ಭೂಖಂಡದ ದ್ವೀಪದ ಮೈಮೇಲೆ ಹರಿಯುವ ನೈಸರ್ಗಿಕ ಮೂಲದ ಜಲ ಪ್ರವಾಹಗಳೇ ನದಿಗಳು. ಸಹಸ್ರಾರು ಹನಿಗಳು ಒಂದೆಡೆ ಕೂಡಿ ಸಮೂಹದಿ ಹರಿಯುವ ಗಂಗಾ ಮಾತೆಯ ಒಲುಮೆಯ ಮಡಿಲೇ ನದಿ. ಅವಿನಾಶ ಸೆರೆಮನಿ ಅವರು ಪ್ರತಿ ನದಿಗಳ ವಿಶೇಷತೆಯನ್ನು ‘ನದ – ನದಿಗಳ ನಿನಾದ’ ಅಂಕಣದ ಮೂಲಕ ಓದುಗರಿಗೆ ಪರಿಚಯಿಸಲಿದ್ದಾರೆ, ತಪ್ಪದೆ ಓದಿ…
ನದಿ ಎಂದರೆ ಸಹಸ್ರಾರು ಹನಿಗಳು ಒಂದೆಡೆ ಕೂಡಿ ಸಮೂಹದಿ ಹರಿಯುವ ಗಂಗಾ ಮಾತೆಯ ಒಲುಮೆಯ ಮಡಿಲೇ ನದಿ, ನಾಡು ಸಮೃದ್ಧವಾಗಿ, ಸಂಪದ್ಭರಿತವಾಗಿ ಬೆಳೆಯಲು ನೀರು ಅತಿ ಅವಶ್ಯಕ.ಅತ್ಯಂತ ಪ್ರಮುಖವಾದುದು. ನೀರಿನ ಮೂಲಗಳು ಬಹಳಷ್ಟಿವೆ. ಕೆರೆ ಹಳ್ಳ, ಸರೋವರ, ಸಮುದ್ರ, ನದಿ.ಇವುಗಳಲ್ಲಿ ಅತ್ಯಂತ ಪ್ರಮುಖವಾದ ನೀರಿನ ಮೂಲವೆಂದರೆ ನದಿಗಳು.ಇವುಗಳು ಕೂಡ ದೇಶದ ಸಂಪತ್ತಿನ ಒಂದು ಭಾಗ. ಸಕಲ ಜೀವರಾಶಿಗಳ ದಾಹವನ್ನು ನೀಗಿಸುವುದಲ್ಲದೆ, ಸಸ್ಯಸಂಕುಲ, ಪ್ರಾಣಿ ಸಂಕುಲಗಳ ಬವಣೆಯನ್ನು ಪರಿಹರಿಸುತ್ತವೆ. ಅಲ್ಲದೆ ನಂಬಿದ ಅದೆಷ್ಟೋ ಹೊಲಗಳಿಗೆ ನಿರುಣಿಸಿ ರೈತನ ಜೀವನಕ್ಕೆ ಜೀವವನ್ನು ತುಂಬಿವೆ.
ಹಿಂದಿನ ಕಾಲದಲ್ಲಿ ನದಿಗಳಿಗೆ ಪೂಜ್ಯನೀಯ ಸ್ಥಾನಮಾನವಿತ್ತು. ಅಲ್ಲದೆ ಯಾವುದೇ ವಿಶೇಷ ಪೂಜೆ ಪುನಸ್ಕಾರಗಳನ್ನು ಮಾಡಬೇಕೆಂದರೂ ನದಿಯ ನೀರನ್ನು ತೆಗೆದುಕೊಂಡು ಬಂದು ಪೂಜಿಸಿ ಮುಂದಿನ ಕಾರ್ಯವನ್ನು ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಜನರಿಗೂ ಕೂಡ ಸಾಕಷ್ಟು ರೀತಿಯಲ್ಲಿ ಜಲದ ಅರಿವು ಇದ್ದಿದ್ದರಿಂದ ಜೋಪಾನ ಮಾಡಿ ಸರ್ವ ಆಯಾಮಗಳಿಂದಲೂ ಮಿತವಾಗಿ ಬಳಸಿ ಉಳಿಸುವತ್ತ ಗಮನ ಹರಿಸುತ್ತಿದ್ದರು. ಅಲ್ಲದೆ ಭವಿಷ್ಯದ ಬಗ್ಗೆ ಅವಲೋಕಿಸುತ ನಿಸ್ವಾರ್ಥದಿ ಆಲೋಚಿಸುತ ಕಾಪಾಡುತ್ತಿದ್ದರು. ಅನಾವಶ್ಯಕವಾಗಿ ಪೋಲಾಗದಂತೆ ದೇವರ ಸ್ವರೂಪದಲ್ಲಿ ಕಾಣುತ್ತಿದ್ದರು. ಹಾಗಾಗಿ ನದಿಗಳಿಗೆ ಯಾವುದೇ ರೀತಿಯಲ್ಲಿ ಸಂಕಷ್ಟ ಒದಗುತ್ತಿರಲಿಲ್ಲ. ಬರುತ್ತಿರಲಿಲ್ಲ.ನದಿಗಳ ಪಾತ್ರವು ಹಿರಿದಾಗುತ್ತಿತ್ತೆ ಹೊರತು ಕಿರಿದಾಗುತ್ತಿರಲಿಲ್ಲ. ಸುತ್ತಲಿನ ವಾತಾವರಣವು ಸದಾ ಲವಲವಿಕೆಯಿಂದ ಹಸಿರ ಸಿರಿಯಿಂದ ಕಂಗೊಳಿಸುತ.ಸದಾ ಪ್ರಶಾಂತತೆಯಿಂದ ಕೂಡಿರುತ್ತಿತ್ತು. ವೈವಿಧ್ಯಮಯವಾದ ಸಸ್ಯ ಪ್ರಭೇಧಗಳು ಕೂಡ ನಿರ್ಭಿತಿಯಿಂದ ಬೆಳೆಯುತ ಸದಾ ಸೆಳೆಯುತ್ತಿದ್ದವು. ಜನರು ಕೂಡ ನದಿಯ ತಟದಲಿ ಕುಳಿತು ಮನಸ್ಸು ಪ್ರಫುಲವಾಗಿ ಹಗುರಾಗುತ್ತಿತ್ತು.ಮಾನಸಿಕವಾಗಿ
ಚೈತನ್ಯವನ್ನು ನೀಡಿ ಹುರುಪು ,ಉತ್ಸಾಹ ತುಂಬುತ್ತಿತ್ತು.

ಫೋಟೋ ಕೃಪೆ : google
ಅಲ್ಲದೆ ಹೊಸ ಹುಮ್ಮಸ್ಸು ಹುಟ್ಟು ಹಾಕುತ್ತಿತ್ತು. ಹಾಗಾಗಿ ನದಿಗಳು ನಿರ್ಜಿವಿ ಅಲ್ಲ ಜೀವ ಇರುವಂತ ಅತ್ಯದ್ಭುತ ಶಕ್ತಿಯ ಪ್ರತಿರೂಪ.
ನದಿಗಳು ನಾಗರಿಕತೆಯ ನಿರ್ಮಾಪಕರು. ಏಕೆಂದರೆ ಸುತ್ತಮುತ್ತಲೂ ಜನಜೀವನಕ್ಕೆ ಅತಿ ಅಮೂಲ್ಯವಾದ ಎಲ್ಲ ಸೌಕರ್ಯಗಳು ದೊರೆಯುವುದರಿಂದ ಯಾವುದೇ ದುಂದು ವೆಚ್ಚವಿಲ್ಲದೆ ಸರಿಯಾದ ರೀತಿಯಲ್ಲಿ ಬಳಸಿಕೊಂಡು ಹೋದಂತೆ ತಮ್ಮ ಬಾಳ್ವೆಯನ್ನು ನಡೆಸಬಹುದು. ಸಾಕಷ್ಟು ಸಂಪನ್ಮೂಲಗಳು ಕೇಂದ್ರೀಕೃತವಾಗಿರುತ್ತವೆ. ಉದಾಹರಣೆ ಫಲವತ್ತಾದ ಮಣ್ಣು, ಶುದ್ಧವಾದ ಕುಡಿಯುವ ನೀರು, ಪೂರಕ ವಾತಾವರಣ, ಸಸ್ಯ ಪ್ರಭೇಧಗಳು ,ವಿವಿಧ ಜಾತಿಯ ಪ್ರಾಣಿ ಸಂಕುಲಗಳು.ವೈವಿಧ್ಯಮಯ ಪಕ್ಷಿಗಳು ನೆಲೆಸಿರುವುದರಿಂದ ಒಬ್ಬ ಮನುಜನ ಬೆಳವಣಿಗೆಗೆ ಅವಶ್ಯಕ ಅಂಶಗಳು ದೊರೆಯುವುದರಿಂದ ಅಲ್ಲಿ ಜನರು ನೆಲೆಯೂರಿ ನಾಗರಿಕತೆಯ ಉಗಮಕ್ಕೆ ಕಾರಣವಾಗುತ್ತವೆ. ಅಲ್ಲದೆ ಜನವಸತಿಗೂ ಅತ್ಯಂತ ಯೋಗ್ಯವಾಗಿದ್ದು ಸಂತೃಪ್ತ ಜೀವನಕೆ ಬೇಕಾದದ್ದು ಸಿಗುವುದರಿಂದ ಯಾವುದೇ ಜಂಜಾಟ,ಕಾಟವಿಲ್ಲದೆ ನೆಮ್ಮದಿಯ ಬದುಕನ್ನು ಸಾಗಿಸಬಹುದು.ಹಾಗೂ ಪ್ರಾಣಿ ಸಂಕುಲಗಳು ಜೀವ ವೈವಿಧ್ಯತೆಯನು ರಕ್ಷಿಸುವುದರ ಜೊತೆಗೆ ಸದಾ ಪ್ರಾಕೃತಿಕ ಸಂಪನ್ಮೂಲದ ಸಂರಕ್ಷಕನಾಗಿ ನದಿಗಳು ಹಿರಿದಾದ ಪಾತ್ರವನ್ನು ವಹಿಸುತ್ತವೆ.ಆಹಾರವು ಮನುಜನಿಗೆ ಎಷ್ಟು ಮುಖ್ಯವೋ ಹಾಗೆಯೇ ನಮ್ಮ ಜೀವನಾಡಿಯಾದ ಜಲ ಸಂಪನ್ಮೂಲದ ಪ್ರಮುಖ ಕೇಂದ್ರಬಿಂದುವಾದ ನದಿಗಳು. ಇವುಗಳಿದ್ದದ್ದರಿಂದಲೇ ನಮಗೆಲ್ಲ ಸರಿಯಾಗಿ ನೀರು ಲಭ್ಯವಾಗಿರುವುದರಿಂದ ಸರಾಗವಾಗಿ ಚಟುವಟಿಕೆಗಳು ನಡೆಯುತ್ತವೆ.ಅಲ್ಲದೆ ನಾಡಿನ ಹಿರಿಮೆ ಗರಿಮೆ ಹೆಚ್ಚುವುದಲ್ಲದೆ ನಾಡಿನ ಶ್ರೀಮಂತಿಕೆಯೂ ಕೂಡ ಅಧಿಕವಾಗುತ್ತದೆ.
ಇತರ ಜಲ ಮೂಲಗಳಿಗೆ ಹೋಲಿಸಿದಾಗ ನದಿಯ ಮೂಲವು ಅತ್ಯಂತ ಶಕ್ತಿಶಾಲಿಯಾಗಿದೆ. ಹಾಗೂ ನೈಸರ್ಗಿಕ ಸಂಪನ್ಮೂಲಗಳ ರಕ್ಷಾ ಕವಚವಾಗಿ ಕಾರ್ಯ ಮಾಡುತ್ತದೆ.ಎಲ್ಲಿ ನದಿಗಳು ನೆಲೆಗೊಳ್ಳುತವೆಯೋ ಅಲ್ಲಿಯೇ ಅಧಿಕವಾಗಿ ಆರ್ಥಿಕ ಚಟುವಟಿಕೆಗಳು ಹೆಚ್ಚಾಗಿ ದೇಶದ ಆರ್ಥಿಕತೆಯು ಸದೃಢವಾಗುತ್ತದೆ.ಬಲಪ್ರದಗೊಳ್ಳುತ್ತದೆ. ಅಷ್ಟೇ ಅಲ್ಲದೆ ಹೇರಳವಾದ ಮೂಲಭೂತಸೌಕರ್ಯಗಳು ಸಿಗುವುದರಿಂದ ಜನರು ಕೂಡ ಮೂಲ ಕಸುಬುಗಳಲ್ಲಿ ತೊಡಗಿಕೊಳ್ಳಬಹುದು.ಅಲ್ಲದೆ ಸಣ್ಣ ಪುಟ್ಟ ಗೃಹಪಯೋಗಿ ವಸ್ತುಗಳನ್ನು ತಯಾರಿಸಬಹುದು.

ಫೋಟೋ ಕೃಪೆ : google
ನಾಡು ಎಷ್ಟೇ. ಆರ್ಥಿಕವಾಗಿ ಸಶಕ್ತವಾದರೂ ನದಿಗಳನ್ನು ನಿರ್ಲಕ್ಷಿಸುತ ಹೋದರೆ ಮುಂದಿನ ಪೀಳಿಗೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ ಹಣಕ್ಕಾಗಿ ಕೊಂಡು ಕೊಳ್ಳುವ ಪರಿಸ್ಥಿತಿ ಬರಬಹುದು. ಹಾಗಾಗಿ ಇಂದಿನ ಜನಾಂಗ ಸ್ವಯಂ ಪ್ರೇರಿತರಾಗಿ ನದಿಗಳನು ರಕ್ಷಿಸುವ ಜವಾಬ್ದಾರಿ ವಹಿಸಿಕೊಂಡು ಅವುಗಳ ಪೋಷಣೆಯಲ್ಲಿ ತೊಡಗಬೇಕು.ವಿವಿಧ ರೀತಿಯ ನದಿಯ ಮಹತ್ವವನು ಸಾರುವ ಫಲಕಗಳನ್ನು ಅಳವಡಿಸಿ ಅರಿವನು ಮೂಡಿಸಬೇಕು.
ದೇಶವು ಕೂಡ ಇಂದು ಆಧುನಿಕರಣದತ್ತ ಮುನ್ನುಗ್ಗುತ್ತಿದ್ದರೂ ನದಿಗಳನು ಸಂರಕ್ಷಿಸುವುದು ಅತಿಅವಶ್ಯಕ. ಏಕೆಂದರೆ ಯಾವುದೇ ಚಟುವಟಿಕೆಗಳಿಗೂ ಬಹು ಮುಖ್ಯವಾಗಿ ಬೇಕಾದದ್ದು ನೀರು ಅದರಲ್ಲೂ ಇದು ಹೆಚ್ಚು ಶೇಖರಣೆಯಾಗುವುದು ನದಿಗಳಲ್ಲಿ ಹಾಗಾಗಿ ಇಂದು ನದಿಗಳನ್ನು ಉಳಿಸಿ ಪೋಷಿಸಿ ಕಾಪಾಡಿಕೊಂಡು ಹೋಗುವುದು ನಮ್ಮೆಲ್ಲರ ಹೊಣೆ .ಹಾಗಾಗಿ ನದಿಗಳು ಭಗವಂತನು ಕರುಣಿಸಿದ ಅತ್ಯಮೂಲ್ಯ ಸಂಪನ್ಮೂಲಗಳಲ್ಲಿ ಅತ್ಯಂತ ಪ್ರಮುಖವಾದುದು.
- ಅವಿನಾಶ ಸೆರೆಮನಿ
