ಕಲಿಕೆಯ ಹಸಿರುವವನಿಗೆ ಅವಕಾಶ ಕೊಟ್ಟಾಗ ಸಿನಿಮಾ ಯಶಸ್ಸಾಗುವುದು. ಅದರ ಜೊತೆಗೆ ಒಬ್ಬ ಕಲಾವಿದನು ಬೆಳೆಯುವನು.ಮುಂದೆ ಓದಿ…
ಬಣ್ಣದಲೋಕದಲ್ಲೊಂದು ಸುಂದರ ಬದುಕನ್ನ ಕಟ್ಟಿಕೊಳ್ಳಬೇಕೆಂದು ಹೊರಟ ಆ ಹುಡುಗ ಮೊದಲು ಕಲಿತ್ತದ್ದು ನಟನೆಯನ್ನಲ್ಲ, ಸಾಹಸ. ಮಾಸ್ಟರ್ ರವಿ ಜಮಖಂಡಿ ಅವರ ಬಳಿ ಫೈಟ್, ಜಿಗಿದಾಟ-ಗುದ್ದಾಟಗಳು ಸೇರಿದಂತೆ ಇತರೆ ಸಾಹಸಗಳನ್ನೂ ಕಲಿತು, ತನ್ನ ದೇಹವನ್ನು ಹುರಿಗೊಳಿಸಿದ. ಆನಂತರ ಭಾರ್ಗವ ಹಾಲಂಬಿ ಅವರ ಮಾರ್ಗದರ್ಶನದಂತೆ ರಂಗಭೂಮಿ ಪ್ರವೇಶ ಪಡೆದು, ಅಲ್ಲಿ ನಟನೆಯನ್ನು ಕಲಿತು, ಒಬ್ಬ ಪರಿಪೂರ್ಣ ಕಲಾವಿದನಾಗಿ ನಿಂತ ಮೇಲೆ ಸಿನಿ ಪಯಣ ಶುರುಮಾಡಿದರು. ಇದು ಪ್ರತಿಭಾವಂತ ನಟ ಶೋಭನ್ ಅವರ ಕತೆ.
(ಶೋಭನ್ ಅವರ ಗುರು ಮಾಸ್ಟರ್ ರವಿ ಜಮಖಂಡಿ ಯವರ ಜೊತೆ )
ಸುರದ್ರೂಪಿ ನಟ. ಸಿನಿಮಾದಲ್ಲಿ ದೊಡ್ಡ ಪಾತ್ರ ಅಥವಾ ಸಣ್ಣ ಪಾತ್ರವೇ ಬರಲಿ, ಪಾತ್ರಕ್ಕೆ ಜೀವ ತುಂಬುತ್ತಾರೆ. ಯಾವುದೇ ಪಾತ್ರವೇ ಬರಲಿ ಆ ಪಾತ್ರ ನಾನಾಗಿರುವೆ…ಅನ್ನುವ ಶೋಭನ್, ಜಯನಗರದ ಹುಡುಗ. ಅಪ್ಪಟ ಕನ್ನಡದ ಹುಡುಗ.
ಒಬ್ಬ ಕಲಾವಿದ ಹುಟ್ಟುವುದೇ ಚಿತ್ರಮಂದಿರ ಅಥವಾ ರಂಗಮಂದಿರಗಳಲ್ಲಿ. ಸಿನಿಮಾ ಅಥವಾ ನಾಟಕ ನೋಡುತ್ತಾ…ನೋಡುತ್ತಾ… ಅವನಿಗೆಯೇ ತಿಳಿಯದಂತೆ ಅದರಲ್ಲಿನ ಒಂದು ಪಾತ್ರವಾಗಿರುತ್ತಾನೆ. ಅವನ ಕಲ್ಪನೆಗೆ ರೆಕ್ಕೆ-ಪುಕ್ಕ-ಬಣ್ಣಗಳನ್ನೆಲ್ಲ ಬಳೆದು ಸಿನಿಮಾ ಮಂದಿರದಿಂದ ಹೊರಕ್ಕೆ ಬರುವಷ್ಟರಲ್ಲಿ ಅವನಲ್ಲಿದ್ದ ಒಬ್ಬ ಕಲಾವಿದ ಜಾಗೃತನಾಗಿರುತ್ತಾನೆ. ಶೋಭನ್ ಕನಸ್ಸು ಗರಿ ಬಿಚ್ಚಿದ್ದು ಹೀಗೆಯೇ. ಶಿವಣ್ಣ ಅಭಿನಯದ ಓಂ ಸಿನಿಮಾ ಸಾಕಷ್ಟು ಪ್ರಭಾವ ಬೀರಿದ್ದಷ್ಟೇ ಅಲ್ಲ, ಅಲ್ಲಿಂದಲೇ ನಾನೊಬ್ಬ ನಟನಾಗಬೇಕು ಎನ್ನುವ ಕಿಚ್ಚು ಹತ್ತಿದ್ದು ಸಿನಿಮಾ ಮಂದಿರದಿಂದಲೇ.
