‘ನಿರುತ್ತರ’ ಪುಸ್ತಕ ಪರಿಚಯ

ಓರಿಯಾದ ಪ್ರಮುಖ ಲೇಖಕಿ ಡಾ. ಪ್ರತಿಭಾ ರಾಯ್ ಅವರ ಮಹತ್ವದ ಕಥಾ ಸಂಕಲನಗಳಲ್ಲಿ ಒಂದಾದ ನಿರುತ್ತರ ಕೃತಿಯನ್ನು ಆರ್. ಪಿ. ಹೆಗಡೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಇಲ್ಲಿ ಒಟ್ಟೂ ಹತ್ತು ಕಥೆಗಳಿವೆ. ಈ ಕೃತಿಯ ಕುರಿತು ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಕೃತಿ : ನಿರುತ್ತರ
ಓರಿಯಾ ಮೂಲ ಲೇಖಕರು: ಡಾ. ಪ್ರತಿಭಾ ರಾಯ್
ಕನ್ನಡ ಅನುವಾದ: ಆರ್. ಪಿ. ಹೆಗಡೆ
ಅಕ್ಷಯ ಪ್ರಕಾಶನ ಬೆಂಗಳೂರು
ಮುದ್ರಣದ ವರ್ಷ : ೨೦೦೯
ಪುಟಗಳು: ೧೫೮
ಬೆಲೆ: ರೂ. ೯೫

*ಪಾದುಕಾ ಪೂಜೆ

ಹೀಗಂದ ತಕ್ಷಣ ನಮಗೆ ನೆನಪಿಗೆ ಬರುವುದು ರಾಮಾಯಣದ ಭ್ರಾತೃ ಭಕ್ತ ಭರತ. ಅಪ್ಪನ ತಮ್ಮ ಅಂದರೆ ‘ಚಿಕ್ಕಪ್ಪನ’ ಫೋಟೋ ಕೂಡಾ ಇಲ್ಲದ ವಿಧಾನಬಾಬು ಅವರ ಮನೆಯಲ್ಲಿ ನಡೆಯುವ ಪಾದುಕಾ ಪೂಜೆಯ ಬಗ್ಗೆ ಅಲ್ಲಿನ ಜನ ಮಾತಾಡಿ ಕೊಳ್ಳುತ್ತಾ ನಗುವುದೂ ಇತ್ತು.

ಎಂಬತ್ತು ವರ್ಷ ಜೀವ ಸೆವೆಸಿದ ಚಿಕ್ಕಪ್ಪನ ಕೊಳಕಾದ ಎರಡು ತೆಳ್ಳಗಿನ ಪಾದಗಳು ನೆನಪಾದರೆ ವಿಧಾನನಿಗೆ ಕಣ್ತುಂಬಿ ಬರುತ್ತಿತ್ತು.ದೊಡ್ಡ ಹುದ್ದೆಯಲ್ಲಿದ್ದ ಅವನ ಬಳಿ ಯಾರಾದರೂ ಸಹಾಯ ಕೇಳಲು ಬಂದರೆ ಮೊದಲು ಅವರ ಕಾಲು ನೋಡಿ ಧೀರ್ಘ ನಿಶ್ವಾಸ ಬಿಟ್ಟು ‘ಚಪ್ಪಲಿ’ ಕೊಳ್ಳಲು ಹಣ ಕೊಡುವ ಈ ಕರುಣೆಯ ವಿಚಿತ್ರ ರೂಪ ವನ್ನು ಎಲ್ಲರೂ ಗುರುತಿಸಿದ್ದಾರೆ.

ಬಾಲ್ಯದಲ್ಲಿ ಅನಾರೋಗ್ಯ ಪೀಡಿತನಾದ ದುರ್ಬಲ ವಿಧಾನ ಬಾಬುವನ್ನು ಹೆಗಲ ಮೇಲೆ ಹೊತ್ತು ಅಪ್ಪನಿಗಿಂತ ಹೆಚ್ಚಾಗಿ ಪ್ರೀತಿಸಿ ಶಾಲೆಗೆ ಒಯ್ದು ಬಿಡುತ್ತಿದ್ದ ಚಿಕ್ಕಪ್ಪ, ತನ್ನ ಪಾಲಿನ ರಸಗುಲ್ಲಾವನ್ನು ಇವನಿಗೆ ತಿನ್ನಿಸುವ, ತನ್ನ ಮಗ ವಿರಾಜ ನಿಗಿಂತ ಇವನನ್ನೇ ಹಚ್ಚಿಕೊಂಡು ಬೇಧ ತೋರದೇ, ಸದಾ ಹೊಲದಲ್ಲಿ ದುಡಿದ. ಅವನ ಚಿಕ್ಕಪ್ಪ ಸಾಯುವಾಗ ಅಂತಿಮ ಇಚ್ಛೆಯನ್ನು ಪೂರೈಸಲು ವಿಧಾನ ಬಾಬುವಿಗೆ ಸಾಧ್ಯವಾದರೂ…. ನಡೆದಿದ್ದು ಏನು?… ಚಿಕ್ಕಪ್ಪ ಅದೇ ಚಪ್ಪಲಿಗಳನ್ನು ಧರಿಸಿ, ಟಫ್ ಟಫ್ ಸದ್ದು ಮಾಡುತ್ತಾ ವಿಧಾನಬಾಬು ಅವರ ಎದೆ ಮೇಲೆ ನಡೆದಾಡ ತೊಡಗಿದಂತೆ ಅನಿಸುವುದು ಯಾಕೆ?.

