ನವವಿವಾಹಿತೆಯ ಕಾಲುಗುಣದ ಕುರಿತು ಜನ ಹೇಗೆಲ್ಲ ಮಾತಾಡುತ್ತಾರೆ ಎನ್ನುವುದನ್ನು ಕವಿ ಅಪ್ಪಯ್ಯ ಯು ಅವರು ಕವಿತೆಯ ಮೂಲಕ ಕಟ್ಟಿಕೊಟ್ಟಿದ್ದಾರೆ. ತಪ್ಪದೆ ಮುಂದೆ ಓದಿ…
ಬಂದವಳು ಬಲಗಾಲಿಟ್ಟಳೋ ಎಡಗಾಲಿಟ್ಟಳೋ
ಮನೆಯಲ್ಲಿ ನರಳುತ್ತಿದ್ದ ಅಜ್ಜಿ
ಸೆಂಚುರಿಗೆ ಒಂದು
ರನ್ನಿರುವಾಗ ಔಟಾದಳು
ಅಲ್ಲಿದ್ದವರೆಲ್ಲ ಅನ್ನಬೇಕೇ
ಯಾವಗಳಿಗೆಯೋ
ಬಂದವಳ ಕಾಲುಗುಣ
ಸರಿ ಇಲ್ಲ
ಆರು ತಿಂಗಳಿಂದ ಗೇಸ್ಬಿಡುತ್ತಿದ್ದ ಸಿಲಿಂಡರು
ಇದ್ದಕ್ಕಿದ್ದಂತೆ ಖಾಲಿಯಾಗಬೇಕೇ
ಚಟಚಟ ನೆಟಿಗೆ ಹೊಡೆಯುತ್ತ ಅಜ್ಜಿ ಹೇಳಿದಳು ಓರಗಿತ್ತಿ
ಯಾವ ಗಳಿಗೆಯಲಿ ಕಾಲಿಟ್ಟಳೋ ಮೂದೇವಿ
ಕೋಳಿಕಟ್ಟಕ್ಕೆ ಹೊಗುತ್ತಿದ್ದ ರಾಮಂಜ ತಪ್ಪದೆ
ಕೋಳಿತರುತ್ತಿದ್ದ
ಇಂದು ಪ್ರೀತಿಯಿಂದ ಸಾಕಿದ
ಕೋಳಿಯ ಕೊಟ್ಟು ಪೆಚ್ಚು ಮೋರೆಲಿ ಬಂದವನೇ
ಕೊಂಕು ಮೋರೆ ಮಾಡಿ ಹೇಳಬೇಕೇ ಅತ್ತೆ
ಆ ಕತ್ತೆ ಬಂದ ಗಳಿಗೆ ಸರಿಯೇ ಇಲ್ಲ
ಆದಿನ ಮಗ ಬೇಂಕಿಗೆ ಹೋಗುತ್ತಿದ್ದ ಸ್ಕೂಟರಲ್ಲಿ
ಇಂದ್ಯಾಕೋ ಹಿಂಬದಿ ಟಯರು ಟುಸ್
ಆತನ ಮನವೂ ಹೇಳಬೇಕೇ??
ಅವಳ ಕಾಲುಗುಣ ಯಾಕೋ ಸರಿಯೇ ಇಲ್ಲ ಅನ್ಸುತ್ತೆ
ದಿನಾ ಕೊಂಕು ಮಾತಾಡುತ್ತಿದ್ದ ಅತ್ತೆ
ಒಂದು ಮುಂಜಾನೆ
ಮಾತೇ ನಿಲ್ಲಿಸಿದಳು
ಸ್ವಾಸ ಎಳೆಯದೆ ಮೌನವಾದಳು
ಮಾವ ಆಗಲೇಹೇಳಿದರು ಸೊಸೆಗೆ
ಶಾಲೂ ನಿನ್ನ ಕಾಲುಗುಣ
ಮಸ್ತಾಗೈತೆ
- ಅಪ್ಪಯ್ಯ ಯು – ಕಾಸರಗೋಡು.
