ಚಾರಣವನ್ನು ಇಷ್ಟಪಡುವವರಿಗೆ ಕೊಡಚಾದ್ರಿ ಬೆಟ್ಟ ಒಂದು ಒಳ್ಳೆ ಅನುಭವ ನೀಡುತ್ತದೆ ಹಾಗೂ ಸೋಮೇಶ್ವರ ಬೀಚ್ ಕುರಿತು ಆತ್ಮ ಜಿ ಎಸ್ ಅವರು ಬರೆದಿರುವ ಒಂದು ಪುಟ್ಟ ಪ್ರವಾಸ ಲೇಖನ ತಪ್ಪದೆ ಓದಿ..
“ಸಂಕ ಮುರಿದಾಗ ಸ್ನಾನ ಮಾಡು” ಹಿರಿಯರು ಹೇಳುವ ಮಾತು ಅಕ್ಷರಶಃ ಅನುಭವಕ್ಕೆ ಬಂದಿದ್ದು ನೆನ್ನೆ.ಮಕ್ಕಳಿಗೆ ರಜೆ ಶುರುವಾಗಿ ತಿಂಗಳಾಗುತ್ತಾ ಬಂದರೂ ಒಂದೊಂದೇ ಜವಾಬ್ದಾರಿ ಕೆಲಸ ಮುಗಿಸಿ ಗಡಿಬಿಡಿಯಲ್ಲಿ ತಾಯಿ ಮನೆಗೆ ಬಂದಿದ್ದೆ.ಇಲ್ಲಿ ಇರುವುದೇ ವಾರ ಅಥವಾ ಹತ್ತು ದಿನ.ಎಲ್ಲರೂ ಅವರವರ ಕೆಲಸದಲ್ಲಿ ಬಿಝಿ.ಅಮ್ಮನ ಮನೆಯಲ್ಲಿ ಆರಾಮ್ ತಿಂದುಂಡು ಇದ್ದು ,ಅತ್ತೆ ಮನೆಗೆ ಹೋಗುವ ಇರಾದೆಯಿಂದ ಬಂದವಳು.ಬೇಸಿಗೆ ರಜೆಯಲ್ಲಿ ಮಾತ್ರ ಎಲ್ಲಾ ಕಸಿನ್ಸ್ ಗಳು ಒಟ್ಟಾಗುವುದರಿಂದ ಒಂದು ದಿನವಾದರೂ ಎಲ್ಲರೂ ಒಟ್ಟಿಗೆ ಸಮಯ ಕಳೆಯುವ ಮನಸ್ಸು ನಮ್ಮದು.ಹಾಗಾಗಿಯೇ ಕಳೆದ ವರ್ಷದಿಂದ ಸಣ್ಣ ಪ್ರವಾಸ ಹೋಗುವ ನಿರ್ಧಾರ ಮಾಡಿದ್ದರೂ ನಾ ಬಂದ ಸಮಯಕ್ಕೆ ಯಾರೂ ಸಿಗಲಾರದು ಎಂದೇ ಬೆಂಗಳೂರಿನಿಂದ ಹೊರಡುವಾಗ ಪ್ರವಾಸದ ಆಲೋಚನೆ ಕೈ ಬಿಟ್ಟಿದ್ದೆ..
ಯಾವುದೋ ಲೇಖನಕ್ಕೆ ಒಬ್ಬರನ್ನು ಭೇಟಿಯಾಗಲು ನಾನು, ಧೃತಿ ಹತ್ತಿರದ ಸ್ಥಳಕ್ಕೆ ಹೋಗಿ ಮರಳುವಾಗ ಧೃತಿ ಊರಿಗೆ ಹೊರಡುವ ಕಾರ್ಯಕ್ರಮ ರದ್ದಾಗಿದ್ದೇ ಮತ್ತೆ ನಮ್ಮಿಬ್ಬರಲ್ಲಿ ಒಂದು ದಿನದ ಪ್ರವಾಸದ ಆಸೆ ಗರಿಗೆದರಿದ್ದು. ಹೊರಗೆ ನೋಡಿದರೆ ತಲೆಸುಡುವ ಬಿಸಿಲು, ಸಮಯವೂ ಕಡಿಮೆ ಹೊರಡುವುದು ಎಲ್ಲಿಗೆ? ಹಿಂದೆ ಮುಂದೆ ಆಲೋಚನೆ ಮಾಡದೆ ಒಮ್ಮೆ ಎಲ್ಲರನ್ನೂ ವಿಚಾರಿಸುವ ಎಂದು msg ಮಾಡಿದ್ದೆ ಯಾರೂ ಸಮಸ್ಯೆಯ ಪಟ್ಟಿ ಹೇಳದೆ ಎಲ್ಲರೂ ಹೊರಟಿದ್ದು ಅಚ್ಚರಿ. ಅವರೇನೋ ಬರಲು ready ಆದರೆ ಹೋಗುವುದೆಲ್ಲಿಗೆ?
