ರಶ್ಮಿಪ್ರಸಾದ (ರಾಶಿ) ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಬಗೆದಷ್ಟೂ ಬತ್ತದ ಹಾಗೆ
ಮನಸಿನಲ್ಲೇ ತುಂಬಿಕೊಳ್ಳುವ
ಮಾಧವ ನಿನ್ನೆದೆಯೊಳಗಿನ ಪ್ರೀತಿ
ಮಾತುಗಳಲಿ ಹೇಳಲಾರದ ರೀತಿ.!
ಮೊಗೆದಷ್ಟೂ ಮುಗಿಯದ ಬಗೆ
ಎದೆಯೊಳಗೇ ಬಿತ್ತಿಬಿಡುವ
ಕೇಶವ ನಿನ್ನೊಲವಿನಾ ಪ್ರತಿ
ಪದಗಳಲಿ ಕಟ್ಟಲಾರದ ಸ್ಥಿತಿ.!
ಪಡೆದಷ್ಟೂ ಸಾಲುತ್ತಿಲದ ಹಾಗೆ
ಹೃದಯದೊಳಗೆ ಅಚ್ಚೊತ್ತಿಬಿಡುವ
ವಾಸುದೇವ ನಿನ್ನೊಲವಾಮೃತದ ಸಿಹಿ
ಭಾವಗಳಲೇ ಬಂಧಿಸಿಡುವ ರೀತಿ.!
ತೀರಿದಷ್ಟೂ ಬಯಸುವ ಬಗೆ
ಮನದೊಳಗೇ ಉಕ್ಕಿಬರುವ
ಕೃಷ್ಣ ನಿನ್ನಂತರಾಳದ ಪ್ರೀತಿಯ ಛಾತಿ
ಜೀವದೊಳಗೇ ಅನುಭಾವಿಸುವ ಸ್ಥಿತಿ.!
ಅದೆಷ್ಟು ವರ್ಣಿಸಿದರೂ ಸಾಲದು
ಅದ್ಯಾವ ಬಣ್ಣನೆಗೂ ದಕ್ಕದು
ದಿನೇದಿನೇ ಕೊಟ್ಟಷ್ಟೂ ಹೆಚ್ಚುತಲಿಹುದು.!
ಪ್ರತಿಕ್ಷಣ ಪಡೆದಷ್ಟೂ ಆವರಿಸುತಿಹುದು.!!
ಅನುದಿನ ಅನುಕ್ಷಣ ಅಣುರೇಣುವಿನಲ್ಲೂ
ಒಲವೆಂಬುದೇ ಲೋಕವಾಗಿಹುದು
ಹೇ ಮಾಧವ ಈ ಲೋಕ ನಿಂತಿರುವುದೇ
ನಿನ್ನ ಆರಾಧನೆಯ ಒಲವಿನೆಂದೆಂದುಹುದು.!!
- ರಶ್ಮಿಪ್ರಸಾದ (ರಾಶಿ)
