ಮಾಚ್೯ 20ರ ದಿನವನ್ನು ಗುಬ್ಬಚ್ಚಿಗಳ ದಿನ (World Sparrow Day) ವನ್ನಾಗಿ ಆಚರಣೆ ಮಾಡುತ್ತೀದ್ದೇವೆ. ಭಾರತದಲ್ಲಿ ಇಂಡಿಯಾಸ್ ನೇಚರ್ ಫಾರ್ ಎವರ್ ಸೊಸಾಯಿಟಿಯ ಮೊಹಮದ್ ದಿಲಾವರ ವಿಶ್ವ ಗುಬ್ಬಚ್ಚಿ ದಿನಾಚರಣೆಯ ಸಾರಥ್ಯ ವಹಿಸಿದ್ದಾರೆ. ಉಪನ್ಯಾಸಕರಾದ ಡಾ.ಗುರುಪ್ರಸಾದ ರಾವ್ ಹವಲ್ದಾರ್ ಅವರ ಲೇಖನವನ್ನು ತಪ್ಪದೆ ಮುಂದೆ ಓದಿ…
ಲೋಕದಲ್ಲಿ, ರೆಕ್ಕೆ ಮೂಡುವುದೆನಗೆ! ಹಾರುವುದು ಹೃತ್ಪಕ್ಷಿ ಲೋಕಗಳ ಕೊನೆಗೆ..!” ರಾಷ್ಟ್ರಕವಿ ಕುವೆಂಪುವರು ಕರೆಯುವ ಹಾಗೆ ನಾವು ಚಿಕ್ಕಂದಿನಿಂದಲೂ ನೊಡುತ್ತ ಬಂದಿರುವ ಗುಬ್ಬಿಗಳು ನಮ್ಮ ಬದುಕಿನ ಅವಿಭಾಜ್ಯ ಭಾಗವೇ ಆಗಿದ್ದವು, ಅದರೆ ಇಂದು ಅಧುನಿಕತೆಗೆ ಮಾರುಹೋದ ನಾವುಗಳು ಅವುಗಳ ಇರುವಿಕೆಯನ್ನೇ ಇಲ್ಲವಾಗಿಸುತ್ತಾ ಸಾಗಿದ್ದೇವೆ. ಇಂತಹ ಸಂದರ್ಭದಲ್ಲಿ ಅವುಗಳ ಬದುಕಿನ ದೈನಂದಿನ ಹೋರಾಟದಲ್ಲಿ ಎದುರಿಸುವ ಸಂಕಷ್ಟಗಳ ಬಗ್ಗೆ ಬೆಳಕು ಚೆಲ್ಲುವ ಸಮುದಾಯಿಕ ಪರಿಹಾರ ಹುಡುಕುವುದು, ಸಂತತಿಯನ್ನು ಉಳಿಸುವುದು, ಈ ಎಲ್ಲಾ ಅನಿವಾರ್ಯತೆಯ ಉದ್ದೇಶವೇ ಮಾಚ್೯ 20ರ ದಿನವನ್ನು ಗುಬ್ಬಚ್ಚಿಗಳ ದಿನ (World Sparrow Day) ವನ್ನಾಗಿ ಆಚರಣೆ ಮಾಡುತ್ತೀದ್ದೇವೆ.
ವಿಶ್ವ ಗುಬ್ಬಚ್ಚಿ ದಿನದ ಈ ವರ್ಷದ ಥೀಮ್ “ಗುಬ್ಬಚ್ಚಿಗಳು: ಅವುಗಳಿಗೆ ಚಿಕ್ಕ ಅವಕಾಶ ನೀಡಿ!”, “ನಾನು ಗುಬ್ಬಚ್ಚಿಗಳನ್ನು ಪ್ರೀತಿಸುತ್ತೇನೆ” ಮತ್ತು “ನಾವು ಗುಬ್ಬಚ್ಚಿಗಳನ್ನು ಪ್ರೀತಿಸುತ್ತೇವೆ” “(Sparrows: Give them a tweet-chance!”, “I Love Sparrows” and “We Love Sparrows”.) ಎಂಬುದಾಗಿದೆ.
ದಿನದಲ್ಲಿ ಭಾಗವಹಿಸಲು ಇತರರನ್ನು ಪ್ರೇರೇಪಿಸುವುದು ಮತ್ತು ಗುಬ್ಬಚ್ಚಿಗಳ ಭದ್ರತೆ ಮತ್ತು ಪ್ರಪಂಚದಾದ್ಯಂತದ ಅವರ ಪ್ರದೇಶದಲ್ಲಿ ಎಷ್ಟು ಸಂಖ್ಯೆಯ ವ್ಯಕ್ತಿಗಳು ನಿರೀಕ್ಷಿಸುತ್ತಾರೆಯೋ ಅದನ್ನು ಪಡೆಯುವುದು ಗುರಿಯಾಗಿದೆ.
ಇದನ್ನು ಪ್ರಾರಂಭಿಸಿದವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಘಟಿಸುವಲ್ಲಿ ‘ನೇಚರ್ ಫಾರ್ ಎವರ್ ಸೊಸಾಯಿಟಿ’ ಕೊಡುಗೆ ಅನನ್ಯವಾದದ್ದು. ಈ ಸಂಸ್ಥೆಗೆ ಬೆನ್ನೆಲುಬಾದವರು ‘ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸಾಯಿಟಿ’ -ಮುಂಬೈ, ಅಮೇರಿಕೆಯ ಕಾರ್ನೆಲ್ ಲ್ಯಾಬ್ ಆಫ್ ಆರ್ನಿಥಾಲಜಿ, ಫ್ರಾನ್ಸ್ ದೇಶದ ಇಕೋ-ಸೇಯ್ಸ್ ಆಕ್ಷನ್ ಫೌಂಡೇಶನ್, ಯುನೈಟೆಡ್ ಕಿಂಗಡಮ್ಗೆ ಸೇರಿದ ಅವಾನ್ ವೈಲ್ಡ್ ಲೈಫ್ ಟ್ರಸ್ಟ್ ಪ್ರಮುಖವಾದವರು. ಇವರೊಂದಿಗೆ ಅಂತಾರಾಷ್ಟ್ರೀಯ ಸಂಸ್ಥೆಗಳು ಕೈಜೋಡಿಸಿವೆ. ಕನ್ನಡದಲ್ಲಿ ಗುಬ್ಬಿ ಎಂದು, ಹಿಂದಿ ಭಾಷೆಯಲ್ಲಿ ಗೊರೆಯಾ, ತಮಿಳು ಹಾಗೂ ಮಲಯಾಳಿ ಭಾಷೆಯಲ್ಲಿ ಕುರುವಿ, ಚಿಟ್ಟುಕುರುವಿ, ತೆಲುಗು ಭಾಷೆಯಲ್ಲಿ ಪಿಛುಕಾ, ಗುಜರಾತಿ ಭಾಷೆಯಲ್ಲಿ ಚಕ್ಲಿ, ಮರಾಠಿಯಲ್ಲಿ ಚಿಮನಿ, ಪಂಜಾಬಿ ಭಾಷೆಯಲ್ಲಿ ಚಿರಿ ಹಾಗೂ ಉರ್ದು ಭಾಷೆಯಲ್ಲಿ ಚಿರ್ಯಾ, ನಮ್ಮ ಮನೆ ಅಂಗಳದ ಗುಬ್ಬಚ್ಚಿಗಳಿಗೆ ಜಗತ್ತಿನ ಎಲ್ಲ ಭಾಷೆಗಳಲ್ಲಿ ಕರೆಯುವ ಹೆಸರುಗಳಿವೆ.

