‘ಬೂದಿ ಮುಚ್ಚಿದ ಕೆಂಡ’ ಕೃತಿ ಪರಿಚಯ

ಸಾಹಿತ್ಯ ಲೋಕಕ್ಕೆ ಸಾಕಷ್ಟು ಕೊಡುಗೆ ನೀಡಿದ ಅನೇಕ ಮುಸ್ಲಿಂ ಲೇಖಕರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಹಂಝ ಮಲಾರ್ ಅವರೂ ಒಬ್ಬರು. ಈಗಾಗಲೇ ೨೫ ಕ್ಕಿಂತ ಅಧಿಕ ಕೃತಿಗಳನ್ನು ಬರೆದಿರುವ ಇವರ ೧೦ ಸಣ್ಣ ಕಥೆಗಳ ಸಂಕಲನ ಇದು. ಇಲ್ಲಿನ ವಿಶೇಷತೆ ಎಂದರೆ ಪ್ರತೀ ಕಥೆಗಳ ಕೊನೆಯಲ್ಲಿ ಹತ್ತು ಹನಿಗವನಗಳನ್ನು ಕೊಡಲಾಗಿದೆ.ಇದೊಂದು ವಿಶಿಷ್ಟ ಪ್ರಯೋಗ ಎನ್ನಬಹುದು.

ಕೃತಿ : ಬೂದಿ ಮುಚ್ಚಿದ ಕೆಂಡ
ಲೇಖಕರು: ಹಂಝ ಮಲಾರ್
ಸಾರಾ ಎಂಟರ್ ಪ್ರೈಸಸ್
ಮುದ್ರಣದ ವರ್ಷ: ೨೦೦೫
ಪುಟಗಳು: ೧೦೪
ಬೆಲೆ: ರೂ. ೮೦

 

ಇದೀಗ ಕಥೆಗಳ ಬಗ್ಗೆ ತಿಳಿಯೋಣ…

* ಬೂದಿ ಮುಚ್ಚಿದ ಕೆಂಡ.
ಪುಸ್ತಕದ ಶೀರ್ಷಿಕೆಯ ಈ ಕಥೆಯನ್ನು ನಿರೂಪಿಸಿದ ರೀತಿಯಲ್ಲಿ ಹೊಸತನವಿದೆ. ಝುಬೈರ್ ಏನಾದರೂ ಬರೆಯುವ ಗೀಳಿನ ಮನುಷ್ಯ. ಆಗಾಗ ಸ್ಥಳೀಯ ಪತ್ರಿಕೆಯ ಓದುಗರ ವಿಭಾಗಕ್ಕೆ ಊರಿನ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಲೇಖನ ಬರೆಯುತ್ತಲೇ ಎಲ್ಲರಿಗೂ ಪರಿಚಿತನಾಗಿದ್ದ. ಈ ಸಲ ಅವನ ಬರಹದ ತುಡಿತ ಇಮ್ಮಡಿಯಾಗಲು ತಮ್ಮೂರ ‘ದ್ಯಾರಗುಡ್ಡದ’ ಕುರಿತಾದ ಲೇಖನ. ಆದರೆ ಅವನು ಬರೆದ ಸುದ್ದಿಯ ಲೇಖನದಿಂದ ಊರಲ್ಲಿ ಕೋಲಾಹಲ, ಅನಾಹುತ ಸೃಷ್ಟಿಸಿ, ಕೊನೆಯಲ್ಲಿ ಝುಬೈರ್ ಊರನ್ನೇ ಬಿಡ ಬೇಕಾದ ಪರಿಸ್ಥಿತಿಯುಂಟಾಗಲು ಕಾರಣವೇನು? ಅಲ್ಲಿರುವ ಅಂತಹ ಗಹನವಾದ ವಿಚಾರವಾದರೂ ಏನು?.

*ಕಾಲ

ಅಂದು ಕಟಕಟೆಯಲ್ಲಿ ನಿಂತ ಅಪರಾಧಿ
ತಪ್ಪನ್ನು ಮನ್ನಿಸಿ ಎಂದು
ಕೈ ಮುಗಿದು ಬೇಡುತ್ತಿದ್ದ.
ಇಂದು ಅಲ್ಲೇ ನಿಂತ ಅಪರಾಧಿ
ಮಾಡಿದ ತಪ್ಪಿಗೆ ಸಾಕ್ಷಿ ಇದೆಯಾ ಎಂದು
ನಿರ್ದಾಕ್ಷಿಣ್ಯವಾಗಿ ಕೇಳುತ್ತಿದ್ದ.

* ಗುಡ್ಡಕ್ಕೆ ಗುಡ್ಡೆ ಅಡ್ಡ.

ಅಬೀದಾಳನ್ನು ನಾಲ್ಕು ವರ್ಷದ ಹಿಂದೆ ಹಾಸನದ ದಿ.ಇಬ್ರಾಹಿಂ ಅವರ ಮಗ ತುಫೈಲ್ ಎಂಬಾತ ಮದುವೆ ಮಾಡಿದ್ದರು. ಮೂರು ತಿಂಗಳವರೆಗೂ ಪ್ರೀತಿಯ ಹೊನಲನ್ನೇ ಹರಿಸಿದ ಗಂಡ ದುಬಾಯಿ ಸೇರಿದ ಮೇಲೆ ಆಕೆಗೆ ಅತ್ತೆಯ ಮನೆ ಸೆರೆಮನೆ ಯಾಗಿತ್ತು. ಹೊರ ಜಗತ್ತು ಹಾಗೂ ತವರಿನವರ ಮುಖ ಕಾಣದೇ ಪರಿತಪಿಸುತ್ತಾ, ತನ್ನ ಕಷ್ಟವನ್ನು ಯಾರಿಗೂ ಹೇಳಿ ಕೊಳ್ಳಲಾಗದೆ ಚಡ ಪಡಿಸುವ ಈ ಶಿಕ್ಷೆ ಅವಳಿಗೇಕೆ?… ಅವಳ ಅತ್ತೆ ಮುನೀರಾ ಹೀಗೇಕೆ ನಡೆದುಕೊಳ್ಳುತ್ತಾಳೆ? ಈ ನರಕದಿಂದ ಅಬೀದಾ ಪಾರಾಗಿದ್ದು ಹೇಗೆ?….

* ಭೂ ಪಾಲು

ಸೃಷ್ಟಿದಾತ ಅನತಿಸಿದ
ಸಮನಾಗಿ ಹಂಚಿರಿ ಎಂದು
ಸೃಷ್ಟಿಗಳು ಕಚ್ಚಾಡಿದರು
ಅದು ನನ್ನದು, ಇದು ನಿನ್ನದು ಎಂದು
ಹೊತ್ತು ಭೂ ತಾಯಿ ಶಾಂತಿ
ಕದಡಿದೆ ಎಂದಿದು ನೊಂದು.

*ಯಕ್ಷ ಪ್ರಶ್ನೆ

ಆ ಊರಿನ ವೃದ್ಧ ದಂಪತಿಗಳಾದ ಪುತ್ತಾಕ ಮತ್ತು ಪೊನ್ನಾ ಸದ್ಯ ಮೃತರಾಗಿದ್ದರು. ಜೀವಿತಾವಧಿಯಲ್ಲಿ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಅನುರಕ್ತರಾಗಿದ್ದ ಅವರು ಸಾವಿನಲ್ಲೂ ಜೊತೆಯಾಗಿದ್ದರು. ನಾಟಿ ಮದ್ದು ನೀಡುತ್ತಾ, ಜಾತಿ ಭೇದ ನೋಡದೇ, ನಮಾಜ್ ಕೂಡ ಮಾಡದೇ, ಮಸೀದಿಗೂ ಹೋಗದ ಅವರ ಭೂತ ಊರಲ್ಲಿ ವಿಕಾರ ಕೂಗಿನಿಂದ ಜನರಿಗೆ ರಾತ್ರಿಯಲ್ಲಿ ಉಪದ್ರ ಕೊಡುತ್ತಿದೆ ಎಂದು ಎಲ್ಲರೂ ಮಾತಾಡು ತ್ತಿದ್ದರು. ಈ ಯಕ್ಷಪ್ರಶ್ನೆಗೆ ಉತ್ತರ ದೊರಕೀತೇ?…
ಇದಕ್ಕೊಂದು ಕವನ.

*ದೇವರು

ದೇವರು ಕಣ್ಣಿಗೆ
ಕಾಣುವುದಿಲ್ಲ ಎಂದ.
ಕೇಳಿದಾಗ, ಹೇಳಿದ
ಇದೆ, ನಡುವೆ ಆಕಾಶ ಕಂದ.

* ಭಯ

ಹಗಲು ಕೂಲಿ ಮಾಡುತ್ತಾ ರಾತ್ರಿ ಬರೆಯುವ ಬಡ ಕುಟುಂಬದ ತನ್ವೀರ್ ಒಬ್ಬ ಕಥೆಗಾರ. ಒಮ್ಮೆ ಅವನ ಅಭಿಮಾನಿ ಎಂದು ಆಫೀನ ಎಂಬಾಕೆ ಪತ್ರ ಬರೆಯುತ್ತಾಳೆ. ಹೀಗೆ ಉಂಟಾದ ಸ್ನೇಹ ಪ್ರೇಮವಾಗುತ್ತದೆ. ಒಬ್ಬರನ್ನೊಬ್ಬರು ಭೇಟಿಯಾಗುವ ಮೊದಲೇ ಆತ ಬಡವನೆಂಬುದು ತಿಳಿದ ಆಫೀನ ಅವನ ಸ್ನೇಹ ಕಡಿದುಕೊಂಡು ದೂರವಾಗುತ್ತಾಳೆ. ಇದೇ ಕೊರಗಲ್ಲಿತನ್ವೀರ್ ಆತ್ಮಹತ್ಯೆಗೆ ಶರಣಾಗುತ್ತಾನೆ. ವಿಷಯ ತಿಳಿದ ಆಫೀನ ಭಯದಲ್ಲಿ ಸಿಕ್ಕಿ ಒದ್ದಾಡಿದ್ದೇಕೆ?…

*ಅತಿಥಿ

ಒಂದೆರಡು ಮಾತನ್ನು
ಹೇಳಿ ಮುಗಿಸುತ್ತೇನೆ
ಎಂದ ಅತಿಥಿ!
ಕೊನೆಗೆ ಸಭಿಕರು ಎದ್ದು ಹೋದರೂ,
ಗೊತ್ತಾಗದು, ಅವನಿಗೆ
ಸಮಯದ ಮಿತಿ!.

ಕೋಮುವಾದ, ಧರ್ಮ ಇತ್ಯಾದಿ ಹಾಗೂ ಮುಸ್ಲಿಂ ಜನಾಂಗದ ಆಚಾರ ವಿಚಾರಗಳನ್ನು ತಿಳಿಯಬೇಕೆಂದಲ್ಲಿ ಸಹಕಾರಿಯಾಗಿರುವ ಚೆಂದದ ಕಥೆಗಳು ಇಲ್ಲಿವೆ. ಇನ್ನಷ್ಟು ಕಥೆಗಳಿಗಾಗಿ ಕೃತಿಯನ್ನು ಓದಿ ನೋಡಿ.

ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ : 


  • ಮಾಲತಿ ರಾಮಕೃಷ್ಣ ಭಟ್ 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW