ಜನವರಿ ಹನ್ನೆರಡು ರಾಷ್ಟ್ರೀಯ ಯುವ ದಿನವೆಂದು ಆಚರಿಸಲಾಗುತ್ತದೆ, ಅದಕ್ಕೆ ಕಾರಣರಾಗಿದ್ದು ಸ್ವಾಮಿ ವಿವೇಕಾನಂದರು.ಮಲಗಿದ್ದ ಯುವಜನತೆಯನ್ನು ‘ಏಳಿ, ಎದ್ದೇಳಿ, ಗುರಿ ಮುಟ್ಟುವತನಕ ನಿಲ್ಲದಿರಿ’ಕರೆ ನೀಡಿದವರು ನಮ್ಮೆಲ್ಲರ ಸ್ವಾಮಿ ವಿವೇಕಾನಂದರು, ಇಂದು ಸ್ವಾಮಿ ವಿವೇಕಾನಂದ ಜಯಂತಿ, ನಾಡಿನ ಸಮಸ್ತ ಜನತೆಗೂ ಶುಭಾಶಯಗಳು ಹೇಳುತ್ತಾ ಹರ್ಷಿಯಾ ಅವರ ಒಂದು ಲೇಖನ, ಮುಂದೆ ಓದಿ..
ಪ್ರತಿ ವರ್ಷ ಜನವರಿ ಹನ್ನೆರಡನೇ ತಾರೀಖಿನಂದು ರಾಷ್ಟ್ರೀಯ ಯುವ ದಿನ ಎಂದು ದೇಶಾದ್ಯಂತ ಆಚರಣೆ ಮಾಡುತ್ತಾರೆ. ಇದಕ್ಕೆ ಮುಖ್ಯ ಕಾರಣವೇ ಅವರು ಯುವ ಜನತೆಯನ್ನು ‘ಏಳಿ, ಎದ್ದೇಳಿ, ಗುರಿ ಮುಟ್ಟುವತನಕ ನಿಲ್ಲದಿರಿ’ ಎಂದು ಕರೆಕೊಟ್ಟದ್ದು. ಅದೊಂದು ನುಡಿ ಸಿಂಹ ಘರ್ಜಿಸಿದಂತಿತ್ತು.! ಆ ಘರ್ಜನೆ ವರ್ಷಕ್ಕೆ ಒಂದು ದಿನ ಮಾತ್ರ ಸೀಮಿತವಾಯಿತು.
ದೇಶದ ಪ್ರತಿಕೂಲ ಪರಿಸ್ಥಿತಿಗೆ ಪ್ರಬಲ ಕಾರಣವೇನೆಂದರೆ, ಹಳಿ ತಪ್ಪುತ್ತಿರುವ ಯುವ ಶಕ್ತಿ:
ನಮ್ಮ ಯುವ ಜನತೆ ಮಾದಕ ವ್ಯಸನ, ಮದ್ಯಪಾನ, ಧೂಮಪಾನ ಮುಂತಾದ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ನಿಜಕ್ಕೂ ಶೋಚನೀಯ ಸಂಗತಿ.
ಫೋಟೋ ಕೃಪೆ : google
ಪ್ರಸ್ತುತ ಆಗಬೇಕಾದದ್ದು ಇಷ್ಟು, ಯುವ ಸಮುದಾಯ ನಮ್ಮ ದೇಶದ ಅಮೂಲ್ಯ ಸಂಪತ್ತು. ರಾಷ್ಟ್ರ ನಿರ್ಮಾಣದಲ್ಲಿ ಅವರ ಪಾತ್ರ ಮಹತ್ವಪೂರ್ಣವಾದದ್ದು. ಸದೃಢವಾದ ರಾಷ್ಟ್ರ ಎನ್ನುವುದಕ್ಕಿಂತಲೂ ಸದೃಢವಾದ ಮಾನವೀಯ ರಾಷ್ಟ್ರ ನಿರ್ಮಾಣವಾಗಬೇಕಿದೆ. ಹಾಗಾಗಿ ಯುವ ಸಮುದಾಯ ಜಾತಿ, ಮತ, ಪಂಥ ಭೇದವನ್ನು ಮರೆತು ಒಗ್ಗಟ್ಟಿನಿಂದ ದೇಶದ ಅಭಿವೃದ್ದಿಗಾಗಿ ಶ್ರಮಿಸಬೇಕಿದೆ. ಇದು ಸ್ವಾಮಿ ವಿವೇಕಾನಂದರ ಪ್ರಮುಖವಾದ ಆಶಯವಾಗಿದೆ. ‘ದೇಶ ನನ್ನದೆನ್ನದೆದೆ ಸುಡುಗಾಡಿಗೆ ಸಮ.’ ಇದು ಕೇವಲ ತೋರಿಕೆಯಾಗಬಾರದು.
ಜಾತಿ, ಧರ್ಮಗಳ ಸಮಾನತೆ ಸ್ಥಾಪಿಸುವಲ್ಲಿ ಒಂದಷ್ಟು ಸುಧಾರಣೆಯಾಗಿದೆ. ಆದರೂ ಮತ್ತಷ್ಟು ಸುಧಾರಣೆಯತ್ತ ಮುಖ ಮಾಡಬೇಕಿದೆ. ಯುವ ಜನತೆ ಈ ನಿಟ್ಟಿನಲ್ಲಿ ಜಾಗೃತರಾಗಿ ತಮ್ಮ ತಮ್ಮ ಕರ್ತವ್ಯಗಳನ್ನು ಶ್ರದ್ಧೆ ಹಾಗೂ ಪ್ರಾಮಾಣಿಕತೆಯಿಂದ ನಿರ್ವಹಿಸಬೇಕಿದೆ. ಭಿಕ್ಷೆ ಬೇಡುವುದು ಹಾಗೂ ಕಳ್ಳತನ ಮಾಡುವುದು, ಕೊಲೆ ಸುಲಿಗೆ ದರೋಡೆಯಂತಹ ಕೆಲಸಗಳನ್ನು ಹೊರತುಪಡಿಸಿ ಉಳಿದೆಲ್ಲ ಕೆಲಸಗಳೂ ಪವಿತ್ರವಾದ ಕೆಲಸಗಳು. ಯಾವ ಕೆಲಸವೂ ಮೇಲಲ್ಲ ಯಾವ ಕೆಲಸವೂ ಕೀಳಲ್ಲ. ಪ್ರತಿಯೊಬ್ಬರ ವೃತ್ತಿಗೂ ಅದರದ್ದೇ ಆದ ಮಹತ್ವವಿದೆ. ಹಾಗಾಗಿ ಆ ಕೆಲಸ ಹೆಚ್ಚು ಈ ಕೆಲಸ ಕಡಿಮೆ ಎಂಬ ತಾರತಮ್ಯವನ್ನು ತೊರೆದು ಎಲ್ಲ ಪ್ರಕಾರದ ವೃತ್ತಿಗಳನ್ನು ಗೌರವಿಸಿ ಆಯಾ ವೃತ್ತಿಗಳಿಗೆ ಸಂಪೂರ್ಣ ನ್ಯಾಯ ಒದಗಿಸಿದರೆ ಖಂಡಿತವಾಗಿಯೂ ದೇಶವು ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯ. ಅದಕ್ಕಾಗಿ ಎಲ್ಲ ರೀತಿಯ ಭೇದ ಭಾವವನ್ನು ತೊರೆದು ಸಾಮಾಜಿಕ ಹೊಣೆಗಾರಿಕೆಯನ್ನರಿತು ಕರ್ತವ್ಯನಿರತರಾಗಬೇಕಿದೆ.
ಸರ್ವರಿಗೂ ರಾಷ್ಟ್ರೀಯ ಯುವ ದಿನದ ಶುಭಾಶಯಗಳು.
- ಹರ್ಷಿಯಾ ಕನ್ನಡತಿ