ಜಗನ್ಮಾತೆ ದುರ್ಗೆಯ ಎಂಟನೇ ಶಕ್ತಿಯೆ ‘ಮಹಾಗೌರಿ, ‘ಮಾತೆಯ ಬಣ್ಣವು ಬೆಳ್ಳಗಿದ್ದು, ಹುಣ್ಣಿಮೆ ಚಂದ್ರನ ಹೊಳಪಂತೆ ಶ್ವೇತವರ್ಣವಾಗಿ ಪ್ರಕಾಶಮಾನವಾಯಿತು. ‘ಮಹಾಗೌರಿ’ ಮಹಿಮೆಯನ್ನು ಡಾ.ಮಲ್ಲಿಕಾರ್ಜುನ ಎಸ್ ಆಲಮೇಲ ಅವರು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಶ್ವೇತೇ ವೃಷೇ ಸಮಾರೂಢಾ ಶ್ವೇತಾಂಬರ ಧರಾ ಶುಚಿ |
ಮಹಾಗೌರಿ ಶುಭಂ ದದ್ಯಾನ್ಮಹಾದೇವ ಪ್ರಮೋದದಾ||
ವ್ರಿಯೇ…ಹಂ ವರದಂ ಶಂಭುo ನಾನ್ಯಂ ದೇವಂ ಮಹೇಶ್ವರಾತ್ ( ನಾರದ ಪಾಂಚರಾತ್ರ ) ನಾನು ವರದನಾದ ಶಂಭುವಲ್ಲದೆ ಬೇರಾವುದೇ ದೇವತೆಯನ್ನು ವರಿಸುವದಿಲ್ಲವೆಂದು, ಭಗವಾನ್ ಶಿವನನ್ನು ವರಿಸುವುದಕ್ಕಾಗಿ ಕಠೋರ ತಪಸ್ಸು ಮಾಡಿದ್ದ ಪಾರ್ವತಿದೇವಿಯ’ ಕಠೋರ ತಪಸ್ಸಿನ ಕಾರಣದಿ ಮಾತೆಯ ಶರೀರವು ಪರಿಪೂರ್ಣ ಕಪ್ಪಾಯಿತು. ಆದರೂ ದೇವಿಯ ತಪಸ್ಸಿಗೆ ಸಂತುಷ್ಟನಾದ ಮಹಾದೇವನು ಪ್ರತ್ಯಕ್ಷವಾಗಿ ಹಿಮಂತಸುತೆಯ ಮನದಭಿಷ್ಠವನ್ನು ನೆರವೇರಿಸಲು ಸಮ್ಮತಿಸಿದನು. ಆದ್ರೆ, ತನ್ನಿದಾಗಿ ಕೃಶವಾದ, ಕಡು ಕಪ್ಪಾದ ಆಕೆಯ ದೇಹಸಿರಿಯನ್ನು ನೋಡಿ ಮನದಿ ವ್ಯಥೆಪಟ್ಟುಕೊಂಡು, ಪರಮ ಪವಿತ್ರವಾದ ಗಂಗಾಜಲಾಭಿಷೇಕ ಮಾಡಿದಾಗ, ಹುಣ್ಣಿಮೆ ಚಂದ್ರನ ಹೊಳಪಂತೆ ಶ್ವೇತವರ್ಣವಾಗಿ ಪ್ರಕಾಶಮಾನವಾಯಿತು. ಅಂದಿನಿಂದ ಗೌರಿಯೆಂದು ನಾಮಾಂಕಿತಳಾದಳು.
ಜಗನ್ಮಾತೆ ದುರ್ಗೆಯ ಎಂಟನೇ ಶಕ್ತಿಯೆ ‘ಮಹಾಗೌರಿ, ‘ಮಾತೆಯ ಬಣ್ಣವು ಬೆಳ್ಳಗಿದ್ದು, ಈ ಬಿಳುಪಿನ ಹೊಳಪಿಗೆ, ಶಂಖ, ಚಂದ್ರ, ಮತ್ತು ಶ್ವೇತಪುಷ್ಪ, ಇವುಗಳ ಉಪಮೆ ಕೊಡಲಾಗಿದೆ. ಗೌರಿಯ ವಯಸ್ಸು, ‘ ಅಸ್ತವರ್ಷಾ ಭವೇದ್ ಗೌರಿ ; ಅಂದ್ರೆ ಕೇವಲ ಎಂಟು ವರ್ಷವೆನ್ನಲಾಗಿದೆ. ಆಭೂಷಣಗಳು ಕೂಡ ಬಿಳಿಯಾಗಿವೆ. ನಾಲ್ಕು ಭುಜಗಳಿದ್ದು, ವೃಷಭವಾಹನವಾಗಿದೆ. (ಪಾರ್ವತಿ ದೇವಿಯು ತಪಸ್ಸು ಮಾಡುತ್ತಿದ್ದ ಸ್ಥಳದಲ್ಲಿ ಒಂದು ಸಿಂಹವು ಕೂಡ ಉಪವಾಸದಿ ಕುಳಿತ್ತಿದ್ದ ಫಲವಾಗಿ ಮಾತೆಯು ಆ ಸಿಂಹಕ್ಕೆ ಆಹಾರ ನೀಡಿ ತನ್ನ ಪ್ರಥಮ ವಾಹನವಾಗಿ ಮಾಡಿಕೊಂಡಳೆನ್ನುವ ಕತೆಯು ಇದೆ. ಇದಕಾಗಿಯೇ ಹೆಚ್ಚಾಗಿ ಮಾತೆಯು ಸಿಂಹವಾಹನಿಯಾಗಿದ್ದಾಳೆ. ಇಲ್ಲಿ ಮಾತ್ರ ಎತ್ತು, ವೃಷಭವಿರುವದು). ಮೇಲಿನ ಬಲಕೈಯಲ್ಲಿ ಅಭಯ ಮುದ್ರೆ, ಕೆಳ ಬಲಕೈಲಿ ತ್ರಿಶೂಲವಿದೆ, ಮೇಲಿನ ಎಡಕೈಲಿ ಡಮರುಗ ಮತ್ತು ಕೆಳ ಕೈಲಿ ವರದ ಮುದ್ರೆ ಇರುವದು ಮಾತೆಯ ವದನವು ಪ್ರಶಾಂತವಾಗಿದೆ.

ಫೋಟೋ ಕೃಪೆ : ಅಂತರ್ಜಾಲ
ಈ ಸ್ಪುರದ್ರೂಪಿ ಸೌಂದರ್ಯ ಸಿರಿಗೆ ಮರುಳಾಗಿ ಹೋಗಿದ್ದ, ಶುಂಭನನ್ನೂ, ಮತ್ತವನ ತಮ್ಮ ನಿಶುಂಭನನ್ನು ಹಾಗು ಚಂಡ – ಮುಂಡ, ಧೂಮ್ರಲೋಚನಾ, ರಕ್ತಬೀಜಾಸುರರೆಂಬ ಭೀಕರ ಅಸುರರನ್ನೂ , ಇದೆ ಮಾತೇ, ದುರ್ಗೆ, ಕೌಶಿಕಿ, ಚಂಡಿ, ಕಾಳಿಯಾಗಿ ಮರ್ದನ ಮಾಡಿ ನಂತರ ಅವಳು ಮತ್ತೆ ಮಹಾಗೌರಿಯಾಗಿ ರೂಪಾಂತರಗೊಂಡಳು.
ನವರಾತ್ರಿಯ ಎಂಟನೇ ದಿನವು, ಮಹಾಗೌರಿಯ ಉಪಾಸನೆಯ ವಿಧಿಯು ಇದೆ. ಮಾತೆಯ ಶಕ್ತಿಯು ಅಮೋಘವಾಗಿದೆ. ಹಾಗು ಶೀಘ್ರ ಫಲದಾಯಿನಿಯಾಗಿದೆ. ಮಹಾಗೌರಿ ಉಪಾಸನೆಯಿಂದ ಉಪಾಸಕನ ಎಲ್ಲಾ ಕಲ್ಮಶಗಳು ತೊಳೆದುಹೋಗುತ್ತವೆ. ಪೂರ್ವ ಸಂಚಿತ ಪಾಪಗಳು ಕೂಡ ನಾಶವಾಗುತ್ತವೆ. ಭವಿಷ್ಯದಲ್ಲಿ ಪಾಪ – ಸಂತಾಪಗಳು ಬಳಿ ಸುಳಿಯುವದಿಲ್ಲ. ಉಪಾಸಕನು ಪವಿತ್ರ ಅಕ್ಷಯ ಪುಣ್ಯಗಳ ಅಧಿಪತಿಯಾಗುತ್ತಾನೆ.
ಜಗಜ್ಜನನಿಯ ಧ್ಯಾನ – ಸ್ಮರಣೆಯು ಭಕ್ತರಿಗೆ ಸಕಲ ವಿಧದಿಂದಲೂ ಶ್ರೇಯಸ್ಕರವಾಗಿದೆ. ದೇವಿಚರಣಗಳಲ್ಲಿ ಶರಣಾಗತರಾಗಲು ಅನುಕ್ಷಣವು ಪ್ರಯತ್ನಿಸೋಣ, ಪುರಾಣ – ಇತಿಹಾಸದಿ ಮಾತೇ ಮಹಿಮೆ ಅನಂತವಾಗಿವೆಯೆಂದು ಹೊಗಳಾಗಿದೆ,ಜನನಿಯು ಮನುಜನ ವೃತ್ತಿಗಳನ್ನ ಸತ್ ಕಡೆಗೆ ಪ್ರೇರೇಪಿಸಿ, ಅಸತ್ತಿನ ನಾಶಮಾಡುತ್ತಾಳೆ. ನಾವು ಶ್ರದ್ಧಾ ಭಕ್ತಿ ಭಾವದಿಂದ ಸರ್ವ ಸಮಯದಲ್ಲೂ ಮಾತೇಯ ಪಾದಕಮಲಗಳಲ್ಲಿ ಶರಣಾಗತರಾಗೋಣ.
- ನಾಳಿನ ಸಂಚಿಕೆಯಲ್ಲಿ ದುರ್ಗೆಯ ಒಂಭತ್ತನೇ ಶಕ್ತಿ ‘ಸಿದ್ದಿದಾತ್ರೀ’ ಕುರಿತು ತಿಳಿಯೋಣ.
ದುರ್ಗೆಯ ಮಹಿಮೆ ಹಿಂದಿನ ಸಂಚಿಕೆಗಳು :
- ನವದುರ್ಗೆಯರಲ್ಲಿ ಮೊದಲನೆಯ ಶಕ್ತಿ ಶೈಲಪುತ್ರಿ
- ನವದುರ್ಗೆಯ ಎರಡನೇಯ ಸ್ವರೂಪ ಬ್ರಹ್ಮಚಾರಿಣಿ
- ಆದಿಶಕ್ತಿಯ ಮೂರನೇ ಸ್ವರೂಪ ಚಂದ್ರಘಂಟಾ ದೇವಿ
- ಚಿಚ್ಛಕ್ತಿ ದುರ್ಗೆಯ ನಾಲ್ಕನೇ ಸ್ವರೂಪ ಕೂಷ್ಮಾಂಡಾದೇವಿ
- ಮಹಾದೇವಿಯ ಪಂಚಮ ಸ್ವರೂಪ ಸ್ಕಂದಮಾತಾ
- ದಾನವ ಘಾತಿನಿ ಜಗದಂಬೆಯ ಆರನೇ ಸ್ವರೂಪವೇ ‘ಕಾತ್ಯಾಯಿನಿ’
- ಭಗವತಿ ಭವಾನಿಯ ಸಪ್ತಮ ಸ್ವರೂಪವೇ ಭಯಂಕರ ‘ಕಾಲರಾತ್ರಿ’
- ಡಾ.ಮಲ್ಲಿಕಾರ್ಜುನ ಎಸ್ ಆಲಮೇಲ, ಯಡ್ರಾಮಿ ಜಿಲ್ಲಾ, ಕಲಬುರ್ಗಿ.
