ಸಾಹಿತಿ ಯಶವಂತ ಚಿತ್ತಾಲರು ಉತ್ತರ ಕನ್ನಡ ಜಿಲ್ಲೆಯವರಾದರೂ ವಿದೇಶಗಳಲ್ಲಿ ಶಿಕ್ಷಣ ಪಡೆದು ಉದ್ಯೋಗ ನಿಮಿತ್ತ ನೆಲೆಸಿದ್ದು ಮುಂಬೈನಲ್ಲಿ. ಇವರು ೫ ಕಾದಂಬರಿಗಳು, ೯ ಕಥಾ ಸಂಕಲನ ಹಾಗೂ ೨ ಪ್ರಬಂಧ ಸಂಗ್ರಹಗಳನ್ನು ಪ್ರಕಟಿಸಿದ್ದಾರೆ. ಯಶವಂತ ಚಿತ್ತಾಲ ಅವರ ‘ಪುಟ್ಟನ ಹೆಜ್ಜೆ ಕಾಣೋದಿಲ್ಲಾ!’ ಕೃತಿಯ ಕುರಿತು ಮಾಲತಿ ರಾಮಕೃಷ್ಣ ಭಟ್ ಅವರು ಅಭಿಪ್ರಾಯವನ್ನು ತಪ್ಪದೆ ಓದಿ…
ಕೃತಿ : ಪುಟ್ಟನ ಹೆಜ್ಜೆ ಕಾಣೋದಿಲ್ಲಾ !
ಲೇಖಕರು: ಯಶವಂತ ಚಿತ್ತಾಲ
ಶ್ರೀ ರಾಘವೇಂದ್ರ ಪ್ರಕಾಶನ ಅಂಕೋಲಾ
ಮುದ್ರಣದ ವರ್ಷ: ೨೦೦೭
ಬೆಲೆ: ರೂ. ೭೦.
ಪುಟ:೧೩೦.
ಪರಿಚಯ: ಸಾಹಿತಿ ಯಶವಂತ ಚಿತ್ತಾಲರು ಉತ್ತರ ಕನ್ನಡ ಜಿಲ್ಲೆಯವರಾದರೂ ವಿದೇಶಗಳಲ್ಲಿ ಶಿಕ್ಷಣ ಪಡೆದು ಉದ್ಯೋಗ ನಿಮಿತ್ತ ನೆಲೆಸಿದ್ದು ಮುಂಬೈನಲ್ಲಿ. ಇವರು ೫ ಕಾದಂಬರಿಗಳು, ೯ ಕಥಾ ಸಂಕಲನ ಹಾಗೂ ೨ ಪ್ರಬಂಧ ಸಂಗ್ರಹಗಳನ್ನು ಪ್ರಕಟಿಸಿದ್ದಾರೆ. ಇವರ ‘ಕಥೆಯಾದಳು ಹುಡುಗಿ’ ಪುಸ್ತಕಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಹಲವಾರು ಗೌರವ ಪುರಸ್ಕಾರಗಳಿಗೆ ಇವರು ಭಾಜನರಾಗಿದ್ದಾರೆ .
ಈ ಸಂಕಲನದಲ್ಲಿ ಒಟ್ಟೂ ಏಳು ಕಥೆಗಳಿವೆ. ‘ಕಥೆ ಹೇಳುವುದು ಮತ್ತು ಅದನ್ನು ಇನ್ನೊಬ್ಬರಿಗೆ ತಲುಪಿಸುವುದು ಪುಣ್ಯದ ಕೆಲಸ’ ಎನ್ನುತ್ತಾ…ಚಿತ್ತಾಲರು ಇಲ್ಲಿ ಚೆಂದದ ಕಥೆಗಳನ್ನು ಬರೆದು ಆ ಮೂಲಕ ಓದುಗರಿಗೆ ಮುಟ್ಟಿಸಿದ್ದಾರೆ. ವಿಶೇಷವೆಂದರೆ ಎಲ್ಲಾ ಕಥೆಗಳೂ ಲೇಖಕರ ಹುಟ್ಟೂರು ಹನೇನಳ್ಳಿ ಎನ್ನುವ ಉತ್ತರ ಕನ್ನಡ ಜಿಲ್ಲೆಯ ಪರಿಸರದ ವ್ಯಾಪ್ತಿಯಲ್ಲೇ ಜರುಗುವ ಘಟನೆಗಳ ಸುತ್ತ ಮುತ್ತ ಬರೆದಂತವು.
