ಮೆಡಿಕಲ್ ಕೋರ್ಸ್ ಸೇರುವ ಮೊದಲು ಕೂಲಂಕುಷವಾಗಿ ಯೋಚಿಸಿ ವಯಸ್ಸು, ಸಮಯ, ಹಣ ವ್ಯರ್ಥವಾಗಿ ಪೋಲು ಮಾಡಿಕೊಳ್ಳಬೇಡಿ ಎನ್ನುತ್ತಾ ಡಾ.ಪ್ರಕಾಶ ಬಾರ್ಕಿ ಅವರ ಚಿಂತನ ಲೇಖನ, ಮುಂದೆ ಓದಿ…
ಇನ್ನೊಂದ್ ಐದು ವರ್ಷವಾದರೆ ಭಾರತೀಯ ವೈದ್ಯ ಪದ್ಧತಿಗಳ ಕೋರ್ಸಿನದು (AYUSH) ಇದೇ ಸ್ಥಿತಿ. ವೈದ್ಯರ ಸಂಖ್ಯೆ ಇವಾಗ್ಲೇ ಹೆಚ್ಚಿದೆ.
ಕಳೆದ ಹತ್ತು ವರ್ಷಗಳಲ್ಲಿ, ಮಳೆಗಾಲಕ್ಕೆ ಏಳುವ ನಾಯಿ ಕೊಡೆಗಳಂತೆ ಹೊಸ ಹೊಸ ಕಾಲೇಜುಗಳು ಎದ್ದಿವೆ ಮತ್ತು ಏಳುತ್ತಿವೆ. ಹಲವು ಕಾಲೇಜುಗಳ ಶಿಕ್ಷಣ ಗುಣಮಟ್ಟ ಕಾಟಾಚಾರಕ್ಕೆ ಉತ್ತಮ, ಕೆಲವಂತೂ ಕಳಪೆ. ಉತ್ತಮ ಮತ್ತು ಅತ್ತ್ಯುತ್ತಮ ಎನಿಸಿಕೊಳ್ಳುವ ಕಾಲೇಜುಗಳು ಬೆರಳೆಣಿಕೆಯಷ್ಟಿವೆ. Qunatity ಹೆಚ್ಚಾದಷ್ಟು Quality ತಳಮಟ್ಟಕ್ಕೆ ಹೋಗುತ್ತೆ. ಕೇವಲ ಹೆಸರಿನ ಮುಂದೆ ಡಾಕ್ಟರ್ ಅನ್ನೋ ಪಟ್ಟ ಅಂಟಿಸುವ ಮತ್ತು ಡಿಗ್ರಿ ಸರ್ಟಿಫಿಕೇಟ್ ಕೊಡುವ ಕಾರ್ಖಾನೆಗಳಂತೆ ಕೆಲ ಕಾಲೇಜುಗಳು ಇವಾಗಲೆ ವರ್ತಿಸುತ್ತಿವೆ. ಹೊಸ ಕಾಲೇಜುಗಳಿಗೆ ಅನುಮತಿ ನೀಡುವ ಮಂಡಳಿಗಳು, ಸರ್ಕಾರ ನೋಟಿನ ಹಿಂದೆ ಓಡುತ್ತಿವೆಯಾ?.
ಆವಾಗಾವಾಗ ಕಾಲೇಜು ಆಡಳಿತ ಮತ್ತು ಶಿಕ್ಷಣ ಗುಣಮಟ್ಟ ಪರಿಶೀಲಿಸಲು ದೆಹಲಿಯಿಂದ ವಿಮಾನವೇರಿ ಬರುವ ಮಂಡಳಿ ನ್ಯಾಯಯುತವಾಗಿ ಕಾರ್ಯ ನಿರ್ವಹಿಸಿದರೆ ಕರ್ನಾಟಕದ ಹಲವಾರು ಕಾಲೇಜುಗಳು ಅನರ್ಹ ಪಟ್ಟಿ ಸೇರುತ್ತವೆ.

ಪ್ರತಿವರ್ಷ ಅನರ್ಹ ಪಟ್ಟಿ ಸೇರುವ ಕಾಲೇಜುಗಳು ಮತ್ತೆ ಮೈ ಕೊಡವಿ ಅನುಮತಿ ತೆಗೆದುಕೊಳ್ಳುತ್ತವೆ. ಕೆಲವು ಕಾಲೇಜುಗಳು ತಿದ್ದಿಕೊಂಡು.. ಹಲವು “ಕುರುಡು ಕಾಂಚಾಣ” ಕುಣಿಸಿ.
ಸರ್ಟಿಫಿಕೆಟ್ ಹಿಡಿದು ಸಮಾಜಕ್ಕೆ ಪಾದ ಊರುವ ವೈದ್ಯರ ಸಂಖ್ಯಾ ಬಲಕ್ಕೆ ಅನುಗುಣವಾಗಿ ಸರ್ಕಾರದಲ್ಲಿ ಸೂಕ್ತ ಹುದ್ದೆಗಳಿಲ್ಲ, ಕೆಲವು ನಾಮಕಾವಸ್ತೆ ಇದ್ದರೂ ಸಂಬಳ ಮಾತ್ರ ಮೂಗಿಗೆ ಸವರುವ ತುಪ್ಪ. ಹಾದಿ ತಪ್ಪಿ ನಡೆಯುವ ದಾರಿಯಷ್ಟೇ ಕೆಲವರ ಆಯ್ಕೆಯಾಗುತ್ತಿದೆ. ಇನ್ನೂ ಸರ್ಕಾರದ ಮಲತಾಯಿ ಧೋರಣೆ ಸದಾ ಇದ್ದದ್ದೆ. ಸರ್ಕಾರವನ್ನು ಪ್ರಶ್ನಿಸಲು ಸುಭದ್ರವಾದ AYUSH ವೈದ್ಯ ಸಂಘಗಳಿಲ್ಲ, ಹಲವು ಇವೆಯಾದರೂ ಒಂದಕ್ಕೊಂದು ಭಿನ್ನಾಭಿಪ್ರಾಯಗಳು ಸದಾ ಇವೆ. ಇವು ಒಂದಾಗಿ ಹೋರಾಡುವುದು ಕಲ್ಲಿನ ಕೋಳಿ ಕೂಗಿದ ಮೇಲೆನೆ. ಸೂಕ್ತ ನ್ಯಾಯ ದೂರದ ಬೆಟ್ಟ.
ವಿದ್ಯಾರ್ಥಿಗಳೆ…….!!
ಭಾರತೀಯ ವೈದ್ಯಕೀಯ ಕೋರ್ಸ್’ಗಳನ್ನು ಸೇರುವ ಮೊದಲು ಕೂಲಂಕುಷವಾಗಿ ಪರಿಶೀಲಿಸಿ, ಕೊನೆಗೂ ಸೂಕ್ತವೆನಿಸಿದರೆ ಸೇರಿ ಅದೂ ಬೆರಳೆಣಿಕೆಯಲ್ಲಿರುವ ಉತ್ತಮ ಕಾಲೇಜುಗಳಲ್ಲಿ ಸರ್ಕಾರಿ ಸೀಟು ಸಿಕ್ಕಿದರೆ ಮಾತ್ರ.
ಹುಕಿಗೆ ಬಿದ್ದು ವಯಸ್ಸು, ಸಮಯ, ಹಣ ವ್ಯರ್ಥವಾಗಿ ಪೋಲು ಮಾಡಿಕೊಳ್ಳಬೇಡಿ.
- ಪ್ರಕಾಶ್ ಬಾರ್ಕಿ (ವೈದಕೀಯ ಬರಹಗಾರರು, ಆಯುರ್ವೇದ ವೈದ್ಯರು) , ಕಾಗಿನೆಲೆ.