* ಹುಳು

ಹೆಂಡತಿಯ ಹಠಕ್ಕೆ ಗಂಡನಾದವನು ಮಣಿಯುವುದೇಕೆ? ಎನ್ನುವ ಬಗ್ಗೆ ಇಲ್ಲಿ ಪುರಾಣ ಕಥೆಗಳ ಉಪಮೆಯೊಂದಿಗೆ ನಿರೂಪಿಸಿದ ಪೀಠಿಕೆ ಬಹಳ ಚೆನ್ನಾಗಿದೆ. ಗೋಪಕೃಷ್ಣ
ಹಾಗೂ ರಾಮಕೃಷ್ಣ ಅಣ್ಣ -ತಮ್ಮಂದಿರು. ತುಂಬಾ ಪ್ರೀತಿಯಿಂದ ಸಾಕಿದ ಅಣ್ಣ -ಅತ್ತಿಗೆ ತೀರಿಕೊಂಡಾಗಲೂ ರೈಲ್ವೇಯಲ್ಲಿ ನೌಕರಿ ಮಾಡುತ್ತಿದ್ದ ಗೋಪಕೃಷ್ಣ ಊರಿಗೆ ಬರಲಿಲ್ಲ. ದೇವರೆಂದು ತಿಳಿದಿದ್ದ ಅಣ್ಣ ಅತ್ತಿಗೆ ಬಗ್ಗೆ ಆತ ಅಷ್ಟು ಕೆಟ್ಟವನಾಗಿ ನಡೆದು ಕೊಂಡಿದ್ದು ಏಕೆ?.

ಅವನ ಮದುವೆಯಲ್ಲಿ ನಡೆದ ಅದಲು -ಬದಲು ಏನು? ಅವನ ಹೆಂಡತಿ ಇಚ್ಛಾಮಣಿ ಅತ್ತಿಗೆ ಅನ್ನಪೂರ್ಣಾ ಬಗ್ಗೆ ಗಂಡನ ತಲೆ ತುಂಬಿದ ವಿಷಯವೇನು? ಮುರಿದು ಹೋದ ರಕ್ತ ಸಂಬಂಧವನ್ನು ಅಣ್ಣನ ಮಗಳು ಸವಿತಾ ನೆನಪಿಸಿ ಕೊಂಡು ದುಃಖಿಸಲು ಕಾರಣ ವಾದರೂ ಏನು?….

* ಕೇದಿಗೆವನ

ಬಡತನದ ಕುಟುಂಬದ ಆತ ಸೋದರ ಮಾವನ ಮನೆಯಲ್ಲಿದ್ದು ಎರಡು ಮೂರು ಮನೆ ಟ್ಯೂಷನ್ ಮಾಡಿ ಬಿ.ಎ ಓದುತ್ತಿದ್ದ. ಹಾಗೆ ಅವನ ಟ್ಯೂಷನ್ ವಿದ್ಯಾರ್ಥಿನಿ ಯಾಗಿದ್ದವರಲ್ಲಿ ದೊಡ್ಡವರ ಮನೆಯ ಈ ಚಿಕ್ಕ ಶುಭಾಳೂ ಒಬ್ಬಳು. ಅವರ ಮನೆಯಿಂದ ಟ್ಯೂಷನ್ ಹಣದ ಜೊತೆ ತಿಂಡಿಯೂ ಸಿಕ್ಕುತ್ತಿತ್ತು. ಅವಳಿಗೆ ಯೋಗ್ಯ ವರ ದೊರಕಿ ಮ್ಯಾಟ್ರಿಕ್ ಪರೀಕ್ಷೆಯ ಮುಕುಟವನ್ನು ತಲೆಯಿಂದ ಕಳಚಿ ವಿವಾಹದ ಕಿರೀಟವನ್ನು ತೊಟ್ಟು ಶುಭಾ ಗಂಡನ ಮನೆಗೆ ಹೊರಟು ಹೋದಳು.

ಹೋಗುವಾಗ ತುಂಬಾ ದುಃಖಿಸುತ್ತಾ, ‘ನನ್ನಿಂದ ನಿಮಗೆ ಟ್ಯೂಷನ್ ಬಂದ್ ಆಗಿ ಬಿಡುತ್ತಲ್ಲ. ಆದರೆ ನಿಮ್ಮ ಬಿ.ಎ.ಓದು ನಿಲ್ಲಬಾರದು ಸರ್. ನೀವು ನಮ್ಮ ಮನೆಗೆ ಬರಬೇಕು’ ಎಂದಿದ್ದಳು. ಆಗ ಬಹಳಷ್ಟು ಸಾರಿ ‘ ಮನಸ್ಸಿಗೆ ಇಷ್ಟವಾದ ವರ ಸಿಗದೇ ಇದ್ದರೂ, ಮನೆಯನ್ನೇ ಮನಸ್ಸಿಗೆ ಇಷ್ಟವಾಗಿಸಿಕೊಂಡು ಅದೇ ಅಮಲಿನಲ್ಲಿ ಹುಡುಗಿಯರು ಇಡೀ ಜೀವನದಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂದು ಅವನಿಗೆ ಅನ್ನಿಸಿತ್ತು.

ಇದೀಗ ೩೨ ವರ್ಷಗಳ ನಂತರ ಬಟ್ಟೆ ಅಂಗಡಿಯೊಂದರಲ್ಲಿ ಶುಭಾ ಅವನಿಗೆ ಕಂಡಿದ್ದಳು. ಅವಳ ಸ್ಥೂಲ ಕಾಯದಿಂದ ವಯಸ್ಸಾದವರಂತೆ ಕಾಣುತ್ತಿದ್ದಳು. ಆದರೆ ಅವಳ ದನಿಯಲ್ಲಿ ತುಂಬಿದ ನದಿಯ ಆಳವಾದ ಸಂಗೀತವಿತ್ತು. ರೂಪ ಆಕಾರದಲ್ಲಿ ಬದಲಾಗಿದ್ದರೂ ಆಕೆ ಬದಲಾಗಿರಲಿಲ್ಲ! ‘ಸರ್ ನೀವು ಬಿ.ಎ ಪಾಸ್ ಮಾಡಿದಿರಾ ಇಲ್ಲವಾ?. ಎಂದು ಆಕೆ ಕೇಳಿದ ಪ್ರಶ್ನೆಯಲ್ಲಿ ಆಕೆಗೆ ವಯಸ್ಸಾಗಿದೆ ಆದರೆ ಬುದ್ಧಿ ಬೆಳೆದಿಲ್ಲ ಎಂಬುದು ಅವನಿಗೆ ಸ್ಪಷ್ಟವಾಗಿತ್ತು.

ಬಿ.ಎ ಮಾತ್ರ ಏನು..ಎಂ .ಎ ಕೂಡಾ ಮುಗಿಸಿ ಅವನೀಗ ಒಳ್ಳೆಯ ಹುದ್ದೆಯಲ್ಲಿದ್ದ. ತಾನು ಈಗ ಬಡವನಲ್ಲ ಎಂದು ಹೇಳಲು ಅಂದು ಅವನು ಶುಭಾಳ ಮನೆಗೆ ಹೋಗಿದ್ದ. ಆಕೆ ಕೊಟ್ಟ ಚಹಾ ಅವಳ ಮೂವರು ಮೊಮ್ಮಕ್ಕಳು ಎಲ್ಲಾ ಈಗ ಮುದುಕನಾದ ಅವನಿಗೆ ಇಷ್ಟವಾಯಿತು ಕ್ರಮೇಣ ಅವರಲ್ಲಿ ಹೋಗುವುದು ನಿಯಮಿತ ಅಭ್ಯಾಸವೇ ಆಯಿತು. ತಮ್ಮ ಬಾಲ್ಯ, ಕೇದಿಗೆವನ, ಊರಿನ ಬಗ್ಗೆ ಹರಟುತ್ತಾ ಚಹಾ ಕುಡಿಯುವ ಅವರಿಗೆ ಶುಭಾಳ ಮೊಮ್ಮಕ್ಕಳು’ ಇಕಾ ಚಹಾದ ಸರ್ ಬಂದರು’ ಎಂದು ಗೇಲಿ ಮಾಡುವಷ್ಟು ಚಹಾದ ಪರಿಮಳ ಆವರಿಸಿ ಕೊಂಡಿತ್ತು.
ಹೀಗಿರುವಾಗ ಅದೊಂದು ದಿನ ನಡೆದ ಅವರ ಮಾತುಕತೆ ಯಿಂದಾಗಿ ಇನ್ನೆಂದಿಗೂ ತಾನು ಶುಭಾಳ ಮನೆಗೆ ಹೋಗುವುದಿಲ್ಲ ಎಂದು ತೀರ್ಮಾನಿಸಿದ್ದರು. ಕೇದಿಗೆಯ ಪಕಳೆಗಳ ಮೇಲೆ ಬರೆದ ರಹಸ್ಯ ಪಂಕ್ತಿಗಳನ್ನು ಅವಳು ಚೂರು ಚೂರು ಮಾಡಿದ್ದಳು.! ಹಾಗಾದರೆ ಆ ರಹಸ್ಯವೇನು?…

* ನಿರುತ್ತರ

ರಾಘವ್ ಬಾಬು ಉನ್ನತ ಹುದ್ದೆಯಲ್ಲಿದ್ದವರು. ಡಾಕ್ಟರ ಸಲಹೆಯಂತೆ ರಾತ್ರಿ ಬೇಗ ಮಲಗಿ ಬೆಳಿಗ್ಗೆ ವಾಕ್ ಮಾಡಲು ಬೇಗ ಏಳುತ್ತಾರೆ . ಅವರ ಪತ್ನಿ ಸುಧಾ ಹಾಗಲ್ಲ ತಡ ರಾತ್ರಿ ಯಾದರೂ ಅವಳಿಗೆ ಕೆಲಸ ಮುಗಿಯುವುದಿಲ್ಲ ಏಳುವುದೂ ತಡವೇ.ಅವರ ಮಕ್ಕಳು ವಿದೇಶದಲ್ಲಿದ್ದಾರೆ.

ಸುಧಾಳಿಗೆ ಯಾವಾಗಲೂ ಸಮಯವಲ್ಲದ ಸಮಯದಲ್ಲಿ ಫೋನ್ ಬಂದರೆ ಎದೆ ಬಡಿತ ಹೆಚ್ಚುತ್ತಿತ್ತು. ಮಕ್ಕಳು ಜೊತೆಯಲ್ಲಿರುವಾಗಲೂ ಇದವಳ ಹಳೆಯ ರೋಗ. ಈಗವರು ಹೊರಗಡೆ ಹೋದ ಮೇಲೆ ಇದು ಇನ್ನಷ್ಟು ಹೆಚ್ಚಿತ್ತು. ಹೀಗಿರುವಾಗ ಪೊಲೀಸ್ ಸ್ಟೇಷನ್ ನಿಂದ ಬಂದ ಆ ಕರೆ ಅವರಿಬ್ಬರನ್ನು ಕಂಗೆಡಿಸಿದ್ದೇಕೆ?. ದಂಪತಿಗಳು ಪದೇ ಪದೇ ಬರುವ ಫೋನ್ ಕರೆಗೆ ಉತ್ತರಿಸದೇ ನಿರುತ್ತರರಾಗಿದ್ದು ಏಕೆ? ಶವದ ಜೇಬಲ್ಲಿ ಇವರ ಮನೆಯ ವಿಳಾಸ ಹಾಗೂ ಫೋನ್ ನಂಬರ್ ಇರಲು ಕಾರಣವೇನು? ಪೊಲೀಸರು ಗುರ್ತಿಸಲು ಹೇಳಿದ ಆ ಡೆಡ್ ಬಾಡಿ ಯಾರದ್ದು? ತಿಳಿಯಲು ಕುತೂಹಲವೇ?.

ಇದೇ ರೀತಿ ಮತ್ತಷ್ಟು ಕಥೆಗಳಿವೆ. ಇಲ್ಲಿನ ಪಾತ್ರಗಳಲ್ಲಿ ಮನುಷ್ಯನ ಗುಣ ಸ್ವಭಾವದ ಅಂತರಂಗ -ಬಹಿರಂಗಗಳ ಒಳನೋಟವನ್ನು ನವಿರಾಗಿ ಬಿಂಬಿಸಿದ ರೀತಿ ಶ್ರೇಷ್ಠಮಟ್ಟದ್ದಾಗಿದೆ. ಉತ್ತರ ಭಾರತದ ಕಡೆ ಹೆಸರುಗಳು ನಮಗೆ ಅಪರಿಚಿತ ಎನಿಸುತ್ತದೆ. ಒಟ್ಟಾರೆ ಬಹಳ ಚೆಂದದ ಅಪರೂಪದ ಕಥಾ ಸಂಕಲನ. ನೀವೂ ಓದಿಹೇಳಿ.

ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ : 


  • ಮಾಲತಿ ರಾಮಕೃಷ್ಣ ಭಟ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading