ಗೋರಕ್ಷನಾಥ, ಚೌರಂಗಿನಾಥರ ಶಿಲೆಗಳು ಕರ್ನಾಟಕದ ಕದರಿಯಲ್ಲಿ ಇವೆ ಲೇಖಕ ರಘುನಾಥ್ ಕೃಷ್ಣಮಾಚಾರ್ ಅವರು ಬರೆದಿರುವ ಈ ಲೇಖನವನ್ನು ತಪ್ಪದೆ ಓದಿ…
೧ ಉತ್ತರ ಕಾಶಿಯಿಂದ ಬದರಿಗೆ ಹೋಗುವ ದಾರಿಯಲ್ಲಿ ಒಂದು ಉಖಿಮಠ: ಅಲ್ಲಿನ ಪೂಜಾರಿ ಕನ್ನಡದವರು ಹೆಸರು ಶಿವಶಂಕರ್. ಬೆಳಗಾವಿಯವರಂತೆ! ನನ್ನ ಸಂಗಾತಿಯನ್ನು ಕನ್ನಡದಲ್ಲೆ ಮಾತನಾಡಿಸಿದರು. ಅಲ್ಲಿ ಒಂದು ಕನ್ನಡ ಫಲಕ ನೋಡಿ ರೋಮಾಂಚಿತನಾದೆ. ಪಂಚಮ ಜಗದ್ಗುರು ಮಠಗಳಲ್ಲಿ ಒಂದು. ನಮ್ಮ ಮೇಷ್ಟ್ರು ಡಾ.ಎಂ.ಚಿದಾನಂದಮೂರ್ತಿಗಳು ಇಲ್ಲಿಗೆ ಬಂದಿದ್ದರೆ……
೨. ಸಿದ್ದರಲ್ಲಿ ಒಬ್ಬ ಗೋರಕ್ಷನಾಥ. ಅವನು ವಜ್ರಕಾಯನಾಗಿ ಅದರಿಂದ ಕೊಬ್ಬಿದಾಗ, ನಮ್ಮ ಅಲ್ಲಮ ಅವನಿಗೆ ಮುಖಾಮುಖಿಯಾಗಿ , ಅವನ ಸೊಕ್ಕನ್ನು ಮುರಿದ ಸ್ವಾರಸ್ಯಕರವಾದ ಪ್ರಸಂಗವನ್ನು ಪ್ರಭುಲಿಂಗ ಲೀಲೆಯಲ್ಲಿ ಚಾಮರಸ ವರ್ಣಿಸುತ್ತಾನೆ. ಅವನ ಶಿಷ್ಯ ಚೌರಂಗಿನಾಥ ಸಿದ್ದನ ಚಿಕ್ಕ ದೇಗುಲ ಬದರಿಯ ದಾರಿಯಲ್ಲಿದೆ. ಅದರಲ್ಲಿ ಅವನು ಗೋರಕ್ಷನಾಥನ ಶಿಷ್ಯ ಎಂಬ ಉಲ್ಲೇಖ ಇದೆ. ಗೋರಕ್ಷನಾಥ, ಚೌರಂಗಿನಾಥರ ಶಿಲೆಗಳು ಕರ್ನಾಟಕದ ಕದರಿಯಲ್ಲಿ ಇವೆ. ಇದರಿಂದಾಗಿ ಇವರು ಕರ್ನಾಟಕದ ನಾಥಪಂಥಕ್ಕೆ ಸೇರಿದವರೆ ಇಲ್ಲ ಉತ್ತರಾಪಥದಿಂದ ಕರ್ನಾಟಕಕ್ಕೆ ವಚನ ಚಳವಳಿಯ ಸಂದರ್ಭದಲ್ಲಿ ಬಂದು ನೆಲಸಿದವರೆ ಎಂಬ ಪ್ರಶ್ನೆ ಮೂಡುತ್ತದೆ.
ಬಸವಣ್ಣ ಕೂಡ ಮೂಲತಃ ನಾಥ ಪಂಥದವನು ಎಂಬ ಉಲ್ಲೇಖ ಇದೆ. ಡಿ.ಆರ್.ಎನ್ ತಮ್ಮ ಅಲ್ಲಮಪ್ರಭು ಮತ್ತು ಶೈವ ಪ್ರತಿಭೆ ಕೃತಿಯಲ್ಲಿ ಅವನ ಉತ್ತರಾಪಥದ ವಿಜಯವನ್ನು ಕುರಿತು ಪ್ರಸ್ತಾಪ ಮಾಡುತ್ತಾರೆ. ಇಲ್ಲಿನ ಹಲವಾರು ಸಿದ್ದರ ಜತೆಯಲ್ಲಿ ಅವನ ಮುಖಾಮುಖಿಯಾಗಿತ್ತು ಎಂಬುದು ಇದರಿಂದ ಸಿದ್ದವಾಗುತ್ತದೆ. ಇದರ ಜತೆಗೆ ಮೇಲಿನ ಕರ್ನಾಟಕದ ವೀರಶೈವ ಜಗದ್ಗುರು ಮಠಗಳು ಇಲ್ಲಿಯವರೆಗೆ ಹರಡಿತ್ತು ಎಂಬುದನ್ನು ಇದು ಸಿದ್ದಪಡಿಸುತ್ತದೆ.
ಕನ್ನಡದಲ್ಲಿ ಇಲ್ಲಿನ ಫಲಕವಿರುವುದು ಇದಕ್ಕೆ ಸಾಕ್ಷಿ. ನಮ್ಮ ವೀರಶೈವ ವಿದ್ವಾಂಸರು ಇತ್ತಕಡೆ ಗಮನ ಹರಿಸಿ ಬೆಳಕು ಚೆಲ್ಲಬೇಕಾಗಿ ವಿನಂತಿ.
- ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು.