ಮಿಂಚು ಹುಳಕೆ ಬೆಳಕೇ ಜೀವನಾಡಿ, ಆ ಬದಿ ಕಾಂತಿಯ ಸೆಳೆತಕೆ ಕುಣಿದದ್ದೆ ಕುಣಿದದ್ದು !…ವಾಣಿ ಭಂಡಾರಿ ಅವರ ಲೇಖನಿಯಲ್ಲಿ ಅರಳಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಆ ದಡದಲ್ಲಿದ್ದ ಮಿಣುಕು ದೀಪದ
ಬೆಳಕು ಅದೇಕೊ ಸೆಳೆಯುತ್ತಿತ್ತು.
ಕಾಣದ ಕಡಿಲಿನಾಚೆಯ
ಬದುಕು ಬೆರಗು ಮೂಡಿಸಿತ್ತು.
ಹಾಯಿ ದೋಣಿಯಲಿ
ಬಂದ ಅವನು ಬೊಗಸೆ
ತುಂಬಾ ಮುತ್ತುಗಳಪ್ಪಿ ನಿಂತಿದ್ದ.
ಕಂಗಳ ತುಂಬ ಬೆಳ್ಳಿ ಬೆಳಕು
ಬಳ್ಳಿ ಹಬ್ಬಿ ತಬ್ಬುವುದು
ಮರದಾಸರೆಯನು ತಾನೆ?
ಈ ಪ್ರಕೃತಿ ಧರ್ಮದ
ಮರ್ಮವನು ಅರಿತವರು
ಯಾರಿದ್ದಾರೆ ಇಲ್ಲಿ?.
ಮಿಂಚು ಹುಳಕೆ
ಬೆಳಕೇ ಜೀವನಾಡಿ,,
ಆ ಬದಿ ಕಾಂತಿಯ ಸೆಳೆತಕೆ
ಕುಣಿದದ್ದೆ ಕುಣಿದದ್ದು!.
ಕಣ್ಣು ಮಿಟುಕಿಸಿ ವೈಯಾರದಲಿ…
ಆಹಾ! ಅದೆಂತ ಸೊಬಗು…
ಎಂದೆಣಿಸಿ ಮನದಲಿ
ಆಗೊಮ್ಮೆ ಈಗೊಮ್ಮೆ
ತಡಿಯಾಚೆಯ ಬೆಳಕಲಿ
ಈಚಲು ಮರದ ಕೆಳಗೆ
ಮಜ್ಜಿಗೆ ಕುಡಿದರೂ,,
ಕಳ್ಳೆಂದೇ…ಭ್ರಮಿಸಿ…
ಸೋತು ಅಮಲೇರಿಸಿ
ದೀಪದ ಸುತ್ತ ರಕ್ಕೆ ಬಡಿದು
ನೋವನ್ನೆಲ್ಲ ತೊಡೆದು
ಸ್ವರ್ಗವೆಂದೇ ಸುಖಿಸುವಾಗ,,
ಒಮ್ಮೆ ಏರಿದ ನಶೆಯಿಳಿದು
ನಿಶೆ ಕಳೆದ ಮೇಲೆಷ್ಟೆ,,
ತಿಳಿದದ್ದು ಸುಟ್ಟುಕೊಂಡದ್ದು
ತನ್ನ ರಕ್ಕೆಯೆಂದೆ!,,.
ಹಾರಲಾಗದೆ ನಡೆಯಲಾಗದೆ
ಸುಟ್ಟ ರೆಕ್ಕೆ ಹಿಡಿದೇ,
ತನ್ನ ದಡ ಸೇರಲು ತೆವಳಿದರೇ,
ಆಗ ಹಾಯಿಯೂ ಇರಲಿಲ್ಲ
ಹುಟ್ಟು ಕಾಣಲಿಲ್ಲ.
ಬೆಂದ ಬಾವುಗಳಷ್ಟೆ ಕಂಡವು!.
- ವಾಣಿ ಭಂಡಾರಿ
