ಶಾಲಿನಿ ಹೂಲಿ ಪ್ರದೀಪ್ ಅವರ ‘ಪದ್ದಣ ಮನೋರಮೆ’ ಮೊಟ್ಟ ಮೊದಲ ಕೃತಿ ಎಂದರೆ ಆಶ್ಚರ್ಯವಾಗುತ್ತದೆ ಕಾರಣ ಓದುಗರಿಗೆ ನೀಡಿದ ರಸದೌತಣ ಬಹಳ ಸುಂದರವಾಗಿದೆ. ಲೇಖಕಿ ಹೆಚ್ ವಿ ಮೀನ ಅವರು ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ : ‘ಪದ್ದಣ ಮನೋರಮೆ’ ಲಘು ಪ್ರಸಂಗ-ಕಥೆಗಳು
ಕರ್ತೃ : ಶಾಲಿನಿ ಹೂಲಿ ಪ್ರದೀಪ್
ಪ್ರಕಾಶನ : ಆಕೃತಿ ಕನ್ನಡ ಪ್ರಕಾಶನ
ಬೆಲೆ : 150/-
ಮೊಬೈಲ್ : 9880424461
ಗಂಡ ಹೆಂಡಿರ ನಡುವಿನ ನಂಟು ಬಿಡಿಸಲಾಗದ ಗಂಟು. ಒಮ್ಮೊಮ್ಮೆ ಸರಸ ಸಲ್ಲಾಪಗಳ ಗುಟ್ಟು ರಟ್ಟು. ಒಂದಿಷ್ಟು ಹುಸಿ ಕೋಪ-ತಾಪಗಳ ಜೊತೆ ಜೀವನದ ಸಿದ್ಧಾಂತಗಳ ನಿಲುವಿನ ಲಘು ಹಾಸ್ಯ ಪ್ರಸಂಗಗಳ ಸುತ್ತಲೂ ಹೆಣೆದ ಇಪ್ಪತ್ತನಾಲ್ಕು ಸಣ್ಣ ಕಥೆಗಳ ‘ಪದ್ದಣ ಮನೋರಮೆ’ಯು ಮನುಷ್ಯನ ಮಾನಸಿಕ ಸ್ಥಿತಿಗಳನ್ನು ಅನಾವರಣಗೊಳಿಸುತ್ತದೆ.
ಗೆಳೆಯನ ಹೆಂಡತಿ ರೈಟ್ ಹೇಳಿದಾಗ ಈ ಪ್ರಸಂಗವು ನಾವು ಮಾತನಾಡುವಾಗ ಬಳಸುವ ಪದಗಳು ಕೆಲವೊಮ್ಮೆ ದ್ವಂದ್ವಾರ್ಥ ಹೊಂದಿರುವಾಗ ನಮ್ಮ ಮಾತನ್ನು ಕೇಳಿಸಿಕೊಂಡವರು ಅದನ್ನು ಅರ್ಥೈಸಿಕೊಂಡ ರೀತಿ ಬೇರೆಯಾದಾಗ ಸಂಭವಿಸುವ ಘಟನೆಯು ನಾವು ಮಾತನಾಡುವಾಗ ಭಾಷೆಯ ಶುದ್ಧತೆ ಅವಶ್ಯಕರ ಎಂದುದನ್ನು ನಮ್ಮ ಗಮನಕ್ಕೆ ತರುವುದಲ್ಲದೆ ಜನರು ಮೃತಪಟ್ಟವರ ಶರೀರವನ್ನು ಕೂಡ ಯಾವ ರೀತಿಯಲ್ಲಿ ಗಮನಿಸುತ್ತಾರೆಂದೂ ಹಾಗೂ ತಮ್ಮದೇ ಆದ ಒಂದು ಅಭಿಪ್ರಾಯವನ್ನು ಸೃಷ್ಟಿಸುತ್ತಾರೆ ಎಂಬ ಕಟು ಸತ್ಯವನ್ನು ಮನೋರಮೆಯು ತನ್ನ ಗಂಡನಾದ ಪದ್ದಣನೊಡನೆ ನಡೆಸಿದ ಸಂಭಾಷಣೆಯಲ್ಲಿ ಬಯಲು ಮಾಡಿದ್ದಾರೆ.

ಅಬ್ಬಾ… ! ಆ ದಿನ… ಬಂಜೆತನದ ನೋವನ್ನು ಅನುಭವಿಸುತ್ತಿದ್ದ ಸ್ಫೂರ್ತಿಯ ಮಡಿಲು ತುಂಬಿದಾಗ ಇತರರಿಂದ ಕೇಳಲ್ಪಡಬೇಕಾಗುತ್ತಿದ್ದ ಚುಚ್ಚು ನುಡಿಗಳು ಸ್ಥಬ್ಧಗೊಂಡವು. ಸಂತೋಷದ ಹೂನಲಲ್ಲಿ ತೆಲಾಡುತ್ತಿದ್ದ ಸ್ಫೂರ್ತಿಯು ತನ್ನ ಮಾವನವರ ಮರೆವಿನಿಂದ ತನ್ನ ಮಗನ ಜೀವಕ್ಕೆ ಅಪಾಯ ಬಂದರೂ ಆ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ದುಃಖದಿಂದ ಕುಳಿತಿದ್ದ ಮಾವನವರನ್ನು ಸಮಾಧಾನಗೊಳಿಸಿದ ಸೊಸೆಯಾದ ಸ್ಫೂರ್ತಿಯ ನಡೆ ಶ್ಲಾಘನೀಯ. ಇಂತಹ ಸೊಸೆಯಂದಿರು ಇಂದು ಕಾಣೆಯಾಗಿದ್ದಾರೆ.
ಸಾಮಾನ್ಯವಾಗಿ ಮಹಿಳೆಯರು ತಮ್ಮ ರೂಪು, ಬಣ್ಣ ಹಾಗೂ ದೇಹದ ಆಕಾರದ ಬಗ್ಗೆ ಹೆಚ್ಚು ಚಿಂತನೆಗಳನ್ನು ಹೊಂದಿರುತ್ತಾರೆ. ‘ರೋಮಿಯೋ’ ಎಂಬ ಕಥೆಯಲ್ಲಿ ರೋಮಿಯೋ ಒಂದುದಿನ ಮನೋರಮೆಯ ಕೈಗೆ ಪ್ರೀತಿ ಪತ್ರವನ್ನು ಕೊಟ್ಟು ಮನೋರಮೆಯ ಹೃದಯ ಬಡಿತವನ್ನು ಹೆಚ್ಚಿಸಿ ಕೊನೆಗೆ ಅವಳನ್ನು ಕಮಂಗಿಮಾಡಲು ಪ್ರಯತ್ನಿಸುತ್ತಾನೆ. ನಿರಾಸೆಗೊಳ್ಳದ ಮನೋರಮೆ ತನ್ನ ಸೋಲನ್ನು ಒಪ್ಪಿಕೊಳ್ಳದೆ ತನಗೆ ಒಪ್ಪುವಹಾಗೆ ಪದ್ದಣನೆಂಬ ಹುಡುಗನನ್ನು ವರಿಸಿ ಪ್ರೇಮ ವಿವಾಹವಾದರು. ಇಲ್ಲಿ ಲೇಖಕಿ ತನ್ನ ರೂಪದ ಬಗ್ಗೆ ತಾನೇ ಹಾಸ್ಯ ಲೇಪನವನ್ನು ಕೊಟ್ಟು ಶರೀರಕ್ಕೆ ರೂಪಕಿಂತಲೂ ಹೃದಯವಂತಿಕೆ ಹೆಚ್ಚು ಮೆರುಗನ್ನು ನೀಡುತ್ತದೆ ಎಂಬ ಸಂದೇಶವನ್ನು ಕೂಡ ನೀಡಿದ್ದಾರೆ.