ಶೋಭನ್ ಯಾವ ನಟನ ಮಗನೂ ಅಲ್ಲ, ಅವರ ಯಾವ ಸಂಬಂಧಿಗಳು ನಟನೆಯ ನಂಟು ಬೆಸೆದವರಲ್ಲ. ಸಿನಿಮಾ ಹಿನ್ನೆಲೆಯಿಲ್ಲದೆ ಬಂದ ಹುಡುಗನಿಗೆ ಚಿತ್ರರಂಗದಲ್ಲಿ ನೆಲೆ ಕಾಣುವುದು ಕಷ್ಟವೇ ಆಗಿತ್ತು. ಆದರೆ ಇಟ್ಟ ಹೆಜ್ಜೆ ಹಿಂದಿಡದೆ, ಸಿನಿಮಾಗಳಿಗಾಗಿ ಕಲಿಕೆ-ಹುಡುಕಾಟ-ಅಲೆದಾಟ ಶುರುವಾಯಿತು.
ಅವರ ಶ್ರಮಕ್ಕೆ ಫಲ ಸಿಕ್ಕಿತೆಂಬಂತೆ ಎರಡು ಸಿನಿಮಾಗಳಲ್ಲಿ ನಾಯಕನ ಪಾತ್ರಗಳು ಸಿಕ್ಕವು. ಇನ್ನೇನು ಅವರ ಅದೃಷ್ಟದ ಬಾಗಿಲು ತೆರೆಯಿತು, ಅಂದು ಕೊಳ್ಳುವಷ್ಟರಲ್ಲಿ ಸಿನಿಮಾ ಪೂರ್ತಿಯಾಗದೆ ಆರ್ಥಿಕ ಸಮಸ್ಯೆಯಿಂದ ಮಲಗಿದ್ದು ಎದ್ದೇಳಲೇ ಇಲ್ಲ. ಸಿನಿಮಾದಲ್ಲಿ ಕಂಡ ಕನಸ್ಸುಗಳೆಲ್ಲ ಹಗಲಗನಸ್ಸಾಗಿ ಕಾಣತೊಡಗಿತು. ಇತ್ತ ಮನೆಯಲ್ಲಿ ತಂದೆಯವರ ಆರೋಗ್ಯದಲ್ಲಿ ಸಮಸ್ಯೆ ಎದುರಾಯಿತು. ಅವರ ಪಾಲಿಗೆ ಸಿನಿಮಾ ನಿಲುಕದ ನಕ್ಷತ್ರದಂತೆ ಭಾಸವಾದಾಗ ಸಿನಿಮಾದಿಂದ ಯು ಟರ್ನ್ ತಗೆದುಕೊಳ್ಳಲು ನಿರ್ಧರಿಸಿದರು.
