ಉಮರನ ಒಸಗೆ (ಪದ್ಯ – 0೧)

ಕವಿ ಉಮರನು ಪ್ರತಿಮೆಗಳ ರಾಜ. ಅವನ ಈ ಕಾವ್ಯದಲ್ಲಿ ಪ್ರಿಯತಮೆಯನ್ನು ಬುದ್ಧಿಯ ಸಂಕೇತವಾಗಿ ಬಳಸಿದ್ದಾನೆ. ಅವಳಲ್ಲಿನ ಚೆಲುವು ಒಲವುಗಳ ಸಮ್ಮಿಳಿತವನ್ನೂ ವರ್ಣಿಸಿ ಅವಳನ್ನು ನಿದ್ದೆಯಿಂದೇಳಲು ಪ್ರಚೋದಿಸುತ್ತಿದ್ದಾನೆ. ಕವಿ ರವೀಂದ್ರ ಕುಮಾರ್ ಎಲ್ವೀ ಅವರು ಉಮರನ ಒಸಗೆಯ ಕವಿತೆಯ ಅರ್ಥವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಏಳೆನ್ನ ಮನದನ್ನೆ ! ನೋಡು, ಪೊಳ್ತರೆ ಬಂದು
ನಿಶಿಯ ಬೋಗುಣಿಯೊಳಕೆ ಹೊಂಬುಗುರಿಯೆಸದು
ತಾರೆಯರಳುಗಳನಲ್ಲಿಂದೆ ಚೆಲ್ಲಾಡಿಹನು :
ನಿದ್ದೆ ಸಾಕಿನ್ನೀಗ, ಮುದ್ದಣುಗಿ ಬಾರ

ಏಳೆನ್ನ ಮನದನ್ನೆ ! ನೋಡು, ಪೊಳ್ತರೆ ಬಂದು
ಪೊಳ್ತರೆ – ನಸುಕು, ಮುಂಜಾವು

ಓ ನನ್ನ ಪ್ರಿಯತಮೆಯೇ ನೋಡು ನಸುಕು ಮೂಡಿ;

ನಿಶಿಯ ಬೋಗುಣಿಯೊಳಕೆ ಹೊಂಬುಗುರಿಯೆಸದು

ನಿಶಿ = ರಾತ್ರಿ, ಕಪ್ಪಾದ ಸ್ವರೂಪ,
ಬೋಗುಣಿ – ತಳ ಚಿಕ್ಕದಾಗಿ ಬಾಯಿ ಅಗಲವಾಗಿರುವ ಪಾತ್ರೆ.
ಬುಗುರಿ = ತಿರುಗುವ ಒಂದು ಆಟಿಕೆ, ಹೊಂಬುಗುರಿ = ಹೊನ್ನಿನ ಬಣ್ಣದ ಬುಗುರಿ.

ರಾತ್ರಿ ಎಂಬ ಕಪ್ಪು ಬೋಗುಣಿಯ ಒಳಗೆ ಮುಂಜಾವಿನ ಹೊನ್ನಿನ ಬಣ್ಣದ ಬುಗುರಿಯನ್ನು ಎಸೆದು ;

ತಾರೆಯರಳುಗಳನಲ್ಲಿಂದೆ ಚೆಲ್ಲಾಡಿಹನು :

ಆ ಬೋಗುಣಿಯೊಳಗೆ ಅರಳುಗಳಂತೆ ಕಾಣುವ ಚಿಕ್ಕಿಗಳನ್ನು ( ತಾರೆಗಳು , ನಕ್ಷತ್ರಗಳು) ಎಲ್ಲೆಡೆಯೂ ಚೆಲ್ಲಾಡಿದ್ದಾನೆ.

ನಿದ್ದೆ ಸಾಕಿನ್ನೀಗ, ಮುದ್ದಣುಗಿ ಬಾರ

ಸಾಕಿನ್ನೀಗ =
ಸಾಕು +ಇನ್ನು + ಈಗ
ಅಣುಗಿ = ಮಗಳು.
ಮುದ್ದಣಗಿ = ಮುದ್ದಿನ ಮಗಳು, ಮುದ್ದು = ಪ್ರೀತಿ, ಚೆಲುವು, ಚುಂಬನ.

ಪ್ರೀತಿ, ಚೆಲುವು, ಒಲವು ಎಂಬುದೇನಿದೆಯೋ ಎಷ್ಟಿದೆಯೋ ಅದೆಲ್ಲದರ ಮಗಳಾಗಿರುವ ನೀನು ಬಾ. ಸೂರ್ಯೋದಯದ ಸುಂದರ ವರ್ಣನೆಯನ್ನು ಮಾಡುತ್ತಾ ಕವಿ ತನ್ನ ಪ್ರೇಯಸಿಯನ್ನು ನಿದ್ದೆಯಿಂದ ಎಬ್ಬಿಸುತ್ತಿದ್ದಾನೆ.

ನಿಶೆ ಅಥವಾ ರಾತ್ರಿಯು ಒಂದು ಅರ್ಧ ಗೋಳಾಕಾರದ ಕಪ್ಪನೆಯ ಬೋಗುಣಿಯನ್ನು ಮುಚ್ಚಿದಂತೆ ಭೂಮಿಯನ್ನು ಆವರಿಸಿರುತ್ತದೆ. ನಸುಕಿನ ಅಥವಾ ಮುಂಜಾವಿನ ಸೂರ್ಯ ಕಿರಣಗಳು ಆ ಬೋಗುಣಿಯೊಳಗೆ ಒಂದು ಹೊಂಬಣ್ಣದ ಬುಗುರಿಯನ್ನು ತಿರುಗಿಸಿ ಬಿಟ್ಟಂತೆ ಪ್ರವೇಶ ಮಾಡಿವೆ.

ಸೂರ್ಯನು ತಿರುಗುವ ಬುಗುರಿಯಿಂದ ಹೊಮ್ಮುವ ಹೊಂಬಣ್ಣದ ಕಿರಣಗಳನ್ನು ಬೋಗುಣಿಯೊಳಗೆ ಹರಡಿ, ಮಿಣಿ ಮಿಣಿ ಮಿಣುಕುತ್ತಿದ್ದ ನಕ್ಷತ್ರಗಳನ್ನು , ಹುರಿಯುವ ಬಾಣಲೆಯಿಂದ ಅರಳುಗಳು ಸಿಡಿದು ಚಲ್ಲಾಡುವಂತೆ ಚದುರಿಸುತ್ತಿದ್ದಾನೆ. ಎಂತಹ ಮನ ಮೋಹಕ ದೃಶ್ಯವಿದು. ಓ ನನ್ನ ಮನದನ್ನೆಯೇ ನಿದ್ದೆಯು ಸಾಕೀಗ, ಎಚ್ಚರವಾಗು.

ಚೆಲುವು, ಒಲವು ಸೇರಿ ಹೆಣ್ಣಾಗಿ ಪಡೆದ ಮುದ್ದಿನ ಮಗಳು ನೀನು. ಅಂತಹ ನನ್ನ ಪ್ರಿಯತಮೆಯೇ ಎದ್ದೇಳು ಎಂದು ರಸಿಕ ಕವಿಯು ತನ್ನ ಪ್ರೇಯಸಿಯನ್ನು ಎಚ್ಚರಗೊಳಿಸುತ್ತಿದ್ದಾನೆ.

ಉಮರನು ತನ್ನ ಪ್ರಿಯತಮೆಯನ್ನು ಎಬ್ಬಿಸುವಾಗ ಸುಂದರ ಮುಂಜಾವಿನ ವರ್ಣನೆಯನ್ನು ಮಾಡುತ್ತ ಅವಳಲ್ಲಿನ ಚೆಲುವು ಒಲವುಗಳ ಸಮ್ಮಿಳಿತವನ್ನೂ ವರ್ಣಿಸಿ ಅವಳನ್ನು ನಿದ್ದೆಯಿಂದೇಳಲು ಪ್ರಚೋದಿಸುತ್ತಿದ್ದಾನೆ.

ಕವಿ ಉಮರನು ಪ್ರತಿಮೆಗಳ ರಾಜ. ಅವನ ಈ ಕಾವ್ಯದಲ್ಲಿ ಪ್ರಿಯತಮೆಯನ್ನು ಬುದ್ಧಿಯ ಸಂಕೇತವಾಗಿ ಬಳಸಿದ್ದಾನೆ.

ಈ ಮೊದಲ ಪದ್ಯದಲ್ಲಿ, ರಾತ್ರಿಯ ತಾಮಸ ಗುಣದ ಪ್ರಭಾವಕ್ಕೆ ಒಳಗಾಗಿ ಜಡತ್ವವನ್ನು ಮೆರೆಯುತ್ತಿರುವ ಬುದ್ಧಿಯನ್ನು ಎಚ್ಚರಿಸಿ, ಜಾಗೃತ ಗೊಳಿಸಿ ನಮ್ಮ ಜೀವನವನ್ನು ಸತ್ಪಥಗೊಳಿಸಲು ಪ್ರಚೋದಿಸುತ್ತಿದ್ದಾನೆ, ದಾರ್ಶನಿಕ ಕವಿ ಉಮ್ಮರ್ ಖಯಾಮ್.

” ಧಿಯೋ ಯೋ ನಃ ಪ್ರಚೋದಯಾತ್’ – ಒಂದು ಲೋಕೋತ್ತರ ಪ್ರಾರ್ಥನೆಯಲ್ತೆ.


  • ರವೀಂದ್ರ ಕುಮಾರ್ ಎಲ್ವೀ – ಮೈಸೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading