ಸ್ವಚ್ಛ ಭಾರತ ಅಭಿಯಾನವನ್ನು ಅಧಿಕೃತವಾಗಿ ಅಕ್ಟೋಬರ್ ೨, ೨೦೧೪ ರಂದು ಮಹಾತ್ಮಾ ಗಾಂಧಿಯವರ ೧೪೫ ನೇ ಜನ್ಮ ವಾರ್ಷಿಕೋತ್ಸವದ ಸಂದರ್ಭದಲ್ಲಿ ದೆಹಲಿಯ ರಾಜ್ ಘಾಟ್ ನ ರಸ್ತೆಯೊಂದನ್ನು ಗುಡಿಸುವುದರ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದರು.
ಸ್ವಚ್ಛ ಭಾರತದ ಮೂಲ ಉದ್ದೇಶ ಬಯಲು ಶೌಚ, ಮಲಹೊರುವ ಪದ್ಧತಿ ಮತ್ತು ಸಂಪೂರ್ಣ ಕೊಳೆಗೇರಿ ನಿರ್ಮೂಲನೆ ಹಾಗೂ ೧೦೦% ಘನತಾಜ್ಯಗಳ ಮರುಬಳಕೆ ಸಂಸ್ಕರಣೆ/ನಿರ್ವಹಣೆ ಜೊತೆಗೆ ಸಾರ್ವಜನಿಕರಲ್ಲಿ ನಿರ್ಮಲೀಕರಣ ಮತ್ತು ಸಾಮಾಜಿಕ ಸ್ವಾಸ್ಥ್ಯದ ನಡುವಿರುವ ಸಂಬಂಧದ ಬಗ್ಗೆ ಜನ ಜಾಗೃತಿ ಮೂಡಿಸುವುದು.
ಅರಮನೆ ನಗರಿ, ಪಾರಂಪರಿಕ ನಗರಿ, ಸಾಂಸ್ಕೃತಿಕ ನಗರಿ, ನಿವೃತ್ತರ ಸ್ವರ್ಗ. ಹೀಗೆ ಹಲವು ಹೆಸರುಗಳಿಂದ ಪ್ರಸಿದ್ಧವಾಗಿರುವ ಮೈಸೂರಿಗೆ ಸ್ವಚ್ಛ ನಗರಿ ಎಂಬ ಹೆಸರು ೨೦೧೫ ರಲ್ಲಿ ಸೇರ್ಪಡೆಯಾಯಿತು ಹಾಗೂ ಅದನ್ನು ಮುಂದುವರೆಸಿಕೊಂಡು ಹೋಗುವುದರಲ್ಲಿ ಮೈಸೂರು ಹಾಗೂ ಮೈಸೂರಿಗರು ಯಶಸ್ವಿಯಾಗಿದ್ದಾರೆ.
ಕೇಂದ್ರ ನಗರಾಭಿವೃದ್ಧಿ ಇಲಾಖೆಯಿಂದ ನಿಯೋಜಿತವಾದ ಮೂವರು ಸದಸ್ಯರುಗಳನ್ನೊಳಗೊಂಡ ತಜ್ಞರ ತಂಡ ನಗರದಲ್ಲಿ ಕೆಲ ದಿನಗಳ ಕಾಲ ವಾಸ್ತವ್ಯ ಹೂಡಿ ನಗರದಲ್ಲಿರುವ ಸ್ವಚ್ಛತೆ ಮತ್ತು ಸ್ವಚ್ಛತೆ ಕಾಪಾಡಲು ಕೈಗೊಂಡಿರುವ ಕ್ರಮಗಳು, ನಗರದ ರಸ್ತೆಗಳು ಅವುಗಳ ಸ್ವಚ್ಛತೆಗೆ ಅಳವಡಿಸಿರುವ ವಿಧಿ ವಿಧಾನ, ಕುಡಿಯುವ ನೀರಿನ ಸರಬರಾಜು ಹಾಗೂ ಅದರಲ್ಲಿ ಕಾಪಾಡಿಕೊಂಡಿರುವ ಶುದ್ಧತೆ, ಒಳಚರಂಡಿ ವ್ಯವಸ್ಥೆ ಮತ್ತು ಅದರ ನಿರ್ವಹಣೆ, ಮನೆಮನೆಗಳಿಂದ ಮತ್ತು ಬೀದಿಬದಿಯಲಿೢಯ ಕಸ ಸಂಗ್ರಹಣೆ ಮತ್ತು ವೈಜ್ಞಾನಿಕ ವಿಲೇವಾರಿ, ೧೦೦%ಘನ ತ್ಯಾಜ್ಯ ಸಂಗ್ರಹಣೆ/ಸಂಸ್ಕರಣೆ/ಮರುಬಳಕೆ ಹೀಗೆ ಹಲವು ರೀತಿಯಲ್ಲಿ ಸಮಗ್ರ ಅಧ್ಯಯನ ಮಾಡಿ ಅದರ ಆಧಾರದ ಮೇಲೆ ಅಂಕಗಳನ್ನು ನೀಡಿ ಫಲಿತಾಂಶವನ್ನು ಘೋಷಿಸಲಾಗುತ್ತದೆ.
ಫೋಟೋ ಕೃಪೆ : mysuru today
ಸ್ವಚ್ಛತೆಯಲ್ಲಿ ಮೈಸೂರು ಪೂರ್ಣ ಪ್ರಮಾಣದಲ್ಲಿ ಯಶಸ್ಸನ್ನು ಸಾಧಿಸದಿದ್ದರೂ ಪೂರ್ಣ ಪ್ರಮಾಣವನ್ನು ಯಶಸ್ಸನ್ನು ಪಡೆಯಲು ಸಂಘ ಸಂಸ್ಥೆಗಳು, ಸ್ವಯಂ ಸೇವಕರು, ಪೌರಕಾರ್ಮಿಕರು ಹಾಗೂ ಚುನಾಯಿತ ಪ್ರತಿನಿಧಿಗಳು ಒಟ್ಟಾಗಿ ಟೊಂಕ ಕಟ್ಟಿ ನಿಂತಿದ್ದಾರೆ. ಇವರಿಗೆ ಬೆಂಬಲವಾಗಿ ಮೈಸೂರಿನ ಸಾರ್ವಜನಿಕರು ಇದ್ದಾರೆ. ಮೈಸೂರಿನ ಮನೆ ಮನೆಗೂ ಹಸಿ ತ್ಯಾಜ್ಯಕ್ಕೆ ಹಸಿರು ಬಣ್ಣದ ಹಾಗೂ ಒಣ ತ್ಯಾಜ್ಯಕ್ಕೆ ಕೆಂಪು ಬಣ್ಣದ ಬಕೆಟ್ ಅನ್ನು ನೀಡಿದ್ದಾರೆ. ಅದರಂತೆಯೇ ಸಾರ್ವಜನಿಕರು ಮನೆಯಲ್ಲಿಯೇ ಒಣ ಕಸ ಹಾಗೂ ಹಸಿ ಕಸವನ್ನು ಬೇರ್ಪಡಿಸಿ ಪೌರ ಕಾರ್ಮಿಕರಿಗೆ ನೀಡುತ್ತಾರೆ. ಪೌರ ಕಾರ್ಮಿಕರಿಗೆ ಅನುಕೂಲ ಮತ್ತು ಸಮಯದ ಉಳಿತಾಯವಾಗುತ್ತದೆ. ಹಾಗೂ ಇದರಿಂದ ವೈಜ್ಞಾನಿಕ ರೀತಿಯಲ್ಲಿ ಸಮರ್ಪಕವಾಗಿ ಕಸ ವಿಲೇವಾರಿಯಾಗುತ್ತಿದೆ. ಕೊಳೆಯುವ ಕಸವನ್ನು ಸಾವಯವ ಗೊಬ್ಬರ ಮಾಡಿ ನೇರವಾಗಿ ರೈತರಿಗೆ ತಲುಪಿಸಲಾಗುತ್ತದೆ. ಕೊಳೆಯದ ಕಸವನ್ನು ಸುಮಾರು ೨೫ ರೀತಿ ವಿಂಗಡಿಸಿ ಪುನರ್ಬಳಕೆ ಘಟಕಕ್ಕೆ ಕಳುಹಿಸಿಕೊಡಲಾಗುತ್ತಿದೆ. ಮೈಸೂರು ನಗರ ಪಾಲಿಕೆ ಪ್ಲಾಸ್ಟಿಕ್ ಬಳಕೆಯನ್ನು ನಿರ್ಬಂಧಿಸಿ ಅದರಲ್ಲಿ ಭಾಗಶಃ ಯಶಸ್ಸನ್ನು ಪಡೆದಿದೆ.
