ನವೆಂಬರ್ ೧ ಮಾತ್ರ ಕನ್ನಡವಾಗದೆ, ದಿನನಿತ್ಯ ನಮ್ಮ ಭಾಷೆಯಲ್ಲಿ ಕನ್ನಡವಿರಲಿ…ಎಲ್ಲರೊಂದಿಗೆ ಕನ್ನಡದಲ್ಲಿಯೇ ವ್ಯಹರಿಸಿದರೆ ಅದೇ ಕನ್ನಡಕ್ಕೆ ನೀಡುವ ಗೌರವ ಎನ್ನುತ್ತಾರೆ ಶಶಿಕುಮಾರ್.ಎಂ.ಎ, ತಪ್ಪದೆ ಮುಂದೆ ಓದಿ…
ನಾನು ಕಾಲೇಜು ವಿಧ್ಯಾಭ್ಯಾಸ ಮುಗಿಸಿ ಕೆಲಸಕ್ಕೆ ಸೇರಿದಾಗ ಮಾತೃಭಾಷೆ, ಆಡುಭಾಷೆ, ನಗರದ ಭಾಷೆ, ರಾಜ್ಯಭಾಷೆ ಎಲ್ಲವು ಕನ್ನಡವೆ ನನಗೆ ತಿಳಿದಿದ್ದು ಕನ್ನಡ ಮತ್ತು ಇಂಗ್ಲಿಷ್.
ಕೆಲಸಕ್ಕೆ ಸೇರಿ ಆಫೀಸಿನ ಹೊಸಿಲು ದಾಟಿ ಅಡಿ ಇಟ್ಟ ಮೊದಲ ದಿನವೆ ನನಗೆ ಸ್ವಾಗತ ಕೋರಿದ್ದು, ತಮಿಳು ತಮಿಳಿನ ಜನರು. ಅವರೇನಂದರೊ ನನಗೊಂದು ಅರ್ಥವಾಗಲಿಲ್ಲ. ಆದರು ಹೇಗೊ ಅನುಸರಿಸಿಕೊಂಡು ನನಗಾಗಿ ಮೀಸಲಿದ್ದ ಜಾಗದಲ್ಲಿ ಕೂತುಕೊಂಡೆ. ಸ್ವಲ್ಪ ಸಮಯದಲ್ಲೇ ಆಫೀಸರ್ ಕರೆದರು, ಹೊಸದಾಗಿ ಸೇರಿದ್ದ ಮೂವರು ಹೋದೆವು. ಆಫೀಸರ್ ತಮಿಳಿನಲ್ಲಿ ಉದುದ್ದ ಭಾಷಣ ಬಿಗಿದರು. ನನಗೆ ಏನೊಂದು ತಲೆಗೆ ಹೋಗಿಲಿಲ್ಲ.
ಕಾಲ ಕ್ರಮೇಣ ದಿನ ಕಳೆದಂತೆ ವರ್ಷಗಳು ಉರುಳಿದಂತೆ ತಮಿಳು ಮಾತನಾಡಲು ಕಲಿತೆನು. ಇತ್ತೀಚಿನ ದಿನಗಳಲ್ಲಿ ತಮಿಳು, ತೆಲುಗು ಹಾವಳಿ ಕಡಿಮೆಯಾಗಿ ಹಿಂದಿ ಹೇರಿಕೆ ಹೆಚ್ಚಾಯಿತು.
ಉತ್ತರ ಭಾರತದ ಜನರು ದಕ್ಷಿಣ ಭಾರತಕ್ಕೆ ಬಂದು ನೆಲೆಸಿ ಹಿಂದಿ ಹೇರಿಕೆ ಶುರುವಾಯಿತು. ಅದು ಆಫೀಸಾಗಿರಲಿ, ಬ್ಯಾಂಕ್ ಇರಲಿ, ದಿನ ನಿತ್ಯದ ಅಡಿಗೆ ಪದಾರ್ಥಗಳನ್ನು ಕೊಳ್ಳಲು ಅಂಗಡಿಗೆ ಹೋದರೆ ಅಲ್ಲಿಯೂ ಹಿಂದಿ ಹೇರುವರು. ಅತ್ಯಂತ ಪ್ರೀತಿ ಪಾತ್ರವಾದ ಪಾನಿ ಪುರಿ, ಮಸಾಲೆ ಪುರಿ, ಗೋಬಿ ಹೀಗೆ ಎಲೆಲ್ಲು ಹಿಂದಿಮಯ ನಮ್ಮ ಕನ್ನಡದ ಹೆಣ್ಣುಮಕ್ಕಳು ಭಯ್ಯಾ ಏಕೆ ಪ್ಲೇಟ್ ಪಾನಿಪುರಿ, ಔರ್ ಏಕ್ ಪ್ಲೇಟ್ ದೊ ಪ್ಲೀಸ್…ಎಂದಾಗ ಕೋಪ ಉಕ್ಕಿ ಬಂದರು ಮನಸ್ಸಿನಲ್ಲೆ ಬೈದುಕೊಂಡು ಸುಮ್ಮನಾಗಬೇಕು. ಮನೆಯಲ್ಲಿ ಕೈ ಕೊಟ್ಟು ರಿಪೇರಿಗೆ ಬರ ಹೇಳಿದೆ. ನೋಡಿ ಬಂದವನು ಹಿಂದಿವಾಲ. ನಮಗೆ ಹಿಂದಿ ಬರಲ್ಲ ಆ ಮುಂಡೆದಕ್ಕೆ ಕನ್ನಡ ಬರಲ್ಲ. ಅವನ ಜೊತೆ ಇದ್ದ ಚಿಕ್ಕ ಹುಡುಗ ನಮ್ಮಿಬ್ಬರಿಗೂ ಅನುವಾದಿತ. ಮುಂದಕ್ಕೆ ಆ ಹುಡುಗ ಎಷ್ಟು ಕಥೆ, ಕಾದಂಬರಿಗಳನ್ನು ಅನುವಾದಿಸಬಹುದು ಅದರಿಂದಲೆ ಡಾಕ್ಟರೇಟ್ ತೆಗೆದುಕೊಳ್ಳಬಹುದೆ.
ಇನ್ನು ಮನೆ ಕಟ್ಟುವಾಗಂತು ಗ್ರಾನೈಟ್ ಹಾಕಲು ವೆಟ್ರಿಫೈಡ್ ಟೈಲ್ಸ್ ಹಾಕಲು ಬಾತ್ರೂಂ ಫಿಟ್ಟಿಂಗ್ ಕೆಲಸವೆಲ್ಲ ಗುಜರಾತಿಗಳೆ. ಕನ್ನಡದ ಕೆಲವರಂತೂ ಸೋಮಾರಿ ಕಟ್ಟೆಯಲ್ಲಿ ಕುಳಿತು ಬಂದು ಹೋದ, ಬಂದಿರುವ, ಮುಂದೆ ಬರುವ, ಚಲನಚಿತ್ರಗಳ ಬಗ್ಗೆ ವಿಮರ್ಶಿಸುತ್ತಾ ಗಂಟೆಗೊಮ್ಮೆ ಟೀ ಕುಡಿದು ಕಾಲಾಹರಣ ಮಾಡುವುದು. ಹೀಗಾಗಿ ಪರ ರಾಜ್ಯದವರಿಗೆ ನಾವೆ ಮಣೆ ಹಾಕಿ ಕೂರಿಸಿ ಕನ್ನಡತನವನ್ನು ಮರೆತು ಹಿಂದಿಯ ಹಿಂದೆ ಬೀಳುತ್ತಿದ್ದೇವೆ. ಕನ್ನಡವನ್ನು ಉಳಿಸಿ ಬೆಳೆಸುವುದು ಹೇಗೆ ಎಲ್ಲಿಂದ. ಮೊಮ್ಮಗಳ ಶಾಲಾ ವ್ಯಾನ್ ಚಾಲಕ ಹಿಂದಿಯವನು, ಆಯಾ ಹಿಂದಿ ಯಾಕೆ, ಕತ್ತೆ ಹಾಲು ಮಾರಲು ಬರುವವರು ತೆಲುಗಿನವರು. ಎಲ್ಲಿ ಹೋದರು ಕನ್ನಡದ ಜನರು.
ನಡೆದು ಹೋಗುವಾಗ ಬಿಸಿಲಿನ ತಾಪಕ್ಕೆ ಒಂದು ನಿಂಬೆಹಣ್ಣಿನ ಪಾನಕ ಮಾರುವವನು ಸಹ ಗುಜರಾತಿ ಚಳಿಗೆ ಒಂದು ಲೋಟ ಹಾಲು, ಕಾಫಿ, ಟೀ ಏನೆ ಕೇಳಿ ಏಕ್ ಗಿಲಾಸ್ ಚಾಯ್ ಅಂತಾರೆ.
ಎಷ್ಟು ಅಂದರೆ ದಸ್ ರೂಪಾಯ್ ಸರ್. ಕನ್ನಡದ ಬೇರು, ಬುಡವೆ ಇಲ್ಲದಾದಾಗ ಇನ್ನು ಹೆಮ್ಮರವಾಗಿ ಬೆಳೆಯುವುದಾದರು ಹೇಗೆ. ಅರ್ಥವಾಗದ, ಉತ್ತರ ಸಿಗದ ಪ್ರಶ್ನೆಗಳಿಗೆ ಸರ್ಕಾರದ ಮೇಲೆ ಒತ್ತಡ ತಂದು ಏನು ಪ್ರಯೋಜನ. ಮನೆ ಮನೆಯಲ್ಲು ಹಣತೆ ಹಚ್ಚಿ …ಹಚ್ಚೇವು ಕನ್ನಡದ ದೀಪ ಎಂದು ರಾಗ ರಾಗವಾಗಿ ಹಾಡಿ ಬಾವುಟ ಹಾರಿಸಿ. ಹಳದಿ ಕೆಂಪು ಬಣ್ಣದ ಬಟ್ಟೆ ತೊಟ್ಟು ಒಂದು ದಿನ ಇಲ್ಲವೆ ಒಂದು ತಿಂಗಳು ವಿಜ್ರಂಭಿಸಿದರಾಯಿತೆ.
ಆಫೀಸಿನಲ್ಲಿ ಈಗ್ಗೆ ಹತ್ತು ವರ್ಷಗಳಿಂದ ನಾವು ಕನ್ನಡಿಗರು ಮಾತನಾಡಿಕೊಂಡು ಉತ್ತರ ಭಾರತದ ಜನರು ಬಂದು ಹಿಂದಿಯಲ್ಲಿ ಮಾತನಾಡಿದರೆ ಕನ್ನಡದಲ್ಲಿ ಹೇಳುವಂತೆ ಒತ್ತಾಯ ಮಾಡುವೆವು. ಅದರಿಂದ ನಮಗೆ ಕೆಟ್ಟ ಹೆಸರು ಬಂದಿದ್ದು ಸಹಜವೆ.
ಜೈ ಕರ್ನಾಟಕ ಮಾತೆ…..
ಕನ್ನಡ ಉಳಿಯಲಿ….ಬೆಳೆಯಲಿ ಎಂದು ಆಶಿಸುವ
ಕನ್ನಡಿಗ
- ಶಶಿಕುಮಾರ್.ಎಂ.ಎ – ಮೈಸೂರು.
