ಹಿಡಿದ ಕೆಲಸ ನೆರವೇರುವವರೆಗೂ ಮನಸ್ಸನ್ನು ಹಿಡಿದಿಡಬೇಕು, ಯಾರ ಮಾತಿಗೂ ಗಮನಕೊಡದೆ, ನಮ್ಮ ಗುರಿಯತ್ತ ನಮ್ಮ ನೋಟವಿರಬೇಕು. ‘ಕಿವುಡಾಗಬೇಕು ಹಳಿಯುವವರ ಮುಂದೆ’ ಎನ್ನುತ್ತಾರೆ ಆಪ್ತಸಮಾಲೋಚಕಿ ಚಂಪಾ ಚಿನಿವಾರ್ ಅವರು, ‘ಮಾನಸ….ಇದು ಮನಸಿನ ಮಾತು’ ಅಂಕಣದ ಮೂಲಕ ಓದುಗರ ಮನಸ್ಸಿಗೆ ಹತ್ತಿರವಾಗಲಿದ್ದಾರೆ, ತಪ್ಪದೆ ಚಂಪಾ ಚಿನಿವಾರ್ ಅವರ ಅಂಕಣವನ್ನು ಓದಿ…
ಒಮ್ಮೆ ಕಪ್ಪೆಗಳೆಲ್ಲ ಒಂದು ಪಂದ್ಯ ಏರ್ಪಡಿಸಿದ್ದವು. ಒಂದು ಎತ್ತರದ ಕಂಬವನ್ನು ಯಾರು ಮೊದಲು ಹತ್ತುತ್ತಾರೋ ಅವರು ಗೆಲ್ಲುತ್ತಾರೆ ಅಂತಹ ಕಪ್ಪೆ ಶಕ್ತಿವಂತ ಹಾಗು ಬುದ್ಧಿವಂತ ಎಂದು ತೀರ್ಮಾನವಾಯಿತು.
ಕಪ್ಪೆಗಳೆಲ್ಲ ಸಾಲಾಗಿ ನಿಂತವು, ಪಂದ್ಯ ಶುರುವಾಗುತಿದ್ದಂತೆ ಕಪ್ಪೆಗಳು ತಮ್ಮ ಗುರಿ ತಲುಪಲು ಕುಪ್ಪಳಿಸಿಕೊಂಡು ಹೋದವು. ಸುತ್ತ ಮುತ್ತ ನಿಂತಿದ್ದ ಇತರ ಕಪ್ಪೆಗಳು ಇವುಗಳನ್ನು ನೋಡಿ ಈ ಕಪ್ಪೆಗಳಿಗೆ ಕಂಬ ಹತ್ತಲು ಸಾಧ್ಯವಿಲ್ಲ, ಅವುಗಳಿಗೆ ಸೋಲೇ ಆಗುವುದು ಎಂದು ಕಿಚಾಯಿಸಿಕೊಂಡು, ಆಡಿಕೊಂಡು ನಗುತಿದ್ದವು. ಆ ಕಪ್ಪೆಗಳ ಮಾತುಗಳನ್ನು ಕೇಳಿಸಿಕೊಂಡ ಪಂದ್ಯದ ಕಪ್ಪೆಗಳು ತಮ್ಮ ಸಾಮರ್ಥ್ಯವನ್ನು ಕಳೆದುಕೊಳ್ಳತೊಡಗಿದವು ಒಂದೊಂದಾಗಿ ಕಪ್ಪೆಗಳು ಹಿಂದೆ ಉಳಿದವು.
ಎಷ್ಟೇ ಪ್ರಯತ್ನ ಪಟ್ಟರೂ ಕಪ್ಪೆಗಳಿಗೆ ಮುಂದೆ ಜಿಗಿದು ಹೋಗಲು ಸಾಧ್ಯವಾಗಲಿಲ್ಲ. ಅವುಗಳಿಗೆ ತಮ್ಮ ಮೇಲಿನ ನಂಬಿಕೆಗಿಂತ ಇತರ ಕಪ್ಪೆಗಳ ಅಪಹಾಸ್ಯ, ನಕಾರಾತ್ಮಕ ಮಾತುಗಳಿಂದ ಹಿಂದೆ ಉಳಿದವು. ಆದರೆ ಒಂದೇ ಒಂದು ಕಪ್ಪೆ ತಾನು ತಲುಪಬೇಕಿದ್ದ ಗುರಿಯನ್ನು ತಲುಪಿತು. ಕಂಬವನ್ನು ಹತ್ತಿ ಜಯಗಳಿಸಿತ್ತು. ಏನಕ್ಕೆ ಈ ಕಪ್ಪೆ ಮಾತ್ರ ತನ್ನ ಗುರಿ ತಲುಪಿತ್ತೆಂದರೆ ಅದು ಇತರ ಕಪ್ಪೆಗಳ ಮಾತಿಗೆ ಕಿವಿಗೊಡಲಿಲ್ಲ. ಕಿವುಡಾಗಿತ್ತು. ಅದಕ್ಕೆ ತನ್ನ ಗುರಿ ಮಾತ್ರ ಮುಖ್ಯವಾಗಿತ್ತು.

ಈ ಕಥೆಯಿಂದ ತಿಳಿಯುವುದೇನೆಂದರೆ ನಮ್ಮ ಗುರಿ ತಲುಪಲು ಹೊರ ಪ್ರಪಂಚದ ಮಾತಿಗೆ ಕಿವಿಕೊಡಬಾರದು. ಎಷ್ಟೋ ಸಲ ತನಗೆ ಸಾಮರ್ಥ್ಯವಿದ್ದರೂ ಬೇರೆಯವರು ನಿನಗೇನಾಗುತ್ತೆ, ನಿನಗೆ ಧೈರ್ಯವೂ ಇಲ್ಲ ಬಲವೂ ಇಲ್ಲ ಎಂದು ಮನೋಬಲವನ್ನು ಕುಗ್ಗಿಸಲು ಪ್ರಯತ್ನ ಪಟ್ಟರೆ ಅವರ ಮಾತನ್ನು ಗಂಭೀರವಾಗಿ ತೆಗೆದುಕೊಂಡು ತಮ್ಮ ಸಾಮರ್ಥ್ಯದ ಬಗ್ಗೆ ತಿಳಿಯದೇ ಹೋಗುತ್ತದೆ.
ಸಮಸ್ಯೆ ಬಂದಾಗ ಎದುರಿಸಬೇಕು. ಯಾವುದೇ ಕೆಲಸ ಮಾಡುವಾಗ ಅದನ್ನು ಸಂಪೂರ್ಣಗೊಳಿಸುವ ಛಲವಿರಬೇಕು. ಒಂದು ಗಾದೆ ಮಾತಿನಂತೆ, ವೇರ್ ದೆರ್ ಈಸ್ ಎ ವಿಲ್ ದೆರ್ ಈಸ್ ಎ ವೇ, ಮನಸಿದ್ದರೆ ಮಾರ್ಗ ಅನ್ನುವ ಹಾಗೆ ಗೆಲ್ಲುವ ದಾರಿ, ಗುರಿ ತಲುಪುವ ದಾರಿ ಎಲ್ಲರಲ್ಲಿ ಇರಬೇಕು.
ಉತ್ತಮ ಮನಸ್ಸಿನಿಂದ, ಆಸಕ್ತಿಯಿಂದ ಕಲಿತ ವಿಷಯಗಳನ್ನು ಕಡಿಮೆ ಸಮಯದಲ್ಲಿ ಕಲಿಯಬಹುದು ಮತ್ತು ಬಹುಕಾಲದವರೆಗೂ ನೆನಪಿನಲ್ಲಿಟ್ಟುಕೊಳ್ಳಬಹುದು. ಸಾಮರ್ಥ್ಯ ಮತ್ತು ಪ್ರಯತ್ನಗಳು ಒಟ್ಟಿಗೆ ಸಾಗಿದರೆ, ಯಶಸ್ಸೆಂಬುದು ಕಟ್ಟಿಟ್ಟ ಬುತ್ತಿ. ಸಾಮರ್ಥ್ಯದ ಜೊತೆಗೆ ಶ್ರದ್ಧೆಯಿಂದ ಕೆಲಸ ಮಾಡುವ ಮನಸ್ಸು ಬಹಳ ಮುಖ್ಯ.
ಪ್ರೀತಿಯಿಂದ, ಇಷ್ಟ ಪಟ್ಟು ಮಾಡಿದ ಕೆಲಸಗಳು ಯಶಸ್ವಿಯಾಗುತ್ತವೆ. ಹಾಗಾಗಿ ಮೊದಲು ನಮ್ಮಲ್ಲಿ ಗುರಿ ಇರಬೇಕು ನಂತರ ಗುರಿ ಸಾಧಿಸುತ್ತೇನೆ ಎಂಬ ಛಲ ಇರಬೇಕು ಛಲದಿಂದ, ಆತ್ಮವಿಶ್ವಾಸ, ಆತ್ಮವಿಶ್ವಾಸದಿಂದ ಅಭ್ಯಾಸ ಅಥವಾ ಕೆಲಸದ ಕಡೆಗೆ ಶ್ರಮವಿರಬೇಕು.
ಕೆಲಸದ ಬಗ್ಗೆ ಆಸಕ್ತಿ ಇದ್ದರೆ ಮಾರ್ಗ ತನಗೆ ತಾನೇ ದಾರಿ ಕಾಣುತ್ತದೆ ತಲುಪುವ ಬಗೆ ತಿಳಿಯುತ್ತದೆ. ಸಾಮರ್ಥ್ಯವು ಎಷ್ಟೇ ಇದ್ದರೂ, ಸರಿಯಾದ ಪ್ರಯತ್ನವಿಲ್ಲದಿದ್ದರೆ ಗುರಿ ಸಾಧಿಸಲು ಸಾಧ್ಯವಾಗುವುದಿಲ್ಲ. ನನ್ನ ಕೈಯಲ್ಲಿ ಆಗುವುದಿಲ್ಲ ಎಂದು ಯೋಚಿಸುವುದರಿಂದ ಯಾವ ಕೆಲಸವೂ ಸಾಧ್ಯವಾಗುವುದಿಲ್ಲ. ಬದಲಾಗಿ ಮಾಡಿಯೇ ತಿರುತ್ತೇನೆ ಎಂದು ಮನಸ್ಸು ಮಾಡಿದರೇ ಎಂಥ ಕೆಲಸವಾದರೂ ಮಾಡಲು ಸಾಧ್ಯ.
ಗುರಿ ಇರುವ ಕಡೆ ಗಮನವಿರಬೇಕು. ಹಳಿಯುವವರಿಗೆ ಕಿವಿಗೊಡದೆ ಮುಂದೆ ಸಾಗಬೇಕು.
- ಚಂಪಾ ಚಿನಿವಾರ್ – ಆಪ್ತಸಮಾಲೋಚಕಿ
