‘ಅಗ್ನಿಯು ಅವನಿಲ್ಲದೆ ಜಗವೆಲ್ಲಿದೆ ಜಗಜೀವಿಗೆ ಮುಖ್ಯವು’…. ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರು ಕವನದ ಸುಂದರ ಸಾಲುಗಳು ನಿಮ್ಮ ಮುಂದೆ, ತಪ್ಪದೆ ಓದಿ….
ಎಲ್ಲವನ್ನು ಮೆಲ್ಲನೆರೆದ
ಸೃಷ್ಟಿಯಿದುವೆ ಸುಂದರ
ಮರಳಿ ತಿರುಗಿ ಪಡೆಯದೇನು
ಜೀವದುಳಿವ ಹಂದರ
ಭೂಮಿಯೊಡಲ ಸತ್ವವೀರಿ
ಬೆಳೆದಿಹುದು ಮಾಮರ
ಸ್ವಾದವಿರುವ ಹಣ್ಣು ನೀಡಿ
ಜನ್ಮವಾಯ್ತು ಸಾರ್ಥಕ
ತರುಲತೆಗಳ ಹಸಿರೆಲೆಯಲಿ
ಹೊರಬರುವುದು ವಾಯುವು
ಜಗದುಸಿರಲಿ ಜನರುಸಿರಲಿ
ಬೆರೆಬೆರೆಯುವ ಪವನವು
ಹವನಾದಿಯ ಒಲೆಯಾದಿಯು
ಉರುಗೋಲಿಗು ಅಗ್ನಿಯು
ಅವನಿಲ್ಲದೆ ಜಗವೆಲ್ಲಿದೆ
ಜಗಜೀವಿಗೆ ಮುಖ್ಯವು
ಕಡಲೊಳವಲು ಭುವಿಯೊಡಲಲು
ಆವರಿಸಿದೆ ಸಲಿಲವು
ನರಮನುಜರ ಕಣಕಣದಲು
ತುಂಬಿರುವುದೆ ಉದಕವು
ಜಗದೊಳಗಡೆ ಬೆಳಕಿಳಿಸುತ
ದಿನ ಮೂಡುವ ಸೂರ್ಯನು
ಕಡುಗತ್ತಲ ತೆರೆಸರಿಸುತ
ಧರೆಗೆರೆವನು ಬೆಳಕನು
ಬ್ರಹ್ಮಾಂಡದ ಜೀವಾಳವು
ಹಸಿರುಟ್ಟಿರೊ ಪೃಥ್ವಿಯು
ಇಳೆಗಂತಲೆ ಮಳೆಮೋಡವ
ಇಳಿಸಿರುವನು ವರುಣನು
ನಂದೆನ್ನದೆ ನಮಗೆಲ್ಲವ
ಎರೆದಿರುವುದು ಪ್ರಕೃತಿ
ಈ ಮಂಡಲ ಭೂಮಂಡಲ
ಯುಗಯುಗದಲಿ ಸಂಸ್ಕೃತಿ.
- ಚನ್ನಕೇಶವ ಜಿ ಲಾಳನಕಟ್ಟೆ (ಕವಿಗಳು, ಲೇಖಕರು) ಬೆಂಗಳೂರು.