ಫೋಟೋ ಕೃಪೆ :google
ಭಾರತದಲ್ಲಿ ಇಂಡಿಯಾಸ್ ನೇಚರ್ ಫಾರ್ ಎವರ್ ಸೊಸಾಯಿಟಿಯ ಮೊಹಮದ್ ದಿಲಾವರ ವಿಶ್ವ ಗುಬ್ಬಚ್ಚಿ ದಿನಾಚರಣೆಯ ಸಾರಥ್ಯ ವಹಿಸಿದ್ದಾರೆ. ತನ್ನ ಚಿಂವ್..ಚಿಂವ್ ಸದ್ದಿನಿಂದ ಯಾವತ್ತೂ ನಮ್ಮ ಮನೆಯ ಅಂಗಳಗಳನ್ನು ಸಿಂಗರಿಸಿದ್ದ ರೆಕ್ಕೆಯ ಮಿತ್ರರನ್ನು ಪುನ: ಆಹ್ವಾನಿಸಲು ಸಹ ವ್ಯಾಪಕ ಕ್ರಮಗಳನ್ನು ಅವರು ಶೋಧಿಸುತ್ತಾ, ಸಮುದಾಯದ ಸಹಭಾಗಿತ್ವದಲ್ಲಿ ‘ಪಕ್ಷಿಸ್ನೇಹಿ ಬದುಕು’ ರೂಢಿಸಿಕೊಳ್ಳುವುದು ಹೇಗೆ ಎಂದು ಅವರು ಮಹಾದಾರಿಗಳನ್ನು-ಕಾಲುದಾರಿಗಳನ್ನು ಹುಡುಕುತ್ತಿದ್ದಾರೆ.
ಪರಿಸರ ಅಧ್ಯಯನ ವಿಷಯದ (ಮಾಜಿ) ಪ್ರಾಧ್ಯಾಪಕರಾದ ನಾಸಿಕ್ ನಿವಾಸಿ ಮೊಹಮದ್ ದಿಲಾವರ್, ಇತರೆ ಪ್ರಾಣಿಶಾಸ್ತ್ರಜ್ಞರಂತೆ ಕಳೆದ 1990 ರಲ್ಲಿಯೇ ಗುಬ್ಬಚ್ಚಿಗಳ ಸಂಖ್ಯೆಯಲ್ಲಿ ವ್ಯಾಪಕ ಕುಸಿತ ಉಂಟಾಗಿರುವುದನ್ನು ‘ಪರಿಸರದ ನೆತ್ತಿಗೇರಿದ ಜ್ವರ’ ಎಂದೇ ವ್ಯಾಖ್ಯಾನಿಸಿದ್ದಾರೆ.
ಚಿಂವ್ ಚಿಂವ್ ಗುಬ್ಬಿ ಎಂದೇ ಕರೆಸಿಕೊಳ್ಳುವ ಈ ಹಕ್ಕಿಗಳ ತೂಕ 26-32 ಗ್ರಾಂಗಳಷ್ಟೆ. 14-16 ಸೆಂ.ಮೀ.ಗಳಷ್ಟು ದೊಡ್ಡದಿರುವ ಇವು, ತಮ್ಮ ರೆಕ್ಕೆಗಳನ್ನು 25 ಸೆಂ.ಮೀ.ವರೆಗೂ ಬಿಡಿಸಬಲ್ಲವು. ಜಾಗತಿಕವಾಗಿ ಅಳಿವಿನಂಚಿನಲ್ಲಿರುವ ಈ ಗುಬ್ಬಚ್ಚಿಗಳನ್ನು ಕೆಂಪು ಪಟ್ಟಿಗೆ ಸೇರಿಸಲಾಗಿದೆ. ಕೆಲವು ಮಹಾನಗರಗಳಲ್ಲಿ ಇವುಗಳ ಸಂಖ್ಯೆ ಶೇ. 99ರಷ್ಟು ಕಾಣೆಯಾಗಿದೆ. ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ಪ್ರಕಾರ, ಭಾರತದ ದಕ್ಷಿಣ ಭಾಗದಲ್ಲಿ ಗುಬ್ಬಿಗಳ ಸಂಖ್ಯೆ ತೀವ್ರವಾಗಿ ಇಳಿಮುಖವಾಗಿದೆ. ಅದರಲ್ಲೂ ಕರಾವಳಿ ಭಾಗದಲ್ಲಿ ಆಘಾತಕಾರಿ ಎನಿಸುವಷ್ಟು, ಶೇ. 70-80ರಷ್ಟು ಗುಬ್ಬಿಗಳ ಸಂಖ್ಯೆ ಕಡಿಮೆಯಾಗಿದ್ದು, ಉಳಿದ ಭಾಗದಲ್ಲಿ ಶೇ. 20ಕ್ಕೂ ಹೆಚ್ಚು ಇಳಿಮುಖವಾಗಿದೆ.

ಫೋಟೋ ಕೃಪೆ :google
ನಿಸರ್ಗದ ಸಮತೋಲನ ಕಾಪಾಡುವಲ್ಲಿ ಗುಬ್ಬಿಗಳದ್ದು 10,000 ವರ್ಷಗಳ ಸಂಬಂಧ. ಜೊತೆಗೆ ಮಾನವನ ಜೊತೆಗಿನ ಸಂಬಂಧವೂ ಪ್ರಾಚೀನ ಕಾಲದ್ದು. ಆದರೆ ಕಳೆದ ಮೂರು ದಶಕಗಳಿಂದ ಇವುಗಳ ಸಂತತಿ ಅಳಿಯುತ್ತಿದೆ. ನಗರ ಪ್ರದೇಶಗಳಲ್ಲಂತೂ ಬಹುತೇಕ ಕಣ್ಮರೆ ಆಗಿವೆ .ಏಷ್ಯಾ ಮತ್ತು ಯುರೋಪ್ ಖಂಡಗಳ ಮೂಲನಿವಾಸಿಗಳಿವು. ಅಲ್ಲಿಂದ ವಿಶ್ವದ ಬಹಳಷ್ಟು ದೇಶಗಳಿಗೆ ವಲಸೆ ಹೋದಂಥವು. ಏಷ್ಯಾ ಖಂಡದ ಭಾರತ, ನೇಪಾಳ, ಶ್ರೀಲಂಕಾ, ಭೂತಾನ್, ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳಲ್ಲಿ ಇವು ಸಾಮಾನ್ಯವಾಗಿ ಕಾಣುತ್ತವೆ. ಆದರೆ ಅಂಟಾರ್ಟಿಕಾದಂಥ ಅತೀವ ಚಳಿಯ ಭಾಗಗಳಲ್ಲಿ, ಜಪಾನ್, ಚೀನಾಗಳಲ್ಲೂ ಗುಬ್ಬಚ್ಚಿಗಳಿಲ್ಲ. ಹಾಗೆ ನೋಡಿದರೆ ಅಮೆರಿಕಾದ ವಲಸಿಗರ ಪೈಕಿ ಗುಬ್ಬಚ್ಚಿಗಳನ್ನೂ ಲೆಕ್ಕಕ್ಕೆ ಹಿಡಿಯಬಹುದು. ಬ್ರಿಟನ್ನಿಂದ ಉತ್ತರ ಅಮೆರಿಕಕ್ಕೆ 1851ರ ಹೊತ್ತಿಗೆ ವಲಸೆ ಹೋದವು .
ನಮ್ಮ ಮನೆಗಳ ದೇವರು, ಅಜ್ಜ-ಅಮ್ಮನ ಕಟ್ಟುಹಾಕಿಸಲಾದ ಫೊಟೋಗಳ ಹಿಂದೆ ಸಂಸಾರ ಹೂಡುತ್ತಿದ್ದ, ಮಹಡಿ ಮನೆ, ವಾಡೆಗಳಲ್ಲಿ ನೂರಾರು ಸಂಖ್ಯೆಯಲ್ಲಿ ಹುಲ್ಲಿನ ಸಿಂಬೆಯಾಕಾರದ ಗೂಡು ಹೆಣೆಯುತ್ತಿದ್ದ ಗುಬ್ಬಚ್ಚಿ ಈಗಿಲ್ಲವಾಗಿರುವುದು ಕಳವಳ ಮೂಡಿಸಿದೆ. ಯುನೈಟೆಡ್ ಕಿಂಗಡಮ್ ನ ಬ್ರಿಸ್ಟಾಲ್ನಲ್ಲಿ ಸೇವಾನಿರತವಾಗಿರುವ ಸ್ವಯಂಸೇವಾ ಸಂಘಟನೆಯೊಂದು ಕಳೆದ 2010ರಿಂದ ಪ್ರಥಮ ಬಾರಿಗೆ ಅವಾನ್ ವೈಲ್ಡ್ ಲೈಫ್ ಟ್ರಸ್ಟ್ ಸಹಯೋಗದಲ್ಲಿ ಭಾರತ, ಕೆನ್ಯಾ ಹಾಗೂ ಹಾಂಗ್ಕಾಂಗ್ ಸೇರಿದಂತೆ ಇತರೆ ದೇಶಗಳಲ್ಲಿ ಗುಬ್ಬಚ್ಚಿಗಳ ದಾಖಲೀಕರಣಕ್ಕೆ ವಿಶೇಷ ಪ್ರಯತ್ನ ನಡೆಸಿದೆ.
