಪ್ರೊ.ಎಲ್.ಎಸ್. ಶೇಷಗಿರಿರಾವ್ ಅವರು ಸ್ವಾರಸ್ಯ ಕೆಡದಂತೆ ಗಮನಾರ್ಹ ಭಾಗಗಳು ಬಿಟ್ಟು ಹೋಗದಂತೆ ಗದ್ಯವಾಗಿ ಬರೆದಿದ್ದಾರೆ.
ಪ್ರಾಚೀನ ಗ್ರೀಸ್ ಯುರೋಪಿನ ಸಂಸ್ಕೃತಿಯ ತೊಟ್ಟಿಲು.ಮಾನವ ನಾಗರೀಕತೆಯ ಪ್ರಾರಂಭದಲ್ಲಿಯೇ ಮಹಾಕೃತಿಯನ್ನು ವಿಶ್ವಕ್ಕೆ ಕಾಣಿಕೆಯಾಗಿತ್ತ ಹೋಮರ್ ಕವಿಯ ಸ್ವೋಪಜ್ಞತೆ ಹಾಗೂ ವಾದಗ್ರಸ್ತ ಜೀವನದ ಕುತೂಹಲಕಾರಿಯಾದ ಅಂಶಗಳನ್ನು ಲೇಖಕರು ವಿವರಿಸಿದ್ದಾರೆ. ಕವಿಯಾದವನ ಕಲ್ಪನೆಯೂ ಅವನ ವ್ಯಕ್ತಿತ್ವದ ಅನುಭವದ ನೆಲೆಯ ಕನ್ನಡಿಯಾಗುತ್ತದೆ. ಇವನ ಕಾವ್ಯವು ಶ್ರೀಮಂತರ ಜೊತೆ ಜನಸಾಮಾನ್ಯರ ಬಾಳನ್ನು ಪುನರ್ ಸೃಷ್ಟಿ ಮಾಡುವ ಸೇತುವೆಯಾಗಿದೆ. ಎಂಬುದಾಗಿ ಲೇಖಕರು ಅಭಿಪ್ರಾಯ ಪಟ್ಟಿದ್ದಾರೆ.

ಇಲಿಯಂಗೆ ಗ್ರೀಕರು ಮುತ್ತಿಗೆ ಹಾಕಿ ನಡೆಸಿದ ಘೋರ ಸಂಗ್ರಾಮ ಈ ಕಥೆಯ ಹಿನ್ನಲೆ. ಸ್ಪಾರ್ಟದ ಅರಸ ಮೇನಿಲೇಅಸ್. ಅವನ ಹೆಂಡತಿ ಹೆಲಿನ್ ಅತಿ ಸುಂದರಿ. ಟ್ರಾಯ್ ನ ಅರಸ ಪ್ರಯಮ್. ಅವನ ಹೆಂಡತಿ ಹೆಕ್ಯೂಬ. ಅವರಿಗೆ ೫೦ ಜನ ಮಕ್ಕಳಂತೆ!!!. ಇವರಲ್ಲಿ ಹಿರಿಯವನು ಹೆಕ್ಟರ್ ಕಿರಿಯವನು ಪ್ಯಾರಿಸ್.
ಒಮ್ಮೆ ಪ್ಯಾರಿಸ್ ಪ್ರೇಮಿಗಳ ದೇವತೆಯಾದ ಆಫ್ರಡೈಟಿ ಯೊಡನೆ ಸ್ಪಾರ್ಟಕ್ಕೆ ಬಂದು ಮೇನಿಲೇಅಸ್ ನಿಂದ ಸತ್ಕಾರ ಪಡೆಯುತ್ತಾನೆ. ಅವನಿಗೆ ಸುಂದರಿ ಹೆಲಿನ್ ಳನ್ನು ದೊರಕಿಸಿ ಕೊಡುವುದು ಅವಳ ಉದ್ದೇಶವಾಗಿತ್ತು.!
