ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪೇಟೆಯ ಪಕ್ಕದಲ್ಲಿ ಉದ್ದಕ್ಕೂ ಹರಿಯುತ್ತಿರುವ ಪಯಸ್ವಿನಿ ನದಿ. ತಟದಲ್ಲಿರುವುದೇ “ಶ್ರೀ ಗುರುರಾಘವೇಂದ್ರ ಮಠ” ಕುರಿತು ಬಾಲು ದೇರಾಜೆ ಅವರು ಬರೆದ ಲೇಖನ, ಮುಂದೆ ಓದಿ…
ಮಂಚಾಲೆ ಇದು ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ತುಂಗಭದ್ರಾ ನದಿಯ ತಟದಲ್ಲಿರುವ ಪುಟ್ಟ ಊರು. ಇಲ್ಲಿ ಶ್ರೀ ಗುರು ರಾಘವೇಂದ್ರ ರಾಯರು ಸಶರೀರವಾಗಿ ಬೃಂದಾವನಸ್ಥರಾದ ಪ್ರದೇಶ. ಮುಂದೆ ಈ ಪ್ರದೇಶವೇ ಮಂತ್ರಾಲಯ ಎಂದಾಯಿತು. ಗುರುವಾರದಂದು ಕಲಿಯುಗ ಕಾಮಧೇನು ಎಂದೆನಿಸಿಕೊಂಡ ಶ್ರೀ ರಾಯರ ಮಹಿಮೆಯನ್ನು ಕೇಳಿದರೆ ಸಕಲ ಸಂಕಷ್ಟಗಳು ದೂರವಾಗಿ ಶ್ರೀ ಗುರುವಿನ ಅನುಗ್ರಹವಾಗುವುದು ಎಂಬ ನಂಬಿಕೆ ಇದೆ.
ದ.ಕನ್ನಡ ಜಿಲ್ಲೆಯ ತಾಲೂಕಿನಲ್ಲೊಂದಾದ ಸುಳ್ಯ. ಇದರ ಪೇಟೆಯ ಪಕ್ಕದಲ್ಲಿ ಉದ್ದಕ್ಕೂ ಹರಿಯುತ್ತಿರುವ ಪಯಸ್ವಿನಿ ನದಿ. ಇದರ ತಟದಲ್ಲಿರುವುದೇ “ಶ್ರೀ ಗುರುರಾಘವೇಂದ್ರ ಮಠ” . ಇದು ಲೋಕಾರ್ಪಣೆ ಗೊಂಡು ಸುಮಾರು 5 ವರ್ಷವಾಯ್ತು. ಈ ವರ್ಷಗಳ ಹಿಂದೆಯೇ ಇಲ್ಲಿ ಶ್ರೀ ರಾಯರ ಮಠ ಸ್ಥಾಪಿಸ ಬೇಕೆಂಬ ಯೋಚನೆ ಬಂದದ್ದು ಇದೇ ತಾಲೂಕಿನ ಅಜ್ಜಾವರ – ಮುಳ್ಯದ ಶ್ರೀ .ಶ್ರೀ ಕೃಷ್ಣ ಸೋಮಯಾಗಿ ಇವರಿಗೆ. ಇತ್ತೀಚಿಗಿನ ವರ್ಷಗಳಲ್ಲಿ ಇವರಿಗೆ ಧಾರ್ಮಿಕ ವಿಷಯದಲ್ಲಿ ” ಆರ್ಯಭಟ ” ಪ್ರಶಸ್ತಿ ಹಾಗೂ ಧಾರ್ಮಿಕ ಮತ್ತು ಕೃಷಿ ವಿಷಯದಲ್ಲಿ ಜ್ಞಾನ ಭಂಡಾರದಿಂದ “ಸಮಾಜ ರತ್ನ” ಪ್ರಶಸ್ತಿ ಗೆ ಭಾಜನರಾಗಿದ್ದಾರೆ. ಸುಮಾರು30 ವರ್ಷಗಳ ಹಿಂದೆಯೇ ನಮ್ಮ ಪರಿಚಯದ ಗೆಳೆತನ ಇಂದಿಗೂ ಅದೇ ರೀತಿಯಲ್ಲಿದೆ.ಇವರು ತಮ್ಮ ಸ್ನೇಹಿತರು ಶ್ರೀ ಯುತರಾದ ಪ್ರಕಾಶ್ ಮೂಡಿತ್ತಾಯ, ರಮೇಶ್ ಕುಮಾರ್, ಮುರಳೀ ಕೃಷ್ಣ, ಡಾ/ ಸುಬ್ಬರಾವ್, ಸುಂದರ ಸರಳಾಯ, ನಾರಾಯಣಿ ಕಲ್ಲೂರಾಯ, ರಾಮ್ ಕುಮಾರ್ ಹೆಬ್ಬಾರ್, ಪಿ.ಎಲ್.ಮೂಡಿತ್ತಾಯ ಮೊದಲಾದವರನ್ನೊಳಗೊಂಡು ” ಬೃಂದಾವನ ಸೇವಾ ಚಾರಿಟೇಬಲ್ ಟ್ರಸ್ಟ್ (ರಿ) ಸುಳ್ಯ ” ಎಂಬ ಟ್ರಸ್ಟ್ ನ್ನು ರಚಿಸಿಕೊಂಡು, ಅಧ್ಯಕ್ಷರಾಗಿ ಶ್ರೀ. ಶ್ರೀ ಕೃಷ್ಣ ಸೋಮಯಾಗಿ, ಗಿರೀಶ್ ಕೇಕುಣ್ಣಾಯ ಕಾರ್ಯದರ್ಶಿ ಯಾಗಿಯೂ, ನಾರಾಯಣ ಕೇಳತ್ತಾಯ ಖಜಾಂಚಿ ಯಾಗಿದ್ದು ಮೊದಲಾದವರು ಟ್ರಸ್ಟಿಗಳಾಗಿದ್ದು,ಶ್ರೀ ರಾಯರ ಮಠವನ್ನು ಲೋಕಾರ್ಪಣೆ ಗೊಳಿಸುವಲ್ಲಿ ಯಶಸ್ವಿಯಾಗಿ, ಶ್ರೀ ರವಿರಾಜ ನಾಡವರು ಅರ್ಚಕರಾಗಿ ಪೂಜಾವಿಧಿವಿಧಾನಗಳನ್ನು ನೆರವೇರಿಸಿಕೊಡುತ್ತಿದ್ದಾರೆ. ಇವರ ರಜಾ ಸಮಯದಲ್ಲಿ ಸಹಕಾರಿಯಾಗಿ ಶ್ರೀಧರ ಶಗ್ರಿತ್ತಾಯ ತೋಟಂಪಾಡಿ ಅಜ್ಜಾವರ ಇವರು ಪೂಜಾ ಕಾರ್ಯವನ್ನು ನೆರವೇರಿಸುತ್ತಾರೆ.
ಈ ಮಠದ ಪಕ್ಕದಲ್ಲೇ ಯೋಗಶಾಲೆ, ಪಾಕಶಾಲೆ ಹಾಗೂ ಇನ್ನಿತರ ವ್ಯವಸ್ಥೆಗಳ ಜೊತೆಗೆ ಆಧ್ಯಾತ್ಮಿಕ ಕೇಂದ್ರವಾಗಿ ಬೆಳೆಯುತ್ತಿದ್ದು, ನಿತ್ಯ ಪೂಜೆ, ಪ್ರತಿ ಗುರುವಾರ ವಿಶೇಷ ಪೂಜೆಗಳು, ಆಗಾಗ ವಿಶೇಷ ಭಜನೆ,ರಂಗಪೂಜೆ,ನಡೆಯುವುದಲ್ಲದೆ, ಊರ-ಪರವೂರಿನ ಮದುವೆ,ಹೋಮ, ಪೂಜೆ ಸದ್ಗತಿ ಕಾರ್ಯಗಳು ನಿರಂತರವಾಗಿ ನಡೆಯುವುದಲ್ಲದೇ ,ಪ್ರತಿ ವರ್ಷ ಎಪ್ರಿಲ್ ತಿಂಗಳಲ್ಲಿ ಪ್ರತಿಷ್ಟಾ ಮಹೋತ್ಸವ, ಆಗಸ್ಟ್ ತಿಂಗಳಲ್ಲಿ ಆರಾಧನಾ ಮಹೋತ್ಸವ, ಜನವರಿ ತಿಂಗಳಲ್ಲಿ ಶ್ರೀ ಚೆನ್ನಕೇಶವ ದೇವರ ಜಳಕ ಉತ್ಸವ, ಭಜನಾ ಸ್ಪರ್ಧೆಗಳು, ಅಲ್ಲದೆ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ಕ್ಷೇತ್ರದಲ್ಲಿ ನಡೆಯುತ್ತವೆ. ಊರ-ಪರವೂರ ಭಕ್ತರು ಸದಾ ಸ್ವಾಮಿಯ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ,ಭಗವದ್ಭಕ್ತರ ತಾವು ಈ ಕಾರ್ಯದಲ್ಲಿ ಕೈ ಜೋಡಿಸಬೇಕಾಗಿ ಎಂದು ಶ್ರೀ ಮಠದ ಟ್ರಸ್ಟ್ ನವರು ವಿನಂತಿಸಿಕೊಂಡು ಕ್ಷೇತ್ರ ಕ್ಕೆ ಆಹ್ವಾನಿಸುತ್ತಿದ್ದಾರೆ.
ನಾಳೆ 13-8-2022 ರ ಶನಿವಾರ ಸುಳ್ಯದ ಸುಂದರ ಪರಿಸರದ ಮಧ್ಯೆ ಹರಿಯುತ್ತಿರುವ ಪಯಸ್ವಿನಿ ನದಿ ತೀರದಲ್ಲಿರುವ ಶ್ರೀ ಗುರುರಾಘವೇಂದ್ರ ಮಠದಲ್ಲಿ ಶ್ರೀ ಗುರುರಾಯರ 351ನೇ ಆರಾಧನಾ ಮಹೋತ್ಸವ ನಡೆಯಲಿದ್ದು,ಮಠದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ಹರಿ ಎಳೆಚಿತ್ತಾಯರ ಮಾರ್ಗದರ್ಶನದಲ್ಲಿ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳಾದ, ಪೂರ್ವಾಹ್ನ ಗಂಟೆ7.30 ಕ್ಕೆ ದೇವತಾ ಪ್ರಾರ್ಥನೆಯೊಂದಿಗೆ, ಮಹಾಗಣಪತಿ, ಪವಮಾನ ಹೋಮಗಳು,ಪವಮಾನ ಅಭಿಷೇಕ ನಡೆಯಲಿದ್ದು ನಂತರ ಮಧ್ಯಾಹ್ನ, ನಂತರ ಮಧ್ಯಾಹ್ನ ಗಂ. 11 ರಿಂದ ಅಲಂಕಾರ, ಮಹಾಪೂಜೆ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನ ಸಂತ್ರಪ್ಪಣೆ ನಡೆಯಲಿದೆ. ಸಂಜೆ ಗಂಟೆ6ರಿಂದ ಪಲ್ಲಕಿಸೇವೆ ,ಅಷ್ಠಾವಧಾನ,ಮಹಾಪೂಜೆ ,ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿರಿವುದು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಪೂ.ಗಂ.10 ರಿಂದ 12.30 ರ ತನಕ ಶ್ರೀ ಬಾಸ್ಕರ ಭಾರ್ಯ ನಿರ್ದೇಶನದಲ್ಲಿ ಶ್ರೀಮತಿ ಭವ್ಯಶ್ರೀ ಕುಲ್ಕುಂದ ರವರ ಭಾಗವತಿಕೆಯಲ್ಲಿ ಆಂಜನೇಯ ಮಹಿಳಾ ಯಕ್ಷಗಾನ ತಂಡ ಪುತ್ತೂರು ಇವರಿಂದ “ಶರಾಘಾತ ” ಎಂಬ ತಾಳಮದ್ದಳೆ ನಡೆಯುವುದಲ್ಲದೆ ,ಸಂಜೆ ಗಂಟೆ 4ರಿಂದ ಪ್ರಸಿದ್ದ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮದೊಂದಿಗೆ ಈ ಆರಾಧನಾ ಮಹೋತ್ಸವ ವು ವಿಜೃಂಭಣೆಯಿಂದ ನೆರವೇರಲಿದ್ದು ,ಈ ಪುಣ್ಯ ಕಾರ್ಯದಲ್ಲಿ ಶ್ರೀ ಮಠದ ಅರ್ಚಕರು ಸೇರಿದಂತೆ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಸರ್ವ ಟ್ರಸ್ಟಿಗಳು ಉಪಸ್ಥಿತಿಯಲ್ಲಿದ್ದು,ಸಾವಿರಾರು ಸಂಖ್ಯೆಯಲ್ಲಿ ಊರ-ಪರವೂರ ಭಕ್ತಾದಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಶ್ರೀ ಗುರುರಾಘವೇಂದ್ರ ಮಠದ ವಿಶೇಷತೆ-ಶ್ವೇತ ಬಣ್ಣದ ಮುದ್ದಾದ ಬೆಕ್ಕು ಭಕ್ತಾದಿಗಳ ಒಡನಾಟದಲ್ಲಿದ್ದು ಜೊತೆಗೂಡಿಕೊಂಡಿರುತ್ತದೆ.
ಪೂಜ್ಯಾಯ ರಾಘವೇಂದ್ರಾಯ/ಸತ್ಯಧರ್ಮ ರತಾಯಚ/
ಭಜತಾಂ ಕಲ್ಪವೃಕ್ಷಾಯ/ನಮತಾಂ ಕಾಮಧೇನವೇ/…
- ಲೇಖನ ಮತ್ತು ಕ್ಯಾಮೆರಾ ಹಿಂದಿನ ಕಣ್ಣು : ಬಾಲು ದೇರಾಜೆ, ಸುಳ್ಯ.