“ಮೇಡಂ, ನೀವು ಕೊಟ್ಟ ಲವ್ ಐಕಾನ್ ನಿಂದ ನನ್ನ ಗರ್ಲ್ ಫ್ರೆಂಡ್ ಬಿಟ್ಟು ಹೋದ್ಲು”… ಫೇಸ್ ಬುಕ್ ನಲ್ಲಿ ಹರಿದಾಡುವ ಲವ್ ಐಕಾನನ್ನು ಮನೋರಮೆ ಚಂದನ್ ಎಂಬ ಸ್ನೇಹಿತನ ಪೋಸ್ಟ್ ಗೆ ಒತ್ತಿದ್ದ ಪರಿಣಾಮ ತುಂಬಾ ನಗು ತರಿಸಿತು. ಪಾಪ ಪ್ರೀತಿಯ ಭ್ರಮೆಯಲ್ಲಿದ್ದ ಮನೋರಮೆಗೆ ಚಳ್ಳೆ ಹಣ್ಣು ತಿನ್ನುವ ಪರಿಸ್ಥಿತಿ ಬಂತು. ಹ.. ಹಾ… ಸ್ನೇಹಿತರೇ ವಿಷಯ ಗೊತ್ತಾ!…. ಪದ್ದಣನಿಗೆ ಈ ವಿಷಯ ಗೊತ್ತೇ ಇಲ್ಲ.
ಫೇಸ್ಬುಕ್ ನಿಂದ ದೂರ ಇರು ಎಂದು ಆಗ್ಗಾಗ್ಗೆ ಮನೋರಮೆಯನ್ನು ಎಚ್ಚರಿಸುತ್ತಿದ್ದ ಪದ್ದಣ. ಪದ್ದಣನ ಮಾತಿಗೆ ಮೂಗು ಮುರಿದು ಫೇಸ್ಬುಕ್ ನಲ್ಲಿ ಫ್ರೆಂಡ್ಸ್ ನ ಹುಡುಕಾಡುತ್ತಿದ್ದಾಗ ಇಂಟರ್ ನ್ಯಾಷನಲ್ ಫ್ರೆಂಡ್ಸ್ ಗಳಾದ ಜಾನು, ರೀಟು ಇವಳ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿದರು. ನಂತರ ಮನೋರಮೆ ಪದ್ದಣನಿಂದ ಸಹಸ್ರನಾಮ ಮಾಡಿಸಿಕೊಂಡು ‘ಬ್ಲಾಕ್ ಆಪ್ಷನ್’ ಬಗ್ಗೆ ತಿಳಿದುಕೊಂಡಳು.

ನಾಯಿ ಹೆಣ್ಣಾದ್ರೆ ತಪ್ಪಾ…..ಎಂಬ ಕಥೆ ಸೃಷ್ಟಿಯಲ್ಲಿ ಹೆಣ್ಣು ಎಂಬ ಜೀವಿ ಇಡೀ ಬ್ರಹ್ಮಾಂಡದಲ್ಲಿ ತಿರಸ್ಕೃತಳು ಎಂಬ ಸತ್ಯವನ್ನು ಸಾರುತ್ತದೆ.
ಹೀಗೆ ಇನ್ನು ಹಲವಾರು ಪ್ರಸಂಗಗಳಲ್ಲಿ ಲೇಖಕಿ ತಾನು ಪ್ರತಿನಿತ್ಯ ಕಾಣುವ ಗಂಭೀರ ಘಟನೆಗಳಿಗೆ ಹಾಸ್ಯವನ್ನು ತುಂಬಿ ಈ ಘಟನೆಗಳ ಕುರಿತಾಗಿ ತನ್ನ ಗಂಡನ ಜೊತೆ ಚರ್ಚಿಸಿದಾಗ ಅವರಿಬ್ಬರ ನಡುವೆ ಜರುಗುವ ಹುಸಿ ಕೋಪ ತುಸು ಪ್ರೀತಿಯ ಸಂಭಾಷಣೆಯ ಮೂಲಕ ಓದುಗರಿಗೆ ಜೀವನದ ಮೌಲ್ಯಗಳ ಅರಿವನ್ನು ಮೂಡಿಸುತ್ತಾ ಜೊತೆ ಜೊತೆಗೆ ನಗುವನ್ನು ತರಿಸುವ ಎಲ್ಲಾ ಕಥೆಗಳು ಓದುಗರ ಮನಸೆಳೆಯಲು ಯಶಸ್ವಿಯಾಗಿದ್ದಾರೆ.