ನಾನೊಂದು ಬಗೆದರೆ, ದೇವನೊಂದು ಬಗೆಯುವನು ಅನ್ನುವ ಹಾಗೆ ಅವರು ಅಂದುಕೊಂಡಂತೆ ಸಿನಿಮಾ ಬಿಟ್ಟು ಹೊರಟಾಗ ಅವರನ್ನು ತಡೆದು ನಿಲ್ಲಿಸಿದ್ದು, ಶಿವಣ್ಣ ಅವರ ಅಭಿನಯದ ಭಜರಂಗಿ ಸಿನಿಮಾ. ಸಿನಿಮಾದಲ್ಲಿ ಪಾತ್ರವೇನು ದೊಡ್ಡದಿರಲಿಲ್ಲ. ಆದರೆ ಒಬ್ಬ ಕಲಾವಿದನಿಗೆ ಪಾತ್ರ ದೊಡ್ಡದಿರಲಿ,ಸಣ್ಣದಿರಲಿ ಎಲ್ಲವೂ ಸಮ. ಸಿನಿಮಾ ಮಾಡಬೇಕು ಎನ್ನುವ ಆಸೆ ಹುಟ್ಟಿಸಿದ್ದೇ ಶಿವಣ್ಣ, ಇನ್ನು ಅವರೊಂದಿಗಿನ ಪಾತ್ರವೆಂದರೆ ‘ಇಲ್ಲ’ ವೆನ್ನುವುದು ಶೋಭನ್ ಅವರಿಗೆ ಸಾಧ್ಯವಾಗದ ಮಾತಾಗಿತ್ತು. ಹಾಗಾಗಿ ಎದುರಾದ ಕಷ್ಟಗಳನ್ನು ಲೆಕ್ಕಿಸದೆ ಶಿವಣ್ಣವರೊಂದಿಗಿನ ಸಣ್ಣ ಪಾತ್ರಕ್ಕೆ ಜೈ ಎಂದರು. ಅಲ್ಲಿಂದ ಅವಕಾಶಗಳು ಒಂದೊಂದಾಗಿ ಬರ ತೊಡಗಿತು.
‘1st ರಾಂಕ್ ರಾಜು’,’ H/34 ಪಲ್ಲವಿ ಟಾಕೀಸ್’,’ ಬಂಗಾರ s/o ಬಂಗಾರದ ಮನುಷ್ಯ’,’ ಕರಿಯಾ ೨’, ‘ಬೆಂಗಳೂರು ಅಂಡರ್ ವರ್ಲ್ಡ್’,’ ಮುಂದೊರೆದ ಅಧ್ಯಾಯ’, ‘ಸಮಯದ ಹಿಂದೆ ಸವಾರಿ’ ಸಿನಿಮಾಗಳಲ್ಲಿ ಹಂತ ಹಂತವಾಗಿ ಬೆಳೆಯತೊಡಗಿದ್ದಾರೆ.
‘ಸಮಯದ ಹಿಂದೆ ಸವಾರಿ’ ಸಿನಿಮಾದಲ್ಲಿ ನೆಗೆಟಿವ್ ಪಾತ್ರ. ಈ ಸಿನಿಮಾದಲ್ಲಿ ಶೋಭನ್ ಅವರು ವಿಭಿನ್ನವಾಗಿ ತೆರೆಯ ಮೇಲೆ ಕಾಣುತ್ತಾರೆ. ‘ಮುಂದೊರೆದ ಅಧ್ಯಾಯ’ದಲ್ಲಿ ಆದಿತ್ಯ ಅವರು ಖಡಕ್ ಪೊಲೀಸ್ ಅಧಿಕಾರಿಯಾದರೆ, ಶೋಭನ್ ರಫ್ ಅಂಡ್ ಟಫ್ ವಿಲನ್.
ಶೋಭನ್ ಅವರಲ್ಲಿ ಕಲಿಯುವ ಹಠವಿದೆ. ಅವರನ್ನು ನಂಬಿ ನಿರ್ದೇಶಕರು ಯಾವುದೇ ಪಾತ್ರವೇ ಕೊಡಲಿ ಶ್ರದ್ದೆಯಿಂದ ಮಾಡುತ್ತಾರೆ. ಒಂದು ಪಾತ್ರ ಸಿಕ್ಕಾಗ, ಆ ಪಾತ್ರಕ್ಕೆ ಏನು ಬೇಕು ಎಂದು ನಿರ್ದೇಶಕರ ಬಳಿ ಹೋಗಿ ತಿಳಿದು, ಅದಕ್ಕೆ ಬೇಕಾದ ಪೂರ್ವ ತಯಾರಿ ಮಾಡಿಕೊಳ್ಳುತ್ತಾರೆ. ಎಷ್ಟೋ ಬಾರಿ ದಪ್ಪವಾಗಿದ್ದಾರೆ, ಸಣ್ಣವಾಗಿದ್ದಾರೆ, ಗಡ್ಡ ತಗೆದಿದ್ದಾರೆ, ಗಡ್ಡಬಿಟ್ಟಿದ್ದಾರೆ, ಟಪೋರಿ ಹುಡಗನಂತೆ ಕೂದಲಿಗೆ ಬಣ್ಣ ಹಚ್ಚಿದ್ದಾರೆ. ಅದಕ್ಕೆಲ್ಲಾ ತಮ್ಮ ಸ್ವಂತ ದುಡ್ಡಲ್ಲಿ ಪಾತ್ರಕ್ಕೆ ಜೀವ ತುಂಬಿಸಿದ್ದಾರೆ. ಕಲಿಕೆಯ ಹಸಿವಿರುವ ಕಲಾವಿದ.
ಸಾಕಷ್ಟು ಸಿನಿಮಾಗಳಲ್ಲಿ ಡ್ಯೂಪ್ ಗಳಿಲ್ಲದೆ ತಾವೇ ಸಾಹಸಗಳನ್ನು ಮಾಡಿದ್ದಾರೆ. ‘ಮುಂದೊರೆದ ಅಧ್ಯಾಯ’ದಲ್ಲಿ ಪೊಲೀಸ್ ಅಧಿಕಾರಿ ಬೆನ್ನಟ್ಟಿ ಬರುವಾಗ ಮೂರನೇ ಮಹಡಿಯಿಂದ ಜಿಗಿಯುವ ದೊಡ್ಡ ಸಾಹಸವನ್ನು ಖುದ್ದು ಅವರೇ ಮಾಡಿದ್ದಾರೆ. ಆ ದೃಶ್ಯವನ್ನು ಯಾರೇ ನೋಡಿದರೂ ಶೋಭನ್ ಮೇಲೆ ಅಭಿಮಾನ, ಪ್ರೀತಿ ಹುಟ್ಟುತ್ತದೆ.
ಇನ್ನಷ್ಟು ಕಲಿಯಬೇಕು ಎನ್ನುವ ತುಡಿತ ಅವರಲ್ಲಿದೆ. ‘ಸಿನಿಮಾದಲ್ಲಿ ಯಾವುದೇ ಪಾತ್ರ ಬಂದರು ನಾನು ಸಿದ್ದ. ನಿರ್ದೇಶಕ ನೀನು ಈ ಪಾತ್ರ ಮಾಡು ಎಂದು ನಂಬಿಕೆಯಿಂದ ಕೊಟ್ಟರೆ ಅವರ ನಂಬಿಕೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ನನ್ನದು. ಆದರೆ ಆಡಿಷನ್ ಎನ್ನುವ ಹೆಸರಿನಲ್ಲಿ ಕಲಾವಿದರನ್ನು ಕರೆದು, ಸಿನಿಮಾ ಪ್ರಚಾರ ಮಾಡಿಕೊಳ್ಳಬೇಡಿ…ಕಲಾ ಹಸಿವು ಇರುವ ಕಲಾವಿದರು ನಾವು…’ ಎಂದು ನಯವಾಗಿಯೇ ತಮ್ಮ ಮನದಾಳದ ಮಾತನ್ನು ಹೇಳುತ್ತಾರೆ.
ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ಶೋಭನ್, ಈಗ ಶೋಭಿ…ಚಿನ್ನು…ಎಂದು ಕರೆಸಿಕೊಳ್ಳುವಷ್ಟು ಆತ್ಮೀಯತೇಯನ್ನು ಚಿತ್ರರಂಗದಲ್ಲಿ ಪ್ರೀತಿಯನ್ನು ಗಳಿಸಿದ್ದಾರೆ.
ಈ ಶೋಭಿಗೆ ಇನ್ನು ಸಾಕಷ್ಟು ಒಳ್ಳೆಯ ಪಾತ್ರಗಳು ಹುಡುಕಿಕೊಂಡು ಬರಲಿ.
ನಮ್ಮ ಕನ್ನಡದ ಹುಡುಗ ಮನೆ ಮನೆ ಮಾತಾಗಲಿ …ಅವರ ಭವಿಷ್ಯ ಉಜ್ವಲವಾಗಿರಲಿ… ಎಂದು ಆಕೃತಿಕನ್ನಡ ಹಾರೈಸುತ್ತದೆ.
- ಶಾಲಿನಿ ಹೂಲಿ ಪ್ರದೀಪ್