ಮಿಕ್ಸ್ ಮೊಳಕೆಕಾಳಿನ ಕರ್ರಿ ಚಪಾತಿಗೆ, ಅನ್ನಕ್ಕೆ ರುಚಿ ಹೆಚ್ಚಿಸುತ್ತೆ. ಆದರೆ ಈ ಕರಿಯನ್ನು ಮಾಡುವ ವಿಧಾನದ ಬಗ್ಗೆ ವಸಂತ ಗಣೇಶ ಅವರು ರಿಸಿಪಿ ಮಾಡುವುದಷ್ಟೇ ಅಲ್ಲ, ಸ್ವತಃ ಮಾಡಿ ತೋರಿಸಿದ್ದಾರೆ.ತಪ್ಪದೆ ಮಾಡಿ, ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ ….
ಬೇಕಾಗುವ ಸಾಮಗ್ರಿಗಳು :
ಒಂದು ಹಿಡಿ ಕಡಲೆಕಾಳು
ಒಂದು ಹಿಡಿ ಹೆಸರುಕಾಳು
ಒಂದು ಹಿಡಿ ಅಲಸಂದೆ ಕಾಳು
ಈರುಳ್ಳಿ 3
ಟಮೋಟೋ 3
ಹಸಿರು ಮೆಣಸಿನಕಾಯಿ 2
ಗೋಡಂಬಿ 8_10
ದನಿಯ ಪುಡಿ ಸ್ವಲ್ಪ
ಜೀರಿಗೆ ಪುಡಿ ಸ್ವಲ್ಪ
ಗರಂ ಮಸಾಲೆ ಸ್ವಲ್ಪ
ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸ್ವಲ್ಪ(ಬಳಸುವುದಾದರೆ)
ಅಚ್ಚ ಖಾರದ ಪುಡಿ ಸ್ವಲ್ಪ
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ :
ಹಿಂದಿನ ದಿನವೇ ಮೂರೂ ಕಾಳು ಗಳನ್ನು 6_8 ಘಂಟೆಗಳ ಕಾಲ ನೆನೆಯಲು ಬಿಟ್ಟು, ರಾತ್ರಿ ನೀರನ್ನು ತೆಗೆದು ಬಿಳಿ ಬಟ್ಟೆಯಲ್ಲಿ ಕಟ್ಟಿ ಇಟ್ಟರೆ ಬೆಳಗಿನ ವೇಳೆಗೆ ಚೆನ್ನಾಗಿ ಮೊಳಕೆ ಬಂದಿರುತ್ತದೆ. ಅದನ್ನು ಕುಕ್ಕರಿನಲ್ಲಿ ಹಾಕಿ 4ರಿಂದ 5 ವಿಷಲ್ ಕೂಗಿಸಿದರೆ ಚೆನ್ನಾಗಿ ಬೇಯುತ್ತದೆ.

ಮಸಾಲೆಗೆ ಸ್ವಲ್ಪ ಬೆಣ್ಣೆ ಅಥವಾ ಎಣ್ಣೆ ಕಾಯಲು ಇಟ್ಟು ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ, ಹೆಚ್ಚಿದ ಹಸಿ ಮೆಣಸಿನಕಾಯಿ ಹಾಕಿ. ಅನಂತರ ಎರಡು ದಪ್ಪಕ್ಕೆ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿಕೊಳ್ಳಿ , ಅದರ ಜೊತೆಯಲ್ಲೇ ಗೋಡಂಬಿ ಸಹ ಹಾಕಿ ಬಾಡಿಸುತ್ತ ಇರಿ. ಅರ್ಧ ಬೆಂದ ಮೇಲೆ ಅದಕ್ಕೆ ದಪ್ಪಕ್ಕೆ ಹೆಚ್ಚಿದ ಎರಡು ಟಮೋಟೋ ಹಾಕಿ, ಚೆನ್ನಾಗಿ ಬಾಡಿಸಿಕೊಳ್ಳಿ. ನಂತರ ಅದಕ್ಕೆ ಇಟ್ಟುಕೊಂಡಿರುವ ದನಿಯ ಪುಡಿ, ಜೀರಿಗೆ ಪುಡಿ, ಗರಂ ಮಸಾಲೆ, ಅಚ್ಚ ಖಾರದ ಪುಡಿ ರುಚಿಗೆ ತಕ್ಕಷ್ಟು ಉಪ್ಪು ಎಲ್ಲವನ್ನೂ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ತಣಿಯಲು ಬಿಡಿ.
ಉಳಿದ ಒಂದು ಈರುಳ್ಳಿ ಒಂದು ಟಮೊಟೋ ವನ್ನು ಸಣ್ಣದಾಗಿ ಹೆಚ್ಚಿಕೊಂಡು ಸ್ವಲ್ಪ ಎಣ್ಣೆ ಇಟ್ಟು ಒಗ್ಗರಣೆ ಮಾಡಿಕೊಳ್ಳಿ. ಒಗ್ಗರಣೆ ಆಗುವ ವೇಳೆಗೆ ಮೊದಲು ಫ್ರೈ ಮಾಡಿ ಇಟ್ಟುಕೊಂಡಿದ್ದ ಮಸಾಲೆಯನ್ನು ಮಿಕ್ಸಿಯಲ್ಲಿ ಹಾಕಿ ನಯವಾಗಿ ರುಬ್ಬಿಕೊಳ್ಳಿ. ರುಬ್ಬಿದ ಮಿಶ್ರಣವನ್ನು ಈರುಳ್ಳಿ ಟಮೊಟೋ ಮಿಶ್ರಣಕ್ಕೆ ಹಾಕಿ ಒಂದು ಕುದಿ ಕುದಿಸಿ, ನಂತರ ಬೆಂದ ಮೊಳಕೆ ಕಾಳು ಹಾಕಿ ಚೆನ್ನಾಗಿ ಕುದಿಸಿ. ಕುದಿಯುವಾಗ ಸ್ವಲ್ಪ ಬೆಣ್ಣೆ ಸೇರಿಸಿ. ಕೊನೆಯಲ್ಲಿ ಕಸೂರಿ ಮೇತಿ ಹಾಕಿ ಕೆಳಗೆ ಇಳಿಸಿ.
(ಬೆಣ್ಣೆ ಹಾಗೂ ಕಸೂರಿ ಮೇತಿ ಹಾಕದೆ ಇದ್ದರೂ ಪರವಾಗಿಲ್ಲ)
ಚಪಾತಿ ಜೊತೆಗೆ ತುಂಬಾ ರುಚಿಯಾಗಿ ಇರುತ್ತದೆ. ಒಮ್ಮೆ ಮಾಡಿ ನೋಡಿ.
- ಕೈ ಚಳಕ : ವಸಂತ ಗಣೇಶ (ಸಾಹಿತಿಗಳು, ಲೇಖಕರು,ಕವಿಯತ್ರಿ)