*ಯಾರ ಕಥೆ ಯಾರು ಹೇಳಿದ್ದು?… ಎಂಬ ಕಥೆಯ ಸಂರಚನೆಯನ್ನು ಹಾಗೂ ಶೀರ್ಷಿಕೆ ನೋಡಿ….ಹದಿನಾಲ್ಕು ವರ್ಷಗಳ ಹಿಂದೆ ಊರು ಬಿಟ್ಟು ಹೋಗಿದ್ದವ ನೊಬ್ಬ ಮರಳಿ ಬಂದು ತನ್ನ ಸ್ನೇಹಿತ ಸುಬ್ರಾಯನನ್ನು ಭೇಟಿ ಮಾಡುತ್ತಾನೆ. ಆತ ಪುಟ್ಟ ಹೋಟೆಲ್ ಇಟ್ಟು ಕೊಂಡವ. ಬಿಸಿ ಅಂಬೋಡೆ- ಕಷಾಯ ಕೊಟ್ಟು ಸಣ್ಣಪ್ಪ ನಾಯ್ಕ ಎಂಬಾತ ಹೆಂಡತಿಯ ಕರಕರೆಗೆ ಬೇಸತ್ತು ಬಾವಿಗೆ ಹಾರಿದ್ದು ಇತ್ಯಾದಿ ಊರ ಸುದ್ದಿಯನ್ನು ಹೇಳುತ್ತಾನೆ. ಇವನು ಎಲ್ಲವನ್ನೂ ನಂಬುತ್ತಾ ಆಲಿಸುತ್ತಾನೆ.

ಅಸಲಿಗೆ ಇವನದೇ ಒಂದು ಕಥೆ! . ಆ ಸುಬ್ರಾಯನ ಹೆಂಡತಿ ಮದುವೆಯಾಗಿ ಕೆಲವೇ ದಿನಗಳಲ್ಲಿ ಜಗಳಾಡಿ ಓಡಿ ಹೋಗಿದ್ದಾಳೆಂದು ಇನ್ನೊಬ್ಬನಿಂದ ವಿಷಯ ತಿಳಿದಿತ್ತು. ತನ್ನ ಸಂಸಾರದ ಹುಳುಕನ್ನು ಮುಚ್ಚಿ ಕೊಳ್ಳಲು ಸುಬ್ರಾಯ ಹೀಗೆಲ್ಲಾ ಹೇಳಿದನೇ?… ಎಂಬ ವಿಷಯ ಬಹು ಕಲಾತ್ಮಕವಾಗಿ ಇಲ್ಲಿ ರೂಪು ಗೊಂಡಿದೆ.
ಮನೆ ಬಿಟ್ಟು ಓಡಿ ಹೋದ ಹುಡುಗಿಯ ಬಗ್ಗೆ ಆಕೆ ಏನಾದಳೆಂದು ಗೊತ್ತಿಲ್ಲದಿದ್ದರೂ ಜನರು ಆಡಿ ಕೊಳ್ಳುವುದು ಕೊಳ್ಳುವುದು..*ನಮ್ಮೆಲ್ಲರ ಸುಂದರಿ’ ಕಥೆಯ ಮೂಲ ವಸ್ತುವಾಗಿದೆ.
*’ಈಗ ನನ್ನನ್ನೇ ತೆಗೆದುಕೋ’ ಹೀಗೆ ಮಾತು ಮಾತಿಗೆ ಎನ್ನುವ ವಾಡಿಕೆಯ ಒಬ್ಬಾತನು ತನ್ನ ಒಳಗಿನಲ್ಲಿರುವ ರೋಗವನ್ನು ಮುಚ್ಚಿಡಲೆಂಬಂತೆ ಅತಿಯಾಗಿ ಮಾತಾಡುತ್ತಿದ್ದ. ಸಾವನ್ನು ಗೆಲ್ಲಲು ಆತ ಊರಿಂದ ಊರಿಗೆ ತಿರುಗುತ್ತಾ ಹಾಗೆ ಎಡಬಿಡದೇ ಮಾತಾಡುತ್ತಿದ್ದಾನೆಯೇ?… ಎಂದು ಕೊಳ್ಳುವ ನಿರೂಪಕ ಆತನೊಡನೆ ನಡೆಸಿದ ಆಪ್ತ ಸಂವಾದವೇ ಇಲ್ಲಿ ಕಥೆಯಾಗಿದೆ.
*’ಕಾಮಾಕ್ಷಿ ಮಾಡಲೆಳಸಿದ ಅತಿ ದಿಟ್ಟ ಕೆಲಸ’. ಇದು ಭಿನ್ನವಾದ ಈ ಕಥೆಯ ಹೆಸರು. ಆ ಮನೆಯವರು ತಾವೇ ಕೇಳಿ ಮಾಡಿಸಿಕೊಂಡ ಸಂಬಂಧದಿಂದಾಗಿ ಕಾಮಾಕ್ಷಿ ತೀರ ಚಿಕ್ಕ ವಯಸ್ಸಿಗೇ ಮದುವೆಯಾಗಿ ಮುಂಬಯಿಯ ಗಂಡನ ಮನೆ ಸೇರಿದ್ದಳು. ಎರಡು ವರ್ಷ ಜೀವನ ಸುಖಮಯವಾಗಿಯೇ ಇತ್ತು . ಈಗವಳು ತಾಯಾಗಲಿದ್ದಳು.
ಅವಳ ತಂದೆ ತಮ್ಮ ಹಳೆಯ ಮನೆಯನ್ನು ಮಾರಿ ಗೋವಾದಲ್ಲಿ ಬೇರೆ ಮನೆಯನ್ನು ಖರೀದಿಸಿದ್ದರು. ಅವರಲ್ಲಿ ಸಾಕಷ್ಟು ಹಣವಿದೆ ಎಂದು ಮೂರನೆಯವರೊಬ್ಬರಿಂದ ತಿಳಿದ ಗಂಡನ ಮನೆಯವರು ದುರಾಸೆಗೆ ಬಿದ್ದರು. ತವರಿನಿಂದ ಒಂದಿಷ್ಟು ಹಣ ತರುವಂತೆ ಕಾಮಾಕ್ಷಿಗೆ ಒತ್ತಾಯಿಸ ತೊಡಗಿದ್ದರು. ಅತ್ತೆ ಮಾವ ಗಂಡ ಎಲ್ಲರ ಮಾತಿನಲ್ಲಿ ಈಗ ಪುಸಲಾವಣೆಯ ಜೇನು ತೊಟ್ಟಿಕ್ಕಿತ್ತು. ಅವರ ನಿಜವಾದ ಬಣ್ಣ ಗೊತ್ತಾಗಿ ಕಾಮಾಕ್ಷಿ ತೆಗೆದು ಕೊಂಡ ನಿರ್ಧಾರವೇನು?…
*ಪುಟ್ಟನ ಹೆಜ್ಜೆ ಕಾಣೋದಿಲ್ಲಾ! ‘ಹೋದಾ ಪುಟ್ಟಾ ಬಂದಾ ಪುಟ್ಟಾ… ಪುಟ್ಟನ ಹೆಜ್ಜೆ ಕಾಣೋದಿಲ್ಲಾ! ‘ಎಂಬುದೊಂದು ಜನಪ್ರಿಯ ಒಗಟು. ನೌಕರಿಗಾಗಿ ಮುಂಬಯಿ ಸೇರಿದವನೊಬ್ಬ ಬಹಳ ವರ್ಷಗಳ ನಂತರ ಹಳ್ಳಿಗೆ ಬರುತ್ತಾನೆ. ನಾಗವೇಣಿ ಎನ್ನುವ ಆ ಊರಿನ ಹುಡುಗಿಯೊಬ್ಬಳು ತುಂಬಾ ವರ್ಷಗಳ ಹಿಂದೆ ಮುಂಬಯಿಯ ಶಹರಕ್ಕೆ ಮರುಳಾಗಿ ಅಲ್ಲಿಯ ಹುಡುಗನೊಬ್ಬನನ್ನು ಮದುವೆಯಾಗಿದ್ದು ಅಥವಾ ಅವನ ಜೊತೆ ಓಡಿ ಹೋಗಿದ್ದು, ಒಟ್ಟಾರೆ ಒಬ್ಬೊಬ್ಬರೂ ತಮಗೆ ತಿಳಿದ ರೀತಿಯಲ್ಲಿ ಆಕೆಯ ಬಗ್ಗೆ ಮಾತಾಡುತ್ತಾ, ಒಂದೇ ಊರೆಂದರೆ ನೀನು ಆಕೆಯನ್ನು ನೋಡಿರಲಿಕ್ಕೂ ಸಾಕು.. ಆಕೆ ಈಗ ಹೇಗಿದ್ದಾಳೆ?.. ಎಂದು ಪ್ರಶ್ನಿಸುತ್ತಾರೆ.

ತಮ್ಮ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ದೊರೆಯ ದಾದಾಗ ಸಾಲುಗಟ್ಟಿ ನಡೆಯುವ ಜನರನ್ನು ” ಬೇರೆ ಬೇರೆ ತರದ ಪೋಷಾಕು ಧರಿಸಿರುವಾಗಲೂ ಒಂದೇ ತರದಲ್ಲಿ ಬೆನ್ನಿಗೆ ಗೂನು ಹಾಕಿ ನಿಧಾನವಾಗಿ ಹೆಜ್ಜೆ ಇಡುತ್ತ ಸಾಗಿದವರ ಹಿಂಬದಿಗಳನ್ನು ಕಣ್ಣರಳಿಸಿ ನೋಡುತ್ತಾ ನಿಂತೆ” ಎನ್ನುವ ಒಂದು ವಾಕ್ಯ ಅಂತಿಮ ಸತ್ಯದ ನಿಖರತೆಯನ್ನು ಸ್ಪಷ್ಟ ಪಡಿಸುತ್ತದೆ.
ಅಸಲಿಗೆ ನಾಗವೇಣಿ ಏನಾದಳು?… ಆಕೆಯ ಮುದಿ ತಾಯಿಗೆ ಮಗಳ ಬಗ್ಗೆ ಗೊತ್ತಿದ್ದ ವಿಷಯವೇನು? ಅನ್ನುವುದನ್ನು ಇಲ್ಲಿ ಲೇಖಕರು ಜನರ ರೂಕ್ಷವಾದ ನಿರ್ಭಾವುಕವಾದ ಮಾತುಗಳನ್ನು ಸಣ್ಣ ಸಣ್ಣ ವಾಕ್ಯಗಳಲ್ಲಿ ವಿವರಿಸಿದ ರೀತಿಯೇ ಕಥೆಯ ಮೂಲ ದ್ರವ್ಯ.
*ಕುಂಟನ್ಮನೆ ಬೀರ ಮತ್ತು *ತುಸು ತಡೆದು ಪ್ರಯತ್ನಿಸಿರಿ ಎನ್ನುವ ಇನ್ನೆರಡು ಕಥೆಗಳೂ ಸಹಾ ವಿಶೇಷವಾಗಿವೆ. ಒಂದು ಕಥಾಸೃಷ್ಠಿ ಕಾರ್ಯ- ಕಾರಣ ಸುಲಭವಲ್ಲ. ವಿಭಿನ್ನ ಕಥಾತಂತ್ರ, ಭಾಷೆ, ಅದರ ಸಾರ -ವಿಸ್ತಾರಗಳು, ಪ್ರಯೋಗ ಶೀಲತೆ ಇವೆಲ್ಲವೂ ಇಲ್ಲಿ ಹದವಾಗಿ ಮೂಡಿದೆ. ಈ ಕಥಾ ಪ್ರಪಂಚದಲ್ಲಿ ಚಿತ್ತಾಲರ ಸೃಜನ ಶೀಲತೆಯ ಸೆಲೆಯನ್ನುಇನ್ನಷ್ಟು ತಿಳಿಯಲು ಪುಸ್ತಕ ಓದಿ….
ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ :
- “ಹಸುರು ಹೊನ್ನು” ಕೃತಿ ಪರಿಚಯ
- ‘ಪ್ರೀತಿ ಮಮತೆಗಳ ನಡುವೆ’ ಕೃತಿ ಪರಿಚಯ
- ‘ಮೀನಾಕ್ಷಿಯ ಸೌಗಂಧ’ ಕೃತಿ ಪರಿಚಯ
- ‘ಬೇಲಿಯ ಹೂಗಳು’ ಪುಸ್ತಕ ಅಪರಿಚಯ
- ‘ಸಿಂಧೂರ ರೇಖೆಯ ಮಿಂಚು’ ಕೃತಿ ಪರಿಚಯ
- ‘ಇನ್ನೊಂದು ಸಂಪುಟ’ ಕೃತಿ ಪರಿಚಯ
- ‘ಬರೀ ಬೆಳಗಲ್ಲೊ ಅಣ್ಣಾ’ ಕೃತಿ
- ‘ಪಾಂಚಾಲಿಯಾಗಲಾರೆ’ ಕೃತಿ ಪರಿಚಯ
- ‘ಕನ್ನಡಿಗರ ಕರ್ಮ ಕಥೆ’ ಕೃತಿ ಪರಿಚಯ
- ‘ನೂಪುರಗಾನ’ ಕೃತಿ ಪರಿಚಯ
- ಪಾರ್ಲರ್ ಹುಡುಗಿಯೂ, ಮರಳು ಗಾಡಿನ ಮಹಲು ಕೃತಿ ಪರಿಚಯ …
- ತಮ್ಮಣ್ಣ ಬೀಗಾರ ಅವರ ಕೃತಿ ಪರಿಚಯ
- ‘ಮೂಡು ಮಜಲು’ ಕೃತಿ ಪರಿಚಯ
- ಮಾಲತಿ ರಾಮಕೃಷ್ಣ ಭಟ್
