ಲೇಖನ : ಜಯತೀರ್ಥ (ಖ್ಯಾತ ಚಲನಚಿತ್ರ ನಿರ್ದೇಶಕ )
ನಗರದಿಂದ ತನ್ನ ಹಳ್ಳಿಗೆ ಸಾವಿರಾರು ಕಿಲೋಮೀಟರ್ ನಡೆದುಕೊಂಡೆ ವಲಸೆ ಹೋಗುತ್ತಿರುವವರ ಮನದಲ್ಲಿ ಯಾವ ಆಲೋಚನೆ ನಡೆದಿರುತ್ತದೆ. ಸತ್ತರೆ ಕುಟುಂಬದ ಜೊತೆಗೆ ಸತ್ತು ಬಿಡುವ ಎಂದೇ?? ಅಥವಾ ಸಾಯುವ ಮುನ್ನ ಒಮ್ಮೆ ತನ್ನಮ್ಮ- ಅಪ್ಪ – ಹೆಂಡತಿ – ಮಕ್ಕಳ ಮುಖ ನೋಡಿ ಬಿಡುವಾ ಎಂದೇ ? ನಗರದಲ್ಲಿ ಹಸಿವು, ಅಪಮಾನ, ಒತ್ತಡಗಳನ್ನೆಲ್ಲ ಅನುಭವಿಸುವುದು ತನ್ನ ಕುಟುಂಬದ ಹೊಟ್ಟೆ ತುಂಬಿಸಲು ಎಂದಲ್ಲವೇ? ಕನ್ನಡ ಕಾರ್ಮಿಕರು, ದಿನಗೂಲಿ ಕಾರ್ಮಿಕರು ಸೇರಿದಂತೆ ಇಲ್ಲಿ ಶ್ರಮಿಸುವ ಇಂಥಾ ಕಾರ್ಮಿಕರು ನಗರದ ಪಬ್,ಕ್ಲಬ್, ಮಾಲ್ ನಂಥ ಯಾವ ಐಷಾರಾಮ ಜೀವನನ್ನೂ ನೋಡಿರದೆ ತಮ್ಮ ದುಡಿಮೆಯ ಅಷ್ಟೂ ಹಣವನ್ನು ದೂರದ ತನ್ನ ಕುಟುಂಬಕ್ಕೆ ಮೀಸಲಿಡುತ್ತದೆ. ಶ್ರೀಮಂತರು ಮನೆ ಇರುವವರು ಖಂಡಿತಾ ಈ ಲಾಕ್ ಡೌನ್ ನ ಬಗ್ಗೆ ಮಾಹಿತಿಯನ್ನೂ ಹೊಂದುವವರು ಎಚ್ಚರವನ್ನೂ ವಹಿಸುವವರು. ಆದರೆ ಕೂಲಿ, ಕಾರ್ಮಿಕವರ್ಗ ಇಂತಹದ್ದನ್ನ ನಿಭಾಯಿಸಲು ಸಾಧ್ಯವಾಗುವುದಿಲ್ಲ.
‘ಬೆಟ್ಟದ ಹೂ’ ಚಿತ್ರದ ಕ್ಲೈಮಾಕ್ಸ್ ನಲ್ಲಿ ಒಂದು ದೃಶ್ಯ ನೆನಪಾಗುತ್ತಿದೆ. ಬಾಲಕನು ಶೆರ್ಲಿ ಮೇಡಂಗಾಗಿ ಅಡವಿಯಿಂದ ಪ್ರತಿದಿನ ಹೂ ತಂದುಕೊಟ್ಟು ಒಂದು ರೂಪಾಯಿಯ ಇನಾಮು ಪಡೆದು ಹಣ ಸಂಗ್ರಹಿಸಿ ಆ ಹಣದಲ್ಲಿ ರಾಮಾಯಣ ಪುಸ್ತಕವನ್ನು ಖರೀದಿಸಬೇಕು ಎಂಬುದು ಅವನ ದೊಡ್ಡ ಆಸೆಯಾಗಿರುತ್ತೆ. ಒಟ್ಟು ಕೂಡಿಟ್ಟ ಹಣ ತಂದು ಅಂಗಡಿಯ ಮುಂದೆ ನಿಂತು ಇನ್ನೇನು ಪುಸ್ತಕವನ್ನು ಕೊಳ್ಳಲು ಮುಂದಾದಾಗ ಅವನಿಗೆ ತನ್ನ ತಾಯಿ ಗುಡಿಸಿಲಿನಲ್ಲಿ ಚಳಿಗೆ ಅನಾರೋಗ್ಯದಿಂದ ಬಳಲುತ್ತಿರುವುದು ನೆನಪಾಗಿ ಅವಳಿಗಾಗಿ ಒಂದು ಹೊದಿಕೆಯನ್ನು ಅದೇ ಹಣದಲ್ಲಿ ತಗೆದುಕೊಂಡು ರಾಮಾಯಣ ಪುಸ್ತಕದ ಆಸೆಯನ್ನು ಬಿಟ್ಟು ಬಿಡುವ ಆ ದೃಶ್ಯ ನನ್ನ ಮೇಲೆ ಅಗಾದವಾದ ಪರಿಣಾಮ ಬೀರಿದೆ. ಬಹುಶಃ ಪ್ರಪಂಚದ ಎಲ್ಲರ ಮನಸ್ಥಿತಿಯೂ ಹೀಗೆ ಅನಿಸುತ್ತದೆ.
ಕುಟುಂಬ ಎಂಬುದು ಜಗತ್ತಿನ ಮಾನವೀಯತೆಗೆ ಬಹಳ ದೊಡ್ಡ ಕೊಂಡಿ…
ಸಾವಿರಾರು ಮೈಲಿ ನಡೆದು ಬರುತ್ತಿರುವವರಿಗೆ ಊಟವಿಲ್ಲ. ನಿದ್ರೆಯಿಲ್ಲ ಅವರೊಂದಿಗೆ ಮಹಿಳೆಯರು ಏನು ಅರಿಯದ ಕಂದಮ್ಮಗಳು. ಕೊನೆಗೆ ಸತ್ತರೆ ನಮ್ಮ ಹಳ್ಳಿಯಲ್ಲೇ ಮಣ್ಣಾಗಿ ಬಿಡುವ ಆಲೋಚನೆಯಲ್ಲಿ ನೋಡಬೇಕಾದ ಅಗತ್ಯವಿದೆ.EMI ಮುಂದೂಡುವ ಆಲೋಚನೆ ಒಳ್ಳೆಯದೇ ಅದಕ್ಕೂ ಮುನ್ನ ಕೂಲಿ ಕಾರ್ಮಿಕ ವರ್ಗದ ಕಡೆ ಗಮನ ಹರಿಸಬೇಕಿತ್ತು ಎಂಬುದು ಕಳಕಳಿಯ ಅನಿಸಿಕೆಯಷ್ಟೇ.
ವಿದೇಶದಲ್ಲಿ ತನ್ನ ಕುಟುಂಬಕ್ಕಾಗಿ ದುಡಿಯುತ್ತಿರುವ ಮಕ್ಕಳದ್ದೂ ಬೇರೆ ಕತೆಯೇನಲ್ಲ. ಎಲ್ಲರೂ ಕೊನೆಗಾಲದಲ್ಲಿ ಕುಟುಂಬ ಸೇರುವ ತವಕವನ್ನು ವ್ಯವಸ್ಥೆ ಅರಿಯಬೇಕಿದೆ.
ಯಡಿಯೂರಪ್ಪನವರು ರಾತ್ರಿ ೮ ಗಂಟೆಗೆ ಕೇಂದ್ರದ ಲಾಕ್ ಡೌನ್ ಘೋಷಣೆ ಮಾಡುವ ಮುನ್ನವೇ ನಮ್ಮ ಜನಕ್ಕೆ ಊರು ಸೇರುವುದಿದ್ದರೆ ಇಂದೇ ಹೊರಟು ಬಿಡಿ ಎಂದು ಈ ಕಾರಣಕ್ಕೆ ಆಜ್ಞೆ ಹೊರಡಿಸಿದ್ದರೇನೋ…????