ಶ್ರೀ ಶ್ರೇಯಸ್ ರು ಶಾಲಾ ದಿನಗಳಲ್ಲೇ ಯಕ್ಷಗಾನ, ನಾಟಕ, ಸಂಗೀತಗಳಲ್ಲಿ ಆಸಕ್ತಿ ಹೊಂದಿದ್ದು, ಚಿಕ್ಕ ಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದುದಲ್ಲದೆ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನಗಳನ್ನು ಗಳಿಸುತ್ತಿದ್ದರು. ಅವರ ಸಾಧನೆಯ ಕುರಿತು ಬಾಲು ದೇರಾಜೆ ಅವರು ಬರೆದ ಒಂದು ಲೇಖನವನ್ನು ತಪ್ಪದೆ ಓದಿ…
ದಕ್ಷಿಣ ಕನ್ನಡ ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮದ ಕಲ್ಲಡ್ಕದ ಮಾಯಾಲೋಕ ನಿಲಯದಲ್ಲಿ ವಾಸವಾಗಿರುವ ಶ್ರೀ ಶ್ಯಾಮ್ ಜಾದುಗಾರ್ ಸಾಧನೆಯ ಹಾದಿಯಲ್ಲಿದ್ದು, ಅನೇಕ ಉತ್ತಮ ಮಾಯಾಜಾಲ ಪ್ರದರ್ಶನವನ್ನು ನೀಡಿ ಹಲವಾರು ಪ್ರಶಸ್ತಿ ಗೌರವ, ಸನ್ಮಾನಗಳಿಗೆ ಭಾಜನರಾದವರು. ಪತ್ನಿ ಶ್ರೀಮತಿ ವಿಜಯಲಕ್ಷ್ಮಿ. ಇವರ ಪ್ರಥಮ ಪುತ್ರರಾದ ಶ್ರೀ ಶ್ರೇಯಸ್ ಎಸ್. ಇವರು ಕಾವು- ಪುತ್ತೂರಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಬೆಂಗಳೂರಲ್ಲಿ ಪ್ರೌಢ ಶಿಕ್ಷಣ, ಉಜಿರೆಯ ಎಸ್.ಡಿ. ಎಮ್ ನಲ್ಲಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸದ ನಂತರ ಶಿವಮೊಗ್ಗ ತೀರ್ಥಹಳ್ಳಿಯಲ್ಲಿ ತಾಂತ್ರಿಕ ವಿದ್ಯಾಲಯದಲ್ಲಿ ತಾಂತ್ರಿಕ ಪದವಿ ಗಳಿಸಿದವರು (Polytechnic).
ಶ್ರೀ ಶ್ರೇಯಸ್ ರು ಶಾಲಾ ದಿನಗಳಲ್ಲೇ ಯಕ್ಷಗಾನ, ನಾಟಕ, ಸಂಗೀತಗಳಲ್ಲಿ ಆಸಕ್ತಿ ಹೊಂದಿದ್ದು, ಚಿಕ್ಕ ಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದುದಲ್ಲದೆ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನಗಳನ್ನು ಗಳಿಸುತ್ತಿದ್ದರು. ಚೆಂಡೆ-ಮದ್ದಳೆ ನುಡಿಸುವುದರಲ್ಲಿ ಆಸಕ್ತಿಯಿಂದಾಗಿ ಶ್ರೀ ಮೋಹನ್ ಬೈಪಡಿತ್ತಾಯರನ್ನು ಗುರುವಾಗಿಸಿಕೊಂಡಿದ್ದರು. ಶ್ರೀ ಶಿವಗಿರಿ ಕಲ್ಲಡ್ಕರಿಂದ ಹಿನ್ನೆಲೆ ಸಂಗೀತವನ್ನು ಅಭ್ಯಾಸ ಮಾಡಿಕೊಂಡು ಅಪ್ಪನ ಜೊತೆ ಮಾಯಾಲೋಕ ಕಲ್ಲಡ್ಕದ ಮಾಯಾಜಾಲದ ಕಾರ್ಯಕ್ರಮಗಳಲ್ಲಿ ಹಿನ್ನೆಲೆ ಸಂಗೀತವನ್ನು ನೀಡುತ್ತಿದ್ದರು.