ಗುಬ್ಬಚ್ಚಿಗಳು ಕಣ್ಮರೆಯಾಗಲು ಸಾಕಷ್ಟು ಕಾರಣಗಳನ್ನು ಶೋಧಿಸಲಾಗಿದ್ದರೂ, ಆ ಸಮಸ್ಯೆಗಳಿಗೆ ವ್ಯಾಪಕವಾಗಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಡೆದಿರುವ ವಯಕ್ತಿಕ ಮಟ್ಟದ ಪ್ರಯತ್ನಗಳು ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಅರೆದಂತಾಗಿದೆ. ಹಾಗಾಗಿ ಸಮುದಾಯದ ಸಹಭಾಗಿತ್ವದಲ್ಲಿ ‘ಮಜ್ಜಿಗೆ ಅರೆಯುವ ಕೆಲಸಕ್ಕೆ’ ಈ ಆಂದೋಲನ ಸ್ಫೂರ್ತಿ ನೀಡಬೇಕಿದೆ.

ಫೋಟೋ ಕೃಪೆ :google
ವ್ಯಾಪಕವಾಗಿ ಸೀಸ ಮಿಶ್ರಿತ ಪೆಟ್ರೋಲ್ ಬಳಕೆ ಅದರಿಂದಾಗಿ ಮಿಥೈಯಿಲ್ ನೈಟ್ರೇಟ್ ವಾತಾವರಣಕ್ಕೆ ಬಿಡುಗಡೆಗೊಳ್ಳುತ್ತಿರುವುದು ಗುಬ್ಬಚ್ಚಿ ಸಮೂಹಕ್ಕೆ ಮಾರಣಾಂತಿಕವಾಗಿ ಪರಿಣಮಿಸಿದೆ. ಕ್ರಿಮಿ, ಕೀಟ, ಹ್ಯಾತೆ, ಪಾತರಗಿತ್ತಿ ಮೊದಲಾದವು ಸಹ ಅವುಗಳ ಆಹಾರದ ಭಾಗವಾಗಿದ್ದು ಅವುಗಳ ದೇಹದಲ್ಲಿ ವಾತಾವರಣದ ಕಲ್ಮಶಗಳು ತುಂಬಿಕೊಂಡು, ಇವುಗಳ ಮಾರಣಹೋಮಕ್ಕೆ ಕಾರಣವಾಗುತ್ತಿವೆ. ಜತೆಗೆ ನಮ್ಮ ಹಳೆ ಕಾಲದ ಮನೆಗಳು ಅವುಗಳ ಸಂತಾನೋತ್ಪತಿಗೆ ಪೂರಕವಾದ ನಿರ್ಮಿತಿ ಹೊಂದಿದ್ದವು. ಅದರೆ ಈಗಿನ ಆಧುನಿಕ ಮನೆ ಗಳಿಂದಾಗಿ , ಜೊತೆಗೆ ಅಂಗಳದಲ್ಲಿ ಒಂದೂ ಗಿಡ ನೆಡುವಷ್ಟು ಜಾಗೆ ಉಳಿಸಿಕೊಳ್ಳದೇ ಕಾಂಕ್ರೀಟ್ ಮನೆ ಕಟ್ಟಿರುವುದು, ಕೊನೆ ಪಕ್ಷ ಹೂವಿನ ಗಿಡಗಳಿವೆ ಎಂದಾದರೆ ಹೂವಿನ ಅಂದ ಅರಳಿಸಲು