ಹೆಲಿನ್ ಳನ್ನು ಅಪಹರಿಸಿದ ಪ್ಯಾರಿಸ್ ಅವಳೊಂದಿಗೆ ಟ್ರಾಯ್ ದೇಶಕ್ಕೆ ಓಡಿ ಹೋಗುತ್ತಾರೆ. ಮೇನಿಲೇಅಸ್ ಹೆಂಡತಿಯನ್ನು ಹಿಂದಕ್ಕೆ ಕರೆತರಲು ನಿರ್ಧರಿಸಿ ಇತರ ಗ್ರೀಕ್ ರಾಜ್ಯಗಳ ನೆರವನ್ನು ಬೇಡುತ್ತಾನೆ. ಅವನ ಸಹೋದರ ಅಕಿಲೀಸ್ ನೇತೃತ್ವದಲ್ಲಿ ಇಲಿಯಡ್ ನ ಗ್ರೀಕ್ ಸೇನೆ ಟ್ರಾಯ್ ಅನ್ನು ಮುತ್ತಿಗೆ ಹಾಕುತ್ತದೆ. ಆ ಯುದ್ಧ ಒಂಭತ್ತು ವರ್ಷಗಳ ಕಾಲ ನಡೆಯಿತು. ಹತ್ತನೇ ವರ್ಷದಿಂದ ಏನಾಯಿತೆಂದು ಕುತೂಹಲಕಾರಿಯಾಗಿದೆ. ಪ್ಯಾರಿಸ್ ನಿಂದ ಬೇಸರ ಗೊಂಡ ಹೆಲಿನ್ ಮತ್ತೆ ಮರಳಿ ಬಂದಳೆ?. ಮುಂದೆ ಪ್ಯಾರಿಸ್ ನ ಅಣ್ಣ ಹೆಕ್ಟರ್ ಹತನಾಗಿ ಟ್ರಾಯ್ ನಗರ ಪತನವಾಗುವುದನ್ನು ಸೂಚಿಸುತ್ತದೆ.

ಆದರೆ ಯುದ್ಧದ ಸಾವು ನೋವುಗಳು ರಕ್ತಪಾತದಲ್ಲಿ ಪೈಶಾಚಿಕ ಪ್ರವೃತ್ತಿಯ ಅಭಿವ್ಯಕ್ತಿಯಾದರೆ, ಸಾವಿರಾರು ಜನರ ಅಂತ್ಯ ಸಂಸ್ಕಾರದ ಸಮಯದಲ್ಲಿ ಉದ್ಭವಿಸುವ ಮಾನವೀಯತೆಯ ಪುನರುತ್ಥಾನವನ್ನು ಕಾಣಬಹುದು. ಮನುಷ್ಯ ಎಷ್ಟೇ ಬುದ್ಧಿಶಾಲಿ , ಪರಾಕ್ರಮಿಯಾಗಿದ್ದರೂ ಸರ್ವಶಕ್ತನಲ್ಲ. ವ್ಯಕ್ತಿಯ ಬಾಳಿನಲ್ಲಿ ಶಾಂತಿ ದೊರೆಯ ಬೇಕು. ಆದರೆ ಆತ ಸಮಾಜದಿಂದ ವ್ಯವಸ್ಥೆಯಿಂದ ದೂರವಾಗಿ ಬದುಕುವಂತಿಲ್ಲ.
ಮರಣ -ಅನಿಶ್ಚಿತ ಭವಿಷ್ಯ ,ಸುಖ -ದುಃಖ, ಹಾಗೂ ವಿಜಯ- ಪತನಗಳ ಎಲ್ಲೆಗಳವರೆಗೆ ಕೊಂಡೊಯ್ದು ನಮ್ಮ ವ್ಯಕ್ತಿತ್ವವನ್ನೇ ಅಲ್ಲಾಡಿಸಿ ಬಿಡಬಲ್ಲ ಈ ಮಹಾಕಾವ್ಯ ನಮ್ಮ ಒಳಗಣ್ಣು ತೆರೆಸುತ್ತದೆ. ಎಂಬುದಾಗಿ ಲೇಖಕರು ಹೇಳುತ್ತಾರೆ.
- ಮಾಲತಿ ರಾಮಕೃಷ್ಣ ಭಟ್
