ಹಣಕಾಸಿನ ವ್ಯವಹಾರ ಎನ್ನುವುದು ಎಷ್ಟೋ ಸಂಬಂಧಗಳನ್ನು ಹಾಳು ಮಾಡುತ್ತೆ. ಒಳ್ಳೆಯ ಸ್ನೇಹಿತರನ್ನು ದೂರ ದೂರ ಮಾಡುತ್ತೆ. ಸಂಬಂಧಗಳ ಕುರಿತು ಲೇಖಕ ನಟರಾಜು ಮೈದುನಹಳ್ಳಿಅವರು ಬರೆದ ಜೀವನಕ್ಕೆ ಅರ್ಥ ಕಲ್ಪಿಸುವ ಲೇಖನ…ತಪ್ಪದೆ ಓದಿ…
ಬಹಳ ವರ್ಷಗಳ ನಂತರ ನಿಮ್ಮ ಬಾಲ್ಯ ಸ್ನೇಹಿತರು ( ಚಡ್ಡಿ ದೋಸ್ತ್), ಹೈಸ್ಕೂಲ್ ಅಥವಾ ಕಾಲೇಜ್ ಕ್ಲಾಸ್ ಮೇಟ್ಸ್ ಮತ್ತೆ ನಿಮ್ಮ ಸಂಪರ್ಕಕ್ಕೆ ಸಿಕ್ಕಿ ಸ್ನೇಹ ಮತ್ತೆ ಮುಂದುವರಿಯುವಾಗ
ಯಾವುದೇ ಕಾರಣಕ್ಕೂ ಅವರ ಹತ್ತಿರ ಹಣ ಸಾಲ ಕೇಳಲು ಹೋಗಬಾರದು. ಅಕಸ್ಮಾತ್ ಅವರೇ ನಮ್ಮನ್ನು ಹಣ ಕೇಳಿದರೆ ಕೊಡಲೂ ಹೋಗಬಾರದು. ಅಪ್ಪಿ ತಪ್ಪಿ ಹಣ ಕೊಟ್ಟರೂ “ಅದು ಮತ್ತೆ ವಾಪಸ್ ಬಾರದಿದ್ದರೂ ಹೆಚ್ಚು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ” ಎನ್ನುವಷ್ಟು ಸ್ವಲ್ಪ ಮೊತ್ತದ ಹಣ ಕೊಡಬೇಕು. ಐವತ್ತು ಸಾವಿರ, ಲಕ್ಷ ಅಂಥ ಸಾಲ ಕೊಟ್ಟು ನಮ್ಮ ನೆಮ್ಮದಿ ನಾವೇ ಹಾಳು ಮಾಡಿಕೊಳ್ಳಬಾರದು. ತೀರಾ ಲೈಫ್ ಅಂಡ್ ಡೆತ್ ಸಮಸ್ಯೆಯಾಗಿದ್ದರೆ, ಕೊಡಲು ನಮ್ಮ ಹತ್ತಿರ ಹಣವಿದ್ದರೆ ( ಸಾಲ ಮಾಡದೆ) ಹೆಚ್ಚು ಹಣ ಕೊಡಬಹುದು. ಆದರೆ “ನಾನು ಸಹಾಯ ಮಾಡಿದ್ದೇನೆ, ಅವರೂ ನನಗೆ ಅವಶ್ಯಕವಾದಾಗ ಸಹಾಯ ಮಾಡೇ ಮಾಡುತ್ತಾರೆ, ಕೃತಜ್ಞತೆ ತೋರಿಸುತ್ತಾರೆ” ಎಂಬ ನಿರೀಕ್ಷೆ ಇಟ್ಟುಕೊಳ್ಳಬಾರದು. ಅಲ್ಲದೆ ಹಲವಾರು ವರ್ಷಗಳ ನಂತರ ಸಿಕ್ಕ ನಮ್ಮ ಸ್ನೇಹಿತರಿಗೆ, ನಾವು ಈಗಾಗಲೇ ಮಾಡುತ್ತಿರುವ “ವ್ಯವಹಾರಕ್ಕೆ ಪಾರ್ಟನರ್ ಆಗು, ನಾನು ಈ ಏಜೆಂಟ್ ನನ್ನ ಪ್ರಾಡಕ್ಟ್ ತಗೊ ” ಎನ್ನುವಂತಹ ವ್ಯಾವಹಾರಿಕ ಸಂಬಂಧಗಳನ್ನು ಮಾಡಲು ಹೋಗಬಾರದು.
ಫೇಸ್ ಬುಕ್ ಮೂಲಕ ಪರಿಚಯವಾಗಿ ಸ್ನೇಹಿತರಾಗಿರುವ, ಮುಖ ಮೂತಿ ಎಂದೂ ನೇರವಾಗ ನೋಡಿರದ, ಅವರ ಬಗ್ಗೆ ಏನೂ ಗೊತ್ತಿಲ್ಲದೆ ಇರುವವರು “ಎಮರ್ಜೆನ್ಸಿ ಹಣ ಬೇಕೇ ಬೇಕು, ಇನ್ನೆರಡು ದಿನದಲ್ಲಿ ವಾಪಸ್ ಕೊಡುತ್ತೇನೆ” ಎಂದು ಹಣ ಸಾಲ ಕೇಳಿದರೆ ಕೊಟ್ಟು ಮೂರ್ಖರಾಗಬಾರದು.
- ನಟರಾಜು ಮೈದುನಹಳ್ಳಿ
