ಪೋಸ್ಟ್ ಮ್ಯಾನ್ ಅಥವಾ ಅಂಚೆ ಪೇದೆಯ ವೃತ್ತಿ ಬದುಕು ಒಂದು ರೀತಿಯಲ್ಲಿ ಸವಾಲುಗಳನ್ನು ಎದುರಿಸುವ ಮತ್ತು ಸೇವಾಮನೋಭಾವನೆಯಿಂದ ಕೂಡಿದ್ದು, ಎಂ ಜವರಾಜ್ ಅವರು “ಪೋಸ್ಟ್ ಮ್ಯಾನ್ ಗಂಗಣ್ಣ” ಅನ್ನುವ ಕಾದಂಬರಿಯನ್ನು ಒಬ್ಬ ಪೋಸ್ಟ್ ಮ್ಯಾನ್ ಸುತ್ತ ಹೆಣೆದ ಕಥೆಯಾಗಿದೆ. ಈ ಕಾದಂಬರಿಯ ಕುರಿತು ಲೇಖಕರಾದ ಓಂಕಾರ ಪಾಟೀಲ್ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ :ಪೋಸ್ಟ್ ಮ್ಯಾನ್ ಗಂಗಣ್ಣ (ಕಾದಂಬರಿ)
ಲೇಖಕರು :ಎಂ. ಜವರಾಜ್.
ಪ್ರಕಾಶಕರು : ಸದಾಶಯ ಪ್ರಕಾಶನ ಗೊಂಡಬಾಳ
ಬೆಲೆ :೧೩೦ ರೂಪಾಯಿ.
ಪೋಸ್ಟ್ ಮ್ಯಾನ್ (ಅಂಚೆ ಪೇದೆ ) ಗಳ ದಿನಚರಿ ಸಾಮಾನ್ಯವಾಗಿ ಅಂಚೆ ಕಚೇರಿಯಿಂದ ಪ್ರಾರಂಭವಾಗುತ್ತದೆ, ಪತ್ರಗಳು, ಪಾರ್ಸಲ್ ಗಳು, ಹಾಗೂ ಮನಿ ಆರ್ಡರ್ ಗಳನ್ನು ವಿಳಾಸದ ಅನುಗುಣವಾಗಿ ಸಂಬಂಧಪಟ್ಟವರ ಮನೆಗೆ ತಲುಪಿಸುವದು ಪೋಸ್ಟ್ ಮ್ಯಾನ್ ಗಳ ಜವಾಬ್ದಾರಿಯಾಗಿರುತ್ತದೆ. ಇಂದಿನ ಮುಂದುವರೆದ ಡಿಜಿಟಲ್ ಯುಗದಲ್ಲಿ ಸ್ವಲ್ಪ ಬದಲಾವಣೆಯಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡುವುದು, ವಿಮಾ ಕಂತು ಸಂಗ್ರಹಿಸುವುದು, ಇಂಡಿಯಾ ಪೋಸ್ಟ್ ಮೂಲಕ ಜನರ ಮನೆ ಬಾಗಿಲಿಗೆ ಬ್ಯಾಂಕಿಂಗ್ ಸೇವೆ ನೀಡುವುದು ಮುಂತಾದ ಸೇವೆ ನೀಡುವದರ ಮೂಲಕ ಪೋಸ್ಟ್ ಮ್ಯಾನ್ ಜವಾಬ್ದಾರಿ ಹೆಚ್ಚಾಗಿದೆ.

ಪೋಸ್ಟ್ ಮ್ಯಾನ್ ಗಳ ಬಗ್ಗೆ ಹೇಳಬೇಕಾದರೆ ಅವನು ಒಬ್ಬ ಸರ್ಕಾರಿ ನೌಕರನಾಗಿರದೆ ಅವನು ಒಂದು ಸಮಾಜದ ಎಲ್ಲಾ ಸಮುದಾಯದ ಭಾಗವಾಗಿ ಜನರ ನಂಬಿಕೆಯನ್ನು ಗಳಿಸಿಕೊಂಡು ಜನರ ಹಿರಿಯರ ಆಪ್ತ ಸ್ನೇಹಿತನಂತೆ ಪೋಸ್ಟ್ ಮ್ಯಾನ್ ಸೇವೆ ಮಾಡಬೇಕಾಗುತ್ತದೆ.