ಥರಹೇವಾರಿ ಕ್ರಿಮಿನಾಶಕ ಸಿಂಪಡಿಸಿ, ಸುಂದರ ಗೋಳಿಸುವಂತೆ ಮಾತ್ರ ಮಾಡುತ್ತೆವೆ ಅದರೆ ಗಿಡ, ಬಳ್ಳಿಗಳನ್ನು ಆಶ್ರಯಿಸಿ ಬದುಕುವ ಕ್ರಿಮಿ, ಕೀಟಗಳನ್ನು ತಿನ್ನುವ, ಕಾಳುಗಳನ್ನು ಮೆಚ್ಚಿಕೊಂಡು ಬದುಕುವ ಗುಬ್ಬಿಗಳ ಬದುಕಿಗೇ, ವಂಶ ಅಭಿವೃದ್ಧಿಗೆ ಸಂಚಕಾರ ತಂದಿದ್ದೇವೆ.
ಜೊತೆಗೆ, ನವ್ಯ ತಂತ್ರಜ್ಞಾನ ಗಳನ್ನು ಇಂದು ನಾವು ಬಳಸುವ ಕಾರಣದಿಂದಾಗಿ ಅಂದರೆ ಮೊಬೈಲ್ ಟಾವರ್ಗಳಿಂದ ಸೂಸುವ ವಿದ್ಯುತ್ ಕಾಂತೀಯ ತರಂಗಗಳು, ಅಲ್ಪ ಪ್ರಮಾಣದ ವಿಕಿರಣ ಸೋರಿಕೆ ಗುಬ್ಬಚ್ಚಿ ಮೊಟ್ಟೆಗಳಲ್ಲಿ ಜೀವ ರೂಪುಗೊಳ್ಳದಂತೆ ಮಾಡುತ್ತಿವೆ ಎನ್ನಲಾಗಿದೆ.ಅಲ್ಲದೇ ಗಿಡ ಮರಗಳಲ್ಲಿ ಕೇಬಲ್ ವೈರುಗಳು, ಜಾಹೀರಾತುಗಳು,ಪ್ಲೆಕ್ಸ್ ಗಳು ಬ್ಯಾನರ್ ಗಳು ಹೆಚ್ಚಿನ ಗಾಜುಗಳ ಬಳಕೆ ಅವುಗಳ ಸ್ವಚ್ಛಂದ ಬದುಕಿಗೆ ಮಾರಕವಾಗಿವೆ. ಅವುಗಳ ಬದುಕಿಗೆ ನಮ್ಮ ಆಸರೆ ಅನಿವಾರ್ಯ. ಮನೆ ಅಂಗಳದಲ್ಲಿ ಗುಚ್ಛವಾಗಿ ಬೆಳೆಯುವ ನಾಲ್ಕಾರು ಹೂವಿನ ಗಿಡ (ಉದಾಹರಣೆಗೆ ದಾಸವಾಳ) ನೆಡಿ. ಕಾರ್ಬೋಹೈಡ್ರೇಟ್ ಹೆಚ್ಚಿರುವ ಗಿಡಗಳಿಗೆ ಇರುವೆ ಮುತ್ತುವುದು ಸಾಮಾನ್ಯ. ಹಾಗಾಗಿ, ಕರಿಬೇವು, ನಿಂಬೆಹಣ್ಣು, ಚೆರ್ರಿ ಗಿಡ (ಲಾಭ ಎರಡು!) ಅಥವಾ ಗಿಡ ಬೇಲಿ ಮೊರೆ ಹೋಗುವುದೂ ಅಡ್ಡಿ ಇಲ್ಲ. ಆ ಗಿಡಗಳಲ್ಲಿ ಮಣ್ಣಿನ ಅಥವಾ ಬಿದಿರಿನ ಪಕ್ಷಿಯ ಊಟದ ತಟ್ಟೆ -‘ಬರ್ಡ್ ಫೀಡರ್ಸ್’ ತೂಗುಬಿಟ್ಟು ಒಂದು ಹಿಡಿ ಕಾಳು ಹಾಕಿಡಿ. ಆ ಪದಾರ್ಥಗಳಿಗೆ ಇರುವೆ ಮುತ್ತದಂತೆ ಜಾಗ್ರತೆ ವಹಿಸಿ. ಗಿಡದ ಬುಡದಲ್ಲಿ ಅಥವಾ ಮನೆ ಅಂಗಳದಲ್ಲಿ ಬಾನಿ, ಹೊಂಡ ಅಥವಾ ಮನೆಯ ತಾರಸಿಯ ಮೇಲೆ ಅಗಲವಾದ ಬಾಯಿಯಿರುವ ಮಣ್ಣಿನ ಕುಡಿಕೆಗಳಲ್ಲಿ ನೀರು ತುಂಬಿಸಿ ಇಡಿ. ಬೇಸಿಗೆಯಲ್ಲಿ ಅವುಗಳಿಗೆ ಜೀವ ಬಂದಂತಾಗುತ್ತದೆ. ಮನೆಯ ಸುತ್ತಲೂ ಬಿದರಿನ ಬುಟ್ಟಿ, ಮಣ್ಣಿನ ಪಕ್ಷಿ ಮನೆಗಳನ್ನು ಅಥವಾ ತಗಡಿನ ಡಬ್ಬಿಗಳನ್ನು ಕಟಿ ತುಸು ಭತ್ತದ ಹುಲ್ಲು ಹಾಸಿಡಿ. ಹಾಗೆ ಮಾಡುವಂತೆ ಮಕ್ಕಳನ್ನು ಪ್ರೋತ್ಸಾಹಿಸಿ.

ಫೋಟೋ ಕೃಪೆ : google
ನಮ್ಮ ಮನೆಯ ಹೊದೋಟ, ಕಾಯಿಪಲ್ಲೆ ಕೈತೋಟಗಳಿಗೆ ಲಗ್ಗೆ ಹಾಕುವ ಹತ್ತಾರು ರೀತಿಯ ಕ್ರಿಮಿಕೀಟಗಳನ್ನು ತಾನು ತಿನ್ನುವುದಲ್ಲದೇ, ಗೆಳೆಯರನ್ನೂ ಸಹ ಕರೆತಂದು ನೈಸರ್ಗಿಕವಾಗಿಯೇ-ಸಾವಯವ ಮಾದರಿಯಲ್ಲಿ ನಿಯಂತ್ರಿಸುವುದನ್ನು ನೀವು ಕಣ್ಣಾರೆ ನೋಡಬಹುದು! ಮನೆಯ ಒಳಗೆ ಜೇಡ ಬಲೆ ಕಟ್ಟದಂತೆ, ಹಲ್ಲಿಗಳ ಉಪದ್ರವ ನೀಡದಂತೆ, ಜಿರಲೆ, ಇರುವೆ ಅಡುಗೆ ಮನೆ ಮುತ್ತದಂತೆ ಮಾಡುವುದು, ಹೀಗೆ ಅನೇಕ ಕಾರ್ಯಗಳನ್ನು ಮಾಡುವ ನಮ್ಮ ಮನೆ ಮನಗಳ ಜೊತೆ ಸಂಬಂಧ ಹೊಂದಿರುವ ಗುಬ್ಬಿಗಳ ವಂಶ ವನ್ನು ಉಳಿಸುವ, ಸಲುಹುವ, ಜವಾಬ್ದಾರಿ ನಮ್ಮಲ್ಲರ ಮೇಲಿದೆ.
- ಡಾ.ಗುರುಪ್ರಸಾದ ರಾವ್ ಹವಲ್ದಾರ್ – ಲೇಖಕರು ಮತ್ತು ಉಪನ್ಯಾಸಕರು.
