‘ಇಂದೇಕೋ ನನಗೆ ಅಮ್ಮ ಇನ್ನಿಲ್ಲದ ಭಯವಾಗಿದೆ…ಬಂದು ಬಿಡಲೆ ನಾ ಹೊರಗೆ…ಭ್ರೂಣಕೆ ನಿನ್ನ ರಕ್ಷೆ ಬೇಕಿದೆ’… ಕವಿಯತ್ರಿ ಆಶಾ.ಎನ್.ಎಂ ಅವರು ಬರೆದಿರುವ ಹೆಣ್ಣು ಭ್ರೂಣ ಹತ್ಯೆಯ ಕುರಿತಾದ ಈ ಕವನ ಮನಮುಟ್ಟುತ್ತದೆ, ತಪ್ಪದೆ ಮುಂದೆ ಓದಿ…
ಇಂದೇಕೋ ನನಗೆ ಅಮ್ಮ
ಇನ್ನಿಲ್ಲದ ಭಯವಾಗಿದೆ
ನೀನೊಮ್ಮೆ ಬಿಗಿದಪ್ಪಿ
ನನ್ನ ಸಂತೈಸಬೇಕಿದೆ
ಬಂದು ಬಿಡಲೆ ನಾ ಹೊರಗೆ
ಕಳವಳವು ಮಿತಿಮೀರಿದೆ
ಬರಲಾಗದಾಗದಲ್ಲವೇ
ಭ್ರೂಣಕೆ ನಿನ್ನ ರಕ್ಷೆ ಬೇಕಿದೆ
ನಿನ್ನ ಕೈತುತ್ತು, ಸಿಹಿ ಮುತ್ತನು
ನೋವಲ್ಲೂ ಮನ ಬಯಸಿದೆ
ಸಾವಿರ ಮುಗ್ಧ ಕನಸುಗಳಿಗೆ
ಮನ ರಾಯಭಾರ ವಹಿಸಿದೆ
ಸಾಯುತಿರುವೆ ನಾನು
ಈ ನೋವ ಸಹಿಸದೆ
ನೀನೇನಾ ರೂವಾರಿ!?
ನೆನೆದು ದುಃಖ ಮಿತಿಮೀರಿದೆ
ಜೀವ ನೀಡೋ ದೇವರೆ
ಜೀವ ತೆಗೆಯುವುದಾದರೆ
ಬದುಕಬೇಕೆ ಈ ಜಗದಲಿ?!
ಆಸೆ ಕಮರಿಹೋಗಿದೆ
ಹೆಣ್ಣುಮಗು ನಾನೆಂದು
ನನಗೀಗ ಅರಿವಾಗಿದೆ
ನೇಪಥ್ಯದ ಮಿಥ್ಯೆ ನಾನು
ಸ್ವಾರ್ಥದ ಪರಮಾರ್ಥದೆ
- ಆಶಾ.ಎನ್.ಎಂ
