ವೀರೇಂದ್ರ ನಾಯಕ್ ಚಿತ್ರಬೈಲು ಅವರ ಅಮೇರಿಕಾದಲ್ಲಿನ ವೆಂಕಟೇಶ್ವರ ದೇವಸ್ಥಾನ ಮತ್ತು ಅಮೆರಿಕದಲ್ಲಿನ ತಮ್ಮ ಮೊದಲು ಭೇಟಿ ಹೇಗಿತ್ತು ಎನ್ನುವ ಅನುಭವವನ್ನು ಸಣ್ಣ ಲೇಖನದ ಮೂಲಕ ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ಮುಂದೆ ಓದಿ….
ನಿರೀಕ್ಷೆಗಳ ಚೀಲವನ್ನು ಬೆನ್ನಿಗೇರಿಸಿಕೊಂಡು ಅಮೇರಿಕೆಗೆ ಬಂದು ಇಂದಿಗೆ ಹತ್ತೊಂಬತ್ತು ದಿನಗಳಾದವು. ಪ್ರಾರಂಭದ ನಾಲ್ಕೈದು ದಿನಗಳ ಕಾಲ ಜಾತ್ರೆಯಲ್ಲಿ ಕಳೆದು ಹೋದ ಮಗುವಿನ ಭಾವ. ಅನಿವಾಸಿ ಕನ್ನಡಿಗ ಸಹೋದ್ಯೋಗಿಗಳೇ ಮುಂದೆ ನಿಂತು ತಮ್ಮ ಮನೆಯ ಸದಸ್ಯನಂತೆ ನನ್ನನ್ನು ನೋಡಿಕೊಂಡರೂ, ಎಲ್ಲವೂ ಹೊಸತಾದ್ದರಿಂದ ಆಗತಾನೇ ಕಣ್ಬಿಟ್ಟ ಮಗುವಿನಂತೆ ಸುತ್ತಲ ಜಗತ್ತನ್ನು ಆಶ್ಚರ್ಯ, ಕುತೂಹಲಗಳಿಂದ ನೋಡುತ್ತಲೇ ಎರಡು ವಾರಗಳು ಕಳೆದವು.
ನಾನಿರುವ ಪರಿಸರದಲ್ಲಿ ಭಾರತೀಯರೇ ಹೆಚ್ಚು. ಕೋಟ್ ಹಾಕಿಕೊಂಡು, ಚಳಿಗೆ ನಡುಗುತ್ತಾ ವಾಕಿಂಗ್ ಹೊರಟರೆ, ದಾರಿಯಲ್ಲಿ ಸಿಗುವ ಮುಖಗಳಲ್ಲಿ ಅರ್ಧಕ್ಕರ್ಧ ಭಾರತೀಯರೇ ಆಗಿರುತ್ತಾರೆ. ಕೆಲವರು ಮುಗಳ್ನಕ್ಕು ಸಾಗಿದರೆ, ಮತ್ತೆ ಹಲವರಿಗೆ ಬಿಗುಮಾನ…
ಬೆಳಿಗ್ಗೆ ಕೇರಿ ನಗರದಲ್ಲಿರುವ ವೆಂಕಟೇಶ್ವರ ದೇವಸ್ಥಾನಕ್ಕೆ ಹೋಗಿದ್ದೆ. ಆಂಧ್ರಪ್ರದೇಶದ ಯಾವುದೋ ದೇವಸ್ಥಾನಕ್ಕೆ ಹೋಗಿದ್ದೇನೇನೋ ಎನ್ನುವಷ್ಟು ತೆಲುಗು ಭಾಷಿಕ ಭಕ್ತರು ದೇವಸ್ಥಾನದಲ್ಲಿದ್ದರು. ಅದರ ಪಕ್ಕದಲ್ಲೇ ಕೃಷ್ಣಮಠ; ಉಡುಪಿಯ ಪುತ್ತಿಗೆ ಮಠದವರು ನಡೆಯಿಸುತ್ತಿರುವ ದೇವಸ್ಥಾನ. ಅರ್ಚಕರೂ ನಮ್ಮೂರಿನವರೇ! ಅಲ್ಲಿನ ರುಚಿಕಟ್ಟಾದ ಪ್ರಸಾದ ಸವಿದ ಕಾರಣ ಮಧ್ಯಾಹ್ನದ ಅಡುಗೆ ಮಾಡುವ ಕೆಲಸವೂ ಉಳಿಯಿತೆನ್ನಿ!
- ವೀರೇಂದ್ರ ನಾಯಕ್ ಚಿತ್ರಬೈಲು – ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು.
