ಎದ್ದರೆ ಚಂಡಮಾರುತ, ಕೆಣಕದಿರಿ ನನ್ನ, ಕೆಣಕಿ ಕಾಡದಿರಿ…ಕವಿ ವೀಣಾ ವೈಷ್ಣವಿ ಅವರ ಲೇಖನಿಯಲ್ಲಿ ಮೂಡಿದ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಮತ್ತೆ ಮತ್ತೆ ಮೇಲೆದ್ದು
ಕೂಗುತ್ತಿಹುದು ಮನಸು
ಒಲೆ ಮೇಲೆ ನಾನಿಟ್ಟ
ಕುಕ್ಕರಿನ ವಿಷಲಿನಂತೆ.
ಕೊತ ಕೊತನೆ ಕುದ್ದು
ಬೇಯುತಿಹುದು ಅಕ್ಕಿಯಲ್ಲ
ನನ್ನೊಳಗಿನ ಮನಸು.
ನನಗೂ ಕನಸಿದೆ ಮನಸಿದೆ,
ಸಾಧಿಸುವ ಹಂಬಲವು ಇದೆ.
ಗರಿ ಬಿಚ್ಚಿ ನೀಲಿಯಾಕಾಶದಲಿ
ಹಾರಾಡುವ ಆಸೆಯು ಇದೆ.
ಕಟ್ಟಿ ಹಾಕದಿರಿ ನನ್ನ
ಬಂಧನದ ಸಂಕೋಲೆಯಿಂದ,
ನಿಮ್ಮ ಕಾಲಿನಡಿಯ ಧೂಳು ನಾನಲ್ಲ.
ಎದ್ದರೆ ಚಂಡಮಾರುತ
ಸುಮ್ಮನಿರೆ ಮಂದಸ್ಮಿತ.
ಕೆಣಕದಿರಿ ನನ್ನ,ಕೆಣಕಿ ಕಾಡದಿರಿ.
ನದಿಯಂತೆ ನಾನು,
ಸಪ್ತ ಸಾಗರ ದಾಟಿ ಹರಿಯುವ ಛಲವು ಇದೆ
ಇನ್ನಿಲ್ಲದಷ್ಟು ಕೊಡುವ ಒಲವೂ ಇದೆ
ತಾಯಿ ನಾನು, ತಂಗಿ ನಾನು
ಬಂಧದಿ ಬೆಸೆದ ಬಾಂಧವ್ಯ ನಾನು
ಮಮತೆಯಲಿ ಮಿಂದ ಮಗಳು ನಾನು
ಎಲ್ಲವನ್ನು ಮೀರಿ ಹೆಣ್ಣು ನಾನು.
- ವೀಣಾ ವೈಷ್ಣವಿ
