‘ಎಷ್ಟೊಂದು ಸವಾಲುಗಳ ಮೆಟ್ಟಿ ನಿಂತಿತು, ಭಾರತದ ಆತ್ಮಶಕ್ತಿ ವಿಶ್ವವನೆಲ್ಲ ಬೆರಗಾಗಿಸಿತು’…ಶಿವದೇವಿ ಅವನೀಶಚಂದ್ರ ಅವರ ಸುಂದರ ಕವನ, ಓದುಗರ ಮುಂದೆ, ತಪ್ಪದೆ ಓದಿ…
ಸ್ತ್ರೀ ಶಕ್ತಿ ಮೆರೆಯಿತಲ್ಲ
ಚಂದ್ರನೂರಲಿ
ದೇಹದ ಹಂಗು ಬಿಡು
ನಾವು ಧೀಶಕ್ತಿಯಲ್ಲು
ಮುಂದು
ಎಂದು ಸಾರುತಲಿ
ಚಂದ್ರನೊಂದು ನೆಪವಾದ
ಇದ ಸಾಬೀತು ಪಡಿಸಲು
ಅಮೃತವನ್ನೇ ಬರೆದ
ತನ್ನೆದೆಯಲ್ಲಿ ಶಾಸನವ
ಅಮೃತಾಂಶುವು..
ಕವಿಗಳ ಕಲ್ಪನೆಯ
ರೂಪರಾಶಿಯು
ಪ್ರೇಮಿಗಳ ಸವಿಭಾವಗಳ
ಉತ್ಕರ್ಷಿಣಿಯು
ಊರಗಲ ಶಶಿಮೊಗದ ಕಾಂತಿ
ಹಾನಿವೃದ್ಧಿಯಾಗಿ
ಅರುಹುವ ಬದುಕ ಪಾಠವು
ಭೂಮಿಗೆ ಚೆಲುವನೆರೆವ
ನಿಸರ್ಗ ಸಂಮೋಹಿನಿಯು
ಇಂದು ಕೈಗೆ ಎಟುಕಿತಲ್ಲ
ಅದರ ಅಂತರಂಗವು…
ಸಲಿಲ ಖನಿಜದಂತರಂಗ
ಅದರ ಗರ್ಭೀಕರಿಸಿದ ಸಿರಿಯು
ಸಾಗರದ ದೊರೆಯನ್ನೇ
ಕುಣಿಸುವ ಒಲವು
ತನ್ನ ಎದೆಯೊಳಗೆ ಅವಿತಿರಿಸಿದ
ನೂರು ಆಕೃತಿಗಳ ಗೂಢವು
ಭಾರತದ ಅಧ್ಯಾತ್ಮ ಗುರುವು
ನೀಡಿದ ಕಸುವು
ಸನಾತನ ವೈಜ್ಞಾನಿಕತೆಯ
ನಿಖರ ಅರಿವು
ಛಲಬಿಡದ ತ್ರಿವಿಕ್ರಮನಂತೆ
ಸವಾಲುಗಳ ನಡುವೆಯೂ
ಮುನ್ನುಗ್ಗಿತು…..ವಿಕ್ರಮದಲಿ ನಮ್ಮವಿಜ್ಞಾನಿಗಳ ಅದಮ್ಯ ಚೈತನ್ಯವು
ನಂಬಿಕೆ ಶ್ರದ್ಧೆಗಳ
ಸಂಪನ್ನ ಗುರಿಯು
ತಲುಪದೇನು ರಾಮಬಾಣ
ದಿಕ್ಕು ತಪ್ಪದೆಯೂ
ಎಷ್ಟೊಂದು ಸವಾಲುಗಳ
ಮೆಟ್ಟಿ ನಿಂತಿತು
ಭಾರತದ ಆತ್ಮಶಕ್ತಿ ವಿಶ್ವವನೆಲ್ಲ
ಬೆರಗಾಗಿಸಿತು
ಜಿ..ಶೃಂಗವೆಂಬ ಹೆಮ್ಮೆಯ
ಹೊಣೆಯ ಆತ್ಮದಿ ಭರಿಸಿ
ತಾಯಿ ಭಾರತಿಯ ಮುಡಿಗೆ
ರನ್ನಮಕುಟವನಿರಿಸಿ
ಹೆಜ್ಜೆ ಹೆಜ್ಜೆ ಪ್ರೇರಿಸುತ
ಎಗ್ಗಿಲ್ಲದೆ ಮುನ್ನುಗ್ಗುವ ಕಡೆಗೆ
ಹಿರಿಯ ಗುರಿಯ ಮನದೊಳಿರಿಸಿ ಗೆಲ್ಲುವ ಕಡೆಗೆ
ಉಘೇ ಭಾರತಿ, ಪ್ರಜ್ವಲಿಸಿ ನಿನ್ನ ಕೀರುತಿ
ವೃದ್ಧಿಸಿದೆ ನಿನಗೆ ಹೆಮ್ಮೆ
ತರುವ ಸಂತತಿ
ಕೈಹಿಡಿದು ಮುನ್ನಡೆಸಲಿ ರಾಷ್ಟ್ರನಾಯಕನ ಪ್ರೇರಕ ಶಕ್ತಿ
ನೀಗುತ ಕೀಳರಿಮೆಯ ತಿಮಿರವ
ಆಳಲಿ ವಿಶ್ವದ ಹೃದಯಗಳ
ನಮ್ಮದೀ ಯುಕ್ತಿ
ನಮ್ಮ ಧ್ಯೇಯ ಸಾಧನೆಯ ಮಹಾಶಕ್ತಿ!
- ಶಿವದೇವಿ ಅವನೀಶಚಂದ್ರ
