ನಿವೃತ್ತ ಶಿಕ್ಷಕಿ ಶಿವದೇವಿ ಅವನೀಶಚಂದ್ರ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ನೀ ಬರಲು ಭಾಸ್ಕರ
ಬೆಳ್ಳನೆಯ ನಗೆ ಹರಡಿ
ಜಗವೆಲ್ಲಾ ನಗುವಿನ ಜಾಲ
ಹರಡಿದಂತೆ ನವಿಲು ಗರಿಯ…
ಥಳಥಳಿಸಿ ತರುಲತೆಗಳ
ವಿಭವಿಸಿ ಆಗಸದಂಗಳವ
ಹೊನಲಿಗೆ ಪಟ್ಟೆ
ಪೀತಾಂಬರವುಡಿಸಿ ಹಾರಿಸಿರುವ
ಹಕ್ಕಿ ಮೇಳ!
ಎಲೆಯ ಮೇಲೆ ರನ್ನಮಣಿ
ರಂಗು ಬಿರಿಸಿ ಹೊಳೆಯುತ
ಧರೆಯ ನೆಲಕೆ ಕಸೂತಿಯಂತೆ
ಕಂಗೊಳಿಸಿ ಬೀಗುತ
ಹುಲ್ಲು ಹಾಸು ಮೆಲ್ಗಾಳಿಗೆ
ಕಂಪಿಸುತಿರಲು…ತೆರೆತೆರೆ
ತೂಗುತ ಜೀಕುತಿಹುದು
ಮನಸು ಉಯ್ಯಾಲೆಯಾಡುತ…
ಮಿತ್ರನೆಂಬ ನಾಮಧೇಯ
ನಿನಗೆ ಸದಾ ಅನ್ವಯ
ಜಗದ ಬಾಳ ಪೊರೆಯುವ
ಕರುಣಿ ನೀನೇ ಜಗದ ಆಶ್ರಯ!
- ಶಿವದೇವಿ ಅವನೀಶಚಂದ್ರ