2017 ನೇ ಇಸವಿಯಲ್ಲಿ ದಿ. ಶಾಂತರಾಮ ಕಲ್ಲಡ್ಕರ ಮುಖೇನ ನಾಟಕಗಳಿಗೆ ಹಿನ್ನೆಲೆ ಸಂಗೀತವನ್ನು ನೀಡಲು ಪ್ರಾರಂಭಿಸಿದರು. ಇದಕ್ಕಾಗಿ ಇವರು ಆಯ್ಕೆ ಮಾಡಿ ಕೊಂಡದ್ದು ಕೀ ಬೋರ್ಡ್ (KeY Board) ಇದರ ಜೊತೆಯಲ್ಲಿ ಜೊತೆಯಾಗಿ, ಅಪ್ಪ ಮಾಯಾಲೋಕದಲ್ಲಿ ಮುಂದುವರಿದರೆ ಮಗ ಸಂಗೀತ ಲೋಕ
ದಲ್ಲಿ ಸುದೀರ್ಘ ಕಾಲದ ಪಯಣವನ್ನು ಮುಂದುವರೆಸಿ, ಮುಂದು ಮುಂದಕ್ಕೆ ಸಾಗುತ್ತಾ ಯಶಸ್ಸು ಕಂಡ ಶ್ರೇಯಸ್.
ಇವರು ನಾಟಕಗಳ ಸನ್ನಿವೇಶಗಳಿಗೆ ತಕ್ಕುದಾದ ಸಂಗೀತವನ್ನು ಕೀ ಬೋರ್ಡ್ ಮೇಲೆ ತಮ್ಮ ಕೈ ಬೆರಳುಗಳನ್ನು ಅಲ್ಲಾಡಿಸುತ್ತಾ ಬೇಕಾಗಿರುವ ಸ್ವರಗಳನ್ನು ಬೇಕಾದಲ್ಲಿಗೆ ಕೊಟ್ಟು ನಾಟಕ ಪ್ರದರ್ಶನಗಳು ಯಶಸ್ವಿಯಾಗುವಲ್ಲಿ ಇವರ “ಕೈ” ವಾಡವು ಇದೆ.
ಇತ್ತೀಚೆಗೆ ಬ್ರಹ್ಮಾವರದ ಕೆನ್ನಾರು ನಲ್ಲಿ ರಾತ್ರಿ ಗಂ. 7.00 ಕ್ಕೆ ಆರಂಭವಾಗಬೇಕಾಗಿದ್ದ “ಕೊಪ್ಪರಿಗೆ ಗುತ್ತು” ನಾಟಕ ಇವರ ಇನ್ನೊಂದು ವೃತ್ತಿಯನ್ನು ಮುಗಿಸಿ ಅಲ್ಲಿಗೆ ಕಾರಿನ ಮುಂದಿನ ಚಕ್ರ ಬದಲಾಯಿಸುದರೊಂದಿಗೆ ತಲಪಿದಾಗ ರಾತ್ರಿ ಗಂ.9.15 ಆಗಿತ್ತು. (ಈ ವಿಷಯವನ್ನು ಅಲ್ಲಿನ ವ್ಯವಸ್ಥಾಪಕರಿಗೆ ಮೊದಲೇ
ಸೂಚನೆ ಕೊಟ್ಟಿದ್ದರು) ಹೋಗುತ್ತಿರುವ ರಸ್ತೆಯ ನಡುವಿನ ವೇಳೆಯಲ್ಲಿ ವ್ಯವಸ್ಥಾಪಕರಿಂದ ತುಳು ಭಾಷೆಯಲ್ಲಿ… ಈರ್ ಬರಂದೆ ನಾಟಕ ಸುರು ಆಪುಜ್ಜಿ… ಎನ್ನುವ ಮಾತುಗಳು. ನಾಟಕ ನೋಡುವುದಕ್ಕಾಗಿ ಸು.500ರಿಂದ 600 ಜನ ಸಭಿಕರು ಸ್ಥಬ್ಧರಾಗಿ ಕುಳಿತು ಇವರ ಬರುವಿಕೆಯನ್ನೇ ಕಾಯುತ್ತಿದ್ದರು. ಕಂಡಾಗ ಮುಖದಲ್ಲಿ ನಗುವಿನ ಜೊತೆಗೆ ಕಣ್ಣಲ್ಲಿ ನಾಟಕವನ್ನು ನೋಡವ ಆತುರ.
