ಹೆದರದಿರು ಸಾವಿಗೆ…ಕುಗ್ಗದಿರು ಮನಸಿನ ನೋವಿಗೆ…ಬೆದರದಿರು ಸುಡುವ ಬಿಸಿಲ ಕಾವಿಗೆ. ಮುದ್ನಾಳ ವಸತಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ ಅವರು ಕವನವನ್ನು ತಪ್ಪದೆ ಮುಂದೆ ಓದಿ…
ಬೆಳದಿಂಗಳಂದ ಬಾನಿಗೆ
ಮನಸು ಬೀಳದಿರಲಿ ಬೋನಿಗೆ
ಚಿಂತೆಯೇ ಮೂಲ ತಲೆಯ ಬ್ಯಾನಿಗೆ.
ಹಸಿರಂದ ಕಾಡಿಗೆ
ಹಸಿರೇ ಉಸಿರು ನಾಡಿಗೆ
ಹೋಗಬೇಡ ಮರ ಕಡಿವ ಜಾಡಿಗೆ.
ಮೂಗುತಿ ಚೆಂದ ಮೂಗಿಗೆ
ಮಂದಹಾಸದ ಚೆಲುವು ನಗುವಿಗೆ
ಗರಿಯ ಸೊಬಗಂದ ಕುಣಿವ ನವಿಲಿಗೆ.
ಹೆದರದಿರು ಸಾವಿಗೆ
ಕುಗ್ಗದಿರು ಮನಸಿನ ನೋವಿಗೆ
ಬೆದರದಿರು ಸುಡುವ ಬಿಸಿಲ ಕಾವಿಗೆ.
ತೆನೆಭಾರವಲ್ಲ ನವಣೆಗೆ
ಧೃತಿಗೆಡದಿರು ಬಾಳ ಬವಣೆಗೆ
ಅರಿವೇ ಆಧಾರ ಬದುಕಿನ ಬದಲಾವಣೆಗೆ.
ವರ್ಷಧಾರೆ ಬಿರಿದ ಭೂಮಿಗೆ
ಗಡೆಗಣಿಸಬೇಡ ತುತ್ತಿಟ್ಟ ತಾಯಿಗೆ
ಧರೆಯ ನೋವರಿಯದು ಗಾವಿಲರಿಗೆ.
ಮರುಳಾಗಬೇಡ ಮುತ್ತಿಗೆ
ಮರೆಯಬೇಡ ಅಮ್ಮನ ಕೈ ತುತ್ತಿಗೆ
ದುಡಿದನ್ನ ಹೊಟ್ಟೆಗಾಕಿಹಳು ಮೂರೊತ್ತಿಗೆ.
- ಡಾ. ಅಶೋಕ ಕುಮಾರ ಎಸ್ ಮಟ್ಟಿ ಮೀನಕೇರಿ – ಪ್ರಾಂಶುಪಾಲರು ಸರಕಾರಿ ಪ್ರಥಮ ದರ್ಜೆ ವಸತಿ ಕಾಲೇಜು ಮುದ್ನಾಳ ಯಾದಗಿರಿ ಜಿಲ್ಲೆ. ಜಿಲ್ಲಾಧ್ಯಕ್ಷರು ಸಿರಿಗನ್ನಡ ವೇದಿಕೆ ಯಾದಗಿರಿ ಜಿಲ್ಲಾ ಘಟಕ