ಇನ್ನು ಶುದ್ಧ ನೀರಿನ ವ್ಯವಸ್ಥೆಯ ಬಗ್ಗೆ ಹೇಳುವುದಾದರೆ ಮೈಸೂರಿನ ನೀರು ಸರಬರಾಜು ವ್ಯವಸ್ಥೆ ಇಂದು ನಿನ್ನೆಯದಲ್ಲ. ಅದಕ್ಕೆ ಶತಮಾನಗಳ ಇತಿಹಾಸವಿದೆ. ೧೮೯೬ ರಲ್ಲಿ ಮಹಾರಾಣಿ ಕೆಂಪನಂಜಮ್ಮಣ್ಣಿ ಅವರ ಗೌರವಾರ್ಥವಾಗಿ ವಾಣಿ ವಿಲಾಸ ನೀರು ಸರಬರಾಜು ಮಂಡಳಿಯನ್ನು ಸ್ಥಾಪಿಸಲಾಗಿತ್ತು. ವಾಣಿ ವಿಲಾಸ ನೀರು ಸರಬರಾಜು ಮಂಡಳಿ ಸಮರ್ಪಕ ಮತ್ತು ಶುದ್ಧ ನೀರನ್ನು ಅಂದಿನಿಂದಇಂದಿನವರೆಗೂ ಸರಬರಾಜು ಮಾಡುತ್ತಿದೆ ಹಾಗೂ ನಗರದ ನಾಲ್ಕು ಸ್ಥಳಗಳಲ್ಲಿ ಕೊಳಚೆ ನೀರಿನ ಸಂಸ್ಕರಣಾ ಘಟಕವನ್ನು ಹೊಂದಿದೆ.
ಮೈಸೂರಿನ ಸ್ವಚ್ಛತೆ ಕಾಪಾಡಿ ಮೈಸೂರಿಗೆ ‘ಸ್ವಚ್ಛನಗರಿ’ ಎಂಬ ಕಿರೀಟ ಗಿಟ್ಟಿಸಲು ಮೈಸೂರು ನಗರ ಪಾಲಿಕೆಯ ಅಧಿಕಾರಿಗಳು ಮೇಯರ್ ನಗರಸಭಾ ಸದಸ್ಯರು ಪಾಲಿಕೆ ಸಿಬ್ಬಂದಿಗಳು ಮತ್ತು ಪೌರ ಕಾರ್ಮಿಕರು ಆಗಾಗ್ಗೆ ಸ್ವಚ್ಛತಾ ಆಂದೋಲನ ನಡೆಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಯಶಸ್ವಿಯಾಗಿದ್ದಾರೆ. ಇದರಲ್ಲಿ ಹಲವು ಸಂಘ ಸಂಸ್ಥೆಗಳ ಪಾತ್ರವನ್ನು ಮರೆಯುವಂತಿಲ್ಲ.
ಸ್ವಚ್ಛ ಭಾರತ ಅಭಿಯಾನ ಆರಂಭಿಸಿದ ಮೇಲೆ ದೇಶದ ಪ್ರಮುಖ ನಗರಗಳು ಸ್ವಚ್ಛ ನಗರಿ ಕಿರೀಟ ಧರಿಸುವ ಪೈಪೋಟಿಯಲ್ಲಿ ಬಿದ್ದಿದ್ದು ಸುಳ್ಳಲ್ಲ. ಈ ಪೈಕಿ ನಮ್ಮ ಮೈಸೂರು ೨೦೧೫ ಹಾಗೂ ೨೦೧೬ರಲ್ಲಿ ಸತತವಾಗಿ ಪ್ರಥಮ ಸ್ಥಾನಗಳಿಸಿ ಸ್ವಚ್ಛ ನಗರಿ ಎಂಬ ಕಿರೀಟವನ್ನು ಧರಿಸಿದ್ದು, ನಂತರ ೨೦೧೭ರಲ್ಲಿ ಐದನೇ ಸ್ಥಾನಕ್ಕೆ ಬಂದಿತಾದರೂ, ಮತ್ತೆ ೨೦೧೮ ಕ್ಕೆ ಮೂರನೇ ಸ್ಥಾನಕ್ಕೇರಿತು. ೨೦೧೯ ಮತ್ತು ೨೦೨೦ ರಲ್ಲೂ ಮೂರನೇ ಸ್ಥಾನವನ್ನು ಉಳಿಸಿಕೊಂಡಿದೆ.
ಮೈಸೂರಿನ ಒಳಚರಂಡಿ ವ್ಯವಸ್ಥೆ, ರಸ್ತೆ ಮತ್ತು ಹಲವು ಮೂಲಭೂತ ಸೌಕರ್ಯಗಳಲ್ಲಿ ನಮ್ಮ ಮೈಸೂರು ಮಹಾರಾಜರ ದೂರದೃಷ್ಟಿಯ ಮತ್ತು ಹಲವು ಮಹತ್ವ ಪೂರ್ಣ ಕೊಡುಗೆಯ ಕಾರಣದಿಂದಲೂ ಮೈಸೂರು ಇಂದು ಸ್ವಚ್ಛ ನಗರಿ ಕಿರೀಟವನ್ನು ಪಡೆದಿದೆ ಎಂದರೆ ಅತಿಶಯೋಕ್ತಿಯಲ್ಲ. ಮೈಸೂರು ರಾಜಮನೆತನದ ಯುವರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಮೈಸೂರಿನ ಸ್ವಚ್ಛತಾ ಅಭಿಯಾನದ ರಾಯಭಾರಿಯಾಗಿದ್ದಾರೆ. ಯುವರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಸ್ವಚ್ಛತಾ ಅಭಿಯಾನದಲ್ಲಿ ಉತ್ಸಾಹದಿಂದ ಭಾಗಿಯಾಗಿ ಯುವ ಪೀಳಿಗೆಗೆ ಪ್ರೇರಣೆ ಮತ್ತು ಪ್ರೋತ್ಸಾಹವನ್ನು ನೀಡುತ್ತಿದ್ದಾರೆ
ಮೇಲಿನ ಎಲ್ಲ ಅಂಶಗಳಿಂದ ಮೈಸೂರಿನಲ್ಲಿ ಯಾವುದೇ ಟ್ರಾಫಿಕ್ ಕಿರಿಕಿರಿ ಅಥವಾ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿಯಿಲ್ಲ. ಆದ ಕಾರಣ ಮೈಸೂರನ್ನು ಇಷ್ಟಪಡದ ಪ್ರವಾಸಿಗರಿಲ್ಲ. ನಮ್ಮ ಪರಿಸರ ಎಷ್ಟು ಸುಂದರ ಹಾಗೂ ಸ್ವಚ್ಛವಾಗಿರುತ್ತದೆ. ಹಾಗೆ ನಾವು ಸ್ವಸ್ಥವಾಗಿರುತ್ತೇವೆ. ಆದ್ದರಿಂದ ನಮ್ಮ ಪರಿಸರ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯ.
ಲೇಖನ : ಕಾವ್ಯ ದೇವರಾಜ್
( ಸೂಚನೆ : ಕತೆ, ಕವನ, ಲೇಖನ ಬರೆಯುವ ಆಸಕ್ತಿಯುಳ್ಳವರು ಇ – ಮೇಲ್ aakrutikannada@gmail.com ಮಾಡಬಹುದು. ಮತ್ತು ನಿಮ್ಮ ಅಭಿಪ್ರಾಯವನ್ನು ಮೇಲಿನ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಬಹುದು)
ಕಾವ್ಯ ದೇವರಾಜ ಅವರ ಬರಹಗಳು ಮತ್ತು ಕತೆಗಳು :