ಅಡವಿಯಲೊಬ್ಬ ಕಡು ನೀರಡಿಸಿ
ಎಡೆಯಲ್ಲಿ ನೀರಕಂಡಂತಾಯಿತ್ತಯ್ಯಾ
ಕುರುಡ ಕಣ್ಣ ಹಡೆದಂತೆ
ಬಡವ ನಿಧಾನವ ಹಡೆದಂತಾಯಿತ್ತಯ್ಯಾ
ನಮ್ಮ ಕೂಡಲಸಂಗನ ಶರಣರ ಬರವೆನ್ನ ಪ್ರಾಣ ಕಂಡಯ್ಯಾ
ಬಸವಣ್ಣನವರ ಈ ವಚನವು ಶರಣರು ತನ್ನಲ್ಲಿಗೆ ಬಂದಾಗ ಆಗುವ ಆನಂದೋನ್ಮಾದವನ್ನು ವರ್ಣಿಸುತ್ತದೆ. ಅಡವಿಯಲ್ಲಿ ದಾರಿ ತಪ್ಪಿದ ಮನುಷ್ಯ ಬಾಯಾರಿ ಬಳಲುತ್ತಿರುವಾಗ ನೀರು ಕಂಡರೆ ಎಂಥ ಮನಸ್ಥಿತಿ ಉಂಟಾಗಬಹುದೋ, ಹುಟ್ಟು ಕುರುಡನು ಕಣ್ಣಿನ ದೃಷ್ಟಿಯನ್ನು ಪಡೆದರೆ ಎಂಥ ಮನಸ್ಥಿತಿ ಉಂಟಾಗಬಹುದೋ, ಕಡು ಬಡವನು ಸಂಪತ್ತನ್ನು ಪಡೆದರೆ ಎಂಥ ಮನಸ್ಥಿತಿ ಉಂಟಾಗಬಹುದೋ ಅಂತ ಸ್ಥಿತಿ ಕೂಡಲ ಸಂಗನ ಶರಣರ ಬರುವಿಕೆಯಿಂದ ಉಂಟಾಗಿದೆ. ಶರಣರ ಆಗಮನವೇ ನನ್ನ ಪ್ರಾಣ.
****
ತನ್ನ ತಾನರಿತಾಗ
ತನ್ನುವ ಮರೆದು ದೇವರ ಕಂಡೆನೆಂಬ ಕಾರಣ
ಹರಿ ಸುರ ಬ್ರಹ್ಮಾದಿಗಳೆಲ್ಲರು ತಲೆ ಕೆಳಗಾಗಿ ಹೋದರು!
ಆ ದೇವರ ಮರೆದು ತನ್ನವನರಿದುದುಂಟಾದರೆ
ತಾನೇ ದಿಟವೆಂಬನಂಬಿಗ ಚೌಡಯ್ಯ
ವಚನಗಳು ಶಾಸ್ತ್ರ ಸಂಪ್ರದಾಯಗಳಿಗಿಂತ ಅನುಭವ ಪ್ರಾಮಾಣ್ಯಕ್ಕೆ ಬೆಲೆ ನಡುತ್ತವೆ. ಅಂಬಿಗರ ಚೌಡಯ್ಯನ ಈ ವಚನ ತನ್ನನ್ನು ತಾನು ಅರಿಯುವುದೇ ನಿಜವಾದ ಸಾಕ್ಷಾತ್ಕಾರ ದೇವರೆಂಬ ಪೌರಾಣಿಕ ಕಲ್ಪನೆ ದಿಟವಲ್ಲ ಎನ್ನುತ್ತದೆ.
ನಾನು ಎಂಬ ಅಹಂಕಾರವಿಲ್ಲದೆ ದೇವರನ್ನು ಕಂಡೆ. ಆದ್ದರಿಂದಲೇ ಪುರಾಣಗಳಲ್ಲಿ ಹೇಳಲಾಗುವ ಶಿವ, ವಿಷ್ಣು, ಬ್ರಹ್ಮ ಮೊದಲಾದ ದೇವಾನುದೇವತೆಗಳು ಮರೆತು ತಾನು ಏನು ಅನ್ನುವುದನ್ನು ಅರಿತಾಗ ದಿಟ, ಅಥವಾ ಸತ್ಯದ ಸಾಕ್ಷಾತ್ಕಾರವಾಗುತ್ತದೆ.
(ವಚನ ಸಂಗ್ರಹ : ‘ವಚನ ಮಾರ್ಗ’ ಗ್ರಂಥ )
- ಪ್ರೊ. ಓ .ಎಲ್. ನಾಗಭೂಷಣಸ್ವಾಮಿ