ಇದು ಇವರ ಮೊಟ್ಟ ಮೊದಲ ಕೃತಿ ಎಂದರೆ ಆಶ್ಚರ್ಯವಾಗುತ್ತದೆ ಕಾರಣ ಈ ಪುಸ್ತಕದ ಪ್ರತಿಯೊಂದು ಸಾಲುಗಳಲ್ಲಿ ಬಳಸಿದ ಕನ್ನಡ ಪದಗಳು ಓದುಗರಿಗೆ ರಸದೌತಣದಂತೆ ಇದ್ದು ಬಹಳ ಸುಂದರವಾಗಿದೆ. ಎಲ್ಲರೂ ಈ ಪುಸ್ತಕವನ್ನು ಕೊಂಡು ಓದಿ ಆನಂದಿಸಿ ಹಾಗೂ ಹಾಸ್ಯದಲ್ಲಿ ಅಡಗಿರುವ ಮೌಲ್ಯಗಳನ್ನು ಗಮನಿಸಿ.
ನಿಸ್ವಾರ್ಥ ಸೇವಾಮನೋಭಾವನೆಯುಳ್ಳ ಇವರು ಎಲ್ಲರಿಗೂ ಬರಹಗಳನ್ನು ಬರೆಯಲು ಪ್ರೋತ್ಸಾಹಿಸುವ ಶಾಲಿನಿರವರಿಂದ ಇಂತಹ ಮತ್ತಷ್ಟು ಕೃತಿಗಳು ಓದುಗರ ಕೈ ಸೇರಲಿ ಎಂದು ಶುಭವನ್ನು ಕೋರುತ್ತಾ ಶಾಲಿನಿ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಹಾಗೆಯೇ ಶಾಲಿನಿಯ ಜವಾಬ್ದಾರಿಯುತ ಕೆಲಸಕ್ಕೆ ತಮ್ಮ ಬೆಂಬಲವನ್ನು ನೀಡುತ್ತಾ ಶಾಲಿನಿಯವರನ್ನು ಅವರ ಕೆಲಸದ ಒತ್ತಡದಿಂದ ಹೊರ ತರಲು ತಮ್ಮ ಮಾತಿನ ಮೂಲಕ ಹಾಸ್ಯದ ಅಲೆಯನ್ನು ತುಂಬುತ್ತಿರುವ ಪ್ರದೀಪ್ ಅವರಿಗೂ ಕೂಡ ನನ್ನ ಅಭಿನಂದನೆಗಳು.
‘ಪದ್ದಣ ಮನೋರಮೆ’ ಕೃತಿಯ ಕುರಿತು ಇನ್ನಷ್ಟು ಪರಿಚಯ :
- ‘ಪದ್ದಣ ಮನೋರಮೆ’ ಕೃತಿ ಪರಿಚಯ – ರಮ್ಯ ರಾಜ್
- ‘ಪದ್ದಣ ಮನೋರಮೆ’ ಲಘು ಪ್ರಸಂಗಗಳು – ಹೆಚ್. ಪಿ. ಕೃಷ್ಣಮೂರ್ತಿ
- ‘ಪದ್ದಣ ಮನೋರಮೆ’ ಕೃತಿ ಪರಿಚಯ – ದೇವರಾಜ ಚಾರ್
- ‘ಪದ್ದಣ ಮನೋರಮೆ’ ಕೃತಿ ಪರಿಚಯ – ಚನ್ನಕೇಶವ ಜಿ ಲಾಳನಕಟ್ಟೆ
- ‘ಪದ್ದಣ ಮನೋರಮೆ’ ಕೃತಿ ಪರಿಚಯ – ಎನ್.ವಿ. ರಘುರಾಂ
- ಹೆಚ್ ವಿ ಮೀನ – ಬೆಂಗಳೂರು.
