ಕಾಣದೂರಿಗೆ ಪಯಣ ಬೆಳೆಸಿದೆ ಒಂದು ಮಾತನು ತಿಳಿಸದೆ…ಕಳೆದು ಹೋದವು ಮೂರು ವರ್ಷವು ಮಗನು ಮನೆಯಲಿ ಇಲ್ಲದೆ…ಕವಿಯತ್ರಿ ಬಿಟ್ಟೀರ ಚೋಂದಮ್ಮ ಅವರು ಮಗನಿಗಾಗಿ ಬರೆದ ಭಾವುಕ ಬರಹ…

ಕಳೆದು ಹೋದವು ಮೂರು ವರ್ಷವು
ಮಗನು ಮನೆಯಲಿ ಇಲ್ಲದೆ
ಬಳಿಯಲಿಲ್ಲದೆ ಜೀವ ಮರುಗಿದೆ
ಹೋದ ಜಾಡನು ತಿಳಿಯದೆ
ಬದುಕಿ ಬಾಳಲು ಸಮಯವಿದ್ದರು
ತೊರೆದೆಯೇತಕೆ ನಮ್ಮನು
ಕೆದಕಿ ಕಾಡಿದೆ ಹಳೆಯ ಗಾಯವು
ವ್ರಣಕೆ ಔಷಧಿ ಕಾಣೆನು
ಕಾಣದೂರಿಗೆ ಪಯಣ ಬೆಳೆಸಿದೆ
ಒಂದು ಮಾತನು ತಿಳಿಸದೆ
ಜಾಣತನದಲಿ ಬರುವೆನೀಗಲೆ
ಎಂದ ಮಾತನು ಉಳಿಸದೆ
ನಿನ್ನ ನಂಬಿದ ಜೀವವಿಲ್ಲಿವೆ
ತಾಳಲಾರದ ನೋವಲಿ
ತನ್ನೊಡಲಿನೊಳಗುರಿಯ ಸಂಕಟ
ತಣಿಸಲಾರದೆ ಬದುಕಲಿ
ಹೋದೆಯೆಲ್ಲಿಗೆ ಯಾರು ತಿಳಿಯರು
ವಾರ್ತೆ ತರುವವರಿಲ್ಲದೆ
ಬಾಧೆಯರಿಯದ ಯಮನ ಕಿಂಕರ-
ನೊಯ್ದನೇತಕೆ ಮೋಹದೆ
- ಬಿಟ್ಟೀರ ಚೋಂದಮ್ಮ , ಬೆಂಗಳೂರು.