Temple ರನ್ ಯಾರಿಗೂ ಇಷ್ಟವಿಲ್ಲ. ಮಕ್ಕಳಿಗೂ ಅನುಭವ ಜೊತೆಯಲ್ಲಿ ಮಜಾ ಇರಬೇಕು, requirements ಜಾಸ್ತಿ ಆದಹಾಗೆ ಸ್ಥಳದ ಆಯ್ಕೆಯ ಕಷ್ಟ ನಮ್ಮಿಬ್ಬರಿಗೆ. ಅಂತೂ ಇಂತೂ ಬಿಸಿಲಾದರೂ ಸರಿ ಬೆಳಿಗ್ಗೆ ಬೇಗ ಎದ್ದು ಹೊರಡುವುದು ಎಂದು ತೀರ್ಮಾನವಾದ ಸ್ಥಳ ಕೊಡಚಾದ್ರಿ.
ಮಲೆನಾಡಿಗರಿಗೆ ಕಾಡು ವಿಶೇಷವಾಗದೇ ಹೋದರೂ ಕೊಡಚಾದ್ರಿ ಬೆಟ್ಟ ಹತ್ತುವುದು ಎಂದರೆ ಎಲ್ಲರಿಗೂ ಸೂಕ್ತ ಸ್ಥಳವಲ್ಲ, ಬೇಸಿಗೆಯಲ್ಲಿ ಬೇರೆ ಸಮಯದ ಹಾಗೆ ಹಸಿರು ಇರದು, ಇಂತದ್ದೆಲ್ಲ ಕಾರಣವಿದ್ದರೂ ಎಲ್ಲರೂ ಒಟ್ಟಾಗಿ ಸೇರುವುದೇ ಅದ್ಯತೆಯಾದ್ದರಿಂದ ಹೋಗುವುದು ಎಂದು ತೀರ್ಮಾನಿಸಿ ಬೆಳಿಗ್ಗೆ ಬೇಗ ಹೋದವರಿಗೆ ವ್ಯವಸ್ಥಿತ ಆತಿಥ್ಯ ಬೆಟ್ಟದ ತುದಿವರೆಗೆ ಟ್ರಕ್ಕಿಂಗ್ ಹೋಗಲು ಮಾರ್ಗದರ್ಶನ ನೀಡಿದ್ದು ‘ಅಕ್ಷಯ ಹೋಂಸ್ಟೇ’ ಸಿಬ್ಬಂದಿ. ಆದಿ ಶಂಕರಾಚಾರ್ಯರು ತಪೋಗೈದ ಸ್ಥಳ, ನೋಡಿದಷ್ಟೂ ಆಳ,ಉದ್ದದವರೆಗೆ ಕಾಣಿಸುವ ಬೆಟ್ಟಗಳ ಸಾಲು, ಬಿರು ಬೇಸಿಗೆಯ ದಿನಗಳಲ್ಲೂ ಕಣ್ಣ ಮುಂದೆ ಹಾದು ಹೋಗುವ ಮಂಜು, ಬೀಸುವ ತಂಪು ಗಾಳಿ ಫ್ರಿಡ್ಜ್ ಎದುರೇ ನಿಂತಿದ್ದೇವ ಎಂಬಂತೆ ತಂಪು ನೀಡಿತ್ತು.
ನಿರೀಕ್ಷೆ ಮೀರಿದ ಧೂಳಿನ ನಡುವೆ ತಿರುವುಗಳ ಮಧ್ಯೆ ಜೀಪ್ ಚಲಾಯಿಸುವ ಚಾಲಕರನ್ನು ನೋಡಿಯೇ ಮಳೆಗಾಲದಲ್ಲಿ ಇಲ್ಲಿನ ಅನುಭವ ಇಮ್ಯಾಜಿನ್ ಮಾಡಿದ್ದೆ. ದಾರಿಯುದ್ದಕ್ಕೂ ಭಿನ್ನ ಅನುಭವ ಹೇಳಿದ ಡ್ರೈವರ್ ದೇವಾಲಯದ ಮುಂದೆ ಗಾಡಿ ನಿಲ್ಲಿಸಿದ್ದೇ ಇಲ್ಲಿಯವರೆಗೂ ತೊಂದರೆಯಾಗದ ಹಾಗೆ ಕರೆದುಕೊಂಡು ಬಂದರಲ್ಲ ಅನ್ನಿಸಿ ಸಂತಸವಾಗಿತ್ತು. ಮಳೆಗಾಲದ ಹಸಿರು,ಮಾರ್ಗ ಮಧ್ಯೆ ನದಿ. ನೀರುಗಳ ಕಲರವ ನೋಡುವ ಆಸಕ್ತಿ ಇದ್ದವರು ಸೆಪ್ಟೆಂಬರ್ ನಿಂದ ಫೆಬ್ರವರಿ ಒಳಗೆ ಬರುವುದು ಉತ್ತಮ. ಇನ್ನೂ ನಮ್ಮ ಹಾಗೆ ಸಮಯದ ಅವಕಾಶ ಇಲ್ಲ, ಗಳಿಸದಷ್ಟು ಅನುಭವ ಎನ್ನುವವರೂ ಬೇಸಿಗೆಯಲ್ಲಿ ಹೋದವರು, ಬೆಳಿಗ್ಗೆ ಬೇಗ ಹೋದರೆ ನಿರಾಸೆಯೂ ಅಗದೂ,ಬೆಟ್ಟ ಹತ್ತಿದ ಆಯಾಸವು ಆಗದು.
ನಿತ್ಯ ಬದುಕಿನ ಕಿರಿಕಿರಿಯಿಂದ ಹೊರಬರಲು, ಪ್ರಕೃತಿಯ ಜೊತೆಯಲ್ಲಿ ಅದರ ಮೌನವನ್ನು,ತಂಪನ್ನು ಆಸ್ವಾದಿಸುವ ಇಚ್ಛೆ ಇದ್ದಲ್ಲಿ ಕೊಡಚಾದ್ರಿಯ ಬೆಟ್ಟದ ಬುಡದಲ್ಲಿ ಹಲವಾರು ಹೋಂ ಸ್ಟೇ ಗಳಿವೆ. ಚಾರಣವೆ ಮಾಡುತ್ತೇವೆ ಎನ್ನುವವರು ಸರಿಯಾದ ಮಾರ್ಗದರ್ಶಕರ ನೆರವು ಪಡೆದು ಇಡೀ ಬೆಟ್ಟವನ್ನೆ ಹತ್ತಬಹುದು. ಸಾಧ್ಯವಾಗದು ಎನ್ನುವವರು ದೇವಸ್ಥಾನದವರೆಗೆ ಜೀಪ್ ನ ಮೂಲಕ ಹೋದರೆ ತಿರುವುಗಳ ಜಾರು ಬಂಡಿ ಆಟದ ಅನುಭವ. ಅಲ್ಲಿಂದ ಶ್ರೀ ಶಂಕರರು ತಪೋಗೈದ ಸ್ಥಳದವರೆಗೆ ಚಾರಣದ ಅನುಭವ ಪಡೆಯಲೆ ಬೇಕು. ಹೆಚ್ಚಾಗಿ ಕೇರಳೀಯರು ಭೇಟಿ ನೀಡುವ ಸ್ಥಳವಾಗಿದ್ದು, ಬೆಟ್ಟದ ತುದಿಯಲ್ಲಿ ಸರ್ವಜ್ಞ ಪೀಠವಿದೆ ಗುಂಪಿನಲ್ಲಿ ಹೋದರೆ ಒಬ್ಬರಿಗೆ ಒಬ್ಬರು ಹುಮ್ಮಸ್ಸು ನೀಡುತ್ತಾ ಬೆಟ್ಟ ಹತ್ತಲು ಸುಲಭ. ಮೇಲೇರಿದ ಹಾಗೆ ಕಾಣುವ ಮಂಜು, ಮುಸುಕು, ಹತ್ತಿದ ಆಯಾಸವನ್ನು ಪರಿಹರಿಸುವುದಲ್ಲದೆ ಸಾರ್ಥಕ ಭಾವ.
ಕೊಡಚಾದ್ರಿಯ ಸುತ್ತಮುತ್ತ ಬೇರೆ ಬೇರೆ ಸ್ಥಳಗಳಿದ್ದು, ಹೋಗಬಹುದು.ನಾವು ಬೆಟ್ಟ ಹತ್ತಿದ ಆಯಾಸ ಪರಿಹಾರಕ್ಕೆ,ಮಕ್ಕಳಿಗೆ ನೀರಾಟದ ಸಂಭ್ರಮಕ್ಕೆ ಸೋಮೇಶ್ವರ ಬೀಚ್ ಆಯ್ಕೆ ಮಾಡಿದೆವು.. ಮನಸ್ಸು ಮಾಡಿದಲ್ಲಿ ಬೆಟ್ಟದ ಹಸಿರಿನ ನಡುವೆ ಉದಯಿಸುವ ಸೂರ್ಯನನ್ನು ನೋಡಿ,ತನ್ನ ರಂಗನ್ನು ಕ್ಷಣ ಕ್ಷಣಕ್ಕೆ ಬದಲಾಯಿಸುತ್ತಾ ಕಡಲಲ್ಲಿ ಮುಳುಗುವ ಸೂರ್ಯಸ್ಥವನ್ನು ಮತ್ತೊಂದೆಡೆ ನೋಡಬಹುದು.
- ಆತ್ಮ ಜಿ ಎಸ್