ಕಾದಂಬರಿಕಾರ ಎಂ ಜವರಾಜ್ ಅವರು “ಪೋಸ್ಟ್ ಮ್ಯಾನ್ ಗಂಗಣ್ಣ” ಅನ್ನುವ ಕಾದಂಬರಿಯನ್ನು ಒಬ್ಬ ಪೋಸ್ಟ್ ಮ್ಯಾನ್ ಸುತ್ತ ಹೆಣೆದ ಕಥೆಯಾಗಿದ್ದು ಅವನ ಬದುಕು ವೃತ್ತಿ ಕುರಿತು ಸವಿಸ್ತಾರವಾಗಿ ಬರೆದಿರುವ ಓದುಗರ ಮೆಚ್ಚುಗೆಯ ಕಾದಂಬರಿಯಾಗಿದೆ.
ಒಬ್ಬ ನಿರ್ಗತಿಕ ಗಂಗಣ್ಣ ಅನ್ನುವ ಮುಗ್ಧ ವ್ಯಕ್ತಿ ಅನುಕಂಪದ ಆಧಾರದ ಮೇಲೆ ಪೋಸ್ಟ್ ಮ್ಯಾನ್ ಹುದ್ದೆ ಗಿಟ್ಟಿಸಿಕೊಂಡು ತನ್ನ ಸೇವೆ ಮೂಲಕ ಪೋಸ್ಟ್ ಮ್ಯಾನ್ ಗಂಗಣ್ಣ ಎಂದೇ ಜನಪ್ರೀಯನಾಗಿ ಕಾದಂಬರಿಯ ಮುಖ್ಯ ಪಾತ್ರಧಾರಿಯಾಗಿ ತನ್ನ ಮುಗ್ದತೆಯ ಕಾರ್ಯ ಶೈಲಿಯಿಂದ ಅವನ ಅವಿರಿತ ಸೇವೆ ಹಾಗು ಗ್ರಾಮೀಣ ಭಾಷೆ ಅಲ್ಲಿನ ಪರಿಸರದ ಸೊಗಡನ್ನು ಕಾದಂಬರಿಯ ಲೇಖಕರು ಪುಸ್ತಕದಲ್ಲಿ ಹಿಡಿದಿಟ್ಟಿದ್ದಾರೆ.

ಕಾದಂಬರಿಯನ್ನು ಓದುತ್ತಾ ಹೋದರೆ ಕರೋನಾ ಸಂಕಟಗಳ ನಡುವಿನ ಸಮಯದಲ್ಲಿ ಪೋಸ್ಟ್ ಮ್ಯಾನ್ ಗಂಗಣ್ಣನ ಕಾಯಕ ನಿಷ್ಠೆ, ಹಾಗು ಷಣ್ಮುಖಸ್ವಾಮಿ, ಅವರ ಮಗ ಪೆದ್ದರಾಮ, ಪೋಸ್ಟ್ ಮ್ಯಾನ್ ಗಂಗಣ್ಣನಿಗೆ ಅಂಗನವಾಡಿ ಮೇಡಂ ತೋರುವ ಪ್ರೀತಿ, ಮಕ್ಕಳು ಗಂಗಣ್ಣ ಹರಿದ ಪ್ಯಾಂಟ್ ನ ತೂತಿನೊಳಗೆ ಕಾಗದದ ಚೂರುಗಳಿಟ್ಟು ಗಂಗನ ಪೋಸ್ಟ್ ಎಂದೂ ರೇಗಿಸಿದರೂ ಬೇಸಾರಿಸಿಕೊಳ್ಳದ ಅವನ ಮುಗ್ಧತೆಯ ಭಾವದ ಹಾಗು ೩೦/೪೦ ವರುಷಗಳ ಹಿಂದೆ ಪೋಸ್ಟ್ ಮ್ಯಾನ್ ಗಳ ಸಂಕಟಗಳು ಅವರ ವೃತ್ತಿ ಬದುಕಿನ ಅನುಭವ ಗೊತ್ತಾಗುತ್ತದೆ.
ಒಟ್ಟಾರೆಯಾಗಿ ಹೇಳುವುದಾದರೆ ಎಂ ದೇವರಾಜ್ ಅವರು ಬರೆದ “ಪೋಸ್ಟ್ ಮ್ಯಾನ್ ಗಂಗಣ್ಣ” ಸರಳವಾಗಿ ಓದಿಸಿಕೊಂಡು ಹೋಗುವ ಪೋಸ್ಟ್ ಮ್ಯಾನ್ ಬದುಕು ಸಂಘರ್ಷಗಳೊಂದಿಗೆ ಸಾಗುವ ಪರಿಚಯವನ್ನು ಮಾಡಿಸುವ ಜನಪ್ರೀಯ ಕಾದಂಬರಿಯಾಗಿದೆ.
- ಓಂಕಾರ ಪಾಟೀಲ – ಕಾರ್ಯದರ್ಶಿಗಳು, ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್, ಬೀದರ.
