ಆಷಾಢ ಮಾಸದಲಿ, ನವಜೋಡಿಗೆ ವಿರಹವು, ಸಪ್ಪಗಿರುವ ಸಮಯವಿದು…ಮುಂದೆ ಓದಿ ಕವಿ ಚನ್ನಕೇಶವ ಜಿ ಲಾಳನಕಟ್ಟೆ ಅವರ ಲೇಖನಿಯಲ್ಲಿ ಮೂಡಿ ಬಂದ ಆಷಾಡ ಕವಿತೆ…
ಆಷಾಢ ಮಾಸದಲಿ
ಬೀಸುತಿರೆ ಬಿರುಗಾಳಿ
ಸೂಸುತಿರೆ ಸೋನೆಮಳೆ
ನವಜೋಡಿಗೆ ವಿರಹವು
ಸಪ್ತಪದಿ ತುಳಿಯುತಲೆ
ಅಪ್ಪಿರುವ ಜೋಡಿಗಳು
ಸಪ್ಪಗಿರುವ ಸಮಯವಿದು
ನವಜೋಡಿಗೆ ವಿರಹವು
ಹಸೆಮಣೆಯ ನೆನಪುಗಳು
ಹಸಿಯಾಗೆ ಇರುವಾಗ
ಮಸಿಯಂತೆ ಎದುರಿಹುದು
ನವ ಜೋಡಿಗೆ ವಿರಹವು
ದೂಡಿದರು ದಿನದಿನವ
ಕಾಡುತಿವೆ ಮನದೊಳಗೆ
ಬೇಡಿಯಲಿ ಬಂದಿಸಿವೆ
ನವ ಜೋಡಿಗೆ ವಿರಹವು
ನಸುಕಿನಲಿ ನೆನಪಿಳಿದು
ತುಸು ಆಸೆ ತುಂಬಿರಲು
ಬಿಸಿಯುಸಿರ ಅಪ್ಪುಗೆಗೆ
ನವ ಜೋಡಿಗೆ ವಿರಹವು
ಮಲ್ಲಿಗೆಯು ತೋಟದಲಿ
ನಲ್ಲನಿಗೆ ಘಮಘಮಸಿ
ನಿಲ್ಲದಲೆ ಸೆಳೆಯುತಿರೆ
ನವಜೋಡಿಗೆ ವಿರಹವು
ಆಷಾಢ ಮುಗಿಯುತಲೆ
ಹಾಸಿರಲು ಹಸಿರುಲ್ಲು
ಬೀಸಿರಲು ತಂಗಾಳಿ
ನವ ಜೋಡಿಗೆ ಸರಸವು.
- ಚನ್ನಕೇಶವ ಜಿ ಲಾಳನಕಟ್ಟೆ (ಕವಿಗಳು, ಲೇಖಕರು) ಬೆಂಗಳೂರು