ನಿವೃತ್ತ ಇಂಗ್ಲೀಷ್ ಉಪನ್ಯಾಸಕರು ಮತ್ತು ಕನ್ನಡದ ಹಿರಿಯ ಲೇಖಕರಾದ ಡಾ. ಬಿ. ಜನಾರ್ಧನ ಭಟ್ ಅವರು ವಿಮರ್ಶಾ ಗ್ರಂಥಗಳಿಗೆ ಪ್ರಸಿದ್ದರು. ಅವರ ‘ವಿನೂತನ ಕಥನ ಕಾರಣ’ ಕೃತಿಯ ಕುರಿತು ರಾಜೇಶ್ ಕುಮಾರ್ ಕಲ್ಯಾ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ : ವಿನೂತನ ಕಥನ ಕಾರಣ
ಲೇಖಕರು : ಡಾ.ಬಿ. ಜನಾರ್ಧನ ಭಟ್
ವಿಭಾಗ : ವಿಮರ್ಶಾ ಗ್ರಂಥ
ಪ್ರಕಾಶಕರು : ಶ್ರೀರಾಮ ಪ್ರಕಾಶನ ಮಂಡ್ಯ
ಪ್ರಕಾಶಕರ ಸಂಪರ್ಕಕ್ಕೆ : 9448930173
ಅವರ ವಿಮರ್ಶಾ ಲೇಖನ , ಕಥೆ , ಕಾದಂಬರಿಗಳು ಕನ್ನಡದ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕಲೆ ಸಾಹಿತ್ಯ ಇತಿಹಾಸದ ವಿಷಯವಾಗಿ ನಾನೇ ಅವರ ಬಳಿ ಸಾಕಷ್ಟು ವಿಷಯಗಳ ಬಗ್ಗೆ ಗಂಟೆಗಟ್ಟಲೆ ಚರ್ಚಿಸಿದ್ದೇನೆ… ಸುಮಾರು ವಿಷಯದಲ್ಲಿ ಅವರು ನನಗೆ ಗುರುಗಳು. ನಮ್ಮ ಕರಾವಳಿ ಭಾಗದ ಸಾಂಸ್ಕೃತಿಕ ಹಿನ್ನೆಲೆಯಿಂದ ಹಿಡಿದು , ರಾಜ್ಯ ದೇಶ-ವಿದೇಶಗಳವರೆಗೆ, ಅಲ್ಲಿನ ಐತಿಹಾಸಿಕ ವಿಷಯಗಳ ಬಗ್ಗೆ ನಿರರ್ಗಳವಾಗಿ ಮಾತನಾಡುವ ಅವರ ಅಧ್ಯಯನದ ಬಗ್ಗೆ ನನಗೇ ಕೆಲವೊಮ್ಮೆ ಅಚ್ಚರಿಯಾಗುತ್ತದೆ… ವಿನೂಥನ ಕಥನ ಕಾರಣವೂ ಅಷ್ಟೇ ಜನಸಾಮಾನ್ಯರು ಇಂತಹ ಸಾಹಿತ್ಯ ರಚನೆಗೆ ಕೈ ಹಾಕಲು ಸಾಧ್ಯವೇ ಇಲ್ಲ ಅನ್ನುವಷ್ಟು ತೂಕದ ಕೃತಿ.

ವಿಮರ್ಶೆಗಳನ್ನು ಬರೆಯುವುದು ಕವನ, ಕಥೆ-ಕಾದಂಬರಿಗಳನ್ನು ಬರೆದಷ್ಟು ಸುಲಭವಲ್ಲ ಇದೊಂತರಾ ಕತ್ತಿಯ ಅಲುಗಿನ ಮೇಲಿನ ನಡಿಗೆಯಂತೆ ಸೂಕ್ಷ್ಮವಾದ ಕೆಲಸ ಎಂಬುದು ಈ ವಿಮರ್ಶಾ ಗ್ರಂಥವನ್ನು ಓದಿದರೆ ತಿಳಿಯುತ್ತದೆ. ಇನ್ನು ಈ ಪುಸ್ತಕಕ್ಕೆ ಕೊನೆಯಿಲ್ಲ. ಮತ್ತು ನಮ್ಮಂತವರಿಗೆ ಒಮ್ಮೆಗೇ ಓದಲು ಸಾಧ್ಯವೂ ಇಲ್ಲ.. ನಿಧಾನವಾಗಿ ಅರ್ಥೈಸಿಕೊಳ್ಳುತ್ತಾ ಪುಸ್ತಕದೊಳಗೇ ಬದುಕುತ್ತಾ ಓದಿದರೆ ನಮಗೆ ಗೊತ್ತಿಲ್ಲದ ಎಷ್ಟೊಂದು ವಿಚಾರಗಳಿವೆಯಲ್ಲಾ ಎಂದು ಅಚ್ಚರಿಯಾಗುತ್ತದೆ .. ಇದರಲ್ಲಿ ಒಟ್ಟು ಹದಿನೆಂಟು ಅಧ್ಯಾಯಗಳಿದ್ದು , ಮೊದಲ ಅಧ್ಯಾಯವು ನವಚಾರಿತ್ರಿಕತೆ , ನವ ಸಾಹಿತ್ಯ ಚಳುವಳಿಯಿಂದ ಶುರುವಾಗುತ್ತದೆ… ಅಂದರೆ ಇವತ್ತಿನ ಸಾಹಿತ್ಯ ಚಳುವಳಿಯ ಮೇಲಾಗಿರುವ ಪ್ರಭಾವಗಳು… ಪ್ರಾಚೀನ ಕಾಲದ ಜೀವನ ಕ್ರಮಗಳು.. ಒಂದು ಧರ್ಮ ಮತ್ತೊಂದರ ಪ್ರಭಾವಕ್ಕೊಳಗಾಗುವುದು… ಕರಾವಳಿಯಲ್ಲಿ ನಡೆದ ವಿವಿಧ ಧರ್ಮಗಳ ಮತಾಂತರಗಳು… ವಚನಸಾಹಿತ್ಯ… ಕರಾವಳಿಯಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಗಳು(ಸ್ವಾತಂತ್ರ್ಯ ಹೋರಾಟವೆಂದರೆ ಕೇವಲ ಬ್ರಿಟೀಷರ ವಿರುದ್ಧವಲ್ಲ) , ಅರಬ್ಬರ ವ್ಯಾಪಾರಕ್ಕೆ ಕಲ್ಲು ಹಾಕುವಂತಹ ಪೋರ್ಚುಗೀಸರ ಆಗಮನ… ವಾಸ್ಕೋಡಗಾಮನ ಆಗಮನದ ಕಥೆ. ಗ್ರೀಕ್ ಸಾಹಿತ್ಯ ವಿಮರ್ಶೆ.. ಕೊನೇಯಲ್ಲಿ ಬಹುಚರ್ಚೆಗೊಳಪಟ್ಟ ದೇವರಾದ ತುಳುನಾಡಿನ ಬೆರ್ಮರ ಬಗ್ಗೆ “ಬೆರ್ಮರು ಏನಾದರು” ಅಂತ
ಅಧ್ಯಾಯವಿದೆ.

ಪೂರ್ವಾಗ್ರಹವಿಲ್ಲದ ಇತಿಹಾಸ ವಿಮರ್ಶೆ, ಧಾರ್ಮಿಕ ವಿಮರ್ಶೆಯುಳ್ಳ ಸುಮಾರು 510 ಪುಟದ ಈ ಪುಸ್ತಕ ಒಂದು ಸಂಗ್ರಹ ಯೋಗ್ಯ ಹೊತ್ತಗೆ ಎಂಬುದರಲ್ಲಿ ಎರಡು ಮಾಡಿಲ್ಲ… ಪೂರ್ತಿಯಾಗಿ ಓದಿದ ನಂತರ , ಇಲ್ಲಿ ಉಲ್ಲೇಖಿಸಿರುವ ನೂರಾರು ಗ್ರಂಥಗಳನ್ನು ಕಂಡಾಗ ಈ ಪುಸ್ತಕ್ಕಾಗಿ ಅವರು ಪಟ್ಟ ಶ್ರಮದ ಅರಿವಾಗುತ್ತದೆ… ಇಂತಹ ಅಮೂಲ್ಯ ಕೃತಿಗಾಗಿ ಸರ್ಗೆ ಅಭಿನಂದನೆಗಳು…
- ರಾಜೇಶ್ ಕುಮಾರ್ ಕಲ್ಯಾ
