ನಾಟಕ : ಬೆಂಗಳೂರ ನಾಗರತ್ನಮ್ಮ
ನಿರ್ದೇಶನ : ಟಿ.ಎಸ್. ನಾಗಾಭರಣ
ರಚನೆ : ಹೂಲಿಶೇಖರ್
ಕಲಾವಿದರು: ಅನನ್ಯ ಭಟ್, ರಮಾ, ನಾಗಿಣಿಭರಣ, ಪ್ರತಿಭಾ ನಂದಕುಮಾರ್ ಮುಂತಾದವರು
ಸಂಗೀತ ಕಲಾವಿದೆ ನಾಗರತ್ನಮ್ಮ ವಿದ್ಯಾಸುಂದರಿ ‘ಬೆಂಗಳೂರ ನಾಗರತ್ನಮ್ಮ‘ ಹೆಸರಿನ ನಾಟಕವಾಗಿ ರಂಗದ ಮೇಲೆ ವಿಜೃಂಭಿಸುತ್ತಿದ್ದಾರೆ. ಕನ್ನಡ ನಾಡಿನಲ್ಲಿ ಜನಿಸಿ, ತಮಿಳುನಾಡಿನ ಸಂಗೀತ ಲೋಕದಲ್ಲಿ ದಂತಕತೆಯಾದವರು ನಾಗರತ್ನಮ್ಮ. ಅವರ ಬದುಕನ್ನು ಆಧರಿಸಿದ ನಾಟಕ ಇದೀಗ ವಿದ್ಯಾಸುಂದರಿ ‘ಬೆಂಗಳೂರ ನಾಗರತ್ನಮ್ಮ’ ಹೆಸರಿನಲ್ಲಿ ಬೆನಕ ತಂಡ ಹಲವು ಪ್ರದರ್ಶನಗಳನ್ನು ನೀಡಿದೆ.
ಈ ನಾಟಕದ ಕಲ್ಪನೆ, ವಿನ್ಯಾಸ, ನಿರ್ದೇಶನ ನಾಗಾಭರಣ ಅವರದ್ದು. ನಾಟಕ ರಚನೆ ಹೂಲಿಶೇಖರ್ ಅವರದ್ದು, ಈ ನಾಟಕ ವಿಭಿನ್ನವಾಗಿ ರಂಗದ ಮೇಲೆ ಮೂಡಿಬಂದಿದ್ದು, ಕರ್ನಾಟಕ ಶಾಸ್ತ್ರೀಯ ಸಂಗೀತದ ಇಂಪಿದೆ. ಕೀರ್ತನ ಶೈಲಿಯಲ್ಲಿ ನಾಟಕ ಕಟ್ಟಿಕೊಡಲಾಗಿದೆ. ತ್ಯಾಗರಾಜರ, ಪುರಂದರದಾಸರ ಹಾಡುಗಳನ್ನು ಬಳಸಿಕೊಳ್ಳಲಾಗಿದೆ.
ಪುಟ್ಟಲಕ್ಷಮ್ಮ ನಂಜನಗೂಡಿನ ದೇವದಾಸಿ, ಹಾಡು ಹಾಗು ನೃತ್ಯಗಾರ್ತಿ. ಆಕೆಯ ಮಗಳೇ ನಾಗರತ್ನಮ್ಮ. ಬ್ರಿಟಿಷರು ದೇವಸ್ಥಾನಗಳಲ್ಲಿ ರಂಗಭೋಗ ಬೇಡ ಎಂದು ನಿಷೇಧಿಸಿದಾಗ ಮಗಳೊಂದಿಗೆ ಪುಟ್ಟಲಕ್ಷಮ್ಮ ಮೈಸೂರಿಗೆ ಬಂದು ನೆಲೆಸುತ್ತಾರೆ. ಅಲ್ಲಿ ನಾಗರತ್ನಳ ಸಂಗೀತ, ನೃತ್ಯ ಕಲಿಕೆ ಮುಂದುವರಿದು, ಮಹಾರಾಜರು ವೀಕ್ಷಿಸಿ ಮೆಚ್ಚಿಕೊಳ್ಳುವ ಮಟ್ಟಕ್ಕೆ ಬೆಳೆಯುತ್ತದೆ. ನಂತರ ಜಸ್ಟಿಸ್ ನರಹರಿಯವರು ನಾಗರತ್ನಳ ಪ್ರೇಮದ ಬಲೆಗೆ ಬೀಳುತ್ತಾರೆ. ಪ್ರತಿಷ್ಠೆ ಅಡ್ಡಬಂದಾಗ ಅಥವಾ ತಮಗೆ ಸಾಕೆನಿಸಿದಾಗ ಮದ್ರಾಸ್ ನ ರಾಜರತ್ನಂ ಮೊದಲಿಯಾರ್ ಎಂಬ ಸಂಗೀತ ಪರಿಚಾರಕನಿಗೆ ನಾಗರತ್ನಮ್ಮಳನ್ನು ಸಾಗಹಾಕುತ್ತಾರೆ. ಆದರೆ ನಾಗರತ್ನಮ್ಮಳ ಬದುಕಿನಲ್ಲಿ ಅದು ವರವೇ ಆಗುತ್ತದೆ. ಶಾಸ್ತ್ರೀಯ ಸಂಗೀತದ ಆಡುಂಬೊಲವಾದ ಮದ್ರಾಸ್ ಒಮ್ಮೆ ನಾಗರತ್ನಮ್ಮ ಬಂದು ನೆಲೆಸಿದ ಮೇಲೆ ಹಂತ ಹಂತವಾಗಿ ಮುಗಿಲೆತ್ತರಕ್ಕೆ ಬೆಳೆಯುತ್ತಾರೆ.
ಭಾರತರತ್ನ ಎಂ.ಎಸ್ ಸುಬ್ಬಲಕ್ಷ್ಮಿ ಯವರಿಗೆ ಸಂಗೀತದ ವೇದಿಕೆ ಮೊದಲು ಕಲ್ಪಿಸಿದ್ದೇ ನಾಗರತ್ನಮ್ಮಾಳ್. ಮಹಿಳೆಯರ ಸಂಗೀತ ಗೋಷ್ಠಿಗಳಿಗೆ ಅಡ್ಡಲಾಗಿದ್ದ ಕಂದಾಚಾರಿಗಳ ವಿರುದ್ಧ ಹೋರಾಟವನ್ನೇ ಮಾಡುತ್ತಾರೆ. ದೇವದಾಸಿಯರೆಂದರೆ ದೇವರಿಗೆ ಕಲೆಯ ಆರಾಧನೆ ಮಾಡುವವರು, ವೇಶ್ಯಯವರಲ್ಲ ಎಂದು ಸಮಾಜಕ್ಕೆ ಸಾರಿಸಾರಿ ಹೇಳುತ್ತಾರೆ. ಸಂಗೀತದ ದುಡಿಮೆಯಿಂದ ಮದ್ರಾಸ್ ನಲ್ಲಿ ಮ್ಯಾನ್ ಸನ್ ಹೌಸ್ ಎಂಬ ಭವ್ಯ ಬಂಗಲೆಯನ್ನೇ ಕಟ್ಟಿಸುತ್ತಾರೆ.
ದೇವಸ್ಥಾನ ಕಟ್ಟಿಸುತ್ತಾಳೆ. ಇದಕ್ಕಾಗಿ ತನ್ನ ಕೆಜಿಗಟ್ಟಲೆ ಬಂಗಾರ, ಭವ್ಯಬಂಗಲೆ ಮಾರಾಟ ಮಾಡಿದ ಈ ವಿದ್ಯಾಸುಂದರಿ ನಿರಾಡಂಬರ ಸುಂದರಿಯಾಗುತ್ತಾರೆ. ದಂತ ಕತೆಯಾಗುತ್ತಾರೆ. ಆಕೆಯೇ ಹೆಮ್ಮೆಯ ಕನ್ನಡತಿ ನಾಗರತ್ನಮ್ಮ. ರಮಾ ಸಂಗೀತ ತಂಡದವರು. ಮುಖ್ಯ ಪಾತ್ರದಲ್ಲಿ ಖ್ಯಾತ ಗಾಯಕಿ ಅನನ್ಯ ಭಟ್ ಮುಖ್ಯ ಭೂಮಿಕೆಯಲ್ಲಿಯೇ ಅದ್ಭುತವಾಗಿ ನಟಿಸಿದ್ದಾರೆ. ಮತ್ತು ಪ್ರತಿಭಾ ನಂದಕುಮಾರ್, ನಾಗಿಣಿಭರಣ ಮುಂತಾದವರ ಪರಿಶ್ರಮವೂ ಸೇರಿ ಸಂಗೀತ ನಾಟಕವಾಗಿದೆ.
ಕೃಪೆ : ವಿಜಯ ಕರ್ನಾಟಕ
ವಿಮರ್ಶೆ : ಗುಡಿಹಳ್ಳಿ ನಾಗರಾಜ್