ತಂದೆ ರಾಮಚಂದ್ರ ಕೃಷ್ಣಾಚಾರ್ಯ ಮಳಗಿ ಅವರ ದೇಶಾಭಿಮಾನದ ಕುರಿತು ಮಗ ಹಾಗೂ ಖ್ಯಾತ ಅನುವಾದಕ ಕೇಶವ ಮಳಗಿ ಅವರು ಬರೆದ ಪುಟ್ಟ ಲೇಖನವಾದರೂ, ಹೆಮ್ಮೆ ಹುಟ್ಟಿಸುವ ಲೇಖನ ತಪ್ಪದೆ ಒಮ್ಮೆ ಓದಿ…
ಇವರು ನನ್ನ ತಂದೆ ರಾಮಚಂದ್ರ ಕೃಷ್ಣಾಚಾರ್ಯ ಮಳಗಿ (1924-1990). ತಮ್ಮ ಹರೆಯದಲ್ಲಿ, ಆ ಕಾಲದ ಬಹುತೇಕ ತರುಣರಂತೆ ಸ್ವಾತಂತ್ರ್ಯ ಮಹಾ ಸಂಗ್ರಾಮದ ಆಕರ್ಷಣೆ ಸಿಲುಕಿದ್ದನ್ನು, ಎರಡೆರಡು ಸಲ ಸೆರೆವಾಸ ಅನುಭವಿಸಿ, ಪುಣೆಯ ಮುಳಾ-ಮಠ ನದಿಗೆ ಪ್ರವಾಹ ಬಂದಾಗ ಅಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡಿದ್ದನ್ನು ಈ ಪುಟ್ಟ ಬರಹದಲ್ಲಿ ಹೇಳಿಕೊಂಡಿದ್ದಾರೆ.
ಸ್ವಾತಂತ್ರ್ಯೊತ್ತರದ ರಾಜಕಾರಣ, ಭ್ರಷ್ಟಾಚಾರ ಮತ್ತು ವಿಷದಂತೆ ಹಬ್ಬುತ್ತಿದ್ದ ಜಾತೀಯತೆಯಿಂದ ತೀವ್ರವಾಗಿ ನೊಂದಿದ್ದ ಅವರು ಉಳಿದ ಸೋಗಲಾಡಿ ಗಾಂಧಿವಾದಿಗಳು ಅಧಿಕಾರದ ಬಾಲ ಬಡಿದುಕೊಂಡು ಹೋಗುತ್ತಿದ್ದಾಗ ‘ನಾವು ಕನಸಿದ್ದ ಸಮಾಜ ಇದಲ್ಲ’ ಎಂಬಂತೆ ಮೌನದಲಿ ನೇಪಥ್ಯಕ್ಕೆ ಸರಿದಿದ್ದರು.
(ರಾಮಚಂದ್ರ ಕೃಷ್ಣಾಚಾರ್ಯ ಮಳಗಿ)
ಅಂದಹಾಗೆ, ಅವರು ನಾನಿಲ್ಲದಾಗ ನನ್ನನ್ನು ಕರೆಯುತ್ತಿದ್ದುದು ‘ಕಾಮ್ರೇಡ್’ ಎಂದು. ತುರ್ತು ಪರಿಸ್ಥಿತಿ ಮತ್ತು ಜಾಗತೀಕರಣದ ನಂತರ ನಮ್ಮ ಸಮಾಜ ಎಲ್ಲ ರಂಗಗಳಲ್ಲಿ ಎದ್ದಿರುವ ನೈತಿಕ-ಬೌದ್ಧಿಕ ದಿವಾಳಿತನ, ಜಾತೀಯತೆ, ಅವಕಾಶವಾದಿ ರಾಜಕಾರಣ ಮತ್ತು ಜೀವನ ನನ್ನ ತಂದೆಯವರಷ್ಟೇ ನನ್ನನ್ನೂ ದುಃಖಿತನನ್ನಾಗಿ ಮಾಡಿದೆ.
ಆದರೆ, ನಾನು ಮೌನದಲಿ ನೇಪಥ್ಯಕ್ಕೆ ಸರಿಯಲಾರೆ. ಇಲ್ಲಿ ಸಿದ್ಧಾಂತದ ಮುಖವಾಡದಲ್ಲಿ (ಎಡ-ಬಲ-ಮಧ್ಯ, ತೀವ್ರ ಇತ್ಯಾದಿಗಳ ಹೆಸರು ಬೇರೆ ಕೇಡು ಈ ದುಷ್ಟರಿಗೆ) ಸಮಾಜವನ್ನು ಅಸ್ವಸ್ಥಗೊಳಿಸುತ್ತಿರುವವರಿಗೆ ಮತ್ತು ಹೊಸ ತಲೆಮಾರಿನ ತರುಣ-ತರುಣಿಯರಿಗೆ ಅಕ್ಷರದ ಮೂಲಕ ಹೊಸ ಅರಿವು ಮೂಡಿಸುವುದರಲ್ಲಿ ನಾನು ಸದಾ ಅವಿಶ್ರಾಂತ.
ನನ್ನ ಎಲ್ಲ ಪ್ರಯತ್ನಗಳು ಆ ನಿಟ್ಟಿನಲ್ಲಿಯೇ. ಒಂದು ಮನಸು, ಒಂದು ಪುಟ್ಟ ಯುವ-ಯುವತಿಯರು ಗುಂಪು ನಮ್ಮಂಥವರ ಪ್ರಯತ್ನದಿಂದ ಉಲ್ಲಸಿತರಾದರೋ, ಒಂದಡಿ ಮುಂದಡಿಯಿಡುವ ಮನಸ್ಸು ಮಾಡಿದರೋ ನಮ್ಮ ಕೆಲಸ ಸಾರ್ಥಕವಾದಂತೆಯೇ. ಬೀದಿಯಲಿ ಕಂಠ ಶೋಷಣೆ ಮಾಡಿಕೊಳ್ಳುತ್ತ, ವಿಷವನ್ನೇ ಕನಸಿ, ವಿಷವನ್ನೇ ಉತ್ತಿ-ಬಿತ್ತಿ, ಕಟಾವು ಮಾಡಿ, ಉಂಡು, ಹಂಚಿ ಸಂತೃಪ್ತಿ ಕಾಣುವವರಿಗೆ ನಿಜದ ನೆಲೆ, ಅರಿವು ಕಂಡಾಗ ಭಯ, ದ್ವೇಷ, ಆವೇಗ. ಸಜ್ಜನರ, ಸಾತ್ವಿಕರ ಹುಟ್ಟಡಗಿಸದೆ ಬಿಡಲಾರೆವು ಎಂಬ ಶಿಖಂಡಿ ಉನ್ಮಾದ. ಒಳ್ಳೆಯತನ, ನಮ್ಯತೆ, ವಿನಯಗಳು ಇಂಥ ಸಮಾಜಘಾತುಕರಿಗೆ ಬಲಹೀನತೆಯಾಗಿ ಕಾಣುತ್ತವೆ.
ಅವರೆಲ್ಲ ಹಾಗೆಯೇ ಇರಲಿ. ನಾನು, ನನ್ನಂಥವರು, ಈ ವಚನಭ್ರಷ್ಠರು ನಾಲಿಗೆಯ ಸೂತಕದಿಂದ ಮಲಿನಗೊಳಿಸಿದ, ಗಾಯ ಮಾಡಿದ, ಬೀದಿಯಲಿ ಚೆಲ್ಲಾಪಿಲ್ಲಿಯಾದ ಪ್ರತಿ ಅಕ್ಕರವನು ಜತನದಿಂದ ಆಯುವೆವು. ಜೋಡಿಸುವೆವು. ಅವುಗಳ ಹಳೆಯ ಅರ್ಥ ಒಡೆದು, ತಿಕ್ಕಿ ತಿಕ್ಕಿ ಹೊಸ ಅರ್ಥವನು ಲೋಕಕೆ ತೋರಿಸುವೆವು.
(ತಂದೆಯವರ ಬರಹದ ಆಕರ: ಸ್ವಾತಂತ್ರ್ಯ ಸಂಗ್ರಾಮದ ಸ್ಮೃತಿಗಳು, ಸಂಪುಟ, ಮೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ).
- ಕೇಶವ ಮಳಗಿ (ಖ್ಯಾತ ಕತೆಗಾರರು,ಅನುವಾದಕರು ,ಲೇಖಕರು, ಕವಿಗಳು), ಬೆಂಗಳೂರು