ಅಮೇರಿಕಾದ ಕನ್ನಡ ಸಾಹಿತ್ಯ ರಂಗದ ಸಮ್ಮೇಳನದ ಸಂದರ್ಭದಲ್ಲಿ ಬಿಡುಗಡೆಯಾಗುತ್ತಿರುವ ನಾಲ್ಕು ಪುಸ್ತಕಗಳನ್ನು ಅಭಿನವದವರು ಪ್ರಕಟಿಸಿದ್ದಾರೆ. ಆ ಕೃತಿ ಕುರಿತು ರಘುನಾಥ್ ಕೃಷ್ಣಮಾಚಾರ್ ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
ಅವು: ಆರು ದಶಕಗಳ ಹಿಂದೆ ಅಮೇರಿಕಾಕ್ಕೆ ಹೋಗಿ ನೆಲೆಸಿದ ಜೀವ ವಿಜ್ಞಾನಿ ಆಹಿತಾನಲ – ನಾಗ ಐತಾಳರ ಕುರಿತ ‘ಕಡಲು -ದಡ’. ಅವರ ಕನ್ನಡ ಕೈಂಕರ್ಯದ ಸಮೀಕ್ಷೆ.ಅವರು ನನ್ನ ಮುಂಬೈ ಶಿಷ್ಯೆ ರಂಗಕಲಾವಿದೆ ಅಹಲ್ಯಾ ದೇವಿ ಅವರ ಮಾವ ಎನ್ನುವುದು ನನಗೆ ವೈಯಕ್ತಿಕವಾಗಿ ಹೆಮ್ಮೆಯ ವಿಷಯ.ಅಲ್ಲದೆ ಅವರು ತಮಗೆ ಇಷ್ಟವಿಲ್ಲದ ಅಡ್ಡ ಹೆಸರಿನಿಂದ ತನ್ನನ್ನು ಕರೆಯುತ್ತಿದ್ದ ತಮ್ಮ ಪ್ರೀತಿಯ ಮಾವನ ಕುರಿತು ಬರೆದ ಆತ್ಮೀಯ ನೆನಪುಗಳ ಬರಹವನ್ನು ಇದು ಒಳಗೊಂಡಿದೆ. ತಮ್ಮ ಅವಳ ಕಾಗದ ರಂಗಪ್ರಸ್ತುತಿ ಆಗಿದ್ದು ಮೊದಲು ಅವರ ಮನೆಯಲ್ಲಿ ಎಂದು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

ಲಕ್ಷ್ಮೀಶ ತೋಳ್ಪಾಡಿ ಅವರು ನಾಗ ಐತಾಳರ ವ್ಯಕ್ತಿತ್ವದ ರೂಪಕವಾಗಿ ಬರೆದ ಕಡಲು ಮತ್ತು ದಡ ಎನ್ನುವ ಪ್ರವೇಶ ಸ್ವರೂಪಿ ಬರಹವಿದ್ದು,ಅದೇ ಪುಸ್ತಕದ ಶೀರ್ಷಿಕೆ ಕೂಡ ಆಗಿದೆ.ನನ್ನ ಗೆಳೆಯರಾದ ಕೆ.ಸತ್ಯನಾರಾಯಣ ವಲಸೆ ಹೋಗುವವರ ಕುರಿತು ಬರೆದ ನಾಗ ಐತಾಳರ ಕನ್ನಡತನದ ಸ್ಥಾಪನೆ ಕುರಿತಂತೆ ಅಂಕಣ ಕೂಡ ಇದ್ದು, ವಲಸೆ ಹೋಗುವುದು ಅಲ್ಲಿನ ಹಣ ಅಧಿಕಾರಗಳಿಗಿಂತ ಹೆಚ್ಚಾಗಿ, ಅಲ್ಲಿ ಸಾಧಿಸಬಹುದಾದ ವೃತ್ತಿ ನೈಪುಣ್ಯವೇ ಎಂದು ಅವರ ಪುಸ್ತಕವನ್ನು ಆಧರಿಸಿ ಸಿದ್ಧಪಡಿಸಿದ್ದಾರೆ. ಇನ್ನೊಬ್ಬ ಗೆಳೆಯರಾದ ಬೆಳಗೋಡು ರಮೇಶ್ ಭಟ್ ಅವರು ನಾಗ ಐತಾಳರ ಇತಿವೃತ್ತದೊಂದಿಗೆ ಅವರ ಕೃತಿಗಳ ಸಹೃದಯ ಸಮೀಕ್ಷೆ ಕೂಡ ಮಾಡಿದ್ದಾರೆ. ಅಭಿನವದ ಪರವಾಗಿ ಬರೆದ ರವಿಕುಮಾರ್ ನರಸಿಂಹಮೂರ್ತಿ ಅವರು ನಾಗ ಐತಾಳರ ಕನ್ನಡ ಪ್ರೀತಿಯ ಮೇಲೆ ಬೆಳಕು ಚೆಲ್ಲಿದ್ದಾರೆ. ಡುಂಡಿರಾಜ್ ಅವರು ನಾಗ ಐತಾಳರ ಆತಿಥ್ಯದ ಕುರಿತು ಸ್ವಾರಸ್ಯಕರವಾಗಿ ದಾಖಲಿಸಿದ್ದಾರೆ. ಇಬ್ಬರೂ ಕುಂದಾಪುರದವರಾದ್ದರಿಂದ ಕುಂದಗನ್ನಡದಲ್ಲಿ ಇವರ ಜೊತೆ ಮಾತನಾಡಿದ್ದನ್ನು ಕೂಡ. ಉಳಿದಂತೆ ಅವರ ಕೃತಿಗಳ ಸಮೀಕ್ಷೆಯನ್ನು ಹಲವರು ಮಾಡಿದ್ದಾರೆ. ಕೊನೆಗೆ ಸ್ವತಃ ನಾಗ ಐತಾಳರ ಮೂರು ಬರಹಗಳನ್ನು ಆಯ್ದು ಕೊಡಲಾಗಿದೆ. ಅವು: ಒಂದು ಅವರ ತಮ್ಮ ರಾಧಾಕೃಷ್ಣ ಕುರಿತ ವ್ಯಕ್ತಿ ಚಿತ್ರ, ಹರಿಹರೇಶ್ವರ ಅವರ ಅನನ್ಯ ಕನ್ನಡದ ಕುರಿತು ಬರೆದ ಲೇಖನ.ಇನ್ನೊಂದು ಅವರ ಕನ್ನಡತನದ ಸ್ಥಾಪನೆಯ ಆಯ್ದ ಭಾಗ. ಅದರಲ್ಲಿ ಅವರು ಅಮೇರಿಕಾಗೆ ಹೋಗಿ ನೆಲಸಿದಾಗಿನಿಂದ ,ತಾಯಿ ನಾಡು ಮತ್ತು ತಾಯ್ನುಡಿಯ ಋಣ ಸಂದಾಯ ಮಾಡಲು, ವಿಭಿನ್ನ ಹಂತಗಳಲ್ಲಿ ನಡೆಸಿದ ವೈಯಕ್ತಿಕ ಹಾಗೂ ಸಾಂಘಿಕ ಪ್ರಯತ್ನಗಳನ್ನು, ನಮೂದಿಸಿದ್ದಾರೆ.ಸ್ವತ: ವಸುಧೈವ ಕುಟುಂಬ ನೀತಿಯನ್ನು ಅನುಸರಿಸಿದ ಅವರಿಗೆ ಸಾಂಘಿಕ ನೆಲೆಯಲ್ಲಿ ಅದನ್ನು ಜಾರಿಗೆ ತರಲು ಸಾಧ್ಯವಾಗದೆ ಹಿಂದೂ ಕೇಂದ್ರಿತ ಕನ್ನಡಿಗರದ್ದು ಮಾತ್ರ ಆಯಿತು ಎಂದು ಪ್ರಾಮಾಣಿಕವಾಗಿ ಅದರ ಮಿತಿಯನ್ನು ಒಪ್ಪಿಕೊಂಡಿದ್ದಾರೆ.

ಅಲ್ಲಿನ ಇತರರು ಪ್ರಕಟಿಸಿದ ಅವರ ಕನ್ನಡ ಕೃತಿಗಳನ್ನು ವಿವರವಾಗಿ ಬರೆದಿದ್ದಾರೆ. ಹೀಗೆ ದಾಖಲಿಸುವಾಗ ಅವರು ಬರೆದ ಎ.ಕೆ.ರಾಮಾನುಜನ್ ಅವರ ಸ್ಪೀಕಿಂಗ್ ಆಫ್ ಶಿವ ಬಸವಣ್ಣನ ವಚನಗಳ ಅನುವಾದ ಎಂಬ ತಪ್ಪು ಕೂಡ ಮಾಹಿತಿ ಇದೆ. ಅದು ಹಲವು ವಚನಕಾರರ ವಚನಗಳ ಅನುವಾದ. ಇದನ್ನು ಸಂಪಾದಕರು ಗಮನಿಸಬಹುದಿತ್ತು . ಪುಸ್ತಕದ ಕೊನೆಯಲ್ಲಿ ಸೇರ್ಪಡೆಯಾದ ಚಿತ್ರಗಳು ಅವರ ಅವರ ಕನ್ನಡದ ಕೈಂಕರ್ಯಕ್ಕೆ ಸಾಕ್ಷಿ ನುಡಿಯುತ್ತವೆ.ಅದರಲ್ಲಿ ಎರಡು ಚಿತ್ರಗಳು ನನ್ನ ಅಕ್ಕ ಡಾ.ಮಂಗಳಾ ಪ್ರಿಯದರ್ಶನಿ ಅವರ ಮೇಲಿನ ಪ್ರೀತಿಯಿಂದ ತಮ್ಮ ಕಾಲೇಜಿನಲ್ಲಿ ಅವರ ‘ತಲೆಮಾರು’ ಪುಸ್ತಕ ಬಿಡುಗಡೆ ಸಮಾರಂಭದ ಚಿತ್ರಗಳು ಸೇರ್ಪಡೆ ಆಗಿರುವುದು ಸಂತೋಷದ ಸಂಗತಿ. ಸಂಪಾದಕ ಮಂಡಳಿಗೆ ಅಭಿನಂದನೆಗಳು.
ಎರಡನೇ ಪುಸ್ತಕ ಡಾ. ಮೈಸೂರು ನಟರಾಜ್ ಅವರ ಅನುವಾದ ಕವನಸಂಕಲನ ಹಲವು ಗಾಳಿಯಲ್ಲಿ ಹಾರಿ ಬಂದ ಹೂಗಳು. ಇದಕ್ಕೆ ನನ್ನ ಗೆಳೆಯರಾದ ಕಮಲಾಕರ ಕಡವೆ ಅವರು ಮುನ್ನುಡಿ ಬರೆದು ಶ್ರೀ ಅವರ ಇಂಗ್ಲಿಷ್ ಗೀತೆಗಳ ಪರಂಪರೆಯಲ್ಲಿ, ಇವರ ಅನುವಾದಗಳನ್ನು ಸಾಧಾರವಾಗಿ ಗುರುತಿಸಿದ್ದಾರೆ. ಮಾಯಾ ಏಂಜೆಲೋ ಅವರ ಕೇಜ್ಡ ಬರ್ಡ್ ಅನುವಾದ ಕುರಿತು ಬರೆಯುವಾಗ ಈಗಾಗಲೇ ಅದು ಕನ್ನಡಕ್ಕೆ ಬಂದಿರುವುದನ್ನು ಉಲ್ಲೇಖ ಮಾಡಬಹುದಿತ್ತು.

ಮೂರನೇ ಪುಸ್ತಕ ಅವರದೇ ‘ಸ್ವಾತಂತ್ರ್ಯ ದೇವಿಯ ಕರುಣೆಯ ಕಗ್ಗ ‘ಅವರ ಸ್ವತಂತ್ರ ಕವಿತೆಗಳ ಸಂಕಲನವಾಗಿದೆ. ಅವರು ಅನುವಾದ ಮಾಡಿದ ಕನ್ನಡ ಕಾದಂಬರಿಯ ಕುರಿತು ಬರೆದ ಭಾಗ್ಯ ನನ್ನದು . ಇದಲ್ಲದೆ ಅಲ್ಲಿನ ಲೇಖಕರು ಬರೆದ ಸ್ತ್ರೀ ಸಂವೇದನೆಯ ಕತೆಗಳ ಸಂಕಲನವನ್ನು ಕೂಡ ಪ್ರಕಟಿಸಿದ್ದಾರೆ.
ಇಲ್ಲಿಯವರೆಗೆ ಲೇಖಕರು ತಾವಾಗಿಯೇ ಕಳಿಸಿದ ಪುಸ್ತಕಗಳ ಕುರಿತು ಬರೆಯುತ್ತ ಬಂದಿದ್ದ ನನಗೆ, ಸ್ವತ: ಪ್ರಕಾಶಕರೆ ತಾವು ಪ್ರಕಟಿಸಿದ ಪುಸ್ತಕಗಳನ್ನು ಕಳಿಸಿದ್ದು ಮೊದಲ ಬಾರಿಗೆ. ಅವರ ಪ್ರೀತಿಗೆ ಋಣಿ.ಮುಂದೆ ಸಾವಕಾಶವಾಗಿ ಅವುಗಳ ಕುರಿತು ಸಮೀಕ್ಷೆ ಬರೆಯುವೆ.
ಪುಸ್ತಕಗಳನ್ನು ಕಳಿಸಿದ ಅಭಿನವ ರವಿಕುಮಾರ್ ಅವರ ಸೌಜನ್ಯಕ್ಕೆ ಕೃತಜ್ಞತೆಗಳು ಮತ್ತು ಅಭಿನಂದನೆಗಳು.
- ರಘುನಾಥ್ ಕೃಷ್ಣಮಾಚಾರ್ – ಲೇಖಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು
