‘ಧರ್ಮದ ಹೋರಾಟಕೆ ಆಡಂಬರದ ಬಸಿರು ಹೊರಗಡೆ ಸಾವಿನ ನೆರಳ ಸೂಚಿಸುತಿದೆ’…ಡಾ. ಕೃಷ್ಣವೇಣಿ. ಆರ್. ಗೌಡ ಅವರು ಬರೆದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ಕಾವು ಏರಿ ಕಾದಿದೆ
ಮುಗಿಲ ತವಕ
ಸುಡುವ ಡಾoಬರು ವೃತ್ತಕೆ
ಅತ್ತಿತ್ತ ಕೈಗಳು,
ಎಳೆದು ಹೃದಯ ನೋಯುತಿದೆ…
ಬಾದೆಯ ಎಚ್ಚರಕೆ
ಬಾಧ್ಯತೆಯ ಕರೆಯೋಲೆ,
ಎಮ್ಮೆ ಕೋಣಗಳ ಮೇಲೆ
ವ್ಯಂಗ್ಯ ನಗೆ….
ಸಮಾಜದ ಹಾದಿಗೆ
ಚರಗದ ಚೆಲ್ಲಾಟ,
ಪುತ್ತಳಿಯ ಕೈಗೆ
ಭಾವುಟದ ಹಾರಾಟ, ಇದಕೆ
ಹಳದಿ, ಕುಂಕುಮ ಬೀಗದೆ
ಮಂಕಾಗಿದೆ….
ತಲೆಯ ಟೊಪ್ಪಿಗೆಯ ವಾಗ್ವಾದ
ನೆಲದ ಉರುಳು ಸೇವೆಯ
ವೈಚಿತ್ರ್ಯಕೆ ಕೂಸು
ಕೇಕೆ ಹಾಕುತಿದೆ…
ಕೃತಿಯ ದಹನದಿ
ಎದ್ದ ಭುಗಿಲು ಭಯವಿಲ್ಲದೇ
ಕಿರುಚುತಿದೆ…
ಧರ್ಮದ ಹೋರಾಟಕೆ ಆಡಂಬರದ ಬಸಿರು
ಹೊರಗಡೆ ಸಾವಿನ ನೆರಳ
ಸೂಚಿಸುತಿದೆ..,.
ಹೊಗೆಯ ಕಾರ್ಮೋಡಕೆ
ಮಾಲಿನ್ಯ ಎರಕವಿಲ್ಲದ ಸುಳಿಯ ಸುತ್ತುತಿದೆ…
ಬದ್ಧತೆಯಿಲ್ಲದ ಪ್ರಭುತ್ವಕೆ
ಬುದ್ಧ ಕಣ್ಮುಚ್ಚಿ
ಮೌನವಾಗಿದ್ದಾನೆ
ಯಾವುದನ್ನು ಪರಿಹರಿಸಲೆಂದು….
- ಡಾ. ಕೃಷ್ಣವೇಣಿ. ಆರ್. ಗೌಡ