ಕಿವಿಗಳಿಗೆ ಹಿನ್ನೆಲೆ ಸಂಗೀತವನ್ನು ಆಲಿಸುವಾಸೆಯಲ್ಲಿದ್ದವರಿಗೆ ಮೂರು 3 ಗಂಟೆಗಳ ಕಾಲ ಸಮಯ ಬಹಳ ಖುಷಿ ಕೊಟ್ಟಿತು.
ದ.ಕ.-ಉಡುಪಿ-ಕಾಸರಗೋಡು ನಾಟಕ ಸಂಗೀತ ನಿರ್ದೇಶಕರ ಸಂಘಗಳ ಜೊತೆಕಾರ್ಯದರ್ಶಿ ಯಾಗಿದ್ದುದಲ್ಲದೆ, ಉಡುಪಿ, ದ.ಕನ್ನಡ, ಕಾಸರಗೋಡು, ಮೈಸೂರು, ಬೆಂಗಳೂರು, ಗುಜರಾತ್, ಬೊಂಬಾಯಿ, ಪುನಾ ಅಲ್ಲದೆ ದುಬೈಯಲ್ಲೂ ನಾಟಕಗಳಿಗೆ ಹಿನ್ನೆಲೆ ಸಂಗೀತವನ್ನು ನೀಡಿ ಜನ ಮೆಚ್ಚುಗೆ ಗಳಿಸಿದವರು.
ಶ್ರೇಯಸ್ ಎಸ್ ಕುಟುಂಬದ ಸದಸ್ಯರ ಜೊತೆ
ವಿದಾತ್ರಿಕಲಾವಿದರು ಕೈಕಂಬಲ್ಲಿ 10 ವರ್ಷ ಸಲ್ಲಿಸಿದ ಸೇವೆಗೆ, ಅದ್ಯಪಾಡಿ ಶ್ರೀ ಆದಿನಾಥೇಶ್ವರ ಭಜನಾಮಂಡಳಿ ಹಾಗೂ ತುಳುವರೆ ತುಡರ್ ಕಲಾತಂಡ ಸುರತ್ಕಲ್ ಇವರಿಂದ ” ಸಂಗೀತ ರತ್ನ “, ತೆಲಿಕೆದ ಕಲಾವಿದೆರ್ ಕೊಯಿಲ ಬಂಟ್ವಾಳ ವತಿಯಿಂದ ” ತುಳುನಾಡ ಸಂಗೀತದರಸೆ ” ಸೇರಿದಂತೆ ಹಲವು ಸಂಘ-ಸಂಸ್ಥೆಗಳು ಇವರನ್ನು ಸನ್ಮಾನಿಸಿ ಗೌರವಿಸಿದ್ದಾರೆ.
ಶ್ರೀ ಶ್ರೇಯಸ್ ರು ತಮ್ಮ ಸಂಗೀತ ಕ್ಷೇತ್ರದ ಜೊತೆಗೆಪುತ್ತೂರು ಶ್ರೀ ದಿ. ಮುರ ನಾರಾಯಣ ಭಟ್ಟರ ಶಿಷ್ಯರಾಗಿ ಅಡುಗೆ ವೃತ್ತಿಯನ್ನು
ಆಯ್ಕೆ ಮಾಡಿಕೊಂಡು, 5 ರಿಂದ 5000 ಕ್ಕೂ ಮಿಕ್ಕಿ ಜನರಿಗೆ ಊಟೋಪಚಾರ ಪಾಕತಜ್ಙರಾಗಿ ಶುಚಿ-ರುಚಿಯಾದ ಅಡುಗೆ ಕಾಯಕದಲ್ಲಿ ತಮ್ಮನ್ನು ತೊಡಗಿಸಿ ಕೊಂಡವರು. ಸು.15 ವರ್ಷಗಳ ಹಿಂದಿ ನಿಂದಲೇ ಶ್ರೀ ಶ್ರೀನಿವಾಸ ಮಂಗಳೂರು ಇವರ ಒಡನಾಟದಲ್ಲಿದ್ದು, ಮದುವೆ, ಉಪನಯನ, ಗೃಹಪ್ರವೇಶ, ನೇಮೋತ್ಸವ ಮುಂತಾದ ಸಮಾರಂಭಗಳಿಗೆ ಅಡುಗೆಗಾಗಿ ಇವರ ಜೊತೆಯಲ್ಲಿ ಬಳಗದವರಿದ್ದು, ಸ್ಥಳೀಯ ಸೇರಿದಂತೆ ಊರ- ಪರ
ಊರಿನ ಹೆಚ್ಚಿನ ಕಡೆಗಳ ಜನರು ಇವರ ಅಡುಗೆಯ ರುಚಿಯ ಸವಿಯನ್ನು ಸವಿದಿದೆ. ಸಂಗೀತ ಕ್ಷೇತ್ರದಲ್ಲಿ ಇವರ ಕೈಬೆರಳುಗಳ ರುಚಿಯನ್ನು ಕಂಡಿದೆ. ಅಡುಗೆಯಲ್ಲಿ ಇವರ ಕೈಗಳ ರುಚಿಯನ್ನು ಉಂಡಿದೆ. ಇದಕ್ಕೇ ಹೇಳುವುದು ಇವರ ” ಕೈ ” ಗುಣ ಒಳ್ಳೆಯದಿದೆ ಎಂಬ ಮಾತು. ಜೊತೆಯಲ್ಲಿ ಇವರಿಂದ ಕ್ಯಾಟರಿಂಗ್ ಸೌಲಭ್ಯ ಇದೆ. ಅಲ್ಲದೆ ಶ್ರೇಯಸ್ ರ ಇನ್ನೊಂದು ವಿಶೇಷತೆ – ದ.ಕನ್ನಡ ದ 8-9 ದೇವಾಲಯಗಳಿಗೆ “ಬ್ರಹ್ಮ ವಾಹಕ”ರಾಗಿ ಸೇವೆ ಸಲ್ಲಿಸಿ,
ಶ್ರೀ ದೇವರ ಕೃಪೆಗೆ ಪಾತ್ರರಾಗಿದ್ದಾರೆ.
ದ.ಕನ್ನಡದ ಬಂಟ್ವಾಳ ತಾಲೂಕು, ಬಾಳ್ತಿಲ ಗ್ರಾಮದ ಕಲ್ಲಡ್ಕದಲ್ಲಿ ತಮ್ಮ ವೃತ್ತಿಗಳ ಜೊತೆಗೆ ಕೃಷಿಕರಾಗಿಯೂ ಜೀವಿಸುತ್ತಿರುವ ಶ್ರೀ ಶ್ರೇಯಸ್ ರು ಜೀವನ ಸಂಗಾತಿಯಾಗಿ ವರಿಸಿದ್ದು ಶ್ರೀಮತಿ ಅನ್ನಪೂರ್ಣೇಶ್ವರಿ(ಪತ್ನಿ) ಹೈನುಗಾರಿಕೆ ಗಳಲ್ಲೊಂದಾದ ದನ ಸಾಕಾಣೆ(5-6)ಯಲ್ಲಿ ತೊಡಗಿದ್ದಾರೆ. ಚಿಕ್ಕ ಮಗನಾದ ಸ್ವಸ್ತಿಕ 4 ನೇ ತರಗತಿಯಲ್ಲಿ ಓದುತ್ತಿದ್ದು, ತಂದೆ ಗೆ ತಕ್ಕ ಮಗನಾಗಿ ಸಂಗೀತದಲ್ಲಿ ಆಸಕ್ತಿ ಹೊಂದಿ, ಮದ್ದಳೆ ನುಡಿಸುದರ ಕಲಿಯುವಿಕೆ ಜೊತೆಗೆ ಕೀ ಬೋರ್ಡ್ ನ ಸಂಗೀತಕ್ಕಾಗಿ ಅಪ್ಪನಿಂದ ತರಬೇತಿಗೊಳ್ಳುತ್ತಿದ್ದು, ಈ ಚಿಕ್ಕ ಸಂಸಾರ ಚೊಕ್ಕವಾಗಿ , ಸಂಗೀತದ ಅಲೆ ಅಲೆಯಾಗಿ ನಾಡಿನೆಲ್ಲೆಡೆ ಪಸರಿಸಿ ಯಶಸ್ಸನ್ನು ಕಾಣುತ್ತಿರುವ ಶ್ರೀ ಶ್ರೇಯಸ್ ಕಲ್ಲಡ್ಕ.
- ಲೇಖನ ಮತ್ತು ಕ್ಯಾಮೆರಾ ಹಿಂದಿನ ಕಣ್ಣು : ಬಾಲು ದೇರಾಜೆ, ಸುಳ್ಯ.