ಕಾಡಿನ ಸುತ್ತ – ಭಾಗ ೩

ಹಳ್ಳಿ-ನಗರಗಳಲ್ಲಿ ಮನುಷ್ಯ -ಮನುಷ್ಯ ಸಂಬಂಧಗಳಲ್ಲಿ ನಂಬುಗೆಯಿಲ್ಲ ಪ್ರೀತಿ, ವಿಶ್ವಾಸಗಳಿಲ್ಲ, ಎಲ್ಲವೂ ಅವಶ್ಯಕತೆಗಷ್ಟೇ ಎಂಬಂತಾಗಿದೆ ಮತ್ತು ಮಕ್ಕಳಿಗೆ ಉಣ್ಣುವ ಅನ್ನ ಹೇಗೆ ತಟ್ಟೆಗೆ ಬರುತ್ತದೆ ಎಂಬ ಪಠ್ಯ ಮತ್ತು ಪ್ರಾಯೋಗಿಕತೆಯ ಜೊತೆಗೆ ನೆಲಮೂಲದ ಸೊಗಡು, ಜ್ಞಾನ ಬಂದಾಗ ಮಾತ್ರ ಓದು ಸಾರ್ಥಕವಾಗುತ್ತದೆ. ಗಿರಿ ವಾಲ್ಮೀಕಿ ಅವರ ‘ಕಾಡಿನ ಸುತ್ತ’ ಕತೆಗಳನ್ನು ತಪ್ಪದೆ ಓದಿ…

ಮೀನು ಹಿಡಿಯುವುದೆಂದರೆ ಧ್ಯಾನಕ್ಕೆ ಕೂರುವುದೆಂದರ್ಥ

ಆಧುನಿಕ ಕಾಂಕ್ರೀಟ್ ಕಾಡಿನ ವಿಶಾಲ ಪರದೆಯಾಚೆ ಕಾಣಿಸುವ ಜಗತ್ತನ್ನಷ್ಟೇ ಪ್ರಪಂಚವೆಂದು ಅರ್ಥೈಸುವ ಸಂಕುಚಿತ ಮನಸ್ಸುಗಳು ಅದರಾಚೆಗೆ ಯೋಚಿಸುವುದೇ ಇಲ್ಲಾ. ಸಹಜವಾಗಿರುವ ಕನ್ನಡ ನೆಲದ ಕಾಡುಗಳು, ಅಲ್ಲಿನ ಹಸಿರು, ಜಲಪಾತ, ಬೆಟ್ಟ-ಗುಡ್ಡ ಅಪಾರ ಜೀವ ವೈವಿಧ್ಯತೆಯಂಥಹ ಅದ್ಬುತ, ಆ ಪ್ರಕೃತಿಗೆ ಹೊಂದಿಕೊಂಡು ಬೇರು ಬಿಟ್ಟು ಬೆಳೆಯುವ ಮನುಷ್ಯನ ಮನಸ್ಸು ವೈವಿಧ್ಯಮಯ ಹಸಿರಿನೊಡನೆ ಅಲೆಮಾರಿಯಾಗಿ ಜಗತ್ತಿಗೆ ತೆರೆದುಕೊಳ್ಳುವ ಬಗೆಯೇ ಬೇರೆ ರೀತಿಯದು. ಅಂಥ ಮನಸ್ಸಿಗೆ ದಕ್ಕುವ ಆತ್ಮತೃಪ್ತಿ, ಸಂತೃಪ್ತಿ, ಸೂಕ್ಷ್ಮ ಪ್ರಜ್ಞೆ, ಅಪಾರಯುತವಾದ ತಾಳ್ಮೆ ನಗರ ಕೇಂದ್ರಿತ ಮನಸ್ಸಿಗೆ ದಕ್ಕದು.

ನಗರ ಬದುಕಿನ ಆಧುನಿಕ ಬಣ್ಣ ಬಣ್ಣದ ಮನೋರಂಜನೆಯಂಥ ಸಕಲ ಸೌಲಭ್ಯಗಳು ಹಾಗೂ ಸುಖದ ದಾರಿ ಎಲ್ಲವೂ ಈಗ ಕ್ಷಣಿಕವಾದರೂ ಅಷ್ಟೇ ದುಬಾರಿ ಕೂಡಾ. ಹಳ್ಳಿ-ನಗರಗಳಲ್ಲಿ ಮನುಷ್ಯ -ಮನುಷ್ಯ ಸಂಬಂಧಗಳಲ್ಲಿ ನಂಬುಗೆಯಿಲ್ಲ ಪ್ರೀತಿ, ವಿಶ್ವಾಸಗಳಿಲ್ಲ, ಎಲ್ಲವೂ ಅವಶ್ಯಕತೆಗಷ್ಟೇ ಎಂಬಂತಾಗಿದೆ. ಈಗಿನ ತಲೆಮಾರು ಆಧುನಿಕ AI ತಂತ್ರಜ್ಞಾನದ ಹುಚ್ಚು ಕುದುರೆಯನ್ನೇರಿ ನಾಗಲೋಟದಲ್ಲಿ ಓಡುತ್ತಿರುವಾಗ ನಾಡಿನ ಮತ್ತು ಬದುಕಿನ ಸಾಕ್ಷಿ ಪ್ರಜ್ಞೆಗಳಾದ ಅಡಿಗರು, ಕುವೆಂಪು, ಆಲನಹಳ್ಳಿ, ಲಂಕೇಶ್, ತೇಜಸ್ವಿ, ಕಣವಿ, ಬೇಂದ್ರೆ, ಕಾರಂತರಂಥಹ ಮಹಾನುಭಾವರು ಇಂದಿನ 2, 000 ತಲೆಮಾರಿಗೆ ನಗಣ್ಯವಾದರು. ಬದುಕಿನ ದೃಷ್ಟಿಕೋನವನ್ನೇ ಬಸಲಾಯಿಸಿಬಲ್ಲ. ತಾಕತ್ತಿರುವ ಕನ್ನಡದ ಸಾಹಿತ್ಯ ಕೃಷಿ ನೇಪಥ್ಯಕ್ಕೆ ಸರಿಯತೊಡಗಿದ್ದು ಈ ಜಾಗತಿಕ ಜಗತ್ತಿನ ದುರಂತ.

ಇಂದಿನ ಮಕ್ಕಳಿಗೆ ಆಟ ಆಡಲು ಪುರುಸೊತ್ತಿಲ್ಲದಂಥ ದಿನಚರಿ ಬದುಕಿನ ಅವಿಭಾಜ್ಯ ಅಂಗವಾಗಿರುವಾಗ ತಮ್ಮ ಊರಿನ ಕಾಡು, ಜೌಗು ನೆಲ, ಅರಣ್ಯ ಜ್ಞಾನ, ಹುಲ್ಲುಗಾವಲು, ಮೀನು ಹಿಡಿಯುವುದು, ಈಜು ಕಲಿಯುತ್ತಾ ಕಾಡಿನ ಹಣ್ಣು, ಜೇನು ಸವಿಯುವ ಭಾಗ್ಯ ನಿಮ್ಮ ಮಕ್ಕಳಿಗೆ ಎಷ್ಟು ಜನ ತಂದೆ-ತಾಯಂದಿರು ಪರಿಚಯಿಸಿದ್ದೀರಿ ಎನ್ನುವುದರ ಮೇಲೆ ನಿಮ್ಮ ಮಕ್ಕಳ ಮುಂದಿನ ಭವಿಷ್ಯ, ಸಾರ್ವಜನಿಕ ಪ್ರಜ್ಞೆ, ಅನ್ನ ಹುಟ್ಟಿಸಿಕೊಳ್ಳುವ ದಾರಿ ನಿರ್ಧಾರವಾಗುತ್ತದೆ. ಹಾಗಾಗಿಯೇ ಅನ್ನ ಉಣ್ಣುವ ಮಗುವಿಗೆ ಭತ್ತ ಬೆಳೆದು ಹೇಗೆ ತಟ್ಟೆಗೆ ಬರುತ್ತದೆ ಎಂಬ ಪಠ್ಯ ಮತ್ತು ಪ್ರಾಯೋಗಿಕತೆಯ ಜೊತೆಗೆ ನೆಲಮೂಲದ ಸೊಗಡು, ಜ್ಞಾನ ಅರಿವುದಾಗ ಓದು ಸಾರ್ಥಕವಾಗುತ್ತದೆ. ಮತ್ತೆ ಮತ್ತೆ 80 ರ ದಶಕದ ಅಣ್ಣಾವ್ರ “ಕಾಮನ ಬಿಲ್ಲು” ಚಲನಚಿತ್ರ ನೆನಪಾಗುತ್ತದೆ.

ಮನುಷ್ಯ ತನ್ನ ಬಿಡುವಿಲ್ಲದ ದೈನಂದಿನ ಜೀವನದಲ್ಲಿ ಕಡೇ ಪಕ್ಷ ವರ್ಷಕ್ಕೆ ಒಂದೆರೆಡು ಬಾರಿಯಾದರು ಕಾಡಿಗೆ ಹತ್ತಿರವಾಗಿ ತನ್ನ ಅಂತರ್ಯವನ್ನು ತೊಳೆದುಕೊಳ್ಳುವ ಪ್ರಯತ್ನವಾದರೂ ಮಾಡಬೇಕು.ಮನುಷ್ಯ ಮತ್ತು ಪ್ರಕೃತಿ ನಡುವಿನ ಸಂಬಂಧವನ್ನ ಅರ್ಥಮಾಡಿಕೊಳ್ಳುವ ಸಂಕಥನದ ಹಾದಿಯಲ್ಲೇ ಬಹುಶಃ ಕಾಡುಗಳನ್ನ ಗಮನಿಸುವ ಇಂಥ ಸೂಕ್ಷ್ಮತೆಗಳೇ ನಿಸರ್ಗದ ಅದೆಷ್ಟೋ ಕೌತುಕಗಳನ್ನ ಹತ್ತಿರಗೊಳಿಸುತ್ತದೆ.

ಬದಲಾದ ಕಾಲಮಾನದ ತಂತ್ರಜ್ಞಾನ ಮನುಷ್ಯರ ಎದೆಯ ಪ್ರೀತಿಯ ಹಸಿಯನ್ನ ಒಣಗಿಸುತ್ತಿದೆ.ಗ್ರಾಮ್ಯ ಭಾವನಾತ್ಮಕ ಸಂಬಂಧಗಳು ದೇಶದ,ನಾಡಿನ ಸಾಂಸ್ಕೃತಿಕತೆಯನ್ನ ಬಿಂಬಿಸುತ್ತಿದೆ.ನೆಲ-ಜಲದ ಆಧಾರದ ಮೇಲೆ ರೂಪುಗೊಂಡ ಬದುಕು ಮನುಷ್ಯ-ನಿಸರ್ಗದ ಸಂಬಂಧವನ್ನ ಕಾಯಬೇಕು ಅಲ್ಲಿಗೆ ನಮ್ಮ ಓದು,ಅಧಿಕಾರ,ಪದವಿ,ವೃತ್ತಿ ಎಲ್ಲವೂ ಸಾರ್ಥಕ. ಏಕಮುಖ ಓಟದಿಂದ ದೇಹ,ಬುದ್ದಿ ನಮ್ಮೆಲ್ಲರ ಬದುಕು ಜಡವಾಗುತ್ತಿದೆ. ಪ್ರಕೃತಿಗೆ ಅಪ್ಪಿಕೊಂಡು ಬೆಳೆದ ಮಗುವೊಂದು ವಿಶಾಲ ವಿಶ್ವದ ಹೃದಯಕ್ಕೆ ತೆರೆದುಕೊಳ್ಳುವ ಬಗೆ ಬೇರೆ ರೀತಿಯಿದು.

ಜಗತ್ತಿನೆಲ್ಲಾ ಕ್ರೌರ್ಯ, ನಾಟಕೀಯತೆ ಹಾಗೂ ಭಾವವಿಕಾರತೆಗಳನ್ನ ಮೀರಿ ಮರೆತು ನಿರ್ಲಿಪ್ತನಾಗಿ ಮೀನು ಹಿಡಿಯುವ ಸುಖ ಹಾಗೂ ಅದರ ಧ್ಯಾನಸ್ಥ ಸ್ಥಿತಿಯ ಮುಂದೆ ಜಗತ್ತಿನೆಲ್ಲಾ ಆಧುನಿಕ ಸುಖಗಳು ನಗಣ್ಯವೆನಿಸುತ್ತವೆ. ಅಂಥ ಮನಸ್ಥಿತಿಗೆ ಇರುವ ಆತ್ಮತೃಪ್ತಿ, ಸಂಯಮ, ತಾಳ್ಮೆ ನಗರ ಕೇಂದ್ರಿತ ಮನಸ್ಸುಗಳಿಗೆ ಇರಲ್ಲಿಕ್ಕಿಲ್ಲ.

ನನ್ನ ಪಾಲಿಗೆ ಇಂದಿಗೂ ಕಾಡುಗಳು ಆತ್ಮದ ಕನ್ನಡಿಯಂತೆ ಭಾಸವಾಗುತ್ತದೆ. ವಿಕಾರ,ಆಕಾರಗಳನ್ನ,ಮನುಷ್ಯನ ಕ್ರೌರ್ಯಗಳನ್ನ ತಾವು ನಂಬಿದವರಿಗೆ ಸತ್ಯ ಹೇಳುವ ಧೈರ್ಯವನ್ನು ಕಾಡುಗಳು ಕಲಿಸುತ್ತವೆ. ಅಲ್ಲಿಗೆ ಮೀನು ಹಿಡಿಯುವ ತಾಳ್ಮೆ ತನ್ನ ಪಾಡಿಗೆ ಒಲಿಯುತ್ತದೆ.!

ಹಾಗಾಗಿಯೇ ದೇವನೂರು ಅವರು ಹೇಳಿದ್ದು ನಿಜ ಅನ್ನಿಸ್ತದಾ ನನಗೆ “Small is beautiful”..!


  • ಗಿರಿ ವಾಲ್ಮೀಕಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW